By-Election Results: ಕರ್ನಾಟಕ ಉಪ ಚುನಾವಣೆ: 3 ಕ್ಷೇತ್ರದಲ್ಲೂ ಕಾಂಗ್ರೆಸ್ಗೆ ಮುನ್ನಡೆ, ಬಿಜೆಪಿಗೆ ಆಘಾತ
ಬೆಂಗಳೂರು, ನವೆಂಬರ್ 23: ಕರ್ನಾಟಕ ಉಪ ಚುನಾವಣೆ 2024ರ ಫಲಿತಾಂಶ ಇಂದು ಶನಿವಾರ ಪ್ರಕಟಗೊಳ್ಳಲಿದ್ದು, ಸದ್ಯ ಮತ ಎಣಿಕೆ ನಡೆಯುತ್ತಿದೆ. ಬೆಳಗ್ಗೆ 10.20ರವರೆಗಿನ ಮತ ಎಣಿಕೆ ಪ್ರಕಾರ, ಮೂರು ಕ್ಷೇತ್ರಗಳಲ್ಲಿ ಆಡಳಿತ ಪಕ್ಷ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ. ಈ ಎಲ್ಲ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ಹಿನ್ನಡೆ ಆಗಿದೆ. ಇನ್ನು ಕೆಲವು ಸುತ್ತಿನ ಮತ ಎಣಿಕೆಗಳು ಬಾಕಿ ಇವೆ.
ಹಾವೇರಿಯ ಶಿಗ್ಗಾವಿಯಲ್ಲಿ ಮೊದಲ ಮೂರು ಸುತ್ತಿನಲ್ಲಿ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಅವರು ಮುನ್ನಡೆ ಸಾಧಿಸಿದರು. ನಾಲ್ಕನೇ ಸುತ್ತಿಗೆ ಕಾಂಗ್ರೆಸ್ ಅಭ್ಯರ್ಥಿ ಯಾಸಿರ್ ಖಾನ್ ಪಠಾಣ್ ಅವರು ಮುನ್ನಡೆ ಕಾಯ್ದುಕೊಂಡರಾದರೂ ನಂತರ ಹಿನ್ನಡೆಗೆ ಸರಿದರು. ಇದೀಗ ಒಂಭತ್ತನೇ ಸುತ್ತಿನಲ್ಲಿ ಯಾಸಿರ್ ಖಾನ್ ಪಠಾಣ್ ಅವರು 355 ಮತಗಳಿಂದ ನಿರಂತರ ಮುನ್ನಡೆ ಸಾಧಿಸುತ್ತಿದ್ದು, ಭರತ್ ಬೊಮ್ಮಾಯಿ ಅವರಿಗೆ ಹಿನ್ನಡೆ ಆಗಿದೆ.

ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರು ಒಂಭತ್ತನೇ ಸುತ್ತಿನಲ್ಲೂ ಮುನ್ನಡೆ ಕಾಯ್ದುಕೊಂಡಿದ್ದಾರೆ. ಒಟ್ಟು ಅವರು ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರಿಗಿಂತ ಭರ್ಜರಿ 9000 ಮತಗಳಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ. ಈ ಮೂಲಕ ನಿಖಿಲ್ ಕುಮಾರಸ್ವಾಮಿ ಆಘಾತ ನೀಡಿದ್ದಾರೆ. ಇನ್ನೂ ಕೆಲವು ಸುತ್ತಿನ ಮತ ಎಣಿಕೆ ನಡೆಲಿದೆ.
ಇನ್ನೂ ಸಂಡೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ಅವರು ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ಅವರಿಗಿಂತ ಮುನ್ನಡೆ ಕಾಯ್ದುಕೊಂಡಿದ್ದಾರೆ. ಕಳೆದ ಕೆಲವು ಸುತ್ತುಗಳಲ್ಲಿ ನಿರಂತರ ಮುನ್ನಡೆ ಕಾಯ್ದುಕೊಳ್ಳುವ ಮೂಲಕ ಬಿಜೆಪಿಗೆ ಕಾಂಗ್ರೆಸ್ ಟಕ್ಕರ್ ನೀಡಿದೆ.
ಇನ್ನೂ ಪುತ್ರನ ಗೆಲುವಿನ ವಿಶ್ವಾಸದಲ್ಲಿದ್ದ ಮಾಜಿ ಸಿಎಂ ಹಾಗೂ ಹಾಲಿ ಬಿಜೆಪಿ ಸಂಸದ ಬಸವರಾಜ ಬೊಮ್ಮಾಯಿ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಅದಷ್ಟೇ ಅಲ್ಲದೇ ಕ್ಷೇತ್ರದಲ್ಲಿ ಬಿಜೆಪಿ ಹಿನ್ನಡೆಗೆ ಕಾಂಗ್ರೆಸ್ ಪಕ್ಷದ ಅಧಿಕಾರ ಹಾಗೂ ಹಣ ಪ್ರಭಾವ ಬೀರಿದೆ. ಇದರಿಂದ ಹೀಗಾಗಿದೆ. ತೊಂದರೆ ಇಲ್ಲ ಇನ್ನೂ ಹತ್ತು ಸುತ್ತಿನ ಮತ ಎಣಿಕೆ ಬಾಕಿದ್ದು, ಭರತ್ ಬೊಮ್ಮಾಯಿಗೆ ಅಧಿಕ ಮತಗಳು ಬರುವ ಸಾಧ್ಯತೆ ಇದೆ ಎಂದು ಅವರು ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿಗೆ ಪ್ರತಿಷ್ಠೆಯ ಕಣವಾಗಿದ್ದ ಶಿಗ್ಗಾಂವಿಯಲ್ಲಿ ಬಿಜೆಪಿಯ ಭರತ್ ಬೊಮ್ಮಾಯಿಗೆ ಸೋಲಾಗಿದೆ. ಈ ಮೂಲಕ ಬೊಮ್ಮಾಯಿ ಕುಟುಂಬದ ಮೂರನೇ ತಲೆಮಾರು ವಿಧಾನಸಭೆ ಪ್ರವೇಶಿಸುವುದು ತಪ್ಪಿಹೋಗಿದೆ. ಬಂಡಾಯದ ಬಿಸಿಯ ನಡುವೆಯೂ ಸ್ಪರ್ಧಿಸಿದ್ದ ಕಾಂಗ್ರೆಸ್ನ ಯಾಸಿರ್ ಅಹಮದ್ ಖಾನ್ ಪಠಾಣ್ ಗೆಲುವು ಸಾಧಿಸಿದ್ದಾರೆ.
ಅಜ್ಜಂಪೀರ್ ಖಾದ್ರಿ ಅವರ ಬಂಡಾಯ ಕಾಂಗ್ರೆಸ್ಗೆ ಆರಂಭದಲ್ಲಿ ತುಸು ಹಿನ್ನಡೆ ತಂದಿತ್ತು. ಆದರೆ ಅದನ್ನು ಶಮನಗೊಳಿಸಿ ಚುನಾವಣೆಯಲ್ಲಿ ಯಶಸ್ಸು ಕಾಣುವಲ್ಲಿ ಕಾಂಗ್ರೆಸ್ ಸಫಲವಾಗಿದೆ. ಮತ್ತೊಂದೆಡೆ, ಹಿಂದೆ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಇಡೀ ರಾಜ್ಯದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮುಗ್ಗರಿಸಿತ್ತು.
ಆದರೆ, ಶಿಗ್ಗಾವಿಯಲ್ಲಿ ಬಸವರಾಜ ಬೊಮ್ಮಾಯಿ ಲೋಕಸಭೆ ಚುನಾವಣೆಯಲ್ಲಿ ಗೆದ್ದು ಬೀಗಿದ್ದರು. ಈಗ ಅವರ ರಾಜೀನಾಮೆಯಿಂದ ತೆರವಾದ ಕ್ಷೇತ್ರದಲ್ಲಿ ಅವರ ಪುತ್ರ ಭರತ್ ಕಣಕ್ಕಿಳಿದಿದ್ದು, ಚೊಚ್ಚಲ ಸ್ಪರ್ಧೆಯಲ್ಲಿಯೇ ಸೋತಿದ್ದಾರೆ.
ಯಾಸಿರ್ ಖಾನ್ 'ಕೈ' ಹಿಡಿದ ಅಂಶಗಳು
ಅಜ್ಜಂಪೀರ್ ಖಾದ್ರಿ ಬಂಡಾಯ ಶಮನ ಆಗಿದ್ದು ಪಠಾಣ್ಗೆ ಪ್ಲಸ್ ಆಯಿತು. ಇಷ್ಟೇ ಅಲ್ಲ ಸಚಿವ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿನ ರಣತಂತ್ರ ಹೆಣೆದಿದ್ದು, ವಾಲ್ಮೀಕಿ, ದಲಿತ ಮತದಾರರು 'ಕೈ' ಹಿಡಿದ ಲೆಕ್ಕಾಚಾರ ನಾಯಕರಿಗೆ ಇದೆ. ಸಚಿವ ಜಮೀರ್ ಮುಸ್ಲಿಂ ಮತದಾರರ ಓಲೈಕೆ ಮಾಡಿದ್ದು, ಪಠಾಣ್ ಪರ ಅಜ್ಜಂಪೀರ್ ಖಾದ್ರಿ ಪ್ರಚಾರ ಮಾಡಿದ್ದು, ಸಿಎಂ ಮುಡಾ ಸಂಕಷ್ಟದ ಅನುಕಂಪ ವರ್ಕೌಟ್ ಆಗಿದ್ದಲ್ಲದೇ, ಕುರುಬ ಸಮಾಜದ ಮತ ಕಾಂಗ್ರೆಸ್ಗೆ ವಾಲಿದ ನಂಬಿಕೆ ಆ ಪಕ್ಷದ ನಾಯಕರಲ್ಲಿದೆ.












Click it and Unblock the Notifications