ಜಿಎಸ್ಟಿ ಸಂಗ್ರಹದಲ್ಲಿ ರಾಜ್ಯಕ್ಕೆ ದೇಶದಲ್ಲೇ ಎರಡನೆಯ ಸ್ಥಾನ
ಬೆಂಗಳೂರು, ಮಾರ್ಚ್ 8: ಕೋವಿಡ್ ಸಾಂಕ್ರಾಮಿಕದ ನಡುವೆಯೂ ರಾಜ್ಯವು ಸರಕು ಮತ್ತು ಸೇವಾ ತೆರಿಗೆ ಸಂಗ್ರಹಣೆಯಲ್ಲಿ ದೇಶದಲ್ಲಿಯೇ ಎರಡನೆಯ ಸ್ಥಾನದಲ್ಲಿದೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತಿಳಿಸಿದರು.
ಸೋಮವಾರ 2021-22ನೇ ಸಾಲಿನ ರಾಜ್ಯ ಬಜೆಟ್ ಮಂಡಿಸಿದ ಯಡಿಯೂರಪ್ಪ, 2020-21ನೇ ಸಾಲಿಗೆ ವಾಣಿಜ್ಯ ತೆರಿಗೆ ಇಲಾಖೆಗೆ ಜಿಎಸ್ಟಿ ಸೇರಿದಂತೆ 82,443 ಕೋಟಿ ರೂ.ಗಳ ರಾಜಸ್ವ ಸಂಗ್ರಹಣೆಗೆ ಗುರಿ ನಿಗದಿಪಡಿಲಾಗಿತ್ತು. ಫೆಬ್ರವರಿ ತಿಂಗಳ ಅಂತ್ಯಕ್ಕೆ 71,833 ಕೋಟಿ ರೂಗಳ ರಾಜಸ್ವ ಸಂಗ್ರಹಿಸಲಾಗಿದೆ ಎಂದು ತಿಳಿಸಿದರು.
Karnataka Budget 2021 Live Updates; ಕರ್ನಾಟಕ ಬಜೆಟ್ 2021 ಕ್ಷಣ-ಕ್ಷಣದ ಮಾಹಿತಿ
ಜಿಎಸ್ಟಿ ಪೂರ್ವದ ಲೆಕ್ಕ ಪರಿಶೋಧನೆಗಳನ್ನು ಪೂರ್ಣಗೊಳಿಸುವ ಹಾಗೂ ತೆರಿಗೆ ಬಾಕಿಯನ್ನು ತ್ವರಿತಗತಿಯಲ್ಲಿ ವಸೂಲಿ ಮಾಡಲು 'ಕರ ಸಮಾಧಾನ ಯೋಜನೆ-2021' ಜಾರಿಗೊಳಿಸಲಾಗುವುದು. 2021-22ನೇ ಸಾಲಿಗೆ ವಾಣಿಜ್ಯ ತೆರಿಗೆಗಳ ಇಲಾಖೆಗೆ 76,473 ಕೋಟಿ ರೂ. ತೆರಿಗೆ ಸಂಗ್ರಹಣೆ ಗುರಿ ನಿಗದಿಪಡಿಸಲಾಗಿದೆ ಎಂದು ತಿಳಿಸಿದರು.
2020-21ನೇ ಸಾಲಿಗೆ ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ 12,655 ಕೋಟಿ ರೂ ರಾಜಸ್ವ ಸಂಗ್ರಹಣೆ ಗುರಿ ಹೊಂದಲಾಗಿತ್ತು. ಫೆಬ್ರವರಿ ಅಂತ್ಯಕ್ಕೆ 9,014 ಕೋಟಿ ರೂ. ರಾಜಸ್ವ ಕ್ರೋಡೀಕರಿಸಲಾಗಿದೆ. ಮುಂದಿನ ಹಣಕಾಸು ವರ್ಷಕ್ಕೆ 12,655 ಕೋಟಿ ರೂ ರಾಜಸ್ವ ಸಂಗ್ರಹಣೆ ಗುರಿ ನಿಗದಿಗೊಳಿಸಲಾಗಿದೆ ಎಂದು ಹೇಳಿದರು.
Recommended Video
ಜಿಎಸ್ಟಿ ಆರ್ಥಿಕ ಸಂಕಷ್ಟ ಎದುರಿಸಲು ಕೇಂದ್ರ ಸರ್ಕಾರ ರಾಜ್ಯಗಳಿಗೆ ಜಿಎಸ್ಟಿ ಮೇಲೆ ಶೇ 5ರವರೆಗೆ ಸಾಲ ಪಡೆಯಲು ಅನುಕೂಲ ಮಾಡಿಕೊಟ್ಟಿತ್ತು. ವಿಧಾನಮಂಡಲದ ಅನುಮೋದನೆಯೊಂದಿಗೆ ಪ್ರಸಕ್ತ ವರ್ಷ, ರಾಜ್ಯದ ಮೇಲೆ ಒತ್ತಡವಾಗದಂತೆ ಶೇ 4ರವರೆಗೆ ಸಾಲ ಪಡೆಯಲಾಗಿದೆ ಎಂದು ಹೇಳಿದರು.