ಕರ್ನಾಟಕ ಬಜೆಟ್ 2021: ಎಸ್.ಎಲ್ಭೈರಪ್ಪರ 'ಪರ್ವ' ನಾಟಕ ಪ್ರದರ್ಶನಕ್ಕೆ 1 ಕೋಟಿ ರೂ. ಮೀಸಲು
ಬೆಂಗಳೂರು, ಮಾರ್ಚ್ 09: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸೋಮವಾರ ಮಂಡಿಸಿರುವ 2021-22ನೇ ಸಾಲಿನ ಬಜೆಟ್ನಲ್ಲಿ ಹಿರಿಯ ಸಾಹಿತಿ ಎಸ್.ಎಲ್. ಭೈರಪ್ಪ ಅವರ ಕಾದಂಬರಿ ಆಧಾರಿತ ಪರ್ವ ನಾಟಕಕ್ಕೆ 1 ಕೋಟಿ ರೂ. ಮೀಸಲಿರಿಸಿದ್ದಾರೆ.
ಬಜೆಟ್ನಲ್ಲಿ ಸಂಸ್ಕೃತಿ, ಪರಂಪರೆ ಹಾಗೂ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ವಲಯಕ್ಕೆ ಯಡಿಯೂರಪ್ಪ ಒಟ್ಟು 2,645 ಕೋಟಿ ರೂ. ಅನುದಾನ ಪ್ರಕಟಿಸಿದ್ದಾರೆ. ಹಿರಿಯ ಕಾದಂಬರಿಕಾರ ಎಸ್ಎಲ್ ಭೈರಪ್ಪ ಅವರ 'ಪರ್ವ' ಕಾದಂಬರಿಯ ನಾಟಕ ಪ್ರದರ್ಶನಕ್ಕೆ ಈ ಬಾರಿಯ ಬಜೆಟ್ನಲ್ಲಿ ಒಂದು ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗಿದೆ.
ಮಾರ್ಚ್ ಹಾಗೂ ಏಪ್ರಿಲ್ನಲ್ಲಿ ರಂಗಾಯಣದ ಭೂಮಿಗೀತ ರಂಗಮಂದಿರದಲ್ಲಿ ವಾರಕ್ಕೆ ಮೂರು ಪ್ರದರ್ಶನದಂತೆ ನಿರಂತರವಾಗಿ 25 ಪ್ರದರ್ಶನಗಳನ್ನು ನೀಡುವ ಗುರಿ ಇದೆ ಎನ್ನುವ ವಿಷಯ ತಿಳಿದುಬಂದಿದೆ. ಪರ್ವ ನಾಟಕವನ್ನು ರಾಜ್ಯದಲ್ಲಿರುವ ರಂಗಾಯಣ ನಾಟಕ ತಂಡಗಳ ಮೂಲಕ ರಾಜ್ಯದೆಲ್ಲೆಡೆ ಪ್ರದರ್ಶನ ಮಾಡಲಾಗುವುದು ಎಂದು ಬಿಎಸ್ವೈ ತಿಳಿಸಿದ್ದಾರೆ.

ಪ್ರಸಿದ್ಧ ರಂಗಕರ್ಮಿ ಬಿವಿ ಕಾರಂತರ ಕನಸಿನ ಕೂಸಾದ ಮೈಸೂರಿನ ರಂಗಾಯಣ ಮೂಲಕ ಮಾ.12,13, 14 ರಂದು ಪರ್ವ ನಾಟಕ ಹಬ್ಬ ಪ್ರಥಮ ಪ್ರದರ್ಶನ ನಡೆಯಲಿದೆ. ಮಹಾಭಾರತ ಆಧರಿತ ಪರ್ವ ಕಾದಂಬರಿಯನ್ನು ರಂಗನಿರ್ದೇಶಕ ಪ್ರಕಾಶ್ ಬೆಳವಾಡಿ ಏಳೂವರೆ ಗಂಟೆಗಳ ನಾಟಕವಾಗಿಸಿದ್ದಾರೆ.
ಕುವೆಂಪು ವಿರಚಿತ ಮಲೆಗಳಲ್ಲಿ ಮದುಮಗಳು ಕಾದಂಬರಿ ಆಧರಿಸಿ ಮೈಸೂರಿನ ರಂಗಾಯಣವು ವಿಶೇಷ ನಾಟಕ ಪ್ರದರ್ಶನ ವರ್ಷಗಳ ಕಾಲ ವಿಶೇಷ ನಾಟಕ ಪ್ರದರ್ಶನ ಆಯೋಜಿಸಿತ್ತು.
ಬೆಂಗಳೂರಿನ ಕಲಾಗ್ರಾಮದಲ್ಲಿ ಮಲೆಗಳಲ್ಲಿ ಮದುಮಗಳು ಕಾದಂಬರಿಗೆ ಸೂಕ್ತವಾದಂತೆ ಮಲೆನಾಡಿನ ಭಿನ್ನ, ವಿಭಿನ್ನ ವೇದಿಕೆಗಳನ್ನು ನಿರ್ಮಿಸಿ ಅದ್ಭುತ ನಾಟಕ ಪ್ರದರ್ಶನಗಳನ್ನು ಮಾಡಲಾಗಿತ್ತು. ಇದಕ್ಕೆ ಬೆಂಗಳೂರು ಸೇರಿದಂತೆ ಇತರೆ ಪ್ರದೇಶಗಳಿಂದ ಉತ್ತಮ ಸ್ಪಂದನೆ ದೊರೆತಿತ್ತು.












Click it and Unblock the Notifications