ಮಹಿಳಾ ಟಿ20 ವಿಶ್ವಕಪ್: ಹೊರಬಿದ್ದ ಕನ್ನಡತಿ ಶ್ರೇಯಾಂಕಾ..ನೆದರ್ಲ್ಯಾಂಡ್ ವಿರುದ್ಧ ಭಾರತ ಗೆಲುವಿಗೆ ಕಾರಣರಾಗಿದ್ದು ಇವರು
Women's T20 World Cup 2026: ಹೆಡಿಂಗ್ಲಿ ಕಾರ್ನೆಗೀಯಲ್ಲಿ ಬುಧವಾರ (ಜೂನ್ 17) ನಡೆದ ಮಹಿಳಾ ಟಿ20 ವಿಶ್ವಕಪ್ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ ಟೀಮ್ ಇಂಡಿಯಾ 95 ರನ್ಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿತು. ಹಾಗಾದ್ರೆ ಈ ಗೆಲುವಿಗೆ ಪ್ರಮುಖ ಕಾರಣ ಯಾರು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಟಾಸ್ ಗೆದ್ದ ನೆದರ್ಲ್ಯಾಂಡ್ಸ್ ತಂಡವು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆಯೇ ಮೊದಲು ಬ್ಯಾಟ್ ಬೀಸಿದ ಹರ್ಮನ್ಪ್ರೀತ್ ನಾಯಕತ್ವದ ಟೀಮ್ ಇಂಡಿಯಾವು ಉಪನಾಯಕಿ ಸ್ಮೃತಿ ಮಂಧಾನ ಹಾಗೂ ಶಫಾಲಿ ವರ್ಮಾ ಆಕ್ರಮಣಕಾರಿ ಆಟದಿಂದ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ ಬರೋಬ್ಬರಿ 209 ರನ್ಗಳ ಬೃಹತ್ ಮೊತ್ತವನ್ನು ಪೇರಿಸಿತು.

ಬೃಹತ್ ರನ್ ಕಲೆಹಾಕಿದ ಟೀಮ್ ಇಂಡಿಯಾ
ಭಾರತ ನೀಡಿದ 210 ರನ್ಗಳ ಗುರಿಯನ್ನು ಬೆನ್ನಟ್ಟಿದ ಎದುರಾಳಿ ನೆದರ್ಲ್ಯಾಂಡ್ಸ್ ಬ್ಯಾಟರ್ಗಳಿಗೆ ಟೀಮ್ ಇಂಡಿಯಾದ ಶ್ರೀ ಚರಣಿ, ಶಫಾಲಿ ವರ್ಮಾ, ನಂದನಿ ಶರ್ಮಾ ಅವರು ಆಕ್ರಮಣಕಾರಿ ಬೌಲಿಂಗ್ ದಾಳಿ ನಡೆಸಿ ಕಾಡಿದರು. ಪರಿಣಾಮ ನೆದರ್ಲ್ಯಾಂಡ್ಸ್ 114 ರನ್ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಸೋಲನುಭವಿಸಿತು.
ಸ್ಮೃತಿ ಮಂದಾನ, ಶಫಾಲಿ ಅಬ್ಬರದ ಬ್ಯಾಟಿಂಗ್
ಸ್ಮೃತಿ ಮಂದಾನ ಮತ್ತು ಶಫಾಲಿ ವರ್ಮಾ ಬ್ಯಾಟಿಂಗ್ ಅಬ್ಬರದ ನೆರವಿನಿಂದ ಭಾರತ ತಂಡ ನೆದರ್ಲ್ಯಾಂಡ್ಸ್ ವಿರುದ್ಧ 95 ರನ್ಗಳ ಭರ್ಜರಿ ಜಯ ದಾಖಲಿಸಿತು. ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಲ್ಪಟ್ಟ ಭಾರತ ತಂಡಕ್ಕೆ ಮಂದಾನ (47 ಎಸೆತಗಳಲ್ಲಿ 74 ರನ್) ಮತ್ತು ಶಫಾಲಿ (38 ಎಸೆತಗಳಲ್ಲಿ 55 ರನ್) ಅವರ ಆರಂಭಿಕ ಜೋಡಿಯು ನೆದರ್ಲ್ಯಾಂಡ್ಸ್ ಬೌಲರ್ಗಳನ್ನು ಮನಬಂದಂತೆ ದಂಡಿಸುವ ಮೂಲಕ 70 ಎಸೆತಗಳಲ್ಲಿ 115 ರನ್ಗಳ ಉತ್ತಮ ಜೊತೆಯಾಟವಾಡಿತು. ಇದರಿಂದ ಭಾರತ ತಂಡ ಟೂರ್ನಿಯ ಇತಿಹಾಸದಲ್ಲೇ ತನ್ನ ಗರಿಷ್ಠ ಮೊತ್ತ 209/5 ರನ್ಗಳನ್ನು ಕಲೆಹಾಕಿತು.
ನೆದರ್ಲ್ಯಾಂಡ್ಸ್ 114 ರನ್ಗಳಿಗೆ ಆಲೌಟ್
210 ರನ್ಗಳ ಬೃಹತ್ ಗುರಿಯನ್ನು ಬೆನ್ನತ್ತಿದ ನೆದರ್ಲ್ಯಾಂಡ್ಸ್ ತಂಡ ನಾಯಕಿ ಬಾಬೆಟ್ ಡಿ ಲೀಡೆ (27 ಎಸೆತಗಳಲ್ಲಿ 28 ರನ್) ಮತ್ತು ಸ್ಟೆರೆ ಕಾಲಿಸ್ (13 ಎಸೆತಗಳಲ್ಲಿ 18 ರನ್) ಅವರ ಉತ್ತಮ ಪ್ರಯತ್ನದ ಹೊರತಾಗಿಯೂ ಪಂದ್ಯದ ಗೆಲುವಿನ ರೇಸ್ನಲ್ಲಿ ಕಾಣಿಸಲಿಲ್ಲ. ಅಂತಿಮವಾಗಿ ನೆದರ್ಲ್ಯಾಂಡ್ಸ್ ತಂಡ 17.3 ಓವರ್ಗಳಲ್ಲಿ 114 ರನ್ಗಳಿಗೆ ಆಲೌಟ್ ಆಯಿತು.
ಗಾಯದಿಂದ ಹೊರನಡೆದ ಶ್ರೇಯಾಂಕಾ
ಭಾರತದ ಪರ ಈ ಪಂದ್ಯದಲ್ಲಿ ಎದುರಾದ ಬಹುದೊಡ್ಡ ಆತಂಕವೆಂದರೆ, ಆಫ್-ಸ್ಪಿನ್ನರ್ ಶ್ರೇಯಾಂಕಾ ಪಾಟೀಲ್ ಅವರು ತಾವು ಫೀಲ್ಡಿಂಗ್ ಮಾಡಿದ ಮೊದಲ ಎಸೆತದಲ್ಲೇ ಗಾಯಗೊಂಡಿದ್ದು. ತಕ್ಷಣವೇ ಅವರನ್ನು ಸ್ಟ್ರೆಚರ್ ಮೂಲಕ ಮೈದಾನದಿಂದ ಹೊರಗೆ ಕರೆದೊಯ್ಯಲಾಯಿತು.
ಟೀಮ್ ಇಂಡಿಯಾ ಗೆಲುವಿಗೆ ಪ್ರಮುಖ ಕಾರಣ ಯಾರು?
ಭಾರತ ಪರ ಬ್ಯಾಟಿಂಗ್ ಮಾಡಿದ ಸ್ಮೃತಿ ಮಂದಾನ 74(47), ಶಫಾಲಿ ವರ್ಮಾ 55 (38), ರಿಚಾ ಘೋಷ್ 20(8), ಜೆಮಿಯಾ ರೋಡ್ರಿಗಸ್ 19 ರನ್ಗಳ ಕೊಡುಗೆ ನೀಡಿದರೆ, ಬೌಲಿಂಗ್ನಲ್ಲಿ ಶ್ರೀಚರಣಿ 4 ವಿಕೆಟ್, ಶಫಾಲಿ ವರ್ಮಾ 3, ನಂದನಿ ಶರ್ಮಾ 2, ದೀಪ್ತಿ ಶರ್ಮಾ 1 ವಿಕೆಟ್ ಕಬಳಿಸಿ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು. ಇನ್ನೂ ಭಾರತ ತಂಡವು ಜೂನ್ 21ರಂದು ಮ್ಯಾಂಚೆಸ್ಟರ್ನಲ್ಲಿ ತನ್ನ ಮುಂದಿನ ಪಂದ್ಯದಲ್ಲಿ ಬಲಿಷ್ಠ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ.












Click it and Unblock the Notifications