ಯತ್ನಾಳ್ ಬೆಂಬಲಿಗರ ದಾಂಧಲೆ: ವೇದಿಕೆಯಿಂದ ಎದ್ದು ಹೋದ ಮರುಗೇಶ್ ನಿರಾಣಿ, ಜಿಗಜಿನಗಿ- ಬಿಜೆಪಿಯಲ್ಲಿ ಧಗಧಗಿಸುತ್ತಲೇ ಇದೆ ಬೆಂಕಿ
ವಿಜಯಪುರ, ಜೂನ್ 26: ವಿಜಯಪುರ ನಗರದಲ್ಲಿ ಸೋಮವಾರ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯು ಗೊಂದಲದ ಗೂಡಾಗಿ ಮಾರ್ಪಟ್ಟಿತು. ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಬೆಂಬಲಿಗರು ಬಿಜೆಪಿ ನಾಯಕರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿ ದಾಂಧಲೆ ಮಾಡಿದರು. ಗದ್ದಲವನ್ನು ನಿಯಂತ್ರಣಕ್ಕೆ ತರುವಲ್ಲಿ ಪೊಲೀಸರೂ ವಿಫಲವಾದರೆ. ಇದೆಲ್ಲವೂ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸಮ್ಮುಖದಲ್ಲೇ ನಡೆಯಿತು.
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಬಿಜೆಪಿಯ ಇತರೇ ನಾಯಕರು ಕಾರ್ಯಕ್ರಮವನ್ನು ಉದ್ಘಾಟಿಸಲು ಮುಂದಾದರು. ಈ ಸಂದರ್ಭದಲ್ಲಿ ಸ್ಟೇಜ್ ಮೇಲೆ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಹಾಜರಿರಲಿಲ್ಲ. ಯತ್ನಾಳ್ ಅವರು ವೇದಿಕೆಗೆ ಆಗಮಿಸುವವರೆಗೂ ಕಾರ್ಯಕ್ರಮಕ್ಕೆ ಚಾಲನೆ ನೀಡಬಾರದೆಂದು ಬೆಂಬಲಿಗರು ಹಠ ಹಿಡಿದರು.

ಬಿಆರ್ಪಿ, ಬಿಆರ್ಪಿ ಎಂದು ಯತ್ನಾಳ್ ಪರವಾಗಿ ಬೆಂಬಲಿಗರು ಘೋಷಣೆ ಕೂಗಿದರು. ಯತ್ನಾಳ್ ವಿರುದ್ಧ ಕೆಲಸ ಮಾಡಿದ ನಾಯಕರು ವೇದಿಕೆ ಮೇಲೆ ಕೂತಿದ್ದಾರೆ. ಅವರನ್ನು ಹೊರಕಳಿಸಿ ಎಂದು ಆಕ್ರೋಶಭರಿತವಾಗಿ ಕೂಗಿದರು. ಯತ್ನಾಳ್ ಅವರಿಗೆ ದ್ರೋಹ ಬಗೆದವರನ್ನು ನಾವು ಸಹಿಸಿಕೊಳ್ಳುವ ಪ್ರಶ್ನೆಯೇ ಇಲ್ಲವೆಂದು ಹೇಳಿದರು.
ವೇದಿಕೆ ಮೇಲೆ ಉಪಸ್ಥಿತರಿದ್ದ ವಿಜಯಪುರ ಸಂಸದ ರಮೇಶ್ ಜಿಗಜಿಣಗಿ, ಮಾಜಿ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಹಾಗೂ ವಿಧಾನ ಪರಿಷತ್ ಸದಸ್ಯ ಮರುಗೇಶ್ ನಿರಾಣಿ ವಿರುದ್ಧ ಘೋಷಣೆ ಕೂಗಲು ಬೆಂಬಲಿಗರು ಆರಂಭಿಸಿದರು.
ಸಭೆಯಲ್ಲಿ ತೀವ್ರ ಗದ್ದಲದ ವಾತಾವರಣ ಸೃಷ್ಟಿಯಾಯಿತು. ಪರಿಸ್ಥಿತಿ ಕೈಮೀರಿ ಹೋಗುವುದನ್ನು ಗಮನಿಸಿದ ನಾಯಕರು ವೇದಿಕೆಯಿಂದ ಹೊರನಡೆದರು. ಹೊರ ನಡೆದವರಲ್ಲಿ ಮುರುಗೇಶ್ ನಿರಾಣಿ, ಸಂಸದ ರಮೇಶ್ ಜಿಗಜಿಣಗಿ, ಮಾಜಿ ಶಾಸಕ ಎ ಎಸ್ ಪಾಟೀಲ್ ನಡಹಳ್ಳಿ ಹಾಗೂ ವಿಧಾನ ಪರಿಷತ್ ಸದಸ್ಯ ಹನುಮಂತ್ ನಿರಾಣಿ ಸೇರಿದ್ದಾರೆ.

ಯತ್ನಾಳ್ ಬೆಂಬಲಿಗರನ್ನು ನಿಯಂತ್ರಿಸಲು ಪೊಲೀಸರು ಹಾಗೂ ಬಿಜೆಪಿ ನಾಯಕರು ಹರಸಾಹಸ ಪಟ್ಟರು. ಈ ಎಲ್ಲಾ ಘಟನಾವಳಿಗಳನ್ನು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ನೋಡುತ್ತಲೇ ಮೌನವಾಗಿ ಕೂತರು. ಈ ಸಮಯದಲ್ಲಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಸಂಸದ ಅಣ್ಣಾ ಸಾಹೇಬ ಜೊಲ್ಲೆ, ಶಾಸಕ ಅಭಯ ಪಾಟೀಲ್ ಸೇರಿದಂತೆ ಹಲವು ನಾಯಕರು ವೇದಿಕೆ ಮೇಲಿದ್ದರು.
ಬಾಗಲಕೋಟೆಯಲ್ಲೂ ಗದ್ದಲ
ವೀರಣ್ಣ ಚರಂತಿಮಠ ಸೋಲಿಗೆ ಎರಡು ಬಣಗಳು ಪರಸ್ಪರ ಆರೋಪ-ಪ್ರತ್ಯಾರೋಪ ಮಾಡಿಕೊಂಡಿವೆ. ಈ ಹಿನ್ನೆಲೆಯಲ್ಲಿ ಸೋಮವಾರ ಬಾಗಲಕೋಟೆಯಲ್ಲಿ ನಡೆದ ಬಿಜೆಪಿ ಜಿಲ್ಲಾ ಮುಖಂಡರ ಸಭೆಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಮಾಜಿ ಸಚಿವರಾದ ಗೋವಿಂದ್ ಕಾರಜೋಳ ಹಾಗೂ ಮುರುಗೇಶ್ ನಿರಾಣಿ ಅವರ ಎದುರೇ ಈ ಘಟನೆ ನಡೆದಿದೆ.
ಸೋಮವಾರ ಬಿಜೆಪಿ ಬಾಗಲಕೋಟ ಜಿಲ್ಲಾ ಘಟಕದ ವತಿಯಿಂದ ಕೇಂದ್ರದ ಮೋದಿ ಸರ್ಕಾರದ ಒಂಬತ್ತು ವರ್ಷಾಚರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಜಯಪುರ ಶಾಸಕ ಬಸನಗೌಡ ಪಾಟೀಲ ಭಾಗವಹಿಸಿದ್ದರು.

ನಾಯಕರು ಕಾರ್ಯಕ್ರಮದ ಸ್ಥಳಕ್ಕೆ ಆಗಮಿಸುವ ಮುನ್ನವೇ ಬಿಜೆಪಿ ಅಭ್ಯರ್ಥಿ ಸೋಲಿಗೆ ಎರಡು ಗುಂಪುಗಳು ಪರಸ್ಪರ ಆರೋಪ-ಪ್ರತ್ಯಾರೋಪ ಮಾಡಿಕೊಂಡವು.
ವೀರಣ್ಣ ಚರಂತಿಮಠ ವಿರುದ್ಧ ಬಿಜೆಪಿ ಎಂಎಲ್ಸಿ ಪಿಎಚ್ ಪೂಜಾರ ಬೆಂಬಲಿಗರು ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಇದಕ್ಕೆ ಪೂಜಾರ್ ಬೆಂಬಲಿಗರು ಆಕ್ಷೇಪ ವ್ಯಕ್ತಪಡಿಸಿದ್ದು, ಎರಡು ಗುಂಪುಗಳ ನಡುವೆ ವಾಕ್ಸಮರಕ್ಕೆ ಕಾರಣವಾಯಿತು.
ಪೂಜಾರ ಪಾಳೆಯದ ಕೆಲವು ಬೆಂಬಲಿಗರನ್ನು ಸಭೆಯಿಂದ ಹೊರಗಿಡುವಂತೆ ಚರಂತಿಮಠ ಬೆಂಬಲಿಗರು ಒತ್ತಾಯಿಸಿದರು. ಚರಂತಿಮಠ ಅವರೇ ಪದೇ ಪದೇ ಮನವಿ ಮಾಡಿದರೂ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರು ಮಧ್ಯಪ್ರವೇಶಿಸಿದರು. ಎರಡೂ ಬಣಗಳ ಕೆಲವು ಬೆಂಬಲಿಗರನ್ನು ಸ್ಥಳದಿಂದ ಹೊರಹೋಗುವಂತೆ ಕೇಳಲಾಯಿತು. ಸ್ವಲ್ಪ ಸಮಯದ ನಂತರ ಬೊಮ್ಮಾಯಿ ಮತ್ತು ಯತ್ನಾಳ್ ಸ್ಥಳಕ್ಕೆ ಆಗಮಿಸಿ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಬಾಗಲಕೋಟೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಚ್.ವೈ.ಮೇಟಿ ವಿರುದ್ಧ ಬಿಜೆಪಿ ಅಭ್ಯರ್ಥಿ ಚರಂತಿಮಠ ಪರಾಭವಗೊಂಡಿದ್ದಾರೆ.












Click it and Unblock the Notifications