ಜನವರಿ 13ರಂದು ಬಿಜೆಪಿಯ ಎಲ್ಲ ಶಾಸಕರು ದೆಹಲಿಗೆ, ಒಳಮರ್ಮವೇನು?
ಬೆಂಗಳೂರು, ಜನವರಿ 10: ರಾಜ್ಯ ರಾಜಕಾರಣ ಮತ್ತೆ ಬಿರುಸುಗೊಳ್ಳುತ್ತಿದೆ. ಕುಮಾರಸ್ವಾಮಿ ಅವರ ಕಾಂಗ್ರೆಸ್ ವಿರೋಧಿ ಹೇಳಿಕೆ. ಜಾರಕಿಹೊಳಿ ವಿವಾದ, ಡಿ.ಕೆ.ಶಿವಕುಮಾರ್ ದೆಹಲಿ ಪ್ರಯಾಣ , ಶಾಸಕ ಸುಧಾಕರ್ ಅಸಮಾಧಾನ ಎಲ್ಲದರ ಜೊತೆಗೆ ಈಗ ಜನವರಿ 13 ರಂದು ಬಿಜೆಪಿಯ ಎಲ್ಲ ಶಾಸಕರು ದೆಹಲಿಗೆ ತೆರಳುತ್ತಿದ್ದಾರೆ.
ಮೇಲಿನ ಬಿಡಿ ಘಟನೆಗಳನ್ನು ಒಟ್ಟಾಗಿ ನೋಡಿದಲ್ಲಿ ರಾಜ್ಯ ರಾಜಕಾರಣದಲ್ಲಿ ಪಲ್ಲಟದ ಮುನ್ಸೂಚನೆಯಂತೆ ಗೋಚರವಾಗುತ್ತಿದೆ. ಈ ಬಿಡಿ ಘಟನೆಗಳು ಕಾಂಗ್ರೆಸ್ನಲ್ಲಿ ತಳಮಳ ಹೆಚ್ಚಿಸಿದೆ.
ಜನವರಿ 11 ಮತ್ತು 12 ರಂದು ದೆಹಲಿಯಲ್ಲಿ ಬಿಜೆಪಿ ರಾಷ್ಟ್ರ ಕಾರ್ಯಕಾರಿಣಿ ಸಭೆ ಇದೆ. ಇದಕ್ಕಾಗಿ ಇಂದೇ ಯಡಿಯೂರಪ್ಪ ಸೇರಿ ಕೆಲವು ಬಿಜೆಪಿ ಮುಖಂಡರು ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಆದರೆ ಸಭೆ ಮುಗಿದ ನಂತರ ಜನವರಿ 13 ರಂದು ಬಿಜೆಪಿಯ ಎಲ್ಲ ಶಾಸರನ್ನು ದೆಹಲಿಗೆ ಕರೆಸಿಕೊಳ್ಳಲಾಗುತ್ತಿದೆ.
ಈ ವಿಷಯವನ್ನು ಸ್ವತಃ ಯಡಿಯೂರಪ್ಪ ಅವರೇ ಮಾಧ್ಯಮಗಳಿಗೆ ಹೇಳಿದ್ದಾರೆ. ಜನವರಿ 13 ರಂದು ಬಿಜೆಪಿಯ ಎಲ್ಲ ಶಾಸಕರನ್ನೂ ದೆಹಲಿಗೆ ಕರೆದುಕೊಂಡು ಹೋಗಲಾಗುತ್ತದೆ. ಮೇಲ್ವರ್ಗದ ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡುವ ಮಸೂದೆಗೆ ಅಂಗೀಕಾರ ದೊರೆತಿದ್ದಕ್ಕೆ ಮೋದಿ ಅವರನ್ನು ಅಭಿನಂದಿಸಲಾಗುತ್ತದೆ ಎಂದು ಹೇಳಿದ್ದಾರೆ.

ಶಾಸಕರಿಂದ ಮೋದಿ, ಅಮಿತ್ ಶಾ ಭೇಟಿ
ಮೋದಿ ಅವರನ್ನು ಅಭಿನಂದಿಸಲು ಹೋಗುತ್ತಿದ್ದೇವೆ ಎಂದು ಕಾರಣವನ್ನು ಯಡಿಯೂರಪ್ಪ ಅವರು ಹೇಳಿದ್ದಾರಾದರೂ, ಒಳಗಿನ ಮರ್ಮ ಬೇರೆಯೇ ಇದೆ ಎನ್ನುತ್ತಿವೆ ಮೂಲಗಳು. ಅಮಿತ್ ಶಾ ಅವರನ್ನು ಸಹ ರಾಜ್ಯ ಬಿಜೆಪಿ ಶಾಸಕರು ಭೇಟಿ ಆಗುತ್ತಿದ್ದು, ರಾಜ್ಯ ರಾಜಕಾರಣದಲ್ಲಿ ನಡೆಯಲಿರುವ ಪಲ್ಲಟದ ಬಗ್ಗೆ ಸ್ವತಃ ಅಮಿತ್ ಶಾ ಅವರೇ ಶಾಸಕರಿಗೆ ಭರವಸೆ ನೀಡಲಿದ್ದಾರೆ ಎನ್ನಲಾಗುತ್ತಿದೆ.

ಕಾಂಗ್ರೆಸ್-ಜೆಡಿಎಸ್ ನಡುವೆ ಬಿರುಕು ಹೆಚ್ಚುತ್ತಿದೆ
ಕಾಂಗ್ರೆಸ್-ಜೆಡಿಎಸ್ ಮಿತ್ರ ಪಕ್ಷಗಳಲ್ಲಿನ ಬಿರುಕು ದಿನೇ-ದಿನೇ ಹಿರಿದಾಗುತ್ತಿರುವ ವೇಳೆಗೆ ಸರಿಯಾಗಿ ಬಿಜೆಪಿ ತನ್ನೆಲ್ಲಾ ಶಾಸಕರನ್ನು ದೆಹಲಿಗೆ ವರ್ಗಾಯಿಸುತ್ತಿರುವುದು ಬೇರಯದ್ದೇ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ತಮ್ಮ ಶಾಸಕರನ್ನು ರಕ್ಷಿಸಿ ಇತರ ಪಕ್ಷಗಳ ಶಾಸಕರಿಗೆ ಗಾಳಾ ಹಾಕುವ ಯೋಜನೆ ಇರಬಹುದೇ? ಎಂಬ ಅನುಮಾನ ಕಾಂಗ್ರೆಸ್ ನ ನಿದ್ದೆಗೆಡಿಸಿದೆ.

ಸಂಕ್ರಾಂತಿ ನಂತರ ಸರ್ಕಾರ ಉರುಳುತ್ತದೆ: ಬಿಜೆಪಿ
ಸಂಕ್ರಾಂತಿ ನಂತರ ಸರ್ಕಾರ ಉರುಳುತ್ತದೆ ಎಂದು ಬಿಜೆಪಿ ಪಾಳಯದ ಪ್ರಮುಖ ಮುಖಂಡರು ಭವಿಷ್ಯ ನುಡಿದಿದ್ದಾರೆ. ಈ ಹಿಂದೆಯೂ ಇಂತಹಾ ಹೇಳಿಕೆಗಳನ್ನು ಅವರು ನೀಡಿದ್ದರು. ಆದರೆ ಆಗ ಜೆಡಿಎಸ್-ಕಾಂಗ್ರೆಸ್ ನಡುವಿನ ಒಡಕು ಇಷ್ಟು ದೊಡ್ಡದಾಗಿರಲಿಲ್ಲ. ಆದರೆ ಈ ಬಾರಿಯ ಬಿಜೆಪಿಯ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕಾದ ಪರಿಸ್ಥಿತಿಗಳು ರಾಜ್ಯ ರಾಜಕಾರಣದಲ್ಲಿ ಘಟಿಸುತ್ತಿವೆ.

ಹಲವು ಘಟನೆಗಳು ಘಟಿಸುತ್ತಿವೆ
ಕಾಂಗ್ರೆಸ್ನ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಅವರಿಗೆ ಐಟಿ, ಇಡಿ ಉರುಳು ಇಂಚಿಂಚೇ ಬಿಗಿ ಆಗುತ್ತಿದೆ. ಕಾಂಗ್ರೆಸ್ ಮೇಲೆ ಅಬ್ಬರಿಸಿ-ಬೊಬ್ಬಿರಿದಿದ್ದ ರಮೇಶ್ ಜಾರಕಿಹೊಳಿ ಸಹ ಇತ್ತೀಚಿಗೆ ಮೌನಕ್ಕೆ ಶರಣಾಗಿ ಅವಕಾಶಕ್ಕಾಗಿ ಹೊಂಚು ಹಾಕುತ್ತಿದ್ದಾರೆ. ಸಚಿವ ಸ್ಥಾನ ಕೈತಪ್ಪಿದ ಕೆಲವು ಶಾಸಕರು ಕಾಂಗ್ರೆಸ್ ವಿರುದ್ಧ ಅಸಮಾಧಾನದ ಹೊಗೆ ತುಂಬಿಸಿಕೊಂಡಿದ್ದಾರೆ. ಇಂತಹಾ ಸಮಯದಲ್ಲಿ ಬಿಜೆಪಿಯು ಶಾಸಕರನ್ನು ದೆಹಲಿಯತ್ತ ಕೊಂಡೊಯ್ಯುತ್ತಿದೆ. ಇದು ಸಹಜವಾಗಿಯೇ ಗುಮಾನಿ ಹುಟ್ಟು ಹಾಕಿದೆ.












Click it and Unblock the Notifications