ಕರ್ನಾಟಕ ಬಿಜೆಪಿಗೆ ಡೈನಾಮಿಕ್ ಲೀಡರ್ ತುರ್ತಾಗಿ ಬೇಕಾಗಿದ್ದಾರೆ: ಅರ್ಜಿ ಹಾಕಿ!
ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯ ಬಿಜೆಪಿ ಘಟಕ ಮತ್ತು ಮುಖಂಡರು ಸಾಗುತ್ತಿರುವ ದಾರಿ ನೋಡಿದರೆ, ಇವರಿಗೆ ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎನ್ನುವ ಛಲ ಇದ್ದಂತಿಲ್ಲ. ಕಾರ್ಯಕರ್ತರನ್ನು ಹುರಿದುಂಬಿಸುವ ಕೆಲಸ ಬೂತ್/ಬ್ಲಾಕ್ ಮಟ್ಟದಲ್ಲಿ ನಡೆಯ
ಆಷಾಡ ಮುಗೀತು...ಶ್ರಾವಣ ಮಾಸ ಬಂದಾಯ್ತು, ಚಂದ್ರಗ್ರಹಣದ ಮೋಕ್ಷಕಾಲವೂ ಸಂಪನ್ನವಾಯಿತು. ಆದರೆ, ರಾಜ್ಯ ಬಿಜೆಪಿ ಮುಖಂಡರಿಗೆ ಹೋರಾಟದ ಕಿಚ್ಚು ಪುಟಿದೇಳುವುದು ಯಾವಾಗ? ಅಥವಾ ಪ್ರಧಾನಿ ಮೋದಿ, ಅಮಿತ್ ಶಾ ಕೊನೇ ಗಳಿಗೆಯಲ್ಲಿ ಏನಾದರೂ ಮಾಡ್ಯಾರು ಎನ್ನುವ ಓವರ್ ಕಾನ್ಫಿಡೆನ್ಸಾ..
ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯ ಬಿಜೆಪಿ ಘಟಕ ಮತ್ತು ಮುಖಂಡರು ಸಾಗುತ್ತಿರುವ ದಾರಿ ನೋಡಿದರೆ, ಇವರಿಗೆ ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎನ್ನುವ ಛಲ ಇದ್ದಂತಿಲ್ಲ. ಕಾರ್ಯಕರ್ತರನ್ನು ಹುರಿದುಂಬಿಸುವ ಕೆಲಸ ಬೂತ್/ಬ್ಲಾಕ್ ಮಟ್ಟದಲ್ಲಿ ನಡೆಯುತ್ತಿಲ್ಲ. ಒಬ್ಬರೂಬ್ಬರದ್ದು ಒಂದೊಂದು ಕಡೆ ಮುಖ..
ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ರಾಜ್ಯ ಪ್ರವಾಸ ಮಾಡುತ್ತಿರುವುದನ್ನು ಬಿಟ್ಟರೆ, ಬಿಜೆಪಿ ಮುಖಂಡರು ನಾಮಕೇವಾಸ್ಥೆ ಅಲ್ಲಲ್ಲಿ ಸಭೆ/ಪ್ರತಿಭಟನೆಯಲ್ಲಿ ಭಾಗವಹಿಸಿ ಸುಮ್ಮನಾಗುತ್ತಿದ್ದಾರೆ. ವಿರೋಧ ಪಕ್ಷದಲ್ಲಿದ್ದು ಸರಕಾರದ ನ್ಯೂನ್ಯತೆಯನ್ನು ಸಾರ್ವಜನಿಕರಿಗೆ ಮನದಟ್ಟು ಮಾಡುವ ಕೆಲಸದಲ್ಲಿ ರಾಜ್ಯ ಬಿಜೆಪಿ ಮುಖಂಡರು ವಿಫಲರಾಗಿದ್ದಾರೆ.
ಕಳೆದ ಬಾರಿ ಅಧಿಕಾರಕ್ಕೆ ಬರುವ ವೇಳೆ ಬಿಜೆಪಿ ನಾಯಕರಲ್ಲಿದ್ದ ಸಂಘಟನಾ ಶಕ್ತಿ, ಕಾರ್ಯಕರ್ತರಲ್ಲಿದ್ದ ಕಾರ್ಯಕ್ಷಮತೆ ಈಗಿಲ್ಲ, ಬೀದಿಗಿಳಿದು ಹೋರಾಟ ಮಾಡುವವರ ಸಂಖ್ಯೆ ಕಡಿಮೆಯಾಗಿದೆ. ಪಕ್ಷದ ಹಿರಿಯ ಮುಖಂಡರಿಬ್ಬರಾದ ಯಡಿಯೂರಪ್ಪ ಮತ್ತು ಈಶ್ವರಪ್ಪನವರ ಮಧ್ಯೆ ಹೊಗೆಯಾಡುತ್ತಿದ್ದ ಭಿನ್ನಮತ, ಈಶ್ವರಪ್ಪ ಪಿಎ ಅಪಹರಣದ ನಂತರ ಬೆಂಕಿಯಾಡಲು ಆರಂಭಿಸಿದೆ.
ಅತ್ತ ಜೆಡಿಎಸ್ ನಲ್ಲಿ ಇಬ್ಬರೇ ಪ್ರಮುಖ ಮುಖಂಡರು (ದೇವೇಗೌಡ, ಕುಮಾರಸ್ವಾಮಿ) ಇದ್ದರೂ, ಅವರಿಬ್ಬರೂ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಲುತ್ತಿರುವ ರೀತಿ ನೋಡಿದರೆ, ಇಷ್ಟೊಂದು ನಾಯಕರು ರಾಜ್ಯ ಬಿಜೆಪಿಯಲ್ಲಿ ಇದ್ದರೂ, ಡೈನಾಮಿಕ್ ನಾಯಕನ ಕೊರತೆ ಬಿಜೆಪಿಯಲ್ಲಿ ಎದ್ದು ಕಾಣುತ್ತಿದೆ.
ಅಸೆಂಬ್ಲಿ ಚುನಾವಣೆ ಮತ್ತು ಲೋಕಸಭಾ ಚುನಾವಣೆಯ ರಾಜಕೀಯ ಚಿಂತನೆಗಳೇ ಬೇರೆ. ಮೋದಿ ಹವಾ ಪ್ರಮುಖವಾಗಿ ಲೋಕಸಭಾ ಚುನಾವಣೆಗೆ ಅನುಕೂಲವಾಗುತ್ತದೆ, ಸ್ಥಳೀಯ ಸಮಸ್ಯೆಗಳೇ ಅಸೆಂಬ್ಲಿ ಚುನಾವಣೆಯಲ್ಲಿ ಮಹತ್ವ ಪಡೆದುಕೊಳ್ಳುವುದು ಎನ್ನುವ ವಾಸ್ತವತೆಯನ್ನು ರಾಜ್ಯ ಬಿಜೆಪಿ ಮುಖಂಡರು ಅರಿತುಕೊಳ್ಳುವುದು ಯಾವಾಗ ಎನ್ನುವುದು ಕಾರ್ಯಕರ್ತರಲ್ಲಿರುವ ವಿಷಾದದ ನುಡಿ. ಇತ್ತೀಚಿನ ಕೆಲವು ವಿದ್ಯಮಾನಗಳನ್ನು ಬಿಜೆಪಿ ಸರಿಯಾಗಿ ನಿಭಾಯಿಸಲೇ ಇಲ್ಲ.. ಮುಂದೆ ಓದಿ..

ಲಿಂಗಾಯಿತ/ವೀರಶೈವ ಸಮುದಾಯದ ಪ್ರತ್ಯೇಕತೆಯ ಕೂಗು
ಬಿಜೆಪಿಗೆ ಬಹುದೊಡ್ಡ ಮತಬ್ಯಾಂಕ್ ಆಗಿರುವ ಲಿಂಗಾಯಿತ/ವೀರಶೈವ ಸಮುದಾಯದ ಇತ್ತೀಚಿನ ಗೊಂದಲಗಳ ವಿಚಾರದಲ್ಲೂ ಸಮರ್ಥ ನಿರ್ಧಾರ ತೆಗೆದುಕೊಳ್ಳದೇ ಬಿಜೆಪಿ, ಸಿದ್ದರಾಮಯ್ಯ ಸರಕಾರದ ವಿರುದ್ದ ಕತ್ತಿ ಮಸೆಯಬಹುದಾಗಿದ್ದ ಬಹುದೊಡ್ಡ ಅಸ್ತ್ರವನ್ನು ಕೈಚೆಲ್ಲಿತು. ಜೊತೆಗೆ, ಈ ಸಮದಾಯರ ಎರಡೂ ಕಡೆಯ ಮುಖಂಡರು, ಧಾರ್ಮಿಕ ಮುಖಂಡರ ಜೊತೆ ಮಾತುಕತೆ ನಡೆಸಿ,ಸಮುದಾಯ ಇಬ್ಬಾಗದ ಕೂಗನ್ನು ನಿಲ್ಲಿಸಿ, ತಮ್ಮ ಮತಬ್ಯಾಂಕ್ ಇನ್ನಷ್ಟು ಭದ್ರಗೊಳಿಸಬಹುದಾಗಿತ್ತು.

ಎಗ್ಗಿಲ್ಲದೇ ನಡೆಯುತ್ತಿರುವ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳ ವರ್ಗಾವಣೆ
ರಾಜ್ಯದೆಲ್ಲಡೆ ಎಗ್ಗಿಲ್ಲದೇ ನಡೆಯುತ್ತಿರುವ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲೂ ಬಿಜೆಪಿಯಿಂದ ಗಂಭೀರ ಪ್ರತಿಭಟನೆ ವ್ಯಕ್ತವಾಗಲೇ ಇಲ್ಲ. ಇನ್ನು ಬಹುದಿನದಿಂದ ಖಾಲಿಯಿರುವ ಆಯಕಟ್ಟಿನ ಗೃಹ ಖಾತೆಯ ವಿಚಾರದಲ್ಲೂ ಬಿಜೆಪಿ ಚಕಾರವೆತ್ತುತ್ತಿಲ್ಲ.

ಪರಪ್ಪನ ಅಗ್ರಹಾರದಲ್ಲಿನ ಬ್ರಹ್ಮಾಂಡ ಭ್ರಷ್ಟಾಚಾರ
ಪರಪ್ಪನ ಅಗ್ರಹಾರದಲ್ಲಿನ ಬ್ರಹ್ಮಾಂಡ ಭ್ರಷ್ಟಾಚಾರದ ವಿಷಯದಲ್ಲೂ ಬಿಜೆಪಿಯಿಂದ ಕಾಟಾಚಾರಕ್ಕೊಂದು ಪ್ರತಿಭಟನೆ ನಡೆದರೂ, ಅದರ ಯಾವ ಬಿಸಿಯೂ ಸರಕಾರಕ್ಕೆ ತಟ್ಟಲಿಲ್ಲ. ಇಬ್ಬರು ಐಪಿಎಸ್ ಅಧಿಕಾರಿಗಳು ನೇರವಾಗಿ ಆರೋಪ, ಪ್ರತ್ಯಾರೋಪ ಮಾಡುತ್ತಿದ್ದರೂ, ಸರಕಾರ ಒಬ್ಬರನ್ನು ರಜೆಯ ಮೇಲೆ ಕಳುಹಿಸಿ, ಇನ್ನೊಬ್ಬರನ್ನು ವರ್ಗಾವಣೆ ಮಾಡಿ ಕೈತೊಳೆದುಕೊಂಡಿತು. ಸಿದ್ದರಾಮಯ್ಯ ಸರಕಾರಕ್ಕೆ ಮುಜುಗರ ತಂದಿದ್ದ ಮತ್ತು ರಾಷ್ಟ್ರಮಟ್ಟದಲ್ಲಿ ಭಾರೀ ಸುದ್ದಿ ಮಾಡಿದ್ದ ಈ ಪ್ರಕರಣದ ವಿಚಾರದಲ್ಲೂ ಬಿಜೆಪಿಯಿಂದ ನಿರೀಕ್ಷಿತ ಹೋರಾಟ ವ್ಯಕ್ತವಾಗಲೇ ಇಲ್ಲ.

ಬಂಟ್ವಾಳದಲ್ಲಿನ ಘಟನೆ, ಇಂದಿರಾ ಕ್ಯಾಂಟೀನ್
ಬಂಟ್ವಾಳದಲ್ಲಿನ ಘಟನೆ, ನ್ಯಾಯಾಲದ ಆದೇಶದ ಹೊರತಾಗಿಯೂ ಸಾರ್ವಜನಿಕ ಜಾಗವನ್ನು ಇಂದಿರಾ ಕ್ಯಾಂಟೀನಿಗೆ ಬಳಸಿಕೊಳ್ಳುತ್ತಿರುವುದು, ಅಕ್ರಮ ಮರಳುಗಾರಿಕೆ, ಅರ್ಕಾವತಿ ಮುಂತಾದ ಗಂಭೀರ ವಿಚಾರಗಳಲ್ಲಿ ಸರಕಾರದ ವೈಫಲ್ಯತೆಯನ್ನು ಜನಸಾಮಾನ್ಯರ ಮುಂದೆ ಅನಾವರಣ ಮಾಡಲು ಬಿಜೆಪಿ ವಿಫಲವಾಯಿತು.

ಡಿಕೆಶಿ ಮನೆ ಮೇಲೆ ನಡೆದ ಐಟಿ ದಾಳಿ
ಡಿ ಕೆ ಶಿವಕುಮಾರ್ ಅವರ ಮನೆ, ಕಚೇರಿಯ ಮೇಲೆ ಆದಾಯ ತೆರಿಗೆ ದಾಳಿ ನಡೆದ ವಿಚಾರದಲ್ಲಿ, ರಾಜ್ಯ ಬಿಜೆಪಿ ಮುಖಂಡರು ಗಪ್ ಚುಪ್ ಆಗಿದ್ದದ್ದು ಕೇಂದ್ರದ ಬಿಜೆಪಿ ಮುಖಂಡರಿಗೇ ಸಹಿಸಿಕೊಳ್ಳಲಾಗದೇ, ರಾಜ್ಯ ಮುಖಂಡರನ್ನು ಸರಿಯಾಗಿ ತರಾಟೆಗೆ ತೆಗೆದುಕೊಂಡಿದ್ದರು. ಜೊತೆಗೆ ಐಟಿ ದಾಳಿಗೆ ಉತ್ತರ ನೀಡುವ ಶಕ್ತಿ ಡಿ ಕೆ ಶಿವಕುಮಾರ್ ಅವರಿಗಿದೆ ಎಂದು ಯಡಿಯೂರಪ್ಪ ಹೇಳಿದ್ದು, ಬಿಜೆಪಿಗೆ ಇನ್ನಷ್ಟು ಮುಜುಗರತಂದೊಡ್ಡಿತು.

ಮೆಟ್ರೋದಲ್ಲಿ ಹಿಂದಿ ಹೇರಿಕೆ ಮತ್ತು ಪ್ರತ್ಯೇಕ ನಾಡಧ್ವಜದ ವಿಚಾರ
ಮೆಟ್ರೋದಲ್ಲಿ ಹಿಂದಿ ಹೇರಿಕೆ ಮತ್ತು ಪ್ರತ್ಯೇಕ ನಾಡಧ್ವಜದ ವಿಚಾರದಲ್ಲೂ ಬಿಜೆಪಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವಲ್ಲಿ ವಿಫಲವಾಯಿತು. ಅತ್ತ, ಹೈಕಮಾಂಡ್ ಒತ್ತಡದ ನಡುವೆಯೂ ಗಟ್ಟಿ ನಿರ್ಧಾರ ತೆಗೆದುಕೊಂಡು ಮುಖ್ಯಮಂತ್ರಿಗಳು ಸೈ ಎನಿಸಿಕೊಂಡರು.

ರಾಜ್ಯ ಬಿಜೆಪಿ ಸಂಸದರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಮೋದಿ
ಕೇಂದ್ರ ಸರ್ಕಾರದ ಜನಪ್ರಿಯ ಯೋಜನೆಗಳನ್ನು ಪರಿಣಾಮಕಾರಿಯಾಗಿ ಪ್ರಚಾರ ಮಾಡುವಲ್ಲಿ ವಿಫಲರಾಗಿದ್ದೀರಿ ಎಂದು ಪ್ರಧಾನಿ ನರೇಂದ್ರ ಮೋದಿ ರಾಜ್ಯ ಬಿಜೆಪಿ ಸಂಸದರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದೂ ಆಯಿತು. ಲೋಕಸಭೆ ಮತ್ತು ರಾಜ್ಯಸಭೆ ಸದಸ್ಯರ ಕಾರ್ಯವೈಖರಿ ಬಗ್ಗೆ ಮೋದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ನಾಯಕರು ಮೋದಿ ಅಮಲಿನಲ್ಲಿ ಮೈ ಮರೆಯೋದು ಬಿಡಲಿ
ಬಿಜೆಪಿ ನಾಯಕರು ಮೋದಿ, ಅಮಿತ್ ಶಾ ಅಮಲಿನಲ್ಲಿ ಮೈ ಮರೆಯೋದು ಬಿಟ್ಟು, ತಾನೊಂದು ಪ್ರತಿಪಕ್ಷ ಎನ್ನುವ ಸತ್ಯವನ್ನು ಅರಿತು ಚುನಾವಣಾ ವರ್ಷದಲ್ಲಿ ಒಗ್ಗಟ್ಟಾಗಿ ಕಾರ್ಯತಂತ್ರ ರೂಪಿಸಿದರೆ, ಇತ್ತೀಚೆಗೆ ಯಡಿಯೂರಪ್ಪನವರೂ ಮರೆತು ಹೋಗಿರುವ ಅವರದೇ ಧ್ಯೇಯ ವಾಕ್ಯವಾಗಿದ್ದ ' ಮಿಷನ್ 150' ಸಾಕಾರಗೊಳ್ಳುವ ಆಸೆಯನ್ನು ಬಿಜೆಪಿ ಜೀವಂತವಾಗಿ ಇಟ್ಟು ಕೊಳ್ಳಬಹುದೇನೋ?












Click it and Unblock the Notifications