ಹುಬ್ಬಳ್ಳಿಯಲ್ಲಿ ಡಿ.28ರಿಂದ ಎರಡು ದಿನ ಬಿಜೆಪಿ ಕಾರ್ಯಕಾರಿಣಿ ಸಭೆ
ಬೆಂಗಳೂರು, ಡಿ.27: ಹುಬ್ಬಳ್ಳಿಯಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ಕರೆಯಲಾಗಿದೆ. ಸಭೆಗೆ ಎರಡು ದಿನ ಮುಂಚಿತವಾಗಿಯೇ ಪಕ್ಷದಲ್ಲಿ ಕೆಲವರಿಗೆ ಹೊಸ ಜವಾಬ್ದಾರಿಗಳನ್ನು ವಹಿಸಲಾಗಿದೆ.
ಹುಬ್ಬಳ್ಳಿಯಲ್ಲಿ ಡಿ.28 ಮತ್ತು 29ರಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ಕರೆಯಲಾಗಿದೆ. ಕಳೆದ ಸೆಪ್ಟಂಬರ್ನಲ್ಲಿ ದಾವಣಗೆರೆಯಲ್ಲಿ ಕಾರ್ಯಕಾರಿಣಿ ಸಭೆ ನಡೆದಿತ್ತು. ಮೂರು ತಿಂಗಳ ಅವಧಿಯಲ್ಲಿಯೇ ಮತ್ತೊಮ್ಮೆ ಸಭೆ ಕರೆಯಲಾಗಿದೆ.
ಇತ್ತೀಚೆಗೆ ಎದ್ದಿರುವ ಮುಖ್ಯಮಂತ್ರಿ ಬದಲಾವಣೆಯ ಕೂಗು, ರಾಜ್ಯ ಬಿಜೆಪಿ ಅಧ್ಯಕ್ಷರ ಬದಲಾವಣೆಯ ವಿಚಾರ, ವಿಧಾನ ಪರಿಷತ್ತಿನ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಪಕ್ಷಕ್ಕೆ ಆದ ಹಿನ್ನಡೆ, ರಾಜ್ಯ ಸಚಿವ ಸಂಪುಟ ವಿಸ್ತರಣೆ ಸೇರಿದಂತೆ ಹಲವು ವಿಷಯಗಳು ಚರ್ಚೆಗೆ ಬರಲಿವೆ ಎನ್ನಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಹಿತಿ ಪಕ್ಷದ ಎಲ್ಲ ನಾಯಕರು, ಸಚಿವರು, ಶಾಸಕರು ಹುಬ್ಬಳ್ಳಿಯತ್ತ ಪ್ರಯಾಣ ಬೆಳಸಲಿದ್ದಾರೆ.

ರಾಜ್ಯ ಉಸ್ತುವಾರಿ ಆಗಮನ
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ಮತ್ತು ಕರ್ನಾಟಕದ ಉಸ್ತುವಾರಿ ಅರುಣ್ ಸಿಂಗ್ ಅವರು ಡಿಸೆಂಬರ್ 27ರಿಂದ ಡಿಸೆಂಬರ್ 29ರವರೆಗೆ ಕರ್ನಾಟಕದಲ್ಲಿ ಪ್ರವಾಸ ಮಾಡಲಿದ್ದಾರೆ.
ಸೋಮವಾರ ಸಂಜೆ ಸಂಜೆ 5 ಗಂಟೆಗೆ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸುವ ಅವರು ನಿಗದಿತ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಹುಬ್ಬಳ್ಳಿಯಲ್ಲಿಯೇ ಉಳಿದುಕೊಳ್ಳಲಿದ್ದಾರೆ. 28ರಂದು ರಾಜ್ಯ ಪದಾಧಿಕಾರಿಗಳ ಸಭೆ ಮತ್ತು ವಿವಿಧ ಬೈಠಕ್ಗಳಲ್ಲಿ ಅವರು ಭಾಗವಹಿಸಲಿದ್ದಾರೆ. 29ರಂದು ರಾಜ್ಯ ಕಾರ್ಯಕಾರಿ ಸಮಿತಿ ಸಭೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾರ್ಗದರ್ಶನ ನೀಡಲಿದ್ದಾರೆ ಎಂದು ರಾಜ್ಯ ಬಿಜೆಪಿ ತಿಳಿಸಿದೆ.

ಎರಡು ತಿಂಗಳಿಗೆ ಕಾರ್ಯಕಾರಿಣಿ ಸಭೆ ಮಾಡ್ತೇವೆ
ಇನ್ನು ಸೋಮವಾರ ಬೆಂಗಳೂರಿನಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, 'ಹುಬ್ಬಳ್ಳಿಯಲ್ಲಿ ಮಂಗಳವಾರದಿಂದ ಎರಡು ದಿನ ಕಾರ್ಯಕಾರಣಿ ಸಭೆ ನಡೆಯುತ್ತದೆ. ಪ್ರತೀ ಎರಡು ತಿಂಗಳಿಗೆ ಕಾರ್ಯಕಾರಿಣಿ ಸಭೆ ಮಾಡ್ತೇವೆ. ನಮ್ಮದೊಂದೇ ಪಕ್ಷ ನಿರಂತರವಾಗಿ ಕಾರ್ಯಕಾರಿಣಿ, ಪಕ್ಷ ಸಂಘಟನೆ ಸಭೆ ಮಾಡುತ್ತಿರುವುದು. ಪಕ್ಷ ಸಂಘಟನೆಗೆ ಸಂಬಂಧಿಸಿದಂತೆ ಹಲವು ವಿಷಯಗಳ ಕುರಿತು ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು' ಎಂದು ಹೇಳಿದರು.
ಸಂಪುಟ ವಿಸ್ತರಣೆ ಪಕ್ಷದ ಆಂತರಿಕ ವಿಚಾರವಾಗಿದ್ದು, ಪಕ್ಷದ ಹೈಕಮಾಂಡ್ ಈ ಬಗ್ಗೆ ಗಮನಿಸಲಿದೆ. ಆಡಳಿತ ಮತ್ತು ಪಕ್ಷದ ನಡುವೆ ಸಮನ್ವಯ ಇದೆ. ಬರುವಂತಹ ದಿನಗಳಲ್ಲಿ ಸರ್ಕಾರ ಇನ್ನಷ್ಟು ಒಳ್ಳೆಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು 2023 ಕ್ಕೆ ಬಿಜೆಪಿ ತನ್ನ ಉತ್ತಮ ಕೆಲಸಗಳು ಹಾಗೂ ಸಾಧನೆಗಳನ್ನು ಜನರ ಮುಂದೆ ಇಡಲಿದೆ ಎಂದು ತಿಳಿಸಿದರು

ಇನ್ನು ಬಿಜೆಪಿ ಕಾರ್ಯಕಾರಣಿ ಸಭೆಯಲ್ಲಿ ರಮೆಶ್ ಜಾರಕಿಹೊಳಿ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದರ ಕುರಿತೂ ಸಹ ಚರ್ಚೆಗೆ ಬರಲಿದೆ ಎನ್ನಲಾಗಿದೆ.
ಇತ್ತೀಚೆಗೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಬೆಳಗಾವಿಯಲ್ಲಿ ಬಿಜೆಪಿ ಅಭ್ಯರ್ಥಿ ಮಹಂತೇಶ ಕವಠಗಿಮಠ ಅವರ ಸೋಲಿಗೆ ಜಾರಕಿಹೊಳಿ ಅವರೇ ಪರೋಕ್ಷ ಕಾರಣವೂ ಆಗಿದ್ದಾರೆ. ಪಕ್ಷದ ಅಭ್ಯರ್ಥಿ ಇದ್ದರೂ ಸಹ ತನ್ನ ಸಹೋದರ ಲಖನ್ ಜಾರಕಿಹೊಳಿಗೆ ಎರಡನೇ ಪ್ರಾಶಸ್ತ್ಯದ ಮತ ನೀಡಿ ಎಂದು ಬಹಿರಂಗ ಪ್ರಚಾರ ಮಾಡಿದ್ದರು. ಇದು ಕಾಂಗ್ರೆಸ್ಗೆ ವರದಾನವಾಗಿತ್ತು. ಬೆಳಗಾವಿಯಲ್ಲಿ ಬಿಜೆಪಿ ಸೋಲಲು ಜಾರಕಿಹೊಳಿಯೇ ಕಾರಣ ಎಂದು ಪಕ್ಷದಲ್ಲಿ ಅಸಮಾಧಾನ ಎದ್ದಿತ್ತು.
ಈ ಕುರಿತು ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಸಿಎಂ ಬಸವರಾಜ ಬೊಮ್ಮಾಯಿ 'ಎಲ್ಲವೂ ಪಕ್ಷದ ಹೈಕಮಾಂಡ್ ಗಮನದಲ್ಲಿದೆ. ತಾವು ಕೇಳುವಂತಹ ಎಲ್ಲವೂ ಕೂಡ ಪಕ್ಷದ ಹೈಕಮಾಂಡ್ ನೋಡುತ್ತಿದೆ' ಎನ್ನುವ ಮೂಲಕ ಜಾರಕಿಹೊಳಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬಹುದು ಎಂದು ಪರೋಕ್ಷವಾಗಿ ತಿಳಿಸಿದರು.

ರಾಜ್ಯ ಬಿಜೆಪಿಯಲ್ಲಿ ವಿವಿಧ ನೇಮಕಾತಿಗಳನ್ನು ಮಾಡಲಾಗಿದೆ. ವಿವರ ಹೀಗಿದೆ.
ರಾಜ್ಯ ಉಪಾಧ್ಯಕ್ಷರು: ಲಕ್ಷ್ಮಣ ಸವದಿ, ನಯನಾ ಗಣೇಶ್
ಮುಖ್ಯ ವಕ್ತಾರ: ಎಂ.ಜಿ. ಗಣೇಶ್
ಅನಿವಾಸಿ ಭಾರತೀಯ ವಿಭಾಗ ರಾಜ್ಯ ಸಂಚಾಲಕ: ಕ್ಯಾ.ಗಣೇಶ್ ಕಾರ್ಣಿಕ್
ಪ್ರಕೋಷ್ಠಗಳ ರಾಜ್ಯ ಸಹ- ಸಂಯೋಜಕ: ಜಯತೀರ್ಥ ಕಟ್ಟಿ
ಕಾನೂನು ಪ್ರಕೋಷ್ಠ ರಾಜ್ಯ ಸಂಚಾಲಕ: ಎಚ್. ಯೋಗೇಂದ್ರ
ಕಾನೂನು ಪ್ರಕೋಷ್ಠ ರಾಜ್ಯ ಸಹ-ಸಂಚಾಲಕ: ವಿನೋದ್ ಪಾಟೀಲ್
ಮೀನುಗಾರಿಕಾ ಪ್ರಕೋಷ್ಠ ರಾಜ್ಯ ಸಂಚಾಲಕ: ಗೋವಿಂದ ಬಾಂಡೇಕರ
ಮೀನುಗಾರಿಕಾ ಪ್ರಕೋಷ್ಠ ರಾಜ್ಯ ಸಹ-ಸಂಚಾಲಕ: ನಾಗಪ್ಪ ಅಂಬಿ
ಫಲಾನುಭವಿಗಳ ಪ್ರಕೋಷ್ಠ ರಾಜ್ಯ ಸಂಚಾಲಕ: ಬಸವರಾಜ ಮತ್ತಿಮೋಡ
ಮಂಡ್ಯ ಜಿಲ್ಲಾ ಪ್ರಭಾರಿ: ಜಗದೀಶ ಹಿರೇಮನಿ
ಯಾದಗಿರಿ ಜಿಲ್ಲಾ ಪ್ರಭಾರಿ: ಅಮರನಾಥ ಪಾಟೀಲ್
ದಾವಣಗೆರೆ ಜಿಲ್ಲಾ ಪ್ರಭಾರಿ: ಕೆ. ಶಿವಲಿಂಗಪ್ಪ
ಚಿತ್ರದುರ್ಗ ಜಿಲ್ಲಾ ಪ್ರಭಾರಿ: ಸಿ.ಆರ್. ಪ್ರೇಮಕುಮಾರ್
ಬೆಂಗಳೂರು ಉತ್ತರ ಜಿಲ್ಲಾ ಪ್ರಭಾರಿ: ಕೆ.ವಿ. ಶಿವಪ್ಪ
ಬಳ್ಳಾರಿ ಜಿಲ್ಲಾ ಅಧ್ಯಕ್ಷ: ಮುರಹರಗೌಡ
ವಿಜಯನಗರ ಜಿಲ್ಲಾ ಅಧ್ಯಕ್ಷ: ಚನ್ನಬಸವನಗೌಡ












Click it and Unblock the Notifications