ಕನ್ನಡವನ್ನು ಕಡೆಗಾಣಿಸಿದ ಸ್ಮೃತಿ ಮೇಲೆ ಸಿಟಿ ರವಿಗೆ ಸಿಟ್ಟು
ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಅಧಿಕಾರದ ದ್ವಾರ ತೆರೆದಿದ್ದೇ ಕರ್ನಾಟಕ. ಅಂಥದರಲ್ಲಿ ಕನ್ನಡವನ್ನು ಕಡೆಗಣಿಸಿ ಬಿಜೆಪಿ ರಾಜಕೀಯ ಮಾಡುತ್ತಿದೆ. ನಿಮಗೆಲ್ಲ ಕನ್ನಡಿಗರೆಂದರೆ ತಾತ್ಸಾರ. ಇದು ಕನ್ನಡಿಗರೆಲ್ಲ ಒಗ್ಗಟ್ಟಾಗಿ ಪ್ರತಿಭಟಿಸುವ ಸಮಯ.
ಬೆಂಗಳೂರು, ಡಿಸೆಂಬರ್ 20 : "ಶ್ರೀಮತಿ ಸ್ಮೃತಿ ಇರಾನಿ ಅವರೆ, ಕರ್ನಾಟಕ ಕೂಡ ಭಾರತದಲ್ಲಿಯೇ ಇದೆ. ದಯವಿಟ್ಟು ಈಧಾಗಾ ಆಪ್ ಅನ್ನು ಸಾಧ್ಯವಾದಷ್ಟು ಬೇಗನೆ ಕನ್ನಡದಲ್ಲಿಯೂ ಬಿಡುಗಡೆ ಮಾಡಿ" ಎಂದು ಬಿಜೆಪಿ ನಾಯಕ ಸಿಟಿ ರವಿ ಅವರು ಜವಳಿ ಖಾತೆ ಸಚಿವೆ ಸ್ಮೃತಿ ಅವರಿಗೆ ನೆನಪು ಮಾಡಿಕೊಟ್ಟಿದ್ದಾರೆ.
ಈಧಾಗಾ ಎಂಬ ಆಪ್ ಅನ್ನು ಸ್ಮೃತಿ ಇರಾನಿ ಅವರು ಹಿಂದಿ, ಇಂಗ್ಲಿಷ್ ಮತ್ತು ತೆಲುಗಿನಲ್ಲಿ ಬಿಡುಗಡೆ ಮಾಡಿದ್ದಾರೆ. ಸದ್ಯದಲ್ಲಿಯೇ ತಮಿಳು, ಬಂಗಾಳಿ, ಓಡಿಯಾ, ಉರ್ದು ಮತ್ತು ಆಸ್ಸಾಮೀಸ್ ಭಾಷೆಯಲ್ಲಿಯೂ ಬಿಡುಗಡೆ ಮಾಡುವುದಾಗಿ ಕೇಂದ್ರ ಸಚಿವೆ ಹೇಳಿದ್ದಾರೆ.
ಇದಕ್ಕೆ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿರುವ ಚಿಕ್ಕಮಗಳೂರು ಶಾಸಕ ಸಿಟಿ ರವಿ ಅವರು ಪ್ರತಿ ಟ್ವೀಟ್ ಮಾಡಿದ್ದು, ಕರ್ನಾಟಕ ಕೂಡ ಭಾರತದಲ್ಲಿಯೇ ಇದೆ. ಕನ್ನಡದಲ್ಲಿಯೂ ಈ ಆಪ್ ಅನ್ನು ಬಿಡುಗಡೆ ಮಾಡಿ ಪುಣ್ಯ ಕಟ್ಟಿಕೊಳ್ಳಿ ಎಂದಿದ್ದಾರೆ. [ನಕಲಿ ವಿದ್ಯಾರ್ಹತೆ ಪ್ರಕರಣ: ಸಚಿವೆ ಸ್ಮೃತಿ ಇರಾನಿ ಖುಲಾಸೆ]
ಕನ್ನಡಿಗರಿಗಿಂತ ಕಡಿಮೆ ಜನಸಂಖ್ಯೆಯಿರುವ ಇತರ ಭಾಷೆಗಳಲ್ಲಿ ಈಧಾಗಾ ಬಿಡುಗಡೆ ಮಾಡಿದ್ದೀರಾ, ಕನ್ನಡದಲ್ಲಿ ಏಕಿಲ್ಲ ಎಂದು ಸ್ಮೃತಿ ಇರಾನಿ ಅವರನ್ನು ಕನ್ನಡಿಗರು ಟ್ವಿಟ್ಟರಿನಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.
ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಅಧಿಕಾರದ ದ್ವಾರ ತೆರೆದಿದ್ದೇ ಕರ್ನಾಟಕ. ಅಂಥದರಲ್ಲಿ ಕನ್ನಡವನ್ನು ಕಡೆಗಣಿಸಿ ಬಿಜೆಪಿ ರಾಜಕೀಯ ಮಾಡುತ್ತಿದೆ. ನಿಮಗೆಲ್ಲ ಕನ್ನಡಿಗರೆಂದರೆ ತಾತ್ಸಾರ. ಇದು ಕನ್ನಡಿಗರೆಲ್ಲ ಒಗ್ಗಟ್ಟಾಗಿ ಪ್ರತಿಭಟಿಸುವ ಸಮಯ ಎಂದು ಕನ್ನಡ ನಾಡಿನ ಟ್ವಿಟ್ಟಿಗರು ಸ್ಮೃತಿ ತಲೆಯನ್ನು ಕುಟ್ಟಿದ್ದಾರೆ.
ಈಧಾಗಾ ಎಂದರೇನು? : ರಾಷ್ಟ್ರೀಯ ಕೈಮಗ್ಗ ಅಭಿವೃದ್ಧಿ ನಿಮಗದೊಂದಿಗೆ ಸಂಪರ್ಕ ಹೊಂದಿರುವ ನೇಕಾರರು ಮತ್ತು ಸಾಮಗ್ರಿ ಪೂರೈಸುವವರನ್ನು ಗಮನದಲ್ಲಿಟ್ಟುಕೊಂಡು ಈ ಆಪ್ ಅನ್ನು ಸೃಷ್ಟಿಸಲಾಗಿದೆ. ಇದರಲ್ಲಿ ಮಾರುವ, ಕೊಳ್ಳುವ ವಹಿವಾಟುಗಳನ್ನು ಮೊಬೈಲಿನಲ್ಲಿಯೇ ಗಮನಿಸುತ್ತಿರಬಹುದು. ಅಂಗೈನಲ್ಲಿಯೇ ಎಲ್ಲ ವ್ಯವಹಾರಗಳನ್ನು ಮಾಡಬಹುದು.