ಅಗಸರು, ಕ್ಷೌರಿಕರು 5 ಸಾವಿರ ಪರಿಹಾರ ಪಡೆಯುವುದು ಹೇಗೆ?
ಬೆಂಗಳೂರು, ಜೂನ್ 11 : ಕೊರೊನಾ ವೈರಸ್ ಸೋಂಕು ಹರಡದಂತೆ ಲಾಕ್ ಡೌನ್ ಘೋಷಣೆ ಮಾಡಿದಾಗ ಹಲವಾರು ಜನರು ಸಂಕಷ್ಟಕ್ಕೆ ಸಿಲುಕಿದರು. ಅಗಸ ಮತ್ತು ಕ್ಷೌರಿಕ ವೃತ್ತಿಯವರಿಗೆ ಕರ್ನಾಟಕ ಸರ್ಕಾರ 5 ಸಾವಿರ ರೂ. ಪರಿಹಾರ ಘೋಷಣೆ ಮಾಡಿದೆ.
Recommended Video
ಸರ್ಕಾರ ಘೋಷಣೆ ಮಾಡಿರುವ ಪರಿಹಾರವನ್ನು ಪಡೆಯಲು ಅಗಸ ಮತ್ತು ಕ್ಷೌರಿಕ ವೃತ್ತಿದಾರರು ಸೇವಾ ಸಿಂಧು ಪೋರ್ಟಲ್ನಲ್ಲಿ ಅರ್ಜಿಗಳನ್ನು ಸಲ್ಲಿಸಬೇಕಾಗಿದೆ. ಅರ್ಜಿ ಸಲ್ಲಿಸುವಾಗ ಯಾವ ದಾಖಲೆ ಅಗತ್ಯವಿದೆ ಎಂದು ಸರ್ಕಾರ ಮಾರ್ಗಸೂಚಿಯಲ್ಲಿ ತಿಳಿಸಿದೆ.
ಅರ್ಜಿಗಳನ್ನು ಸಲ್ಲಿಸಿದ ಅರ್ಹರಿಗೆ ಪರಿಹಾರ ಧನವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಸರ್ಕಾರದಿಂದ ಜಮೆ ಮಾಡಲಾಗುತ್ತದೆ. ಆದ್ದರಿಂದ ಐಎಫ್ಎಸ್ ಕೋಡ್ ಮತ್ತು ಖಾತೆ ಸಂಖ್ಯೆಯನ್ನು ಸ್ಪಷ್ಟವಾಗಿ ನಮೂದಿಸಬೇಕು.
ಸೇವಾ ಸಿಂಧು ಪೋರ್ಟಲ್ಗೆ ಭೇಟಿ ನೀಡಿದಾಗ 'ಕೋವಿಡ್-19: ಅಗಸರು ಹಾಗೂ ಕ್ಷೌರಿಕರಿಗೆ ಒಂದು ಬಾರಿ ಪರಿಹಾರಕ್ಕಾಗಿ ಅರ್ಜಿ' ಎಂಬುದು ಕಾಣುತ್ತದೆ. ಅಲ್ಲಿಗೆ ಭೇಟಿ ನೀಡಿದ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಯಾವ ದಾಖಲೆಗಳು ಬೇಕು?
ಅಗಸ ಮತ್ತು ಕ್ಷೌರಿಕ ವೃತ್ತಿಯಲ್ಲಿ ಇರುವವರು ಅರ್ಜಿ ಸಲ್ಲಿಸುವಾಗ ಆಧಾರ್ ಕಾರ್ಡ್, ವಿಳಾಸ ದೃಢೀಕರಣ ಪತ್ರ (ಚುನಾವಣಾ ಗುರುತಿನ ಚೀಟಿ/ಚಾಲನಾ ಪರವಾನಗಿ/ಪಡಿತರ ಚೀಟಿ), ಐಎಫ್ಎಸ್ ಕೋಡ್ ಮತ್ತು ಖಾತೆ ಸಂಖ್ಯೆ ಸ್ಪಷ್ಟವಾಗಿ ಕಾಣುವಂತೆ ಬ್ಯಾಂಕ್ ಪಾಸ್ ಪುಸ್ತಕದ ಪ್ರತಿಯನ್ನು ಹೊಂದಿರಬೇಕು.

ಸ್ವಯಂ ಘೋಷಣೆ
ಅರ್ಜಿ ಸಲ್ಲಿಸಿವ ಬಳಿಕ ಸ್ವಯಂ ಘೋಷಣೆ ಪತ್ರದೊಂದಿಗೆ ಮೊಬೈಲ್ ನಂಬರ್ ಕಡ್ಡಾಯವಾಗಿ ನಮೂದಿಸಬೇಕು. ಅರ್ಜಿಗಳ ವಿಲೇವಾರಿ ಸಂದರ್ಭದಲ್ಲಿ ಮೊಬೈಲ್ ಓಟಿಪಿ ಮೂಲಕ ಅರ್ಜಿಯ ಸ್ಥಿತಿ ಕಂಡುಹಿಡಿಯಲಯ ಸಹಕಾರಿಯಾಗುತ್ತದೆ. ಅರ್ಜಿ ಸಲ್ಲಿಸಲಾದ ಅರ್ಹರಿಗೆ ರೂ. 5000 ಪರಿಹಾರ ಧನವನ್ನು ಬ್ಯಾಂಕ್ ಖಾತೆಗೆ ನೇರವಾಗಿ ಸರ್ಕಾರ ಜಮೆ ಮಾಡುತ್ತದೆ.

ಪ್ರಮಾಣ ಪತ್ರ ಬೇಕು
ವೃತ್ತಿ ನಿರ್ವಹಿಸುತ್ತಿರುವ ಬಗ್ಗೆ ನಗರ ಸಭೆ, ಪುರಸಭೆ, ಪಟ್ಟಣ ಪಂಚಾಯತಿ/ ಕಂದಾಯ ಅಧಿಕಾರಿ/ಕಂದಾಯ ನಿರೀಕ್ಷಕರುಗಳಿಂದ ಹಾಗೂ ತಾಲೂಕು ಮಟ್ಟದಲ್ಲಿ ಕಂದಾಯ ಇಲಾಖೆಯ ತಹಶೀಲ್ದಾರ್ / ಉಪ ತಹಶೀಲ್ದಾರ್ / ಕಂದಾಯ ಪರಿವೀಕ್ಷಕರು /ನಗರ ಸಭೆ ಪಟ್ಟಣ ಪಂಚಾಯತಿಯ ಅಧಿಕಾರಿಗಳು/ ಕಾರ್ಮಿಕ ನಿರೀಕ್ಷಕರು ಮತ್ತು ಗ್ರಾಮ ಪಂಚಾಯತಿ ಮಟ್ಟದಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಂದ ಪಡೆದ ಉದ್ಯೋಗ ಪ್ರಮಾಣ ಪತ್ರ ಬೇಕಾಗುತ್ತದೆ.

ಯಾರನ್ನು ಸಂಪರ್ಕಿಸಬೇಕು
ಹೆಚ್ಚಿನ ಮಾಹಿತಿಗೆ ಸಂಬಂಧಪಟ್ಟ ಗ್ರಾಮ ಪಂಚಾಯತಿ/ಪಟ್ಟಣ ಪಂಚಾಯತಿ / ತಾಲ್ಲೂಕು ಕಚೇರಿ / ಕಾರ್ಮಿಕ ನಿರೀಕ್ಷಕರುಗಳ ಕಚೇರಿಯನ್ನು ಸಂಪರ್ಕಿಸಬೇಕು. https://sevasindhu.karnataka.gov.in ವೆಬ್ ಸೈಟ್ ಸಹ ನೋಡಬಹುದು.












Click it and Unblock the Notifications