ಕರ್ನಾಟಕ ಬಂದ್ ಕಾರಣಕ್ಕೆ SSLC ಪರೀಕ್ಷೆ ರದ್ದಾಗುತ್ತಾ? ಶಿಕ್ಷಣ ಸಚಿವ ಸ್ಪಷ್ಟನೆ
ಬೆಳಗಾವಿಯಲ್ಲಿ ಬಸ್ ಕಂಡಕ್ಟರ್ ಮೇಲೆ ಮರಾಠಿಗರಿಂದ ಹಲ್ಲೆ ಖಂಡಿಸಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಮಾರ್ಚ್ 22ರಂದು ಕರ್ನಾಟಕ ಬಂದ್ ಘೋಷಿಸಿದ್ದಾರೆ. ಆದರೆ, ಮಾರ್ಚ್ 21ರಿಂದ ಕರ್ನಾಟಕದಲ್ಲಿ ಎಸ್ಎಸ್ಎಲ್ಸಿ (10ನೇ ತರಗತಿ) ಪರೀಕ್ಷೆಗಳು ನಡೆಯಲಿದ್ದು, ಬಂದ್ ಬಿಸಿ ತಟ್ಟುವ ಸಾಧ್ಯತೆ ಇದೆ. ಬಂದ್ ಘೋಷಿಸಿರುವುದರಿಂದ ಪರೀಕ್ಷೆಗಳು ರದ್ದಾಗುತ್ತಾ? ಎಂಬ ಪ್ರಶ್ನೆಯೂ ಎದ್ದಿದ್ದು, ಇದಕ್ಕೆ ಖುದ್ದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಸ್ಪಷ್ಟನೆ ನೀಡಿದ್ದಾರೆ.
ನಿನ್ನೆ ದಿಢೀರನೆ ಬಂದ್ ಘೋಷಿಸಿದ್ದು ಒಂದೆಡೆಯಾದರೆ, ಮತ್ತೊಂದೆಡೆ ಪೋಷಕರು ಕೂಡ ಶಾಕ್ಗೆ ಒಳಗಾಗಿದ್ದಾರೆ. ಎಸ್ಎಸ್ಎಲ್ಸಿ ಪರೀಕ್ಷೆ ಸಂದರ್ಭದಲ್ಲೇ ಬಂದ್ ಘೋಷಿಸಿರುವುದು ಸರಿಯಲ್ಲ. ಇದರಿಂದ ನಮ್ಮ ಮಕ್ಕಳ ಭವಿಷ್ಯ ಹಾಳಾಗಲಿದೆ ಎಂದು ಅಳಲು ತೋಡಿಕೊಂಡಿದ್ದರು. ಒಂದು ವೇಳೆ ಬಂದ್ ನಡೆದಿದ್ದೇ ಆದರೆ, ವಿದ್ಯಾರ್ಥಿಗಳ ಪರೀಕ್ಷೆ ಕಥೆ ಏನು? ಎಂಬ ಆತಂಕ ಕೂಡ ಇದೆ. ಈ ಎಲ್ಲದಕ್ಕೂ ಶಿಕ್ಷಣ ಸಚಿವರು ಸ್ಪಷ್ಟನೆ ನೀಡುವ ಮೂಲಕ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

ಮಾರ್ಚ್ 22ರಂದು 7, 8 ಹಾಗೂ 9ನೇ ತರಗತಿ ಪರೀಕ್ಷೆಗಳ ದಿನಾಂಕ ಈಗಾಗಲೇ ನಿಗದಿಯಾಗಿದೆ. ಬಂದ್ ಎಂಬ ಕಾರಣಕ್ಕೆ ಪರೀಕ್ಷೆಗಳನ್ನು ಮುಂದೂಡಲು ಸಾಧ್ಯವಿಲ್ಲ. ಒಂದು ವೇಳೆ ಬಂದ್ ಇದ್ದರೂ ಸಹ ಯಾವ ಪರೀಕ್ಷೆಗಳನ್ನೂ ಮುಂದೂಡುವ ಪ್ರಶ್ನೆಯೇ ಇಲ್ಲ. ಪರೀಕ್ಷೆಗಳು ಅದರ ಪಾಡಿಗೆ ಅದು ನಡೆಯಲಿವೆ. ನನ್ನ ಪ್ರಕಾರ ಮಕ್ಕಳಿಗೆ ತೊಂದರೆ ಆಗುತ್ತೆ ಎನ್ನುವುದಾದ್ರೆ ಯಾರೂ ಬಂದ್ಗೆ ಸಹಕಾರ ಕೊಡುವುದಿಲ್ಲ. ಹಾಗಾಗಿ ಈಗಾಗಲೇ ನಿಗದಿಯಾಗಿರುವ ಯಾವುದೇ ಪರೀಕ್ಷೆಗಳನ್ನು ಮುಂದೂಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಹೋರಾಟಗಾರರು ಮಕ್ಕಳಿಗೆ ಯಾವುದೇ ರೀತಿಯ ಸಮಸ್ಯೆ ಆಗದಂತೆ ಬಂದ್ ಮಾಡುತ್ತಾರೆ. ಮಕ್ಕಳ ಪರೀಕ್ಷೆಗೆ ಅವರು ಸಹಕಾರ ಕೊಡುತ್ತಾರೆ. ಹಾಗಾಗಿ ನಾನು ಎಲ್ಲ ಹೋರಾಟಗಾರರಿಗೆ ಮನವಿ ಮಾಡುತ್ತೇನೆ. ಹೋರಾಟ ಮಾಡುವುದು ನಿಮ್ಮ ಹಕ್ಕು, ತಪ್ಪಿಲ್ಲ. ಆದರೆ ಮಕ್ಕಳಿಗೆ ಪರೀಕ್ಷೆ ಎನ್ನುವುದು ಬಹಳ ಮುಖ್ಯ. ಅವರ ಭವಿಷ್ಯವೇ ಈ ಪರೀಕ್ಷೆಯಲ್ಲಿದೆ. ಹಾಗಾಗಿ ಅವರಿಗೆ ನೀವೆಲ್ಲ ಅಡ್ಡಿಪಡಿಸುವುದಿಲ್ಲ ಎನ್ನುವ ವಿಶ್ವಾಸ ನನಗಿದೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.

ಬಂದ್ಗೆ ಕರೆ ನೀಡಿರುವ ಹೋರಾಟಗಾರರು ಯಾರೂ ತಮ್ಮ ಮಕ್ಕಳನ್ನು ಪರೀಕ್ಷೆಗೆ ಹೋಗಬೇಡಿ ಎಂದು ಹೇಳುವವರಲ್ಲ. ಹಾಗಾಗಿ ಪರೀಕ್ಷೆ ವಿಚಾರದಲ್ಲಿ ಮಕ್ಕಳು ಯಾವುದೇ ಆತಂಕ, ಗೊಂದಲ ಮಾಡಿಕೊಳ್ಳಬೇಡಿ. ನಿಗದಿಯಾಗಿರುವಂತೆಯೇ ಪರೀಕ್ಷೆಗಳು ನಡೆಯಲಿವೆ. ಇದಕ್ಕಾಗಿ ನಾನು ಈಗಾಗಲೇ ವೇಳಾಪಟ್ಟಿ ಸಿದ್ಧಪಡಿಸಿ ಪ್ರಕಟಿಸಿದ್ದೇವೆ. ಇದಕ್ಕೆ ಮಕ್ಕಳು ಕೂಡ ತಯಾರಿ ನಡೆಸಿದ್ದಾರೆ. ಒಂದು ವೇಳೆ ವೇಳಾಪಟ್ಟಿಯನ್ನು ಮತ್ತೊಮ್ಮೆ ಬದಲಾವಣೆ ಮಾಡಿದ್ರೆ ಭಾರಿ ಗೊಂದಲ ಸೃಷ್ಟಿಯಾಗುತ್ತದೆ. ಹಾಗಾಗಿ ಮಕ್ಕಳ ಹಿತದೃಷ್ಟಿಯಿಂದ ಪರೀಕ್ಷೆ ಮುಂದೂಡಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಕರ್ನಾಟಕ ಬಂದ್ ಘೋಷಣೆ ಮಾಡಿರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುವುದಲ್ಲದೆ, ವರ್ಷವಿಡೀ ಶ್ರಮ ಪಟ್ಟಿರುವ ವಿದ್ಯಾರ್ಥಿಗಳ ಭವಿಷ್ಯಕ್ಕೆ ಪೆಟ್ಟು ನೀಡಲಿದೆ. ಹಾಗಾಗಿ ಆ ದಿನ ಕರ್ನಾಟಕ ಬಂದ್ ನಡೆಸುವುದು ಬೇಡ ಎಂದು ಕೆಲ ಕನ್ನಡ ಸಂಘಟನೆಗಳೇ ಹೇಳುತ್ತಿವೆ. ಹೀಗಾಗಿ ಬಂದ್ ದಿನಾಂಕ ಮುಂದೂಡುವ ಸಾಧ್ಯತೆ ಇದ್ದು, ಈ ಬಗ್ಗೆ ಮತ್ತೊಂದು ಸಭೆ ನಡೆಸಲಿದ್ದಾರೆ.












Click it and Unblock the Notifications