ಹಿಜಾಬ್ ತೀರ್ಪು ವಿರೋಧಿಸಿ ಬಂದ್: 7 ಸಂಘಟನೆಗಳ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮಕ್ಕೆ ಕೋರಿಕೆ
ಬೆಂಗಳೂರು, ಮಾ.21: ಹಿಜಾಬ್ ವಿಚಾರದ ಕುರಿತು ಹೈಕೋರ್ಟ್ ನೀಡಿದ್ದ ತೀರ್ಪು ವಿರೋಧಿಸಿ ಕರ್ನಾಟಕ ಬಂದ್ ಗೆ ಕರೆ ನೀಡಿದ್ದ ಸಂಘಟನೆಗಳ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಜರುಗಿಸಬೇಕೆಂಬ ಬೇಡಿಕೆ ದಿನೇ ದಿನೇ ಬಲವಾಗುತ್ತಿದೆ.
ಈಗಾಗಲೇ ಗಿರೀಶ್ ಭಾರದ್ವಾಜ್ ಅವರು ರಿಜಿಸ್ಟ್ರಾರ್ ಜನರಲ್ ಗೆ ಮನವಿ ಸಲ್ಲಿಸಿರುವುದೇ ಅಲ್ಲದೆ, ಹೈಕೋರ್ಟ್ ನಲ್ಲಿ ಅರ್ಜಿಯನ್ನೂ ಸಹ ಹೂಡಿದ್ದಾರೆ. ಈ ಮಧ್ಯೆ, ಹೈಕೋರ್ಟ್ ನ ಹಿರಿಯ ವಕೀಲ ಮತ್ತು ಬೆಂಗಳೂರು ವಕೀಲರ ಸಂಘದ ಪದಾಧಿಕಾರಿ ಎನ್.ಪಿ.ಅಮೃತೇಶ್ ಏಳು ಸಂಘಟನೆಗಳ ವಿರುದ್ಧ ಸ್ವಯಂಪ್ರೇರಿತ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಬೇಕೆಂದು ರಿಜಿಸ್ಟ್ರಾರ್ ಜನರಲ್ಗೆ ಮನವಿ ಮಾಡಿದ್ದಾರೆ.
ಈ ಕುರಿತು ರಿಜಿಸ್ಟ್ರಾರ್ ಜನರಲ್ಗೆ ಮನವಿ ಪತ್ರ ಸಲ್ಲಿಸಿದ್ದು, ಹಿಜಾಬ್ ತೀರ್ಪಿನ ಹಿನ್ನೆಲೆಯಲ್ಲಿ ಬಂದ್ ಗೆ ಕರೆ ನೀಡಿದ್ದ ಕರ್ನಾಟಕ ವಿದ್ಯಾರ್ಥಿ ಸಂಘಟನೆ (ಕೆವಿಎಸ್), ಕರ್ನಾಟಕದ ಭಾರತೀಯ ವಿದ್ಯಾರ್ಥಿ ಇಸ್ಲಾಮಿಕ್ ಸಂಘಟನೆ, ಸ್ಟೂಡೆಂಟ್ ಕ್ರಿಶ್ಚಿಯನ್ ಮೂವ್ಮೆಂಟ್ ಆಫ್ ಇಂಡಿಯಾ (ಎಸ್ ಸಿಎಂಐ), ಕರ್ನಾಟಕ ದಲಿತ ವಿದ್ಯಾರ್ಥಿ ಪರಿಷತ್, ಬೆಂಗಳೂರಿನ ಕಲೆಕ್ಟಿವ್, ಕರ್ನಾಟಕ ವಿದ್ಯಾರ್ಥಿನಿ ಇಸ್ಲಾಮಿಕ್ ಸಂಘಟನೆ, ಕರ್ನಾಟಕದ ಸಗೀರ್ ಅಹ್ಮದ್ ರಶ್ದಿ ಇಮರತ್ ಇ-ಶರಿಯತ್ ಮತ್ತಿತರ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಲಾಗಿದೆ.

ಅಲ್ಲದೆ, ಹಿಜಾಬ್ ಪ್ರಕರಣದಲ್ಲಿ ತೀರ್ಪು ನೀಡಿರುವ ಅರ್ಜಿದಾರರು ಮಾಧ್ಯಮಗಳೊಂದಿಗೆ ಮಾತನಾಡುವಾಗ ಹೈಕೋರ್ಟ್ ನ್ಯಾಯಮೂರ್ತಿಗಳ ವಿರುದ್ಧ ಆಕ್ಷೇಪಾರ್ಹವಾಗಿ ಮಾತನಾಡಿದ್ದಾರೆ. ಮುಖ್ಯ ನ್ಯಾಯಮೂರ್ತಿ ಸೇರಿ ನ್ಯಾಯಮೂರ್ತಿಗಳಾದ ಕೃಷ್ಣ ಎಸ್.ದೀಕ್ಷಿತ್ ಮತ್ತು ಜೆ ಎಂ ಖಾಜಿ ಅವರಿಗೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಹೇಳಲಾಗಿದೆ. ಈ ವಾಸ್ತವಿಕ ಅಂಶಗಳನ್ನು ಪರಿಗಣಿಸಿ ಆಕೇಪಾರ್ಹವಾದ ಮಾತುಗಳನ್ನು ಆಡಿರುವವರ, ಸಂಘಟನೆಗಳ ಮತ್ತು ವಿಶೇಷವಾಗಿ ನ್ಯಾಯಾಲಯದ ತೀರ್ಪು, ನ್ಯಾಯಮೂರ್ತಿಗಳನ್ನು ಟೀಕಿಸಿರುವ ಅರ್ಜಿದಾರರ ವಿರುದ್ದ ಸ್ವಯಂಪ್ರೇರಿತವಾಗಿ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.
ನ್ಯಾಯಾಲಯವನ್ನು ವಿವಾದಾತ್ಮಕಗೊಳಿಸುವ ಉದ್ದೇಶದಿಂದ ಹಿಜಾಬ್ ಪ್ರಕರಣದಲ್ಲಿ ತೀರ್ಪು ಅನ್ನು ಟೀಕಿಸಲಾಗಿದೆ. ಇದು ಆಘಾತ ಮತ್ತು ಆಶ್ಚರ್ಯಕರ, ಆ ಮೂಲಕ ನ್ಯಾಯಾಲಯದ ಘನತೆ ಕುಂದಿಸುವ, ನೇರವಾಗಿ ಪೂರ್ವಾಗ್ರಹ ಪೀಡಿತಗೊಳಿಸುವ ಮತ್ತು ನ್ಯಾಯಾಂಗ ಪ್ರಕ್ರಿಯೆಯಲ್ಲಿ ಮಧ್ಯಪ್ರವೇಶಿಸಲಾಗಿದೆ. ನ್ಯಾಯಾಲಯದ ತೀರ್ಪನ್ನು ವಿರೋಧಿಸಿ ಹಲವು ಸಂಘಟನೆಗಳು ಬಂದ್ಗೆ ಕರೆ ನೀಡಿದ್ದು ಕಾನೂನುಬಾಹಿರ ಕ್ರಮ ಎಂದು ಮನವಿಯಲ್ಲಿ ಹೇಳಲಾಗಿದೆ
ವಕೀಲರ ಸಂಘದಿಂದ ಬುಧವಾರ ಪ್ರತಿಭಟನೆ:
ಹಿಜಾಬ್ ಕುರಿತು ತೀರ್ಪು ನೀಡಿದ ಹೈಕೋರ್ಟ್ನ ನ್ಯಾಯಮೂರ್ತಿಗಳಿಗೆ ತಮಿಳುನಾಡು ಮೂಲದ ಕೆಲವು ಮುಸ್ಲಿಂ ಸಂಘಟನೆಗಳ ನಾಯಕರು ಜೀವ ಬೆದರಿಕೆ ಹಾಕಿರುವುದನ್ನು ಬೆಂಗಳೂರು ವಕೀಲರ ಸಂಘ ಖಂಡಿಸಿದೆ. ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಂಘದ ಪದಾಕಾರಿಗಳ ತುರ್ತು ಸಾಮಾನ್ಯ ಸಭೆಯಲ್ಲಿ ಈ ಕುರಿತು ಖಂಡನಾ ನಿರ್ಣಯವನ್ನು ಅಂಗೀಕರಿಸಲಾಗಿದೆ.
ಜೊತೆಗೆ ಅಂತಹ ಬೆದರಿಕೆಗಳನ್ನು ವಿರೋಧಿಸಿ ಬುಧವಾರ ಮಧ್ಯಾಹ್ನ ಹೈಕೋರ್ಟ್ ಮುಂಭಾಗ ವಕೀಲರು ಪ್ರತಿಭಟನೆಯನ್ನು ನಡೆಸಲೂ ಸಹ ಸಂಘ ನಿರ್ಣಯಿಸಿದೆ. ನ್ಯಾಯಾಂಗದ ಘನತೆ ಮತ್ತು ಅದರಡಿ ಕಾರ್ಯನಿರ್ವಹಿಸುವ ನ್ಯಾಯಮೂರ್ತಿಗಳು ಹಾಗೂ ವಕೀಲರನ್ನು ರಕ್ಷಿಸಲು ಮುಂದಾಗುವಂತೆ ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಮೂರ್ತಿಗಳನ್ನು ಕೋರಲು ಕೂಡ ಸಭೆಯು ನಿರ್ಣಯ ಕೈಗೊಂಡಿದೆ.
ನ್ಯಾಯಾಂಗದಡಿ ಕಾರ್ಯನಿರ್ವಹಿಸುವ ಎಲ್ಲ ವಕೀಲರ ಸಂಪೂರ್ಣ ರಕ್ಷಣೆಗೆ ಕಾಯ್ದೆಯನ್ನು ರೂಪಿಸುವಂತೆ ಆಗ್ರಹಿಸಲು ಸಹ ವಕೀಲರ ಸಂಘ ತೀರ್ಮಾನಿಸಿದೆ ಎಂದು ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ಮತ್ತು ಪ್ರಧಾನ ಕಾರ್ಯದರ್ಶಿ ಟಿ.ಜಿ.ರವಿ ಹೇಳಿದ್ದಾರೆ.
Recommended Video













Click it and Unblock the Notifications