ಬಿಜೆಪಿಯಲ್ಲಿ ಸರಣಿ ಸಭೆ; ವಿರೋಧ ಪಕ್ಷದ ನಾಯಕನ ಆಯ್ಕೆ ಕಗ್ಗಂಟು!: ಸಿ.ಟಿ. ರವಿ ಹೇಳಿದ್ದೇನು?
ಬೆಂಗಳೂರು, ಜೂನ್ 09: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋಲು ಅನುಭವಿಸಿರುವ ಬಿಜೆಪಿ ಪಾಳಯದಲ್ಲಿ ವಿರೋಧ ಪಕ್ಷದ ನಾಯಕನ ಆಯ್ಕೆ ವಿಚಾರ ದೊಡ್ಡ ಕಗ್ಗಂಟಾಗಿದೆ.
ಗುರುವಾರ ಬಿಜೆಪಿ ನಾಯಕರು ನಡೆಸಿದ ಸರಣಿ ಸಭೆಯಲ್ಲಿ ವಿರೋಧ ಪಕ್ಷದ ನಾಯಕನ ಆಯ್ಕೆ ವಿಚಾರದಲ್ಲಿ ನೂತನ ಶಾಸಕರೊಂದಿಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಪ್ರಾಥಮಿಕ ಸುತ್ತಿನ ಸಮಾಲೋಚನೆಯನ್ನು ನಡೆಸಿದ್ದಾರೆ.

ಇನ್ನೂ ಮುಂದಿನ ತಿಂಗಳು ಅಧಿವೇಶನ ಪ್ರಾರಂಭವಾಗಲಿದ್ದು, ಬಿಜೆಪಿ ಸರ್ಕಾರದ ಕಾರ್ಯಕ್ರಮ ಹಾಗೂ ಯೋಜನೆಯನ್ನ ಮರು ಪರಿಶೀಲಿಸುತ್ತಿರುವ ಕಾಂಗ್ರೆಸ್ ಸರ್ಕಾರದ ವಿರುದ್ದ ಗುಡುಗಲು ಬಿಜೆಪಿಯಲ್ಲಿ ಸಮರ್ಥ ವಿಪಕ್ಷ ನಾಯಕರ ಆಯ್ಕೆಯೇ ದೊಡ್ಡ ಸವಾಲವಾಗಿದ್ದು, ಬಸವರಾಜ ಬೊಮ್ಮಾಯಿ, ಫೈರ್ಬ್ರಾಂಡ್ ಬಸನಗೌಡ ಪಾಟೀಲ್ ಯತ್ನಾಳ್, ಸುನೀಲ್ ಕುಮಾರ್, ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ್, ಆರ್.ಅಶೋಕ, ಅರವಿಂದ್ ಬೆಲ್ಲದ್, ಎಸ್.ಸುರೇಶ್ ಕುಮಾರ್ ಸೇರಿದಂತೆ ಹಲವು ಪ್ರಮುಖರ ಹೆಸರು ಕೇಳಿಬರುತ್ತಿದೆ.
ಚುನಾವಣೆಯಲ್ಲಿ ಪರಾಭವಗೊಂಡಿರುವ ಹಿರಿಯ ಶಾಸಕರು ಮತ್ತು ಮುಖಂಡರು, ವಿಧಾನಸಭೆಯಲ್ಲಿ ಕಾಂಗ್ರೆಸ್ ಅನ್ನು ಎದುರಿಸುವುದು ಹೇಗೆ ಎಂಬುದನ್ನು ಬಲ್ಲ ಬಸವರಾಜ ಬೊಮ್ಮಾಯಿ ಅವರಿಗೆ ಈ ಮಹತ್ವದ ಹುದ್ದೆ ಸಿಗಬೇಕು ಎಂದು ಸಭೆಯಲ್ಲಿ ಕೆಲವು ಅಭಿಪ್ರಾಯಪಟ್ಟಿದ್ದಾರೆ ಎನ್ನಲಾಗಿದೆ.
ಈ ಸ್ಥಾನಕ್ಕೆ ಬಸವರಾಜ ಬೊಮ್ಮಾಯಿ ಅವರನ್ನ ಹೊರತುಪಡಿಸಿ, ಯತ್ನಾಳ್ ಮತ್ತು ಸುನೀಲ್ ಕುಮಾರ್ ಅವರು ಹೆಸರು ರೇಸ್ ನಲ್ಲಿದೆ. ಆದರೆ, ಅವರು ಹಣಕಾಸು, ಕೈಗಾರಿಕೆಗಳು ಮತ್ತು ಗೃಹ ವ್ಯವಹಾರಗಳಂತಹ ವಿಷಯಗಳ ಬಗ್ಗೆ ಜ್ಞಾನದ ಕೊರತೆ ಇದೆ ಎಂದು ಹೇಳಲಾಗಿದೆ.

ಇನ್ನೂ ಬಿಜೆಪಿ ಸರಣಿ ಸಭೆಯ ಬಳಿಕ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮಾತನಾಡಿ, ಶೀಘ್ರವೇ ವಿಪಕ್ಷ ನಾಯಕನ ಹೆಸರನ್ನು ಪ್ರಕಟಿಸಲಾಗುವುದು. ಈ ಕುರಿತು ಅರುಣ್ ಸಿಂಗ್ ಅವರು ಅಭಿಪ್ರಾಯ ಸಂಗ್ರಹ ಮಾಡಿದ್ದಾರೆ ಎಂದು ಹೇಳಿದರು.
ಒಳ ಮೀಸಲಾತಿಯ ಒಳಪೆಟ್ಟು, ಜನರು ಗ್ಯಾರಂಟಿ ಕಾರ್ಡ್ ನಂಬಿ ಮತ ಚಲಾಯಿಸಿದ್ದು, ನೆಗೆಟಿವ್ ನರೇಟಿವ್ ಪರಿಣಾಮವಾಗಿ ಬಿಜೆಪಿ ಸೋತಿದೆ ಎಂಬ ಅಭಿಪ್ರಾಯ ಇಂದಿನ ಪರಾಮರ್ಶೆ ಸಭೆಯಲ್ಲಿ ವ್ಯಕ್ತವಾಗಿದೆ. 1985 ಹೊರತುಪಡಿಸಿ ಆಡಳಿತ ಪಕ್ಷ ಮತ್ತೆ ಅಧಿಕಾರಕ್ಕೆ ಬಂದಿರಲಿಲ್ಲ. ನೂತನವಾಗಿ ಆಯ್ಕೆಯಾದ ಶಾಸಕರಿಗೆ ವಿಶ್ವಾಸ ತುಂಬಲಾಗಿದೆ. ರಚನಾತ್ಮಕ ವಿರೋಧ ಪಕ್ಷವಾಗಿ ಕಾರ್ಯ ನಿರ್ವಹಿಸಲು ನಿರ್ಧರಿಸಲಾಗಿದೆ ಎಂದರು.
ಒಳ್ಳೆಯ ಕಾರ್ಯಕ್ಕೆ ಸಹಕಾರ, ಜನವಿರೋಧಿ ಕಾರ್ಯ ಮುಂದುವರಿಸಿದಾಗ, ಹಿಡನ್ ಅಜೆಂಡ ಜೊತೆ ರಾಜ್ಯಕ್ಕೆ ಘಾತುಕ ನಿರ್ಣಯ ಕೈಗೊಂಡರೆ ಹೋರಾಡಲು ನಿರ್ಧರಿಸಲಾಗಿದೆ ಎಂದರು. ನಮ್ಮ ಮತ ಪ್ರಮಾಣ ಕಡಿಮೆ ಆಗಿಲ್ಲ.
ಬಿಜೆಪಿ ಎದೆಗುಂದುವ ಪಕ್ಷವಲ್ಲ. 1984 ರ ಲೋಕಸಭಾ ಚುನಾವಣೆಯಲ್ಲಿ ಕೇವಲ ಎರಡು ಸ್ಥಾನ ಗೆದ್ದಿತ್ತು. ಅದರೆ ಎದೆಗುಂದಲಿಲ್ಲ ಎಂದ ಅವರು, ರಾಜ್ಯಾಧ್ಯಕ್ಷ ನಳಿನಕುಮಾರ್ ಕಟೀಲ್ ಅಧ್ಯಕ್ಷತೆಯಲ್ಲಿ ನಡೆಯಿತು. ಮಾಜಿ ಸಿಎಂಗಳಾದ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಸದಾನಂದ ಗೌಡ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್, ಈಶ್ವರಪ್ಪ ಹಾಗೂ ನಾನೂ ಒಳಗೊಂಡಂತೆ ಅ ಸಭೆ ನಡೆಸಿದ್ದೇವೆ ಎಂದರು.












Click it and Unblock the Notifications