ಡಿಕೆಶಿ, ಸುರ್ಜೇವಾಲ್ರನ್ನು ರಹಸ್ಯವಾಗಿ ಭೇಟಿ ಮಾಡಿದ ಎಚ್.ವಿಶ್ವನಾಥ್: ಮಗನಿಗೆ ಸಿದ್ಧವಾದ ಅಖಾಡ? ಫೋಟೊಗಳು ವೈರಲ್- ವಿವರ
ಬಿಜೆಪಿ ಎಂಎಲ್ಸಿ ಎಚ್ ವಿಶ್ವನಾಥ್ ಅವರು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರನ್ನು ರಹಸ್ಯವಾಗಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೊಗಳು ಸಾಮಾಜಿಕ ಮಾಧ್ಯಮಗಳ
ಬೆಂಗಳೂರು, ಜನವರಿ 27: ಬಿಜೆಪಿ ಎಂಎಲ್ಸಿ ಹಾಗೂ ಜೆಡಿಎಸ್ನ ಮಾಜಿ ರಾಜ್ಯಾಧ್ಯಕ್ಷ ಎಚ್ ವಿಶ್ವನಾಥ್ ಅವರು ಕಾಂಗ್ರೆಸ್ ಸೇರುವುದು ಬಹುತೇಕ ಖಚಿತವಾಗಿದೆ. ಮಾತೃಪಕ್ಷಕ್ಕೆ ಮರಳುತ್ತೇನೆ ಎಂದು ಅವರೂ ಹೇಳಿದ್ದಾರೆ. ಆದರೆ, ಮುಂಬರುವ ಚುನಾವಣೆಯಲ್ಲಿ ವಿಶ್ವನಾಥ್ ಕಣಕ್ಕಿಳಿಯುವುದಿಲ್ಲ ಎಂದು ತಿಳಿಸಿದ್ದಾರೆ. ಚುನಾವಣೆಗೂ ಮುನ್ನ ಕಾಂಗ್ರೆಸ್ ಸೇರುತ್ತಿರುವ ಅವರು ತಮ್ಮ ಮಗನಿಗೆ ಅಖಾಡ ಸಿದ್ದಪಡಿಸುತ್ತಿದ್ದಾರೆ ಎನ್ನುವ ಮಾತುಗಳು ಮುನ್ನೆಲೆಗೆ ಬಂದಿವೆ. ವಿಶ್ವನಾಥ್ ಅವರ ಪುತ್ರ ಪೂರ್ವಜ್ ಅವರು ಈಗಾಗಲೇ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ. ಹುನಸೂರು ಟಿಕೆಟ್ಗಾಗಿ ಯತ್ನ ನಡೆಸುತ್ತಿದ್ದಾರೆ. ಈ ಕಾರಣದಿಂದ ವಿಶ್ವನಾಥ್ ಕಾಂಗ್ರೆಸ್ ಸೇರುತ್ತಿದ್ದಾರೆ ಎಂಬುದು ವಿಶ್ಲೇಷಣೆಗಳು ರಾಜಕೀಯ ವಲಯದಲ್ಲಿ ಹರಿದಾಡುತ್ತಿವೆ. ಸುಮಾರು ನಾಲ್ಕು ದಶಕಗಳ ಕಾಲ ಕಾಂಗ್ರೆಸ್ನಲ್ಲಿದ್ದ ಬಿಜೆಪಿ ಎಂಎಲ್ಸಿ ಎ ಎಚ್ ವಿಶ್ವನಾಥ್ ಅವರು ಮಾತೃಪಕ್ಷಕ್ಕೆ ಮರಳುತ್ತಿರುವುದು ಮೈಸೂರು ಜಿಲ್ಲೆಯಲ್ಲಿ ಕಾಂಗ್ರೆಸ್ಗೆ ಸ್ಪಲ್ಪ ಮಟ್ಟಿಗೆ ಬಲ ತರುವುದಂತೂ ಹೌದು. ಅವರೀಗ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹಾಗೂ ಕಾಂಗ್ರೆಸ್ನ ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಲಾ ಅವರನ್ನು ಭೇಟಿಯಾಗಿ ಮಾತುಕತೆ ನಡೆದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.
Breaking; ರಣದೀಪ್ ಸಿಂಗ್ ಸುರ್ಜೇವಾಲಾ ಭೇಟಿಯಾದ ಎಚ್. ವಿಶ್ವನಾಥ್!
ಬರಹಗಾರರ ಕೋಟಾದಡಿ ಎಂಎಲ್ಸಿ ಸ್ಥಾನ
ಬಿ ಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಜುಲೈ 22, 2020 ರಂದು ಬರಹಗಾರರ ಕೋಟಾದಡಿ ಎಂಎಲ್ಸಿಯಾಗಿ ನಾಮನಿರ್ದೇಶನಗೊಂಡ ವಿಶ್ವನಾಥ್ ಅವರು 1970 ರ ದಶಕದಲ್ಲಿ ಆಗಿನ ಮುಖ್ಯಮಂತ್ರಿ ಡಿ ದೇವರಾಜ ಅರಸು ಅವರ ನೇತೃತ್ವದಲ್ಲಿ ಯುವ ನಾಯಕರಾಗಿ ತಮ್ಮ ರಾಜಕೀಯ ಪ್ರಯಾಣವನ್ನು ಪ್ರಾರಂಭಿಸಿದರು. ಪ್ರಮುಖ ಕುರುಬ ನಾಯಕರಾಗಿದ್ದ ಅವರು 1978 ರಲ್ಲಿ ಕೆಆರ್ ನಗರ ಶಾಸಕರಾಗಿ ಮೊದಲ ಬಾರಿಗೆ ಆಯ್ಕೆಯಾದರು.
ಬಿಜೆಪಿಯ ಆಂತರಿಕ ವಿರೋಧಿ
2019 ರ ಹುಣಸೂರು ಉಪಚುನಾವಣೆಗೆ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ಮುನ್ನವೇ ಬಿಜೆಪಿಯ ಆಂತರಿಕ ವಿರೋಧದ ಶಕ್ತಿಯಾಗಿ ವಿಶ್ವನಾಥ್ ಹೊರಹೊಮ್ಮಿದರು. ಮಾಜಿ ಸಿಎಂ ಮತ್ತು ಹಾಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಕಳೆದ ತಿಂಗಳು ಭೇಟಿ ಮಾಡಿದರು. ಕಳೆದ ಎರಡು ದಶಕಗಳಿಂದ ಸಿದ್ದರಾಮಯ್ಯ ವಿಶ್ವನಾಥ್ ಅವರಿಗಿಂತ ದೊಡ್ಡ ಕುರುಬ ನಾಯಕರಾಗಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ವಿಶ್ವನಾಥ್ ಮಾತುಕತೆ ನಡೆಸಿದ್ದಾರೆ.
ಸಿದ್ದರಾಮಯ್ಯ ವಿರುದ್ಧವೇ ಆರೋಪ
2017ರಲ್ಲಿ ಕಾಂಗ್ರೆಸ್ನಿಂದ ಹೊರನಡೆದ ಎಂದು ವಿಶ್ವನಾಥ್ ಸಿದ್ದರಾಮಯ್ಯ ವಿರುದ್ಧ ದೂರಿದ್ದರು. 'ಸಿದ್ದರಾಮಯ್ಯ ಅವರು ಕಾಂಗ್ರೆಸ್ಗೆ ಪ್ರವೇಶಿಸಲು ಅನುಕೂಲ ಮಾಡಿದ ನನ್ನನ್ನು ಪಕ್ಷದಿಂದ ಹೊರನಡೆಯುವಂತೆ ಒತ್ತಾಯಿಸಿದರು.ತನಗೆ ಸಹಾಯ ಮಾಡಿದವರಿಗೆಲ್ಲ ಬೆನ್ನಿಗೆ ಚೂರಿ ಹಾಕುತ್ತಿದ್ದಾರೆ. ಅವರು ಕೃತಘ್ನ ವ್ಯಕ್ತಿ' ಎಂದು ಅನೇಕ ಸಂದರ್ಭಗಳಲ್ಲಿ ಹೇಳಿದರು.
ಅಧಿಕಾರದಲ್ಲಿ ವಿಶ್ವನಾಥ್
ವಿಶ್ವನಾಥ್ ಸ್ಪರ್ಧಿಸಿದ್ದ 10 ವಿಧಾನಸಭಾ ಚುನಾವಣೆಗಳಲ್ಲಿ ನಾಲ್ಕರಲ್ಲಿ ಗೆದ್ದಿದ್ದಾರೆ. ಕೆಆರ್ ನಗರ ಕ್ಷೇತ್ರದಿಂದ 1978, 1989, 1999ರಲ್ಲಿ ಗೆದ್ದು, 1983, 1985, 1994, 2004, 2008ರಲ್ಲಿ ಸೋತರು. ನಂತರ ಮೈಸೂರು-ಕೊಡಗು ಲೋಕಸಭೆ ಕ್ಷೇತ್ರಕ್ಕೆ ತೆರಳಿ 2009ರಲ್ಲಿ ಗೆದ್ದು 2014ರಲ್ಲಿ ಸೋತಿದ್ದರು. 2018 ರಲ್ಲಿ, ಅವರು ಹುಣಸೂರಿನಿಂದ ಗೆದ್ದರು. ಆದರೆ 2019 ರ ಉಪಚುನಾವಣೆಯಲ್ಲಿ ಸೋತರು. ವಿಶ್ವನಾಥ್ ಅವರು 1989 ರಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿದ್ದರು ಮತ್ತು 1999 ರಲ್ಲಿ ಶಿಕ್ಷಣ ಸಚಿವರಾಗಿದ್ದರು.
ಜೆಡಿಎಸ್ಗೆ ಸೇರ್ಪಡೆ
ಜುಲೈ 4, 2017 ರಂದು, ಅವರು ಜೆಡಿಎಸ್ಗೆ ಸೇರಿದರು ಮತ್ತು ಅದರ ರಾಜ್ಯಾಧ್ಯಕ್ಷರಾದರು. ಆಗಸ್ಟ್ 5, 2018 ರಂದು ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಜೂನ್ 4, 2019 ರಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಜುಲೈ 6, 2019 ಅವರು ಬಿಜೆಪಿಗೆ ಸೇರಿದರು. ಡಿಸೆಂಬರ್ 5, 2019 ರಂದು ಬಿಜೆಪಿ ಅಭ್ಯರ್ಥಿಯಾಗಿ ಮರು-ಚುನಾವಣೆಯನ್ನು ಸ್ಪರ್ಧಿಸಿದ್ದರು.
ಉಪಚುನಾವಣೆಯಲ್ಲಿ ಸ್ಪರ್ಧೆ
ವಿಶ್ವನಾಥ್ ಜುಲೈ 6, 2019 ರಂದು 14 ಶಾಸಕರೊಂದಿಗೆ ಹುಣಸೂರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದಾಗ, ಅಂದಿನ ಸ್ಪೀಕರ್ ಕೆ ಆರ್ ರಮೇಶ್ ಕುಮಾರ್ ಅವರು ಜುಲೈ 28 ರಂದು ಅವರೆಲ್ಲರನ್ನೂ ಅನರ್ಹಗೊಳಿಸಿದರು. ಡಿಸೆಂಬರ್ 5 ರಂದು ಉಪಚುನಾವಣೆಯಲ್ಲಿ ಸ್ಪರ್ಧಿಸಲು ಅವರಿಗೆ ಅವಕಾಶ ಮಾಡಿಕೊಡಲಾಯಿತು. 2008 ಮತ್ತು 2013ರಲ್ಲಿ ವಿಶ್ವನಾಥ್ ಅವರನ್ನು ಎರಡು ಬಾರಿ ಸೋಲಿಸಿದ್ದ ಶಾಸಕ ಸಾರಾ ಮಹೇಶ್ ಅವರು ಜೆಡಿಎಸ್ನ ಪ್ರಮುಖ ನಾಯಕರಾದರು. ಕುಮಾರಸ್ವಾಮಿ ಮುಖ್ಯಮಂತ್ರಿಯಾದ ನಂತರ ಮಹೇಶ್ ಅವರಿಗೆ ಪ್ರಾಮುಖ್ಯತೆ ಹೆಚ್ಚು ಸಿಗತೊಡಗಿತು. ಆ ನಂತರ, ವಿಶ್ವನಾಥ್ ಮಹೇಶ್ ಅವರೊಂದಿಗೆ ಭಿನ್ನಾಭಿಪ್ರಾಯ ಹೊಂದುತ್ತಲೇ ಬಂದರು. ಅವರ ಸಾರ್ವಜನಿಕ ಜಗಳ ಇತ್ತೀಚಿನವರೆಗೂ ಮುಂದುವರೆಯಿತು.
ಬಿಜೆಪಿಯಲ್ಲಿ ವಿಶ್ವನಾಥ್
ವಿಶ್ವನಾಥ್ ಅವರು ಬಿಜೆಪಿಗೆ ಸೇರ್ಪಡೆಯಾದಾಗಿನಿಂದ ಪಕ್ಷದ ವಿರುದ್ಧ ಮಾತನಾಡುತ್ತಲೇ ಬಂದರು.ಅವರು ಸರ್ಕಾರ, ಸಚಿವರು ಮತ್ತು ಸಹ ಶಾಸಕರ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಲೇ ಇದ್ದರು. ಅದನ್ನು ಸಾರ್ವಜನಿಕವಾಗಿ ಹೇಳುತ್ತಿದ್ದರು. ಉಪಚುನಾವಣೆಯ ಸೋಳಿನ ಬಳಿಕ ಪಕ್ಷದ ನಾಯಕರನ್ನು ದೂಷಿಸಿದರು. ಇದೀಗ ವಿಶ್ವನಾಥ್ ಅವರು ಸಿದ್ದರಾಮಯ್ಯ ಅವರಂತಹ ನಾಯಕರ ಜೊತೆ ಹೊಂದಾಣಿಕೆ ಮಾಡಿಕೊಂಡು ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರಂತಹ ನಾಯಕರೊಂದಿಗೆ ತಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸಿಕೊಳ್ಳುತ್ತಿದ್ದಾರೆ.