Karnataka assembly election: ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸುವುದಿಲ್ಲ, ನಾಟಕವಾಡುತ್ತಿದ್ದಾರೆ ಎಂದ ಯಡಿಯೂರಪ್ಪ
ಬೆಂಗಳೂರು, ಜನವರಿ.23: ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಬಿಜೆಪಿ ಪ್ರಚಾರ ಮಾಡುತ್ತಿರುವುದರ ಜೊತೆಗೆ ಹೆಚ್ಚು ಗಮನ ಹರಿಸುತ್ತಿರುವುದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಕಡೆಗೆ ಎಂಬಂತೆ ತೋರುತ್ತಿದೆ. ಅವರ ಕ್ಷೇತ್ರ ಆಯ್ಕೆ ವಿಚಾರ ಕೆಲ ಕಾಲ ಸದ್ದು ಮಾಡಿತ್ತು. ಈ ಮತ್ತೆ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಮತ್ತೊಂದು ಬಾಂಬ್ ಹಾಕಿದ್ದಾರೆ.
ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರು ಘೋಷಿಸಿದಂತೆ ಕೋಲಾರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ. ಇದೆಲ್ಲಾ ಬರಿ ಡ್ರಾಮಾ ಎಂದು ಬಿಜೆಪಿ ಹಿರಿಯ ನಾಯಕ ಬಿ.ಎಸ್ ಯಡಿಯೂರಪ್ಪ ಭವಿಷ್ಯ ನುಡಿದಿದ್ದಾರೆ.
ಮಂಬರುವ ಚುನಾವಣೆಯಲ್ಲಿ ಸಿದ್ದರಾಮಯ್ಯ ಘೋಷಿಸಿದಂತೆ ಕೋಲಾರದಿಂದ ಸ್ಪರ್ಧಿಸುವುದಿಲ್ಲ, ಅವರು ಹಳೇ ಮೈಸೂರು ಭಾಗದಲ್ಲಿ ಸ್ಪರ್ಧಿಸುತ್ತಾರೆ ಎಂದು ಯಡಿಯೂರಪ್ಪ ಹೇಳಿದ್ದಾರೆ.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿರುವ ಬಿಎಸ್ ಯಡಿಯೂರಪ್ಪ, "ಇಂದು ಒಂದು ವಿಷಯವನ್ನು ನಾನು ಬಹಿರಂಗಪಡಿಸುತ್ತೇನೆ. ನಾನು ಆಧಾರ ರಹಿತ ಭವಿಷ್ಯ ನುಡಿದಿದ್ದೇನೆ ಎಂದು ಭಾವಿಸಬೇಡಿ. ಸಿದ್ದರಾಮಯ್ಯ ಯಾವುದೇ ಕಾರಣಕ್ಕೂ ಕೋಲಾರದಿಂದ ಸ್ಪರ್ಧಿಸುವುದಿಲ್ಲ. ಅವರು ನಾಟಕ ಮಾಡುತ್ತಿದ್ದಾರೆ. ಮೈಸೂರಿಗೆ ಹಿಂತಿರುಗುತ್ತಾರೆ" ಎಂದು ಹೇಳಿದ್ದಾರೆ.
ಜೊತೆಗೆ ಮುಂಬರುವ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರನ್ನು ಸೋಲಿಸಲು ಬಿಜೆಪಿ ತಂತ್ರವನ್ನು ರೂಪಿಸುತ್ತಿದೆ ಎಂದು ಸೂಚನೆ ನೀಡಿದ್ದಾರೆ.
ಸಿದ್ದರಾಮಯ್ಯ ರಾಜಕೀಯ ಸರ್ಕಸ್ ಮತ್ತು ನಾಟಕವಾಡುತ್ತಿದ್ದಾರೆ. ನನ್ನ ಪ್ರಕಾರ, ಅವರು ಕೋಲಾರದಿಂದ ಸ್ಪರ್ಧಿಸುವುದಿಲ್ಲ. ಅಲ್ಲಿ ನಿಂತರೆ ಅವರು ಸೋಲುತ್ತಾರೆ. ಹೀಗಾಗಿ ಮೈಸೂರಿಗೆ ಹಿಂತಿರುಗಲು ಪ್ರಯತ್ನಿಸಬಹುದು, ಹಾಗಾದರೇ ನಾವು ಅವರನ್ನು ಸೋಲಿಸಲು ತಂತ್ರವನ್ನು ರೂಪಿಸುತ್ತೇವೆ. ಸಿದ್ದರಾಮಯ್ಯ ಎಲ್ಲಿಂದ ಸ್ಪರ್ಧಿಸಿದರೂ ಮನೆಗೆ ಹೋಗುವುದು ನಿಶ್ಚಿತ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಭವಿಷ್ಯ ನುಡಿದಿದ್ದಾರೆ.

ಸಿದ್ದರಾಮಯ್ಯ ಅವರ ಕ್ಷೇತ್ರ ಆಯ್ಕೆ ಹಲವು ತಿಂಗಳುಗಳಿಂದ ನಿಗೂಢವಾಗಿತ್ತು. ಕೆಲ ದಿನಗಳ ಹಿಂದೆಯಷ್ಟೇ ಸಾರ್ವಜನಿಕ ಸಭೆಯೊಂದರಲ್ಲಿ ಸಿದ್ದರಾಮಯ್ಯ, 'ನನ್ನ ಚುನಾವಣಾ ಸಮರಕ್ಕೆ ಕೋಲಾರವೇ ವೇದಿಕೆಯಾಗಲಿದೆ ಎಂದು ಘೋಷಿಸಲು ಬಯಸುತ್ತೇನೆ' ಎಂದು ಘೋಷಿಸಿದ್ದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ 2018 ರ ಚುನಾವಣೆಯಲ್ಲಿ ಮೈಸೂರಿನ ಚಾಮುಂಡೇಶ್ವರಿ ಹಾಗೂ ಬಾಗಲಕೋಟೆಯ ಬಾದಾಮಿ ಕ್ಷೇತ್ರಗಳಿಮದ ಕಣಕ್ಕಿಳಿದ್ದರು. ಆದರೆ, ಒಕ್ಕಲಿಗರ ಮತಗಳು ಹೆಚ್ಚಿರುವ ಚಾಮುಂಡೇಶ್ವರಿಯಲ್ಲಿ ಜೆಡಿಎಸ್ನ ಜಿ.ಟಿ.ದೇವಗೌಡರ ವಿರುದ್ಧ ಸೋಲು ಅನುಭವಿಸಿದ್ದರು. ಬಾದಾಮಿಯಲ್ಲಿ ಬಿಜೆಪಿಯ ಶ್ರೀರಾಮುಲು ವಿರುದ್ಧ ಗೆಲುವು ದಾಖಲಿಸಿದ್ದರು.
ಬಾದಾಮಿಯಲ್ಲಿ ಕುರುಬ ಸಮುದಾಯದ ಮತಗಳಿಂದ ಸಿದ್ದರಾಮಯ್ಯ ಗೆದ್ದಿದ್ದಾರೆ ಎಂದು ಚರ್ಚೆಗಳು ನಡೆದಿದ್ದರು. ಈಗ ಅವರು ಆಯ್ಕೆ ಮಾಡಿಕೊಂಡಿರುವ ಕೋಲಾರದಲ್ಲಿಯೂ ಕುಎಉಬ ಮತಗಳು ಹೆಚ್ಚಿವೆ ಎಂಬ ಚರ್ಚೆಗಳಿವೆ. ಹೀಗಾಗಿಯೇ ಅವರು ಕೋಲಾರವನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತದೆ. ಇವುಗಳ ನಡುವೆ ಮಾಜಿ ಸಿಎಂ ಯಡಿಯೂರಪ್ಪ ಹೊಸ ಬಾಂಬ್ ಹಾಕಿದ್ದಾರೆ.












Click it and Unblock the Notifications