Kiccha Sudeep: ಸಂಡೂರು ಪ್ರಚಾರದ ಅಖಾಡದಲ್ಲಿಂದು ಧೂಳೆಬ್ಬಿಸಲಿರುವ 'ಪೈಲ್ವಾನ್'
ಮತದಾನ ಹತ್ತಿರವಾಗುತ್ತಿದ್ದಂತೆ ಸ್ಟಾರ್ ಪ್ರಚಾರಕರ ಅಬ್ಬರ ಜೋರಾಗಿದೆ. ಬುಧವಾರ ಬಿಜೆಪಿ ಪರ ಪ್ರಚಾರ ಮಾಡಿದ ಕಿಚ್ಚ ಸುದೀಪ್ ಇಂದೂ ಕೂಡ ರೋಡ್ ಶೋ ನಡೆಸಲಿದ್ದಾರೆ. ಯಂಗ್ ಐಕಾನ್ ಕಿಚ್ಚ ಸುದೀಪ್ ಅವರು ಇಂದು ಕೂಡ್ಲಿಗಿಯಲ್ಲಿ ರೋಡ್ ಶೋ ಹಾಗೂ ಬಹಿರಂಗ ಸಭೆ ನಡೆಸಿ ಬಿಜೆಪಿ ಅಭ್ಯರ್ಥಿ ಲೋಕೇಶ ವಿ ನಾಯಕ ಪರ ಮತಯಾಚನೆ ಪ್ರಚಾರ ನಡೆಸಲಿದ್ದಾರೆ.
ಹೌದು ಇಂದು ಬೆಳಿಗ್ಗೆಯಿಂದ ಕಿಚ್ಚ ಸುದೀಪ್ ಪ್ರಚಾರ ಮಾಡಲಿದ್ದಾರೆ. ಬಳ್ಳಾರಿ, ಹಾವೇರಿಯ ಮೂರು ಕ್ಷೇತ್ರದಲ್ಲಿ ಪ್ರಚಾರ ನಡೆಸಲಿದ್ದಾರೆ. ಬಿಜೆಪಿ ಅಭ್ಯರ್ಥಿ ಬಿಸಿ ಪಾಟೀಲ್, ರಾಣೆಬೆನ್ನೂರು ಅರುಣ್ ಪೂಜಾರ್, ಬ್ಯಾಡಗಿಯ ವಿರುಪಾಕ್ಷಪ್ಪ, ಕುಂದಗೋಳ, ಎಂಆರ್ ಪಾಟೀಲ್ ಪರ ಸುದೀಪ್ ಪ್ರಚಾರ ಮಾಡಲಿದ್ದಾರೆ. ಸಂಡೂರು ಕೂಡಲಿಯಲ್ಲಿ ಸುದೀಪ್ ಭರ್ಜರಿ ರೋಡ್ ಶೋ ನಡೆಯಲಿದೆ.

ಕಿಚ್ಚ ಬುಧವಾರ ಒಟ್ಟು 6 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಚಾರ ಮಾಡಿದರು. ಸಿಎಂ ಬಸವರಾಜ ಬೊಮ್ಮಾಯಿ ಆಪ್ತರಾಗಿರುವ ಸುದೀಪ್, ಬೊಮ್ಮಾಯಿ ನಾಮಪತ್ರ ಸಲ್ಲಿಕೆ ವೇಳೆ ಶಿಗ್ಗಾಂವಿಯಲ್ಲಿ ನಡೆದ ಭರ್ಜರಿ ರೋಡ್ಶೋನಲ್ಲಿ ಭಾಗವಹಿಸಿದ್ದರು. ಬುಧವಾರದಿಂದ ಚುನಾವಣಾ ಪ್ರಚಾರ ಮುಗಿಯುವವರೆಗೂ ಪ್ರಚಾರ ಕಾರ್ಯದಲ್ಲಿ ತೊಡಗುವುದಾಗಿ ತಿಳಿಸಿದ್ದಾರೆ.
ಇಂದು ಬೆಳಿಗ್ಗೆ ಹ್ಯಾಲಿಕಾಪ್ಟರ್ ಮೂಲಕ ಕೊಟ್ಟೂರು ಸಮೀಪದ ಹೆಲಿಪ್ಯಾಡ್ ಬಳಿ ಇಳಿದು ರಸ್ತೆ ಮೂಲಕ ಆಗಮಿಸಿ ಕೂಡ್ಲಿಗಿ ಪಟ್ಟಣದ ಹೈವೇ 50ರ ಸಮೀಪದ ರಸ್ತೆಯಿಂದ ಹೊಸಪೇಟೆ ರಸ್ತೆ ಕಡೆಯ ಶ್ರೀ ರಾಮಲಿಂಗೇಶ್ವರ ದೇವಸ್ಥಾನ ರಸ್ತೆ, ಶ್ರೀ ಕೊತ್ತಲಾಂಜನೇಯ ದೇವಸ್ಥಾನ ಮುಂದುಗಡೆಯಿಂದ ಹಳೇ ಸಂತೆಮೈದಾನ ರಸ್ತೆ ಮೂಲಕ ಕೊಟ್ಟೂರು ರಸ್ತೆಯಿಂದ ಮದಕರಿ ವೃತ್ತದವರೆಗೆ ಕಿಚ್ಚ ಸುದೀಪ್ ಅವರ ರೋಡ್ ಶೋ ನಡೆಯಲಿದ್ದು ಮದಕರಿ ವೃತ್ತದ ಬಳಿ ಕೂಡ್ಲಿಗಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಲೋಕೇಶ ವಿ ನಾಯಕ ಪರ ಪ್ರಚಾರ ಕೈಗೊಳ್ಳಲಿದ್ದಾರೆ.

ಬುಧವಾರ ಮೊದಲ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ತಿಪ್ಪೇಸ್ವಾಮಿ ಪರವಾಗಿ ಮತಯಾಚನೆ ಮಾಡಿದರು. ನಂತರ ಜಗಳೂರಿಗೆ ತೆರಳಲಿದ್ದು, ಅಲ್ಲಿ ರೋಡ್ ಶೋನಲ್ಲಿ ಭಾಗವಹಿಸಿದ್ದರು. ಮಾಯಕೊಂಡ, ದಾವಣಗೆರೆ ಉತ್ತರ ಮತ್ತು ದಕ್ಷಿಣ ಕ್ಷೇತ್ರದಲ್ಲಿ ಮತಯಾಚನೆ ಮಾಡಿ ಕಿಚ್ಚ ಸುದೀಪ್, ಸಂಜೆ ಬಳ್ಳಾರಿಯ ಸಂಡೂರಿನಲ್ಲಿ ಪ್ರಚಾರ ಕಾರ್ಯದಲ್ಲಿ ಭಾಗವಹಿಸಿದರು.
ಬುಧವಾರ ಚುನಾವಣಾ ಪ್ರಚಾರಕ್ಕೆ ಹೋಗುವ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ಕಿಚ್ಚ ಸುದೀಪ್, "ಚುನಾವಣೆ ಪ್ರಚಾರ ಕಾರ್ಯ ಮುಗಿಯುವವರೆಗೂ ಬಿಜೆಪಿ ಜೊತೆಯಲ್ಲಿ ಇರುತ್ತೇನೆ, ಮಾತು ಕೊಟ್ಟಿದ್ದೇನೆ ಎಂದು ಹೇಳಿದರು. ಹೋದ ಕಡೆಯಲ್ಲೆಲ್ಲಾ ಜನ ತುಂಬಾ ಪ್ರೀತಿ ತೋರಿಸುತ್ತಿದ್ದಾರೆ, ಪ್ರಚಾರಕ್ಕೆ ಹೋಗುವುದರಲ್ಲಿ ನನ್ನ ಸ್ವಾರ್ಥ ಕೂಡ ಇದೆ, ಈ ನೆಪದಲ್ಲಿ ಅಭಿಮಾನಿಗಳನ್ನು ಭೇಟಿ ಮಾಡಬಹುದು'' ಎಂದರು.
ರಾಜ್ಯದ 224 ಕ್ಷೇತ್ರಗಳಿಗೆ ಒಂದೇ ಹಂತದ ಚುನಾವಣೆ ನಡೆಯಲಿದ್ದು, ಏಪ್ರಿಲ್ 21ಕ್ಕೆ ನಾಮ ಪತ್ರ ಪರಿಶೀಲನೆ ನಡೆದಿದ್ದು, ಏಪ್ರಿಲ್ 24 ನಾಮಪತ್ರ ಹಿಂಪಡೆಯಲು ಕೊನೆಯ ದಿನವೂ ಮುಗಿದೆ. ಇನ್ನು ಮೇ 10 ರಂದು ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13ರಂದು ಶನಿವಾರ ಚುನಾವಣಾ ಫಲಿತಾಂಶ ಪ್ರಕಟಗೊಳ್ಳಲಿದೆ. ಮೇ 15 ರೊಳಗೆ ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ.












Click it and Unblock the Notifications