ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ನಿಂದ ಟಿಕೆಟ್ ಬಯಸಿದ 1,350 ಆಕಾಂಕ್ಷಿಗಳು
ಬೆಂಗಳೂರು, ನ. 22: ಮುಂಬರುವ ರಾಜ್ಯ ಚುನಾವಣೆಗೆ ರಾಜಕೀಯ ಪಕ್ಷಗಳು ಭರದಿಂದ ಸಿದ್ಧತೆ ನಡೆಸುತ್ತಿವೆ. ಕಾಂಗ್ರೆಸ್ನಿಂದ ಟಿಕೆಟ್ ಬಯಸಿರುವ ಆಕಾಂಕ್ಷಿಗಳು ಸೋಮವಾರ ಅರ್ಜಿ ಸಲ್ಲಿಸಿದ್ದಾರೆ. ಈ ಬಾರಿ ಬರೋಬ್ಬರಿ 1,350 ಮಂದಿ ಅರ್ಜಿ ಸಲ್ಲಿಸಿದ್ದಾರೆ.
ಟಿಕೆಟ್ ಆಕಾಂಕ್ಷಿಗಳು ಅರ್ಜಿ ಸಲ್ಲಿಸಲು ನವೆಂಬರ್ 21 ಕಡೆಯ ದಿನವಾಗಿತ್ತು. ಅರ್ಜಿ ಶುಲ್ಕ 5 ಸಾವಿರ ರೂಪಾಯಿ ಎಂದು ನಿಗದಿಪಡಿಸಲಾಗಿತ್ತು. ಸಾಮಾನ್ಯ ವರ್ಗದ ಸದಸ್ಯರು ಅರ್ಜಿಯೊಂದಿಗೆ ಡಿಮ್ಯಾಂಡ್ ಡ್ರಾಫ್ಟ್ ಮೂಲಕ 2 ಲಕ್ಷ ರೂಪಾಯಿ ಪಾವತಿಸಬೇಕಾಗಿತ್ತು. ಎಸ್ಸಿ / ಎಸ್ಟಿಗೆ ಸೇರಿದ ಅರ್ಜಿದಾರರಿಗೆ 1 ಲಕ್ಷ ಪಾವತಿಸುವಂತೆ ಸೂಚನೆಯಲ್ಲಿ ತಿಳಿಸಲಾಗಿತ್ತು.
ಸಿದ್ದರಾಮಯ್ಯ ಕಣ್ಣಿಟ್ಟಿದ್ದ ಕೋಲಾರ ಕ್ಷೇತ್ರಕ್ಕೆ ಭಾರಿ ಡಿಮ್ಯಾಂಡ್, 6 ಅಕಾಂಕ್ಷಿಗಳಿಂದ ಅರ್ಜಿ
"ಒಟ್ಟು 1,450 ಅರ್ಜಿಗಳು ಮಾರಾಟವಾಗಿವೆ. ಅದರಲ್ಲಿ ಸುಮಾರು 1,350 ಅರ್ಜಿಗಳು ಸಲ್ಲಿಕೆಯಾಗಿವೆ. ಹೀಗಾಗಿ, 1,350 ಮಂದಿ ನಮ್ಮ ಪಕ್ಷದ ಟಿಕೆಟ್ನಲ್ಲಿ ಚುನಾವಣೆ ಎದುರಿಸುವ ಇಚ್ಛೆ ವ್ಯಕ್ತಪಡಿಸಿದ್ದಾರೆ" ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಜೊತೆಗೆ ಅರ್ಜಿ ಸಲ್ಲಿಸುವುದರಿಂದ ಪಕ್ಷದ ಟಿಕೆಟ್ ಖಚಿತವಾಗುವುದಿಲ್ಲ . ಅಭ್ಯರ್ಥಿಗಳನ್ನು ಅಂತಿಮವಾಗಿ ಪಕ್ಷದ ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಇನ್ನು, ಸಿದ್ದರಾಮಯ್ಯ ಸ್ಪರ್ಧಿಸುತ್ತಾರೆ ಎಂದು ಭಾರಿ ಚರ್ಚೆಗೆ ಗುರಿಯಾಗಿರುವ ಕೋಲಾರದಿಂದ ಟಿಕೆಟ್ ಬಯಸಿ 6 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಕಾಂಗ್ರೆಸ್ ಹಿರಿಯ ಮುಖಂಡ ಸುದರ್ಶನ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದೇಗೌಡ, ಮಾಜಿ ವಿಧಾನ ಪರಿಷತ್ ಸದಸ್ಯ ಮನೋಹರ್ ಹಾಗೂ ಬೆಂಗಳೂರಿನ ಉದ್ಯಮಿ ಹಾಗೂ ಡಿಕೆ ಶಿವಕುಮಾರ್ ಆಪ್ತರಾಗಿ ಗುರುತಿಸಿಕೊಂಡಿರುವ ಶ್ರೀನಿವಾಸ್, ಮಾಜಿ ಕೇಂದ್ರ ಸಚಿವ ಕೆಎಚ್ ಮುನಿಯಪ್ಪ ಬೆಂಬಲಿಗರಾದ ನಿವೃತ್ತಿ ಅಬಕಾರಿ ಎಲ್ಎ ಮಂಜುನಾಥ್ ಹಾಗೂ ಕಿಸಾನ್ ಕೇತ್ನ ಊರುಬಾಗಿಲು ಶ್ರೀನಿವಾಸ್ ಕೋಲಾರ ಕ್ಷೇತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ.