ಕರ್ನಾಟಕ ಅಸೆಂಬ್ಲಿ ಚುನಾವಣೆ: ರಾಜ್ಯ ಗುಪ್ತಚರ ವರದಿಯಲ್ಲಿ ಏನಿದೆ?
Recommended Video
2014ರ ಲೋಕಸಭಾ ಚುನಾವಣೆಯ ನಂತರ ತನ್ನ ನೆಲೆಯನ್ನು ವೇಗವಾಗಿ ವಿಸ್ತರಿಸಿಕೊಳ್ಳುತ್ತಿರುವ ಬಿಜೆಪಿ, ಮುಂದಿನ ವರ್ಷ ಕರ್ನಾಟಕವೂ ಸೇರಿದಂತೆ ಐದು ರಾಜ್ಯಗಳ (ಮಿಜೋರಾಂ, ಮೇಘಾಲಯ, ನಾಗಾಲ್ಯಾಂಡ್, ತ್ರಿಪುರಾ) ಚುನಾವಣೆಯನ್ನು ಸಮರ್ಥವಾಗಿ ಎದುರಿಸಲು ಸಿದ್ದತೆ ನಡೆಸಿಕೊಳ್ಳುತ್ತಿದೆ.
ಇದರ ಜೊತೆಗೆ, ತಾನು ಅಧಿಕಾರದಲ್ಲಿರುವ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸಗಡದಲ್ಲೂ ಸರಕಾರದ ಅವಧಿ ಜನವರಿ 2019ರಲ್ಲಿ ಮುಕ್ತಾಯಗೊಳ್ಳಲಿದೆ. ಈ ಎಲ್ಲಾ ಮೂರು ರಾಜ್ಯಗಳನ್ನು ಉಳಿಸಿಕೊಳ್ಳುವುದರ ಜೊತೆಗೆ, ಕರ್ನಾಟಕದಲ್ಲಿ ಮತ್ತೆ ಅಧಿಕಾರಕ್ಕೇರಲು ಬಿಜೆಪಿ ಎಚ್ಚರಿಕೆಯ ಹೆಜ್ಜೆಯನ್ನು ಇಡುತ್ತಿದೆ.
ಕರ್ನಾಟಕದಲ್ಲಿ ಮತಬೇಟೆಗೆ ಅಮಿತ್ ಶಾ ಹೊಸ ತಂತ್ರ!
ಈ ನಡುವೆ, ರಾಜ್ಯ ಗುಪ್ತಚರ ಇಲಾಖೆ ಕರ್ನಾಟಕದ ಅಸೆಂಬ್ಲಿ ಚುನಾವಣೆಯ ಬಗ್ಗೆ ನೀಡಿದೆ ಎನ್ನಲಾಗುತ್ತಿರುವ ವರದಿಯ ಪ್ರಕಾರ, ಬಿಜೆಪಿ ಮತ್ತೆ ಮಗುದೊಮ್ಮೆ ಪ್ರಧಾನಿ ನರೇಂದ್ರ ಮೋದಿಯವರನ್ನೇ ನೆಚ್ಚಿಕೊಳ್ಳುವಂತೆ ಮಾಡಿದೆ.
ಚುನಾವಣಾ ತಂತ್ರಗಾರಿಕೆಗೆ ನಿಪುಣ ನಾಯಕರ ನಿಯೋಜನೆಗೆ ಮುಂದಾಗಿರುವ ಅಮಿತ್ ಶಾ, ಪಕ್ಷದ ಪ್ರಧಾನ ಕಾರ್ಯದರ್ಶಿ ಭೂಪಿಂದರ್ ಯಾದವ್ ಅವರನ್ನು ಈಗಾಗಲೇ ಕರ್ನಾಟಕಕ್ಕೆ ಹೋಗುವಂತೆ ಸೂಚಿಸಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ತನಗೆ ನೀಡಿರುವ ಜವಾಬ್ದಾರಿಯನ್ನು ಯಾದವ್ ವಹಿಸಿಕೊಳ್ಳಲಿದ್ದಾರೆ.
ಕರ್ನಾಟಕಕ್ಕೆ ಬಿಜೆಪಿಯ ಚುನಾವಣಾ ಚಾಣಕ್ಯರ ದಾಪುಗಾಲು!
ಕರ್ನಾಟಕದ ಮತದಾರರು ಬಹಳ ಪ್ರಬುದ್ದರು ಎನ್ನುವ ಅಂಶವನ್ನು ಅರಿತಿರುವ ಬಿಜೆಪಿ ವರಿಷ್ಠರು, ಪಕ್ಷದ ಮುಖಂಡರಿಗೆ ಎಚ್ಚರಿಕೆಯಿಂದ ಹೇಳಿಕೆ ನೀಡುವಂತೆ ಸೂಚಿಸಿದ್ದಾರೆ. ಆದರೂ, ಪಕ್ಷದ ಕೆಲವು ಮುಖಂಡರ ಬಾಯಿ ಚಪಲದಿಂದಾಗಿ ಪಕ್ಷ ಮುಜುಗರ ಎದುರಿಸುತ್ತಿರುವುದನ್ನು ರಾಜ್ಯಾಧ್ಯಕ್ಷ ಯಡಿಯೂರಪ್ಪ, ಅಮಿತ್ ಶಾ ಅವರಿಗೆ ವಿವರಿಸಿದ್ದಾರೆ ಎನ್ನುವ ಮಾಹಿತಿಯಿದೆ. ಗುಪ್ತಚರ ವರದಿಯಲ್ಲಿ ಏನಿದೆ? ಮುಂದೆ ಓದಿ..
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್
ರಾಜ್ಯ ನಾಯಕರ ಮುಸುಕಿನ ಗುದ್ದಾಟಕ್ಕೆ ಮೊದಲು ತೆರೆಯೆಳೆಯುವುದು ಅತ್ಯವಶ್ಯಕವಾಗಿದೆ ಎನ್ನುವ ವರದಿಯ ಹಿನ್ನಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಅವರಿಗೆ ಈ ಸಂಬಂಧ ವರದಿ ನೀಡುವಂತೆ ಸೂಚಿಸಲಾಗಿದೆ. ಕರ್ನಾಟಕ ಕಾಂಗ್ರೆಸ್ ನಲ್ಲಿ ಸ್ಥಳೀಯ ವರ್ಚಸ್ವೀ ಮುಖಂಡರು ಇರುವುದರಿಂದ, ಚುನಾವಣಾ ವರ್ಷದಲ್ಲಿ ಶಿಸ್ತು ಅತಿಮುಖ್ಯ ಎಂದರಿತಿರುವ ಶಾ, ಅರುಣ್ ಸಿಂಗ್ ಅವರ ವರದಿಯನ್ನು ಆಧರಿಸಿ ಮುಂದಿನ ಕ್ರಮ ತೆಗೆದುಕೊಳ್ಳಲಿದ್ದಾರೆ ಎನ್ನುವ ಮಾಹಿತಿಯಿದೆ. (ಚಿತ್ರದಲ್ಲಿ: ಪೇಟಾ ತೊಟ್ಟವರು, ಅರುಣ್ ಸಿಂಗ್)
ರಾಜ್ಯ ಗುಪ್ತಚರ ಇಲಾಖೆ ವರದಿ
ರಾಜ್ಯ ಗುಪ್ತಚರ ಇಲಾಖೆ ಕರ್ನಾಟಕದ ಅಸೆಂಬ್ಲಿ ಚುನಾವಣೆಯ ಬಗ್ಗೆ ನೀಡಿದೆ ಎನ್ನಲಾಗುತ್ತಿರುವ ವರದಿಯ ಪ್ರಕಾರ, ಪ್ರಧಾನಮಂತ್ರಿ ನರೇಂದ್ರ ಮೋದಿ ರಾಜ್ಯಕ್ಕೆ ಎಷ್ಟು ಬಾರಿ ಬಂದು ಭಾಷಣ ಮಾಡುತ್ತಾರೋ, ಅಷ್ಟು ಬಿಜೆಪಿಗೆ ಲಾಭವಾಗಲಿದೆ.
ನರೇಂದ್ರ ಮೋದಿ ಎನ್ನುವ ಹೆಸರಿಗಿರುವ ಶಕ್ತಿ
ಕರ್ನಾಟಕದಲ್ಲಿ ಪಕ್ಷಕ್ಕಿರುವ ವರ್ಚಸ್ಸು ಮತ್ತು ಯಡಿಯೂರಪ್ಪ ಆದಿಯಾಗಿ ಇಲ್ಲಿನ ಮುಖಂಡರಿಗಿರುವ ವೈಯಕ್ತಿಕ ವರ್ಚಸ್ಸಿಗಿಂತ ಹೆಚ್ಚಿನ ಶಕ್ತಿಯಿರುವುದು ನರೇಂದ್ರ ಮೋದಿ ಎನ್ನುವ ಹೆಸರಿಗೆ. ಹಾಗಾಗಿ ಮೋದಿಯವರ ಪ್ರಚಾರ ಪಕ್ಷಕ್ಕೆ ಅತ್ಯಂತ ನಿರ್ಣಾಯಕ ಎನ್ನುವ ಮಾಹಿತಿ ಇಲಾಖೆಯ ವರದಿಯಲ್ಲಿ ಇದೆ ಎನ್ನಲಾಗುತ್ತಿದೆ.
ಖುದ್ದು ಪ್ರಧಾನಿ ರೋಡ್ ಶೋ
ಗುಜರಾತ್ ಚುನಾವಣೆಯ ವೇಳೆ ಖುದ್ದು ಪ್ರಧಾನಿ ರೋಡ್ ಶೋ ಜೊತೆ, 35ಕ್ಕೂ ಹೆಚ್ಚು ಚುನಾವಣಾ ಸಭೆ ನಡೆಸಿದ್ದರು. ರಾಜ್ಯದಲ್ಲಿ ಅಷ್ಟಾಗಿ ಆಡಳಿತ ವಿರೋಧಿ ಅಲೆಯಿಲ್ಲದೇ ಇರುವುದರಿಂದ, ಕೆಲವೊಂದು ಕಡೆ ತ್ರಿಕೋಣ ಸ್ಪರ್ಧೆ ಎದುರಿಸ ಬೇಕಾಗಿರುವುದರಿಂದ, ಮೋದಿ ಹೆಚ್ಚು ಹೆಚ್ಚು ಪ್ರಚಾರ ನಡೆಸಿದರೆ, 15ಕ್ಕಿಂತ ಅಧಿಕ ಸ್ಥಾನವನ್ನು ಸುಲಭವಾಗಿ ಬಿಜೆಪಿ ಪಡೆದುಕೊಳ್ಳಬಹುದು ಎನ್ನುವುದು ತಾಜಾ ಗುಪ್ತಚರ ವರದಿಯಲ್ಲಿ ಹೇಳಲಾಗಿದೆ ಎನ್ನುವ ಮಾಹಿತಿಯಿದೆ.
ಹದಿನೈದು ಚುನಾವಣಾ ಸಭೆ, ಹತ್ತಕ್ಕೂ ಹೆಚ್ಚು ರೋಡ್ ಶೋ
ಜನವರಿ 28ರಂದು ಬೆಂಗಳೂರಿನಲ್ಲಿ ಪರಿವರ್ತನಾ ಸಮವೇಶದ ಸಮಾರೋಪಕ್ಕೆ ಪ್ರಧಾನಿ ಮೋದಿ ಆಗಮಿಸಲಿದ್ದಾರೆ. ಇದಾದ ನಂತರ, ಭೂಪಿಂದರ್ ಯಾದವ್, ಅರುಣ್ ಸಿಂಗ್ ನೀಡುವ ವರದಿಯನ್ನು ಆಧರಿಸಿ, ಅಮಿತ್ ಶಾ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಸದ್ಯದ ಮಾಹಿತಿಯ ಪ್ರಕಾರ, ಪ್ರಧಾನಿ ಮೋದಿ ಕನಿಷ್ಠ ಹದಿನೈದು ಚುನಾವಣಾ ಸಭೆ, ಹತ್ತಕ್ಕೂ ಹೆಚ್ಚು ರೋಡ್ ಶೋನಲ್ಲಿ ಭಾಗವಹಿಸುವ ಸಾಧ್ಯತೆಯಿದೆ.