ಚಾಮುಂಡೇಶ್ವರಿ ಕ್ಷೇತ್ರದ ಪ್ರಚಾರಕ್ಕೆ ಸಜ್ಜಾಗಿದೆ ಸ್ಟಾರ್ ನಟರ ದಂಡು?!
Recommended Video
ಮೈಸೂರು, ಫೆಬ್ರವರಿ 7 : ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನೂ ದಿನಾಂಕ ನಿಗದಿಯಾಗಿಲ್ಲ. ಆದರೆ ಪ್ರತಿಷ್ಠಿತ ಚಾಮುಂಡೇಶ್ವರಿ ಕ್ಷೇತ್ರ ಮಾತ್ರ ಈಗಾಗಲೇ ರಂಗೇರಿದ್ದು ಪ್ರಚಾರಕ್ಕೆ ಚಿತ್ರನಟರನ್ನು ಬಳಸಿಕೊಳ್ಳಲು ವೇದಿಕೆ ಸಜ್ಜಾಗುತ್ತಿದೆ.
ಈ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡುತ್ತಿದ್ದಂತೆ, ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಮೂಡಿಸಿದೆ. ಇದರೊಟ್ಟಿಗೆ ವಿರೋಧಿಗಳ ಲೆಕ್ಕಾಚಾರವೂ ಬದಲಾಗಿದೆ. ಜೆಡಿಎಸ್ ನ ಹಾಲಿ ಶಾಸಕ ಜಿ. ಟಿ ದೇವೇಗೌಡ ಅವರು ತಂತ್ರಗಳನ್ನು ಬದಲಾಯಿಸಿಕೊಂಡು ತಿರುಗೇಟು ನೀಡಲು ಸಜ್ಜಾಗುತ್ತಿದ್ದಾರೆ.
ಬಿಜೆಪಿ ತನ್ನ ಅಭ್ಯರ್ಥಿ ಹುಡುಕಾಟದಲ್ಲಿ ತೊಡಗಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ವತಿಯಿಂದ ಕ್ಷೇತ್ರದಲ್ಲಿ ಈಗಾಗಲೇ ಒಂದು ಸುತ್ತಿನ ಬೃಹತ್ ಸಮಾವೇಶಗಳು ನಡೆದಿವೆ. ಮತದಾರರನ್ನು ಸೆಳೆಯಲು ಚಿತ್ರನಟರ ಮೊರೆ ಹೋಗಿರುವುದು ಈ ಕ್ಷೇತ್ರದಲ್ಲಿ ಈಗ ನಡೆದಿರುವ ಕುತೂಹಲಕಾರಿ ಬೆಳವಣಿಗೆ.
ದರ್ಶನ್, ಸೃಜನ್ ಪ್ರಚಾರ?!
ಮುಖ್ಯಮಂತ್ರಿ ಆಪ್ತ ಜಿಲ್ಲಾ ಪಂಚಾಯಿತಿ ಸದಸ್ಯ ರಾಕೇಶ್ ಪಾಪಣ್ಣ ಅವರು ಈಗಾಗಲೇ ದರ್ಶನ್, ಸೃಜನ್ ಲೋಕೇಶ್ ಅವರನ್ನು ಕರೆಸಿ ಕ್ಷೇತ್ರದಲ್ಲಿ ಕಾರ್ಯಕ್ರಮ ಸಹ ಆಯೋಜಿಸಿದ್ದರು. ಸಿದ್ದರಾಮಯ್ಯ ಅವರಿಗಿಂತ ಸ್ಟಾರ್ ಪ್ರಚಾರಕರು ಯಾರಿದ್ದಾರೆ ? ಎಂಬುದು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಮನದಲ್ಲಿರುವ ಪ್ರಶ್ನೆ. ಆದರೆ ರಾಜ್ಯದ ಎಲ್ಲ ಕ್ಷೇತ್ರಗಳ ಹೊಣೆ ಅವರ ಮೇಲೆ ಇರುವುದರಿಂದ ಚಾಮುಂಡೇಶ್ವರಿ ಕ್ಷೇತ್ರದತ್ತ ಹೆಚ್ಚು ಗಮನ ಹರಿಸಲು ಸಾಧ್ಯವಾಗದೆ ಇರಬಹುದು.
ರಮ್ಯಾ ಉಸ್ತುವಾರಿ?
ಇನ್ನು ಕಾಂಗ್ರೆಸ್ ಪರ ಪ್ರಚಾರಕ್ಕೆ ಮುಂದೆಯೂ ಸಹ ದರ್ಶನ್, ಸೃಜನ್ ಕೂಡ ಬರುತ್ತಾರೆ. ಅವರಲ್ಲದೆ ಎಐಸಿಸಿ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ ಕೂಡ ಬಂದು ಪ್ರಚಾರ ನಡೆಸುತ್ತಾರೆ ಎಂದು ಕಾಂಗ್ರೆಸ್ ಮುಖಂಡರೊಬ್ಬರು ತಿಳಿಸಿದ್ದಾರೆ. ಮೂಲಗಳ ಪ್ರಕಾರ ರಮ್ಯಾ ಅವರೇ ಕ್ಷೇತ್ರದ ಪ್ರಚಾರದ ಹೊಣೆ ಹೊರಲಿದ್ದಾರೆ ಎನ್ನುವುದು ಸ್ಪಷ್ಟವಾಗಿದೆ. ಈ ಹಿಂದಿನ ಜಿಲ್ಲಾ ಪಂಚಾಯತ್ ಚುನಾವಣೆ ವೇಳೆ ರಾಕೇಶ್ ಪಾಪಣ್ಣ ಪರ ಹಿನಕಲ್ ನಲ್ಲಿ ದರ್ಶನ್ ಅವರು ರೋಡ್ ಶೋ ಮೂಲಕ ಪ್ರಚಾರ ನಡೆಸಿದ್ದನ್ನು ಈ ಭಾಗ ನಾವು ಸ್ಮರಿಸಬಹುದು.
ಸುದೀಪ್ ಸಹ ಪ್ರಚಾರಕ್ಕೆ?
ಜೆಡಿಎಸ್ ಕೂಡ ಇದಕ್ಕೆ ಹಿಂದೆ ಬಿದ್ದಿಲ್ಲ. ಕೆಲವೆಡೆ ದರ್ಶನ್ ಕಟೌಟ್ ಜೊತೆ ಈ ಪಕ್ಷದ ಮುಖಂಡರ ಭಾವಚಿತ್ರಗಳು ರಾರಾಜಿಸುತ್ತಿವೆ. ಅಲ್ಲದೆ ಸುದೀಪ್ ಅವರನ್ನು ಕರೆತರುವಂತೆ ಪಕ್ಷದ ಯುವ - ಕಾರ್ಯಕರ್ತರು ಮುಖಂಡರನ್ನು ಒತ್ತಾಯಿಸಿದ್ದಾರೆ. ಕೆಲವರು ಚಿತ್ರನಟರನ್ನು ಕರೆತಂದು ಕಾರ್ಯಕ್ರಮವನ್ನು ಸಹ ಆಯೋಜಿಸುತ್ತಿದ್ದಾರೆ. ಚಿತ್ರನಟರನ್ನು ಕರೆತರುವ ಬಗ್ಗೆ ಕ್ಷೇತ್ರದ ನಮ್ಮ ಪಕ್ಷದ ಯುವ ಕಾರ್ಯಕರ್ತರು ಬೇಡಿಕೆ ಇಟ್ಟಿದ್ದು ನಿಜ. ಅಭಿಮಾನದಿಂದ ನಟರನ್ನು ನೋಡಲು ಜನ ಬರಬಹುದು. ಆದರೆ ಆ ಅಭಿಮಾನ ಮತವಾಗಿ ಪರಿವರ್ತನೆ ಆಗಲಾರದು. ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲೂ ಈ ಯೋಜನೆ ಯಶಸ್ವಿಯಾಗಲಿಲ್ಲ ಎಂದು ಜೆಡಿಎಸ್ ಮುಖಂಡ ಬೀರಿಹುಂಡಿ ಬಸವಣ್ಣ ಪ್ರತಿಕ್ರಿಯಿಸಿದರು.
ಮುಳುವಾಗಬಹುದೇ ಭೂಸ್ವಾಧೀನ ಪ್ರಕರಣ?
ಇತ್ತ ಕರ್ನಾಟಕ ಗೃಹ ಮಂಡಳಿ ಭೂಸ್ವಾಧೀನ ಪ್ರಕರಣ ಮತ್ತೆ ಜೀವ ಪಡೆದುಕೊಂಡಿರುವ ಬಗ್ಗೆಯೂ ಕ್ಷೇತ್ರದಲ್ಲಿ ಗುಸುಗುಸು ಸದ್ದಿಗೆ ಕಾರಣವಾಗಿದೆ. ಈ ಪ್ರಕರಣ ಯಾರಿಗೆ ಮುಳುವಾಗಬಹುದು ? ಯಾರಿಗೆ ಲಾಭ ಆಗಬಹುದು ಎಂಬ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಇದರ ನಡುವೆಯೇ ಸಿದ್ದರಾಮಯ್ಯ ಪುತ್ರ ಯತೀಂದ್ರ ಅವರು ಸ್ಥಳೀಯ ಮುಖಂಡರೊಂದಿಗೆ ಕ್ಷೇತ್ರ ಸಂಚಾರ ನಡೆಸುತ್ತಿದ್ದಾರೆ. ಅಲ್ಲದೆ ಮುಖ್ಯಮಂತ್ರಿ ಜಂಟಿಕಾರ್ಯದರ್ಶಿ ರಾಮಯ್ಯ ಮಾರ್ಗದರ್ಶನದಲ್ಲಿ ಸಭೆ ಸಮಾರಂಭ ಆಯೋಜಿಸಿ ಮತಯಾಚನೆಯಲ್ಲಿ ತೊಡಗಿದ್ದಾರೆ. ಜತೆಗೆ ವಿರೋಧಿ ಮುಖಂಡರನ್ನು ಪಕ್ಷದತ್ತ ಸೆಳೆಯುವ ಕಸರತ್ತು ನಡೆಯುತ್ತಿವೆ. ಜೆಡಿಎಸ್ ನಿಂದಲೂ ಕ್ಷೇತ್ರ ಪರ್ಯಟನೆ ಜೋರಾಗಿದೆ. ಜಿ. ಟಿ ದೇವೇಗೌಡ ಪುತ್ರ ಜಿ. ಡಿ ಹರೀಶ್ ಗೌಡ ಯುವಕರ ಗುಂಪು ಕಟ್ಟಿಕೊಂಡು ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ಆದರೆ ಬಿಜೆಪಿ ಸದ್ದು ಇನ್ನೂ ಸಹ ಕೇಳಿ ಬಂದಿಲ್ಲ. ಒಟ್ಟಾರೆ ಸ್ಟಾರ್ ನಟರ ದಂಡೇ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಬಂದರೂ ಅದರಲ್ಲಿ ಅಚ್ಚರಿ ಪಡುವಂಥದ್ದೇನೂ ಇಲ್ಲ.