ನೋಟು ಪ್ರಿಂಟಿಂಗ್ ಮೆಷಿನ್ ಬಂತಾ ಯಡಿಯೂರಪ್ಪನವರೇ?: ಸಿಎಂ ಲೇವಡಿ
Recommended Video

ಬೆಂಗಳೂರು, ಮೇ 5: ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯನ್ನು ಶುಕ್ರವಾರ ಬಿಡುಗಡೆ ಮಾಡಿದೆ. ಅದರಲ್ಲಿ ಭರವಸೆಗಳ ಮಹಾಪೂರವನ್ನೇ ಹರಿಸಿದೆ. ಬಿಜೆಪಿ ಪ್ರಣಾಳಿಕೆಯಲ್ಲಿ ಹೊಸತೇನೂ ಇಲ್ಲ. ತಮ್ಮ ಪ್ರಣಾಳಿಕೆಯಲ್ಲಿ ಇದ್ದ ಅಂಶಗಳನ್ನೇ ಬಿಜೆಪಿ ಕದ್ದಿದೆ ಎಂದು ಕಾಂಗ್ರೆಸ್ ಟೀಕಿಸಿದೆ.
ಬಿಜೆಪಿ ಪ್ರಣಾಳಿಕೆಯಲ್ಲಿನ ಕೆಲವು ಅಂಶಗಳನ್ನು ಪ್ರಸ್ತಾಪಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಅವುಗಳ ಬಗ್ಗೆ ಲೇವಡಿ ಮಾಡಿದ್ದಾರೆ. ಹಾಗೆಯೇ ಟ್ವಿಟ್ಟರ್ನಲ್ಲಿ ಅವುಗಳ ಕುರಿತು ಕೆಲವು ಪ್ರಶ್ನೆಗಳನ್ನೂ ಇರಿಸಿದ್ದಾರೆ.
ಮುಖ್ಯವಾಗಿ ಅಧಿಕಾರಕ್ಕೆ ಬಂದರೆ ರಾಷ್ಟ್ರೀಕೃತ ಮತ್ತು ಸಹಕಾರಿ ಬ್ಯಾಂಕುಗಳಲ್ಲಿನ ರೈತರ ಕೃಷಿ ಸಾಲವನ್ನು ಒಂದು ಲಕ್ಷ ರೂಪಾಯಿವರೆಗೂ ಮನ್ನಾ ಮಾಡುವುದಾಗಿ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಹೇಳಿಕೊಂಡಿರುವುದನ್ನು ಪ್ರಸ್ತಾಪಿಸಿರುವ ಸಿದ್ದರಾಮಯ್ಯ, ತಮ್ಮ ಎದುರಾಳಿ ಪಕ್ಷವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಸಿದ್ದರಾಮಯ್ಯ ಅವರು ಟ್ವಿಟ್ಟರ್ನಲ್ಲಿ ನೀಡಿರುವ ಪ್ರತಿಕ್ರಿಯೆಗಳು ಹೀಗಿವೆ

ಕಣ್ಣಿಗೆ ಮಣ್ಣೆರೆಚುವ ಆಟ ನಡೆಯೊಲ್ಲ
ಬಿಜೆಪಿ 2008ರಲ್ಲಿ ಕರ್ನಾಟಕದಲ್ಲಿ ಬಿಡುಗಡೆ ಮಾಡಿದ್ದ ಪ್ರಣಾಳಿಕೆಯಲ್ಲಿನ ಶೇ 90 ಭರವಸೆಗಳನ್ನು ಈಡೇರಿಸಿಲ್ಲ. ಅದೇ ಗತಿ ಈಗ ಬಿಡುಗಡೆ ಮಾಡಿರುವ ಪ್ರಣಾಳಿಕೆಗೂ ಆಗಲಿದೆ. ಜನರ ಕಣ್ಣಿಗೆ ಮಣ್ಣೆರುಚುವ ಆಟ ನಮ್ಮ ಕರ್ನಾಟಕದಲ್ಲಿ ನಡೆಯೊಲ್ಲ

ನಕಲು ಗಿರಾಕಿಗಳು
ಬಿಜೆಪಿಯವರು ನಕಲು ಗಿರಾಕಿಗಳು, ನಮ್ಮ ಯೋಜನೆಗಳ ಕಾಪಿ ಹೊಡೆದಿದ್ದಾರೆ. ಈಗಿರುವ ಇಂದಿರಾ ಕ್ಯಾಂಟೀನ್ ರೀತಿಯೇ ಅನ್ನಪೂರ್ಣ ಕ್ಯಾಂಟೀನ್ ಮಾಡುತ್ತೇವೆ ಎಂದಿದ್ದಾರೆ. ಹಾಗಾದರೆ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಇಲ್ಲಿಯವರೆಗೆ ಯಾಕೆ ಕ್ಯಾಂಟೀನ್ ತೆರೆದಿಲ್ಲ?

ರೈತರನ್ನು ಯಾಮಾರಿಸಬೇಡಿ
vರಾಷ್ಟ್ರೀಕೃತ ಬ್ಯಾಂಕ್ನಲ್ಲಿನ ಒಂದು ಲಕ್ಷದವರೆಗೆ ಬೆಳೆ ಸಾಲ ಮನ್ನಾ ಕರ್ನಾಟಕದ್ದು ಮಾತ್ರನಾ? ಇಡೀ ದೇಶದ್ದಾ? ಸುಳ್ಳು ಭರವಸೆಗಳ ಮೂಲಕ ನಮ್ಮ ರೈತರನ್ನು ಯಾಮಾರಿಸಬೇಡಿ.
|
ಲಾಲಿಪಾಪ್ ಎಂದಿದ್ದ ಸಚಿವರು
ನಾವು ರೈತರ ಸಾಲ ಮನ್ನಾ ಮಾಡಿದಾಗ ಕೇಂದ್ರ ಸಚಿವರೊಬ್ಬರು ಅದನ್ನು 'ಲಾಲಿಪಾಪ್' ಎಂದು ಗೇಲಿಮಾಡಿದ್ದರು. ರೈತರ ಸಾಲಮನ್ನಾಕ್ಕೆ ಕೇಂದ್ರದಿಂದ ಒಂದು ಪೈಸೆ ಕೊಡೊಲ್ಲ ಎಂದು ಸಚಿವ ಅರುಣ್ ಜೇಟ್ಲಿ ಹೇಳಿದ್ದರು. ನಿಮ್ಮನ್ನು ನಮ್ಮ ರೈತರು ನಂಬುತ್ತಾರಾ?

ನೋಟು ಪ್ರಿಂಟಿಂಗ್ ಮೆಷಿನ್ ಬಂತಾ?
ರೈತರ ಸಾಲ ಮನ್ನಾ ಮಾಡಿ ಎಂದು ಅಧಿಕಾರದಲ್ಲಿದ್ದ ಯಡಿಯೂರಪ್ಪನವರನ್ನು ಕೇಳಿದಾಗ 'ನನ್ನಲ್ಲಿ ನೋಟು ಪ್ರಿಂಟ್ ಮಾಡುವ ಮೆಷಿನ್ ಇದೆ ಏನ್ರಿ' ಎಂದು ಸಿಡಿಮಿಡಿಯಾಗಿದ್ದರು. ಈಗೇನಾದ್ರು ನೋಟು ಪ್ರಿಂಟಿಂಗ್ ಮೆಷಿನ್ ಬಂತಾ ಯಡಿಯೂರಪ್ಪನವರೇ?

5 ಲಕ್ಷ ರೂಪಾಯಿ ಹಾಕಿಸಿ ಪುಣ್ಯ ಕಟ್ಟಿಕೊಳ್ಳಿ
ಒಂದು ಲಕ್ಷ ರೂಪಾಯಿ ಬೆಳೆ ಸಾಲಮನ್ನಾದ ಹೊಸ ಭರವಸೆ ಬೇಡ ಸ್ವಾಮಿ, 15 ಲಕ್ಷ ರೂಪಾಯಿ ಬ್ಯಾಂಕ್ ಖಾತೆಗೆ ಹಾಕುವ ಹಳೆ ಭರವಸೆ ಈಡೇರಿಸುವಂತೆ ಪ್ರಧಾನಿ ನರೇಂದ್ರ ಮೋದಿಯವರನ್ನು ಒಪ್ಪಿಸಿ ಪುಣ್ಯ ಕಟ್ಟಿಕೊಳ್ಳಿ.

ಎಸಿಬಿ ರದ್ದು ಮಾಡ್ತೀರಾ?
ಎಸಿಬಿ ರದ್ದು ಮಾಡ್ತೇವೆ ಎಂದು ಬಿಜೆಪಿ ಪ್ರಣಾಳಿಕೆಯಲ್ಲಿ ಹೇಳಿದೆ. ಬಿಜೆಪಿ ಅಧಿಕಾರದಲ್ಲಿರುವ ಗುಜರಾತ್, ಮಧ್ಯಪ್ರದೇಶ, ಉತ್ತರಪ್ರದೇಶ, ಉತ್ತರಾಖಂಡ, ಮಹಾರಾಷ್ಟ್ರ, ರಾಜಸ್ಥಾನ, ಹರಿಯಾಣ, ಅಸ್ಸಾಂ, ಜಾರ್ಖಂಡ್ ಮತ್ತು ಹಿಮಾಚಲ ಪ್ರದೇಶಗಳಲ್ಲಿ ಲೋಕಾಯುಕ್ತದ ಜೊತೆ ಎಸಿಬಿ ಕೂಡಾ ಇದೆ. ಅವುಗಳನ್ನೂ ರದ್ದುಪಡಿಸ್ತೀರಾ?












Click it and Unblock the Notifications