ಚುನಾವಣೆ ಹೊತ್ತಲ್ಲಿ 'ಕೃಷ್ಣ' ಅಜ್ಞಾತವಾಸ! ಬಿಜೆಪಿಯಲ್ಲೂ ಕಡೆಗಣನೆ?

Recommended Video

      ಎಸ್ ಎಂ ಕೃಷ್ಣಗೆ ಬಿಜೆಪಿಯಲ್ಲೂ ಕಡೆಗಣನೆ | ಈ ಚುನಾವಣೆಯಲ್ಲಿ ಎಸ್ ಎಂ ಕೃಷ್ಣ ಕಾಣಿಸುತ್ತಾರಾ? | Oneindia Kannada

      "ಹೌದು, ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಎಲ್ಲಿದ್ದಾರೆ..? ಕಳೆದ ವರ್ಷ ಮಾರ್ಚ್ ನಲ್ಲಿ ಅವರು ಬಿಜೆಪಿ ಸೇರಿದಾಗ ಇದ್ದ ಹುಮ್ಮಸ್ಸು ಈಗ ಅವರಲ್ಲಿದ್ದಂತಿಲ್ಲ. ಅವರನ್ನು ಸೇರಿಸಿಕೊಳ್ಳುವಾಗ ಬಿಜೆಪಿ ತೋರಿದ ಅವಸರವನ್ನು ಅವರಿಗೆ ಸೂಕ್ತ ಹುದ್ದೆ ನೀಡುವಲ್ಲಿ ತೋರಿಲ್ಲ."

      ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು

      "ಮೇ 12 ರಂದು ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪರ ಪಾಂಚಜನ್ಯ ಊದುವವರು ಇದೇ ಕೃಷ್ಣ ಎಂಬ ನಿರೀಕ್ಷೆ ಇದೀಗ ಸುಳ್ಳಾಗುತ್ತಿದೆ. ಮೂಲೆಗುಂಪು ಮಾಡುತ್ತಿದ್ದಾರೆ ಎಂಬ ಕಾರಣಕ್ಕೇ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಕೃಷ್ಣ, ಬಿಜೆಪಿಯಲ್ಲೂ ಅದೇ 'ಟ್ರೀಟ್ ಮೆಂಟ್' ಅನುಭವಿಸುತ್ತಿದ್ದಾರಾ...? " ಅಂಥದೊಂದು ಪ್ರಶ್ನೆ ಇದೀಗ ರಾಜಕೀಯ ವಲಯದಲ್ಲಿ ದಟ್ಟವಾಗಿ ಕೇಳಿಬರುತ್ತಿದೆ.

      ಕೆಲವು ತಿಂಗಳುಗಳ ಹಿಂದೆ ಬಿಜೆಪಿ ತನ್ನ ಸಾಮಾಜಿಕ ಮಾಧ್ಯಮ ವಿಭಾಗದ ಸದಸ್ಯರುಗಳಲ್ಲಿ ಎಸ್ ಎಂ ಕೃಷ್ಣ ಅವರ ಹೆಸರನ್ನು ಸೇರಿಸುವ ಮೂಲಕ ಸಾಕಷ್ಟು ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿತ್ತು. ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವರಾಗಿ ಅನುಭವ ಪಡೆದ ಕೃಷ್ಣ ಅವರಿಗೆ ಬಿಜೆಪಿ ಇಂಥ ಹುದ್ದೆ ನೀಡಿದ್ದು ಸರಿಯೇ ಎಂಬ ಪ್ರಶ್ನೆ ಆಗಲೇ ಎದ್ದಿತ್ತು. ಆದರೆ ಅದಕ್ಕೆ ಬಿಜೆಪಿ ಇನ್ನೇನೂ ಸಮಜಾಯಿಷಿ ನೀಡಿತ್ತು ಎಂಬುದು ಬೇರೆ ವಿಚಾರ. ಒಟ್ಟಿನಲ್ಲಿ ಕಾಂಗ್ರೆಸ್ ನಾಯಕರಿಗೆ ಸೆಡ್ಡು ಹೊಡೆಯುವುದಕ್ಕೆಂದು ಬಿಜೆಪಿ ಸೇರಿದ ಎಸ್ ಎಂ ಕೃಷ್ಣ ಅವರ ಪರಿಸ್ಥಿತಿ ಆಡಿಕೊಳ್ಳುವವರ ಮುಂದೆ ಎಡವಿಬಿದ್ದಹಾಗಾಗಿದೆಯಾ..?!

      ಪರಿವರ್ತನಾ ಯಾತ್ರೆಯಲ್ಲಿ ಕೃಷ್ಣ ದರ್ಶನ!

      ಪರಿವರ್ತನಾ ಯಾತ್ರೆಯಲ್ಲಿ ಕೃಷ್ಣ ದರ್ಶನ!

      ಕಳೆದ ಜನವರಿಯಲ್ಲಿ ಮಂಡ್ಯದಲ್ಲಿ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಭಾಗವಹಿಸಿ, ಬಿಜೆಪಿ ಪರ ಪ್ರಚಾರ ಮಾಡುವ ಮೂಲಕ ಕೃಷ್ಣ ಸುದ್ದಿ ಮಾಡಿದ್ದರು. ಆಗ, 'ಸದ್ಯ ಕೃಷ್ಣ ಅಖಾಡಕ್ಕಿಳಿದರು' ಎಂದು ಭಾವಿಸಿದ್ದವರಿಗೆ ಕೆಲವೇ ದಿನಗಳಲ್ಲಿ ನಿರಾಸೆಯಾಯಿತು. ಮತ್ತೆ ಅಜ್ಞಾತವಾಸಿಯಾದರು ಕೃಷ್ಣ!

      ಚುನಾವಣೆಯ ದಿನಾಂಕ ಘೋಷಣೆಯಾದ ಮೇಲಾದರೂ ಕೃಷ್ಣ ಪಾಂಚಜನ್ಯ ಊದಿಯಾರು ಎಂದುಕೊಂಡಿದ್ದರೆ ಅದೂ ಸುಳ್ಳಾಯಿತು. ರಾಜ್ಯಕ್ಕೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಎಡತಾಕುತ್ತಲೇ ಇದ್ದರೂ ಕೃಷ್ಣ ಮಾತ್ರ ಮೌನಿ! ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು ಚುನಾವಣೆಯ ದಿಕ್ಕನ್ನೇ ಬದಲಿಸುತ್ತದೆ ಎಂದು ರಾಜಕೀಯ ತಜ್ಞರು ಅಭಿಪ್ರಾಯ ಪಡುತ್ತಿದ್ದರೆ ಕೃಷ್ಣಾ ಅವರು ಮಾತ್ರ ಈ ಕುರಿತು ಸೊಲ್ಲೆತ್ತಿಲ್ಲ! ಈ ಎಲ್ಲವುಗಳೂ ಬಿಜೆಪಿಯಲ್ಲಿ ಕೃಷ್ಣ ಅವರನ್ನು ಕಡೆಗಣನೆ ಮಾಡಲಾಗುತ್ತಿದೆ ಎಂಬ ಗುಮಾನಿಗೆ ಇಂಬು ನೀಡುತ್ತಿರುವುದಂತೂ ಸತ್ಯ. ಕೃಷ್ಣ ಅಂಥ ಅನುಭವಿ ರಾಜಕಾರಣಿಗಳನ್ನು ಸೂಕ್ತವಾಗಿ ಬಳಸಿಕೊಳ್ಳುವಲ್ಲಿ ಬಿಜೆಪಿ ಎಡವುತ್ತಿದೆಯಾ ಎಂಬ ಆರೋಪವೂ ಕೇಳಿಬರುತ್ತಿದೆ.

      ಬಿಕೋ ಎನ್ನುತ್ತಿದೆ ಕೃಷ್ಣ ಮನೆ!

      ಬಿಕೋ ಎನ್ನುತ್ತಿದೆ ಕೃಷ್ಣ ಮನೆ!

      ಕೃಷ್ಣ ಕಾಂಗ್ರೆಸ್ಸಿನಲ್ಲಿ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಸಮಯದಲ್ಲಿ ಅವರ ಮನೆ ಮುಂದೆ ಜನ ಸಾಗರವೇ ನೆರೆದಿರುತ್ತಿತ್ತು. ಕಾಂಗ್ರೆಸ್ಸಿನ ಪ್ರಮುಖ ನಾಯಕರುಗಳಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮುಂತಾದ ಘಟಾನುಘಟಿಗಳು ಕರ್ನಾಟಕಕ್ಕೆ ಬಂದರ ಕೃಷ್ಣ ಅವರ ಮನೆಗೆ ಭೇಟಿ ನೀಡದೆ ಹೋಗುತ್ತಿರಲಿಲ್ಲ.

      ಅದರಲ್ಲೂ ಚುನಾವಣೆಯ ಸಮಯದಲ್ಲಂತೂ ಟಿಕೇಟ್ ಹಂಚಿಕೆ ಮುಂತಾದ ವಿಷಯಕ್ಕೆ ಸಂಬಂಧಿಸಿದಂತೆ ಅನುಭವಿ ಕೃಷ್ಣ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಕಾಂಗ್ರೆಸ್ಸು ಎಂದಿಗೂ ಹಿಂದೆ ಬಿದ್ದಿರಲಿಲ್ಲ. ಆದರೆ ಕ್ರಮೇಣ ಏನಾಯ್ತೋ. ಕೃಷ್ಣ ಅವರನ್ನು ಕಾಂಗ್ರೆಸ್ ಕಡೆಗಣಿಸುವುದಕ್ಕೆ ಶುರುಮಾಡಿತ್ತು. ಪಕ್ಷ ಕಟ್ಟುವಲ್ಲಿ ಸಾಕಷ್ಟು ಕೊಡುಗೆ ನೀಡಿದ ತಮ್ಮನ್ನು ಕಡೆಗಣಿಸಿದ ಕಾಂಗ್ರೆಸ್ ನಾಯಕರಿಗೆ ಬುದ್ಧಿ ಕಲಿಸುವುದಕ್ಕಾಗಿ ಬಿಜೆಪಿ ಸೇರಿದ ಕೃಷ್ಣ ಅವರನ್ನು ಬಿಜೆಪಿಯ ಯಾರೊಬ್ಬರೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿರುವಂತೆ ಕಾಣುತ್ತಿಲ್ಲ. ಬೆಂಗಳೂರಿನ ಸದಾಶಿವನಗರದಲ್ಲಿರುವ ಅವರ ಮನೆ ಈಗ ಬಿಕೋ ಎನ್ನುತ್ತಿದೆ!

      ಪುತ್ರಿಗೆ ಟಿಕೇಟ್ ಕೊಡಿಸಲು ಪ್ರಯತ್ನ?

      ಪುತ್ರಿಗೆ ಟಿಕೇಟ್ ಕೊಡಿಸಲು ಪ್ರಯತ್ನ?

      ಕೆಲವು ಮೂಲಗಳ ಪ್ರಕಾರ ಎಸ್ ಎಂ ಕೃಷ್ಣ ಅವರು ತಮ್ಮ ಕಿರಿಯ ಪುತ್ರಿ ಶಾಂಭವಿ ಅವರಿಗೆ ಮಂಡ್ಯ ಜಿಲ್ಲೆಯ ಮದ್ದೂರು ಕ್ಷೇತ್ರದಿಂದ ಅಥವಾ ಬೆಂಗಳೂರಿನ ರಾಜರಾಜೇಶ್ವರಿ ನಗರದಿಂದ ಟಿಕೇಟ್ ಕೊಡಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಈ ಕುರಿತು ಬಿಜೆಪಿ ಯಾವುದೇ ಖಚಿತ ಮಾಹಿತಿ ನೀಡಿಲ್ಲ.

      'ಬಿಜೆಪಿಯಲ್ಲಿ ನಿಮ್ಮನ್ನು ಕಡೆಗಣಿಸಲಾಗುತ್ತಿದೆಯೇ?' ಎಂಬ ಪ್ರಶ್ನೆಗೆ ಸ್ವತಃ ಎಸ್ ಎಂ ಕೃಷ್ಣ ಅವರೇ, 'ಖಂಡಿತ ಇಲ್ಲ. ಇವೆಲ್ಲ ವದಂತಿ ಅಷ್ಟೇ' ಎಂದು ಸಮಜಾಯಿಷಿ ನೀಡಿದ್ದಾರೆ. ಬಿಜೆಪಿ ಹಿರಿಯ ನಾಯಕರು ಸಹ 'ಎಸ್ ಎಂ ಕೃಷ್ಣ ಅವರ ಅನುಭವದ ಕುರಿತು ನಮಗೆ ಬಹಳ ಗೌರವವಿದೆ. ನಮಗೆ ಎಂದಿಗೂ ಆವರ ಮಾರ್ಗದರ್ಶನ ಅತ್ಯಗತ್ಯ' ಎನ್ನುತ್ತಾರೆ. ಆದರೆ ಎಲ್ಲೋ, ಎಲ್ಲವೂ ಸರಿ ಇದ್ದಂತಿಲ್ಲ ಎಂಬ ಅನುಮಾನವಂತೂ ಜನರಲ್ಲಿ ಮನೆಮಾಡಿದೆ.

      ಒಕ್ಕಲಿಗ ಓಲೈಕೆಗೆ ಬಿಜೆಪಿಗೆ ಬೇಕೇ ಬೇಕು ಕೃಷ್ಣರ ನೆರವು

      ಒಕ್ಕಲಿಗ ಓಲೈಕೆಗೆ ಬಿಜೆಪಿಗೆ ಬೇಕೇ ಬೇಕು ಕೃಷ್ಣರ ನೆರವು

      ಮಂಡ್ಯ ಮೈಸೂರು ಭಾಗದಲ್ಲಿ ಹೆಚ್ಚಿರುವ ಒಕ್ಕಲಿಗ ಸಮುದಾಯದ ಓಲೈಕೆಗೆ ಎಸ್ ಎಂ ಕೃಷ್ಣ ಅವರ ನೆರವು ಬಿಜೆಪಿಗೆ ಬೇಕೇ ಬೇಕು. ಅದಕ್ಕೆಂದೇ ಮಂಡ್ಯದಲ್ಲಿ ನಡೆದ ಬಿಜೆಪಿಯ ಪರಿವರ್ತನಾ ಯಾತ್ರೆಯಲ್ಲೂ ಎಸ್ ಎಂ ಕೃಷ್ಣ ಅವರು ಉಪಸ್ಥಿತರಿರುವಂತೆ ಬಿಜೆಪಿ ಒತ್ತಾಯಿಸಿತ್ತು. ಅದಕ್ಕೆ ಕಿವಿಗೊಟ್ಟು ಕೃಷ್ಣ ಅವರು ಈ ಯಾತ್ರೆಯಲ್ಲಿ ಭಾಗವಹಿಸಿದ್ದರು ಸಹ.

      ಬಿಜೆಪಿ ಎಂದಿಗೂ ಉತ್ತಮ ಪ್ರದರ್ಶನ ತೋರದ ಈ ಭಾಗಗಳಲ್ಲಿ ಕಾಂಗ್ರೆಸ್ ಮೂಲದ, ಒಕ್ಕಲಿಗ ಸಮುದಾಯದ ಪ್ರತಿನಿಧಿಯಾಗಿ ಕೃಷ್ಣ ಅವರು ಪ್ರಚಾರ ಕಾರ್ಯಗಳಲ್ಲಿ ನಿರತರಾದದ್ದೇ ಆದಲ್ಲಿ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಉತ್ತಮ ಪ್ರದರ್ಶನ ತೋರೀತು. ಆದ್ದರಿಂದ ಎಸ್ ಎಂ ಕೃಷ್ಣ ಅವರನ್ನು ಮೂಲೆಗುಂಪು ಮಾಡಿದಷ್ಟೂ ಬಿಜೆಪಿಗೇ ನಷ್ಟ. ಅಲ್ಲದೆ ಅವರು ಪ್ರಚಾರದಲ್ಲಿ ಸಕ್ರಿಯರಾಗುವಂತೆ ನೋಡಿಕೊಳ್ಳುವುದು ಬಿಜೆಪಿಯ ದೃಷ್ಟಿಯಿಂದ ಒಳ್ಳೆಯದು ಎಂಬುದು ರಾಜಕೀಯ ಪಂಡಿತರ ಅಂಬೋಣ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+