ಒಂದೊಂದೇ ಸಮುದಾಯದ ಮುಖಂಡರಿಗೆ ವಿಶ್ವನಾಥ್ ಗಾಳ!
Recommended Video

ಮೈಸೂರು, ಏಪ್ರಿಲ್ 04 : ಹುಣಸೂರು ಕ್ಷೇತ್ರದಲ್ಲಿ ಗೆದ್ದೇ ತೀರಬೇಕೆಂದು ಹಠಕ್ಕೆ ಬಿದ್ದಿರುವ ಮಾಜಿ ಸಂಸದ ಎಚ್.ವಿಶ್ವನಾಥ್ ಅವರು ವಿವಿಧ ತಂತ್ರಗಳನ್ನು ಮಾಡುವ ಮೂಲಕ ಗೆಲುವಿಗಾಗಿ ಪ್ರಯತ್ನ ಮುಂದುವರೆಸಿದ್ದಾರೆ. ಹಾಗೆ ನೋಡಿದರೆ ಹುಣಸೂರಿನಲ್ಲಿ ಸದ್ಯದ ಮಟ್ಟಿಗೆ ಕಾಂಗ್ರೆಸ್ ಹವಾ ಇದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು
ಶಾಸಕ ಹೆಚ್.ಪಿ.ಮಂಜುನಾಥ್ ಅವರು ಕಳೆದ ಐದು ವರ್ಷಗಳಿಂದ ಕ್ಷೇತ್ರದಲ್ಲಿ ಒಂದಷ್ಟು ಮಟ್ಟಿಗೆ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಾ ಜನರ ವಿಶ್ವಾಸಗಳಿಸಿದ್ದಾರೆ. ಶಾಸಕರ ಬಗ್ಗೆ ಒಂದಷ್ಟು ಒಲವನ್ನು ಹೊಂದಿರುವ ಜನರನ್ನು ತಮ್ಮತ್ತ ಸೆಳೆದು ಮತವನ್ನಾಗಿ ಪರಿವರ್ತಿಸುವಲ್ಲಿ ಜೆಡಿಎಸ್ ಅಭ್ಯರ್ಥಿ ಎಚ್. ವಿಶ್ವನಾಥ್ ತಂತ್ರಗಳನ್ನು ಬಳಸುತ್ತಿದ್ದಾರೆ. ಹೀಗಾಗಿ ಸದ್ಯದ ಸ್ಥಿತಿಯಲ್ಲಿ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಕಾಂಗ್ರೆಸ್ಗೆ ಸೆಡ್ಡು ಹೊಡೆದು ಜೆಡಿಎಸ್ ಬಾವುಟ ಹಾರಿಸಲು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದಾರೆ.
ಕೆಲವು ವರ್ಷಗಳಿಂದ ಜಿ.ಟಿ.ದೇವೇಗೌಡರ ಪುತ್ರ ಜಿ.ಡಿ.ಹರೀಶ್ ಗೌಡ ಅವರು ಹುಣಸೂರಿನಲ್ಲಿ ಜೆಡಿಎಸ್ ಅನ್ನು ಸಂಘಟಿಸಿ ಅವರೇ ಕಣಕ್ಕಿಳಿಯುವ ಚಿಂತನೆಯಲ್ಲಿದ್ದರು. ಆದರೆ ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ವಿಶ್ವನಾಥ್ ಅವರಿಗೆ ಟಿಕೆಟ್ ನೀಡಲಾಗಿದೆ. ಅವರು ಹಿರಿಯ ನಾಯಕರು ಆಗಿರುವುದರಿಂದ ಅವರಿಗೆ ಚುನಾವಣೆಯಲ್ಲಿ ಗೆಲ್ಲಲೇ ಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಕಾಂಗ್ರೆಸ್ ತೊರೆದು ಬಂದಿರುವ ಅವರಿಗೆ ಜೆಡಿಎಸ್ ನಿಂದ ಗೆದ್ದು ತನ್ನ ತಾಕತ್ತೇನು ಎಂಬುದನ್ನು ಸಿದ್ದರಾಮಯ್ಯರಿಗೆ ತೋರಿಸಬೇಕಾಗಿದೆ. ಹೀಗಾಗಿ ತಂತ್ರ ಅನುಸರಿಸುವುದು ಬಹುಮುಖ್ಯವಾಗಿದೆ. ಈ ನಡುವೆ ಹಲವು ಸಭೆಗಳನ್ನು ನಡೆಸಿರುವ ಅವರು ಒಂದಷ್ಟು ಕಾರ್ಯಕರ್ತರನ್ನು ತಮ್ಮತ್ತ ಸೆಳೆದಿದ್ದಾರೆ.
ಇದೀಗ ಮುಂದುವರೆದು ಸಫಾಯಿ ಕರ್ಮಚಾರಿಗಳ ಮಹಾ ಸಂಘದ ಜಿಲ್ಲಾಧ್ಯಕ್ಷ ರಂಗನಾಥ್ ಅವರನ್ನೇ ತಮ್ಮತ್ತ ಸೆಳೆಯುವಲ್ಲಿ ಯಶಸ್ವಿಯಾಗಿದ್ದು ಅವರ ಮೂಲಕ ಸುಮಾರು 30ಕ್ಕೂ ಹೆಚ್ಚು ಮಂದಿಯನ್ನು ಸೇರ್ಪಡೆ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಹುಣಸೂರಿನ ಪೌರ ಕಾರ್ಮಿಕರ ಕಾಲೋನಿಯಲ್ಲಿ ಸಫಾಯಿ ಕರ್ಮಚಾರಿಗಳ ಮಹಾ ಸಂಘದ ಜಿಲ್ಲಾ ಅಧ್ಯಕ್ಷರಾದ ರಂಗನಾಥ್ ಅವರ ನಿವಾಸದಲ್ಲಿ ಸೌಹಾರ್ಧ ಕೂಟದ ಕಾರ್ಯಕ್ರಮ ಏರ್ಪಡಿಸಿ ಅಲ್ಲಿ ಸನ್ಮಾನ ಕಾರ್ಯಕ್ರಮ ಏರ್ಪಡಿಸಿ ಅವರ ಮೂಲಕವೇ ಸಮುದಾಯದ ಮತವನ್ನು ಸೆಳೆಯುವ ಕಾರ್ಯಕ್ಕೆ ಮುಂದಾಗಿದ್ದಾರೆ.
ಈ ಹಿಂದೆ ನಾಯಕ, ಕುರುಬ ಸಮುದಾಯದ ಸಭೆ ನಡೆಸಿ ಅವರ ಬೆಂಬಲ ಪಡೆದಿರುವ ವಿಶ್ವನಾಥ್ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ತಮ್ಮ ಬತ್ತಳಿಕೆಯಲ್ಲಿರುವ ಒಂದೊಂದೇ ತಂತ್ರಗಳನ್ನು ಬಳಸುತ್ತಿದ್ದಾರೆ. ಅದು ಎಷ್ಟರ ಮಟ್ಟಿಗೆ ಫಲ ತಂದು ಕೊಡುತ್ತದೆ ಎಂಬುವುದು ಮುಂದಿನ ದಿನಗಳಲ್ಲಿ ಗೊತ್ತಾಗಬೇಕಿದೆ.












Click it and Unblock the Notifications