ಕರ್ನಾಟಕದ ಮುಂದಿನ ಸಿಎಂ ಯಾರು? ಐದು ಸಾಧ್ಯತೆಗಳು
ಬೆಂಗಳೂರು, ಮೇ 14: ಕರ್ನಾಟಕ ವಿಧಾನಸಭೆ ಚುನಾವಣೆ 2018ರ ಫಲಿತಾಂಶ ಹೊರ ಬೀಳಲು ಕೆಲವೇ ಗಂಟೆಗಳಷ್ಟೇ ಬಾಕಿ ಉಳಿದಿದೆ. ಹೆಚ್ಚಿನ ಎಲ್ಲಾ ಚುನಾವಣೋತ್ತರ ಸಮೀಕ್ಷೆಗಳು ರಾಜ್ಯದಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾಗಲಿದೆ ಎಂದೇ ಹೇಳುತ್ತಿವೆ.
ಒಂದೊಮ್ಮೆ ಅತಂತ್ರ ವಿಧಾನಸಭೆ ಸೃಷ್ಟಿಯಾದರೆ, ಅಥವಾ ಬಿಜೆಪಿ ಮತ್ತು ಕಾಂಗ್ರೆಸ್ ಎರಡು ಪಕ್ಷಗಳಲ್ಲಿ ಒಂದು ಪಕ್ಷಕ್ಕೆ ಬಹುಮತ ಬಂದರೆ ಕರ್ನಾಟಕದ ಮುಖ್ಯಮಂತ್ರಿ ಯಾರಾಗಬಹುದು? ಮೈತ್ರಿ ಸರಕಾರದ ಹೊಂದಾಣಿಕೆ ಸೂತ್ರಗಳು ಹೇಗಿರಬಹುದು ಎಂಬ ಬಗ್ಗೆ ರಾಜ್ಯದಾದ್ಯಂತ ಚರ್ಚೆಗಳು ನಡೆಯುತ್ತಿವೆ.
ಪಂಚ ಜ್ಯೋತಿಷಿಗಳ 'ಅತಂತ್ರ' ವಿಧಾನಸಭೆ ಭವಿಷ್ಯ ನಿಜವಾಗುವುದೆ?
ಈ ಹೊತ್ತಲ್ಲಿ ಐದು ರೀತಿಯ ಫಲಿತಾಂಶಗಳು ಬಂದರೆ ಮುಂದಿನ ಸಿಎಂ ಆಯ್ಕೆ ಹೀಗಿರಬಹುದು ಎಂಬುದರ ಸಣ್ಣ ವಿಶ್ಲೇಷಣೆ ಇಲ್ಲಿದೆ.
ಕಾಂಗ್ರೆಸ್ ಗೆ ಸ್ಪಷ್ಟ ಬಹುಮತ ಬಂದರೆ
ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗುವುದು ಬಹುತೇಕ ಖಚಿತ. ಒಂದೊಮ್ಮೆ ಕಾಂಗ್ರೆಸಿಗೆ ಬಹುಮತ ಬಂದು ಚಾಮುಂಡೇಶ್ವರಿ ಮತ್ತು ಬಾದಾಮಿ ಎರಡೂ ಕಡೆ ಸಿಎಂ ಸೋತರೆ ಮಾತ್ರ ಅವರು ಮತ್ತೆ ಮುಖ್ಯಮಂತ್ರಿಯಾಗುವುದು ಕಷ್ಟವಾಗಬಹುದು.
ಬಹುಮತಕ್ಕೆ ಹತ್ತಿರ ಬಂದು ಬೆರಳೆಣಿಕೆ ಸ್ಥಾನಗಳು ಮಾತ್ರ ಕಡಿಮೆಯಾದರೆ ಕಾಂಗ್ರೆಸ್ ಪಕ್ಷೇತರ ಶಾಸಕರ ಬೆಂಬಲ ಗಿಟ್ಟಿಸಲಿದೆ. ಹೆಚ್ಚಿನವರು ಕಾಂಗ್ರೆಸ್ ಬಂಡಾಯ ಶಾಸಕರೇ ಪಕ್ಷೇತರರಾಗಿ ಆಯ್ಕೆಯಾಗುವ ಸಾಧ್ಯತೆ ಇದ್ದು, ಸರಕಾರ ರಚನೆ ಕಷ್ಟವಾಗಲಾರದು.
ದಲಿತ ಸಿಂಎ ಕೂಗು ಬಲವಾಗಿ ಹೈಕಮಾಂಡ್ ದಲಿತರನ್ನು ಮುಖ್ಯಮಂತ್ರಿ ಮಾಡಲೂಬಹುದು.
ಬಿಜೆಪಿಗೆ ಸ್ಪಷ್ಟ ಬಹುಮತ ಬಂದರೆ
ಬಿಎಸ್ ಯಡಿಯೂರಪ್ಪ ಸುಲಭದಲ್ಲಿ ಮುಖ್ಯಮಂತ್ರಿಯಾಗಬಹುದು. ಈ ಸಂದರ್ಭದಲ್ಲಿ ಎರಡು ಕ್ಷೇತ್ರಗಳಿಂದ ಸ್ಪರ್ಧಿಸುತ್ತಿರುವ ಬಿ. ಶ್ರೀರಾಮುಲು ಉಪಮುಖ್ಯಮಂತ್ರಿಯಾಗಿ ಆಯ್ಕೆಯಾಗುವ ಸಾಧ್ಯತೆಯೂ ಇದೆ. ಹಿಂದುಳಿದ ವರ್ಗದ ಮತಗಳನ್ನು 2019ರ ಚುನಾವಣೆಯಲ್ಲಿ ಸೆಳೆಯಲು ಬಿಜೆಪಿಗೆ ರಾಮುಲು ಸಹಾಯ ಮಾಡಬಹುದು.
ಒಂದೊಮ್ಮೆ ಸರಕಾರ ರಚಿಸಲು ನಾಲ್ಕೈದು ಸ್ಥಾನಗಳಷ್ಟೇ ಕೊರತೆಯಾದರೆ ಆಗ ಬಿಜೆಪಿ ಕೂಡ ಪಕ್ಷೇತರರನ್ನು ನೆಚ್ಚಿಕೊಂಡು ಸರಕಾರ ರಚಿಸಬಹುದು. 2008ರಲ್ಲಿ ನಡೆದಂತೆ ಆಪರೇಷನ್ ಕಮಲವನ್ನೂ ನಡೆಸಬಹುದು.
ಈ ಮೂವರಲ್ಲಿ ಎರಡನೆಯ ಬಾರಿ ಸಿಎಂ ಗಾದಿಯ ಅದೃಷ್ಟ ಯಾರಿಗೆ?
ಜೆಡಿಎಸ್ ಕಿಂಗ್ ಮೇಕರ್, ಉಳಿದವರ ಬೆಂಬಲ
ಜೆಡಿಎಸ್ ಸಾಕಷ್ಟು ಸ್ಥಾನಗಳನ್ನು ಗೆದ್ದು, ಪಕ್ಷದ ಬೆಂಬಲ ಇಲ್ಲದೆ ಸರಕಾರ ರಚಿಸಲು ಸಾಧ್ಯವೇ ಇಲ್ಲ ಎಂಬ ಪರಿಸ್ಥಿತಿ ಸೃಷ್ಟಿಯಾದರೆ ಮತ್ತೆ ಎಚ್.ಡಿ.ಕುಮಾರಸ್ವಾಮಿಯವರಿಗೆ ಮುಖ್ಯಮಂತ್ರಿ ಹುದ್ದೆ ಒಲಿದು ಬರಬಹುದು. ಈ ಸಂದರ್ಭದಲ್ಲಿ ಬಿಜೆಪಿ ಅಥವಾ ಕಾಂಗ್ರೆಸ್ ಜೆಡಿಎಸ್ ಗೆ ಹೊರಗಿನಿಂದ ಬೆಂಬಲ ನೀಡಬಹುದು.
ಕಾಂಗ್ರೆಸ್ ನ್ನು ಹೊರಗಿಡಬೇಕು ಮತ್ತು 2019ರಲ್ಲಿ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ಹೊರಗಿನಿಂದ ಬೆಂಬಲ ನೀಡಬಹುದು. ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡಲು ಕಾಂಗ್ರೆಸ್ ಬೆಂಬಲ ನೀಡಲೂಬಹುದು. ಎರಡೂ ಆಯ್ಕೆಗಳಿವೆ.
ಕುಮಾರಸ್ವಾಮಿ ಯಾವ ದಿಕ್ಕಿನಲ್ಲಿ ಬಾಣ ಬಿಡುತ್ತಾರೋ, ಬಲ್ಲವರಾರು?
ಅತೀ ದೊಡ್ಡ ಪಕ್ಷವಾಗಿ ಕಾಂಗ್ರೆಸ್ ಹೊರಹೊಮ್ಮಿದರೆ
ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಂಡು ಕಾಂಗ್ರೆಸ್ ಅಧಿಕಾರಕ್ಕೇರಲಿದೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಆಯ್ಕೆ ಕುತೂಹಲಕ್ಕೆ ಕಾರಣವಾಗಬಹುದು. ಸಿದ್ದರಾಮಯ್ಯ ಮುಖ್ಯಮಂತ್ರಿ ಹುದ್ದೆಗೆ ಈ ಸಂದರ್ಭದಲ್ಲಿ ಸೂಕ್ತ ಆಯ್ಕೆಯಾಗದೇ ಇರಬಹುದು. ಜೆಡಿಎಸ್ ಸಿದ್ದರಾಮಯ್ಯರನ್ನು ಸಿಎಂ ಹುದ್ದೆಯಲ್ಲಿ ಕೂರಿಸುವುದಕ್ಕೆ ಒಪ್ಪಿಗೆ ನೀಡುವ ಸಾಧ್ಯತೆಗಳು ಕಡಿಮೆ.
ಈ ಹಿಂದೆ ನಡೆದಂತೆ ಅರ್ಧ ನಾವು ಅರ್ಧ ನೀವು ಎಂದು ಹಂಚಿಕೊಂಡು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಮತ್ತೆ ಮುಖ್ಯಮಂತ್ರಿಯಾಗಲೂಬಹುದು. ಕಾಂಗ್ರೆಸ್ ನಿಂದ ಸಿದ್ದರಾಮಯ್ಯ ಬದಲು ಬೇರೆಯವರು ಮುಖ್ಯಮಂತ್ರಿಯಾಗಬಹುದು. ದಲಿತ ಎಂಬ ಕಾರಣಕ್ಕೆ ಪರಮೇಶ್ವರ್, ಒಕ್ಕಲಿಗ ಹಿನ್ನೆಲಯಲ್ಲಿ ಡಿಕೆ ಶಿವಕುಮಾರ್ ಅವರಿಗೆ ಈ ಅವಕಾಶ ಅರಸಿ ಬಂದರೂ ಅಚ್ಚರಿಯಿಲ್ಲ.
ಚುನಾವಣಾ ಪೂರ್ವ -ಉತ್ತರ ಸಮೀಕ್ಷೆಗಳ ಸರಾಸರಿ : ಅತಂತ್ರ ವಿಧಾನಸಭೆ
ಬಿಜೆಪಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೆ
ಹೀಗಾದಾಗ ಬಿಜೆಪಿ ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಳ್ಳಬಹುದು. ಜೆಡಿಎಸ್ ಪಡೆದುಕೊಳ್ಳುವ ಸ್ಥಾನದ ಮೇಲೆ ಮೈತ್ರಿಯ ಸೂತ್ರಗಳು ನಿರ್ಧಾರವಾಗಲಿವೆ. ಕಳೆದ ಬಾರಿಯಂತೆಯೇ ಈ ಬಾರಿಯೂ ಅರ್ಧರ್ಧ ಅವಧಿಯನ್ನು ಎರಡೂ ಪಕ್ಷಗಳು ಹಂಚಿಕೊಳ್ಳಬಹುದು.
ಆದರೆ ಈ ಸಂದರ್ಭದಲ್ಲಿ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಆಗದೇ ಇರಬಹುದು. ಬೇರೆ ಯಾರಾದರೂ ಪಕ್ಷದಿಂದ ಮುಖ್ಯಮಂತ್ರಿ ಹುದ್ದೆಗೆ ಅಚ್ಚರಿಯ ಆಯ್ಕೆಯಾಗಿ ಮೂಡಿ ಬರಬಹುದು. ಜೆಡಿಎಸ್ ನಲ್ಲಿ ಎಂದಿನಂತೆ ಕುಮಾರಸ್ವಾಮಿ ಅರ್ಧ ಅವಧಿಗೆ ಸಿಎಂ ಆಗಬಹುದು.