Anna Bhagya: 5 ಕೆಜಿ ಅಕ್ಕಿಯ ನಗದು ಬದಲಾಗಿ ಬೇರೆ ದಿನಸಿ ವಿತರಣೆಗೆ ಪ್ಲಾನ್
ಬೆಂಗಳೂರು, ಆಗಸ್ಟ್ 14: ಕರ್ನಾಟಕ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಅನ್ನಭಾಗ್ಯ ಯೋಜನೆಯಡಿ 10 ಕೆ.ಜಿ. ಅಕ್ಕಿ ಪೈಕಿ 05 ಕೆ.ಜಿ ಅಕ್ಕಿಗೆ ಬದಲಾಗಿ ನಗದು ನೀಡಲಾಗುತ್ತಿತ್ತು. ಆದರೆ ಮುಂದಿನ ದಿನಗಳಲ್ಲಿ ಜನರ ಇಷ್ಟದಂತೆ ದವಸ ಧಾನ್ಯಗಳು, ಇಲ್ಲವೇ ಅಡುಗೆ ಎಣ್ಣೆ ನೀಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಈ ಕುರಿತು ಅಂತಿಮ ಹಂತದ ತಿರ್ಮಾನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆಗೆ ಚರ್ಚಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದ್ದಾರೆ.
ರಾಜ್ಯ ಸರ್ಕಾರದ ಐದು ಗ್ಯಾರೆಂಟಿ ಯೋಜನೆಗಳ ಪೈಕಿ ಅನ್ನಭಾಗ್ಯ ಯೋಜನೆಯು ಒಂದು. ಬಡವರಿಗೆ ಹತ್ತು ಅಕ್ಕಿಯನ್ನು ಈ ಗ್ಯಾರೆಂಟಿಯಡಿ ನೀಡುವುದಾಗಿ ಘೋಷಿಸಿದ್ದ ರಾಜ್ಯ ಸರ್ಕಾರವು ಐದು ಕೆ.ಜಿ. ಅಕ್ಕಿಯನ್ನು ನೀಡುತ್ತಿದೆ. ಉಳಿದ ಐದು ಕೆ.ಜಿ. ಅಕ್ಕಿಯ ಬದಲಾಗಿ ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ನಗದು ಹಣ ಹಾಕುತ್ತಿತ್ತು.

ಶೀಘ್ರವೇ ನಿರ್ಧಾರ ಪ್ರಕಟ ಸಾಧ್ಯತೆ
ಆದರೆ ಫಲಾನುಭವಿಗಳು ನಗದು ಹಣದ ಬದಲಾಗಿ ದವಸ ಧಾನ್ಯಗಳು ಇಲ್ಲವೇ ಅಡುಗೆ ಎಣ್ಣೆಯನ್ನು ಪಡೆಯಲು ಆಸಕ್ತಿ ಹೊಂದಿದ್ದಾರೆ. ಈ ಕುರಿತು ಸಚಿವರೇ ಅಧಿಕೃತ ಮಾಹಿತಿ ನೀಡಿದ್ದಾರೆ. ಫಲಾನುಭವಿಗಳ ಇಷ್ಟದಂತೆ ಅಡುಗೆ ಎಣ್ಣೆ, ಧಾನ್ಯ, ಬೇಳೆ ಕಾಲುಗಳು, ಸಕ್ಕರೆ ಇಲ್ಲವೇ ಇನ್ನಿತರ ದಿನಸಿ ನೀಡಲು ಸರ್ಕಾರ ಚಿಂತನೆ ನಡೆಸಿದೆ. ಶೀಘ್ರವೇ ಚರ್ಚಿಸಿ ಈ ಬಗ್ಗೆ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ.
ಇದು ಸಾಧ್ಯವಾದರೆ ಮುಂದಿನ ದಿನಗಳಲ್ಲಿ ಐದು ಕೆಜಿಗೆ ಅಕ್ಕಿ ಬದಲಾಗಿ ನಗದು ಪಡೆಯುತ್ತಿರುವ ಬಡತನ ರೇಖೆಗಿಂತ ಕೆಳಗಿನ ಪಡಿತರ ಚೀಟಿ ಹೊಂದಿರುವ ಅರ್ಹ ಫಲಾನುಭವಿಗಳಿಗೆ ಹಣಕ್ಕೆ ಬದಲಾಗಿ ಅಡುಗೆ ಎಣ್ಣೆ, ಬೇಳೆಕಾಳುಗಳು, ಸಕ್ಕರೆ ಸಿಗಲಿದೆ. ಸದ್ಯ ನಗದು ಪಡೆಯುತ್ತಿರುವ ಶೇಕಡಾ 90ಕ್ಕೂ ಅಧಿಕ ಪಡಿತರು ಹಣಕ್ಕೆ ಬದಲಾಗಿ ಈ ಮೇಲಿನ ವಸ್ತುಗಳನ್ನೇ ಸ್ವೀಕರಿಸಲು ಬಯಸುತ್ತಿದ್ದಾರೆ ಎಂದು ಸಮೀಕ್ಷೆಯೊಂದು ಸರ್ಕಾರಕ್ಕೆ ಇಲಾಖೆಗೆ ಮಾಹಿತಿ ನೀಡಿದೆ.

ಕೇಂದ್ರಕ್ಕೆ ಅಕ್ಕಿ ಪೂರೈಸುವಂತೆ ಸಚಿವರ ಮನವಿ
ಇದೇ ವಿಚಾರವಾಗಿ ರಾಜ್ಯ ಸಚಿವ ಎಚ್ ಮುನಿಯಪ್ಪ ಅವರು ಕೇಂದ್ರ ಆಹಾರ ಸಚಿವ ಪ್ರಹ್ಲಾದ್ ಜೋಶಿಯವರನ್ನು ಭೇಟಿ ಮಾಡಿದ್ದಾರೆ. ಅಲ್ಲಿ ಅಗತ್ಯ ಅಕ್ಕಿಯನ್ನು ರಾಜ್ಯಕ್ಕೆ ಒದಗಿಸುವಂತೆ ಅವರು ಮನವಿ ಮಾಡಿದ್ದಾರೆ. ಇದಕ್ಕೆ ಪ್ರಹ್ಲಾದ್ ಜೋಶಿಯವರು ಅಕ್ಕಿ ವಿತರಿಸುವ ಕುರಿತು ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನೂ ಕೇಂದ್ರ ಬಿಜೆಪಿ ಸರ್ಕಾರ ಈಗಾಗಲೇ ಪಿಎಂ ಗರೀಬ್ ಕಲ್ಯಾಣ್ ಯೋಜನೆ ಅಡಿಯಲ್ಲಿ ಅರ್ಹರಿಗೆ ತಲಾ ಐದು ಕೆಜಿ ಅಕ್ಕಿ ನೀಡುತ್ತಿದೆ. ಇದೇ ವೇಳೆ ರಾಜ್ಯ ಸರ್ಕಾರವು ಐದು ಕೆ.ಜಿ. ಅಕ್ಕಿ, ಇಲ್ಲವೇ ದವಸ ಧಾನ್ಯ ನೀಡಿದರೆ ಫಲಾನುಭವಿಗಳಿಗೆ ಇನ್ನಷ್ಟು ಅನುಕೂಲವಾಗಲಿದೆ ಸಂಗತಿಯನ್ನು ಮುನಿಯಪ್ಪ ತಿಳಿಸಿದರು.












Click it and Unblock the Notifications