just in: ರಾಜ್ಯದ ಹೊಸ ಉದ್ಯೋಗ ನೀತಿ ಖಂಡಿಸಿದ ಎಐಡಿವೈಓ

ಬೆಂಗಳೂರು, ಜುಲೈ 23; ಶುಕ್ರವಾರ ರಾಜ್ಯ ಸಚಿವ ಸಂಪುಟ 'ಕರ್ನಾಟಕ ಉದ್ಯೋಗ ನೀತಿ 2022-25' ಗೆ ಒಪ್ಪಿಗೆ ನೀಡಿದೆ. ಹೊಸ ನೀತಿಯನ್ನು ಖಂಡಿಸಿರುವ ಎಐಡಿವೈಓ, "ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಲಕ್ಷಾಂತರ ಉದ್ಯೋಗಗಳನ್ನು ಸಮರೋಪಾದಿಯಲ್ಲಿ ಭರ್ತಿಮಾಡುವ ಬದಲು, ರಾಜ್ಯ ಸರ್ಕಾರವು ಉದ್ಯೋಗಾಂಕ್ಷಿ ಯುವಜನರನ್ನು ಮರಳುಗೊಳಿಸಲು ಹೊಸ ಉದ್ಯೋಗ ನೀತಿಯನ್ನು ಜಾರಿಗೊಳಿಸುತ್ತಿದೆ' ಎಂದಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟವು ಅಂಗೀಕರಿಸಿದ ಈ ಉದ್ಯೋಗ ನೀತಿಯು ರಾಜ್ಯದಲ್ಲಿ ಉದ್ಯೋಗಾವಕಾಶಗಳು ಕ್ಷೀಣಿಸುತ್ತಿರುವಾಗ, ವಿಶೇಷವಾಗಿ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗವನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ. ರಾಜ್ಯದಲ್ಲಿ ಉದ್ಯೋಗಗಳ ಸಂಖ್ಯೆಯನ್ನು ಹೆಚ್ಚಿಸಲು ಕೈಗಾರಿಕೆಗಳನ್ನು ವಿಸ್ತರಿಸುವುದು ಅಥವಾ ರಾಜ್ಯದಲ್ಲಿ ಹೊಸ ಘಟಕಗಳನ್ನು ಸ್ಥಾಪಿಸುವುದನ್ನು ಕಡ್ಡಾಯಗೊಳಿಸಿದೆ.

ಸರ್ಕಾರದ ನೀತಿಯನ್ನು ಟೀಕಿಸಿರುವ ಎಐಡಿವೈಓ, 'ಸರ್ಕಾರ ಹೊಸ ಉದ್ಯೋಗ ನೀತಿಯ ಮೂಲಕ ಸ್ಥಳೀಯ ಯುವಕರಿಗೆ ಹೆಚ್ಚಿನ ಉದ್ಯೋಗವಕಾಶಗಳು ಸಿಗುತ್ತವೆ ಎಂಬ ಬಣ್ಣದ ಮಾತನ್ನು ಆಡುತ್ತಿದೆ. ಈ ನೀತಿಯಲ್ಲಿ 1 ಕೋಟಿ ಬಂಡವಾಳ ಹೂಡುವ ಉದ್ದಿಮೆದಾರರು ಕನಿಷ್ಠ ಒಂದು ಉದ್ಯೋಗ ಸೃಷ್ಟಿ ಮಾಡಬೇಕು ಎಂಬ ಷರತ್ತು ವಿಧಿಸಲಾಗಿದೆ. ಈ ಮೊದಲು 10 ಕೋಟಿ ಬಂಡವಾಳ ಹೂಡಿಕೆಗೆ ಕೇವಲ 7 ಉದ್ಯೋಗಗಳು ಸೃಷ್ಟಿಯಾಗುತ್ತಿದ್ದವು, ಈಗ 10 ಉದ್ಯೋಗಗಳು ಸೃಷ್ಟಿಯಾಗುತ್ತವೆ, ಇದು ಹಿಂದಿಗಿಂತ ಪ್ರತಿಶತ 25ರಷ್ಟು ಅಧಿಕವಾಗುತ್ತದೆ ಎಂದು ಹೇಳಲಾಗಿದೆ. ಈ ಹೊಸ ಉದ್ಯೋಗ ನೀತಿಯಿಂದ ಸುಮಾರು 7.5 ಲಕ್ಷ ಉದ್ಯೋಗಗಳು ಹೊಸದಾಗಿ ಸೃಷ್ಟಿಯಾಗುತ್ತವೆ ಎಂದೂ ರಾಜ್ಯ ಸರ್ಕಾರ ಹೇಳಿದೆ. ಇದೂ ಕೂಡ ಕೇಂದ್ರ ಸರ್ಕಾರದ ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಯ ಹುಸಿ ಭರವಸೆಯಂತೆಯೇ' ಎಂದು ಟೀಕಿಸಿದೆ.

Karnataka AIDYO Condemned states new Employment Policy

'ಮುಂದಿನ ಮೂರು ವರ್ಷಕ್ಕೆ 7.5 ಲಕ್ಷ ಉದ್ಯೋಗ ‌ಸೃಷ್ಟಿ‌ಯಾಗಬೇಕೆಂದರೆ ಸುಮಾರು 7.5 ಲಕ್ಷ ಕೋಟಿ ಬಂಡವಾಳ ಹೂಡಿಕೆ‌ಯಾಗಬೇಕು. ಈ ಹಿಂದೆ ನಡೆದ ಹೂಡಿಕೆದಾರರ ಸಮಾವೇಶಗಳಲ್ಲಿ ಕೂಡ ಲಕ್ಷಾಂತರ ಹುದ್ದೆಗಳು ಸೃಷ್ಟಿಯಾಗುತ್ತವೆ ಎಂದು ಹೇಳಿದ್ದ ಭರವಸೆಗಳು ಸುಳ್ಳಾಗಿವೆ, ನಿರೀಕ್ಷಿತ ಪ್ರಮಾಣದಲ್ಲಿ ಬಂಡವಾಳ ಹೂಡಿಕೆಯೂ ಆಗಿಲ್ಲ, ಉದ್ಯೋಗಗಳೂ ಸೃಷ್ಟಿಯಾಗಲಿಲ್ಲ. ಬದಲಿಗೆ ಇದರ ಹೆಸರಿನಲ್ಲಿ ಹೂಡಿಕೆದಾರ ಬಂಡವಾಳಗಾರರಿಗೆ ಪುಕ್ಕಟ್ಟೆಯಾಗಿ ಭೂಮಿ, ವಿದ್ಯುತ್, ನೀರು ನೀಡಿ ಜೊತೆಗೆ ತೆರಿಗೆ ವಿನಾಯಿತಿಯನ್ನೂ ಕೊಟ್ಟು ಬಂಡವಾಳಶಾಹಿಗಳು ಬೆಳೆಯಲು ಅವಕಾಶ ಮಾಡಲಾಗಿದೆ. ಈಗ ತಂದಿರುವ ಉದ್ಯೋಗ ನೀತಿಯೂ ಕೂಡ ಬಂಡವಾಳಶಾಹಿಗಳ ಬೆಳವಣಿಗೆಗೆ ದಾರಿ ಮಾಡಿಕೊಡಲಿದೆ' ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

'ಸರಕಾರಕ್ಕೆ ನಿಜವಾಗಿಯೂ ನಿರುದ್ಯೋಗಿ ಯುವಕರ ಕುರಿತು ಕಾಳಜಿ ಇದ್ದರೆ ಈಗಾಗಲೇ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಸುಮಾರು 3 ಲಕ್ಷಕ್ಕೂ ಅಧಿಕ ಹುದ್ದೆಗಳನ್ನು ಭರ್ತಿ ಮಾಡಬೇಕಿತ್ತು. ಅದಕ್ಕಾಗಿ ಒಂದು ಸಮಗ್ರವಾದ ರಚನಾತ್ಮಕವಾದ ಉದ್ಯೋಗ ನೀತಿಯನ್ನು ಅವಶ್ಯಕವಾಗಿ ತರಬೇಕಿತ್ತು. ಬದಲಿಗೆ ರಾಜ್ಯ ಸರ್ಕಾರ ಹೊಸ ಉದ್ಯೋಗ ನೀತಿಯ ಹೆಸರಿನಲ್ಲಿ ಖಾಸಗಿ ಬಂಡವಾಳ ಹೂಡಿಕೆಗೆ ಪೂರಕವಾದ ನೀತಿಯನ್ನು ಜಾರಿಗೊಳಿಸುತ್ತಾ ಯುವಜನರ ದಿಕ್ಕುತಪ್ಪಿಸುತ್ತಿದೆ' ಎಂದು ಆಕ್ರೋಶ ಹೊರಹಾಕಿದೆ.

'ಈಗಾಗಲೇ ಸರ್ಕಾರದ ಶಿಕ್ಷಣ, ಆರೋಗ್ಯ ಇನ್ನಿತರ ಇಲಾಖೆಗಳಲ್ಲಿ ಖಾಲಿ ಇರುವ ಲಕ್ಷಾಂತರ ಹುದ್ದೆಗಳನ್ನು ಸಮರೋಪಾದಿಯಲ್ಲಿ ಭರ್ತಿಮಾಡಬೇಕು. ರಾಜ್ಯದ ಯುವಜನತೆ ಈ ಕುಟಿಲ ನೀತಿಯನ್ನು ಹಿಮ್ಮೆಟ್ಟಿಸಲು ಸಂಘಟಿತ ಹೋರಾಟಕ್ಕೆ ಮುಂದಾಗಬೇಕು' ಎಂದು ಎಐಡಿವೈಓ ಕರ್ನಾಟಕ ರಾಜ್ಯ ಸಮಿತಿ ಒತ್ತಾಯಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+