ಆರ್ ಟಿ ನಗರದ ದತ್ತು ಭಾವಿ ಸುಪ್ರೀಂ ಜಸ್ಟೀಸ್
ನವದೆಹಲಿ, ಜ.3: ಬೆಂಗಳೂರಿನ ಆರ್ ಟಿ ನಗರದ ನಿವಾಸಿ, ಸುಪ್ರೀಂಕೋರ್ಟಿನ ಹಾಲಿ ನ್ಯಾಯಮೂರ್ತಿ ಹಂದ್ಯಾಲ ಲಕ್ಷ್ಮೀನಾರಾಯಣಸ್ವಾಮಿ ದತ್ತು ಅವರು ಭಾರತದ ಭಾವಿ ಚೀಫ್ ಜಸ್ಟೀಸ್!
ಹೌದು, ಈಗ Chief Justice of India ಆಗಿರುವ ಪಿ ಸದಾಶಿವಂ ಅವರ ಸೇವಾವಧಿ ಇದೇ ವರ್ಷ ಏಪ್ರಿಲ್ 26ಕ್ಕೆ ಕೊನೆಗೊಳ್ಳಲಿದೆ. ಬಳಿಕ, ಏಪ್ರಿಲ್ 27ರಿಂದ ಮುಖ್ಯ ನ್ಯಾಯಮೂರ್ತಿಗಳಾಗಿ ಜಸ್ಟೀಸ್ ಆರ್ ಎಂ ಲೋಧಾ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ. 5 ತಿಂಗಳ ಅವರ ಸೇವಾವಧಿ ಸೆ. 27 ಕ್ಕೆ ಮುಕ್ತಾಯಗೊಳ್ಳಲಿದೆ. ಅದಾದನಂತರ, ಜಸ್ಟೀಸ್ ಎಚ್ಎಲ್ ದತ್ತು ಅವರು 2015ರ ಡಿಸೆಂಬರ್ 3ರವರೆಗೆ ಕಾರ್ಯಭಾರ ನಿರ್ವಹಿಸಲಿದ್ದಾರೆ.

ಚಿಕ್ಕ-ಚೊಕ್ಕ ಕುಟುಂಬ:
ಅಂದಹಾಗೆ ಜಸ್ಟೀಸ್ ದತ್ತು ಅವರು ಬೆಂಗಳೂರಿನ ಆರ್ ಟಿ ನಗರದವರು. ಅವರ ಪತ್ನಿ ಜಿ ಗಾಯತ್ರಿ ದತ್ತು, ಪುತ್ರ ನಿತಿನ್ ದತ್ ಮತ್ತು ಮೊಮ್ಮಗ ಮಿಹಿರ್ ಆದಿತ್ಯ.
ಜಸ್ಟೀಸ್ ದತ್ತು ಅವರು 1950ರ ಡಿ. 3ರಂದು ಜನಿಸಿದರು. ಬಿಎಸ್ಸಿ- ಎಲ್ಎಲ್ಬಿ ಪದವೀಧರರಾದ ದತ್ತು 1975ರ ಅ. 23ರಂದು ವಕೀಲರಾಗಿ ನೋಂದಾಯಿತರಾದರು. ಅವರು ಮೊದಲು ವಕೀಲಿ ವೃತ್ತಿ ಆರಂಭಿಸಿದ್ದು ಬೆಂಗಳೂರಿನಲ್ಲಿ. ಸಿವಿಲ್ , ಕ್ರಿಮಿನಲ್, ಸಾಂವಿಧಾನಿಕ ಮತ್ತು ತೆರಿಗೆ ಸಂಬಂಧಿ ವ್ಯಾಜ್ಯಗಳಲ್ಲಿ ಅವರು ವಾದ ಮಾಡುತ್ತಿದ್ದರು.
ಬೆಂಗಳೂರು ಮಹಾನಗರಪಾಲಿಕೆಯ ವಕೀಲರಾಗಿದ್ದರು:
1983ರಲ್ಲಿ ಸರ್ಕಾರಿ ವಕೀಲರಾಗಿ ನೇಮಕಗೊಂಡ ಅವರು 1990ರಲ್ಲಿ ಸರ್ಕಾರಿ ಅಡ್ವೋಕೇಟ್ ಆಗಿ ನಿಯೋಜಿತರಾಗಿ 1992ರವರೆಗೆ ಕಾರ್ಯನಿರ್ವಹಿಸಿದರು. 1992ರಿಂದ 1993ವರೆಗೆ ತೆರಿಗೆ ಇಲಾಖೆಯ ಹೆಚ್ಚುವರಿ ಸ್ಥಾಯಿ ವಕೀಲರಾಗಿದ್ದ ಅವರು, ಬೆಂಗಳೂರು ಮಹಾನಗರಪಾಲಿಕೆಯ ವಕೀಲರಾಗಿಯೂ ಕೆಲಸ ಮಾಡಿದರು.
1995ರ ಡಿ. 18ರಂದು ಕರ್ನಾಟಕ ಹೈಕೋರ್ಟ್ನ ಕಾಯಂ ನ್ಯಾಯಾಧೀಶರಾಗಿ ನೇಮಕಗೊಂಡ ದತ್ತು , 2007ರ ಮೇ 18ರಂದು ಕೇರಳ ಹೈಕೋರ್ಟ್ ಮುಖ್ಯ ನ್ಯಾಯಾಧೀಶರಾದರು. ಬಳಿಕ 2008ರ ಡಿ. 17ರಂದು ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಯಾಗಿ ಬಡ್ತಿ ಪಡೆದಿದ್ದರು.
ಹಿಂದಿನ ಮೂವರು ಕನ್ನಡಿಗ ಮುಖ್ಯ ನ್ಯಾಯಮೂರ್ತಿಗಳು
1. ಇಎಸ್ ವೆಂಕಟರಾಮಯ್ಯ - 19.6.1989 - 17.12.1989
2. ಎಂ ಎನ್ ವೆಂಕಟಾಚಲಯ್ಯ - 12.2.1993 - 24.10.1994
3. ಎಸ್ ರಾಜೇಂದ್ರಬಾಬು - 2.5.2004 - 1.6.2004












Click it and Unblock the Notifications