Na D'Souza: ಕನ್ನಡದ ಹಿರಿಯ ಸಾಹಿತಿ ಡಾ ನಾ ಡಿಸೋಜ ನಿಧನ
ಆರು ದಶಕಗಳ ಕಾಲ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಕನ್ನಡದ ಖ್ಯಾತ ಹಿರಿಯ ಸಾಹಿತಿ ಡಾ. ನಾ ಡಿಸೋಜ ಅವರು ಭಾನುವಾರ ರಾತ್ರಿ ನಿಧನರಾಗಿದ್ದಾರೆ. ಕನ್ನಡ ಸಾಹಿತ್ಯ ಲೋಕಕ್ಕೆ ಡಾ. ನಾ ಡಿಸೋಜ ಅವರು ಅಪಾರ ಕೊಡುಗೆ ಕೊಟ್ಟಿದ್ದರು. ಅನಾರೋಗ್ಯ ಸಮಸ್ಯೆ ಹಿನ್ನೆಲೆಯಲ್ಲಿ ಅವರಿಗೆ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗುತ್ತಿತ್ತು.
ಭಾನುವಾರ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. ಅವರಿಗೆ 87 ವರ್ಷವಾಗಿತ್ತು. ಇನ್ನು ಡಿಸೋಜ ಅವರ ಸಾವಿಗೆ ಹಲವರು ಕಂಬನಿ ಮಿಡಿದಿದ್ದು. ಕನ್ನಡ ಸಾಹಿತ್ಯ ಲೋಕದ ಗಣ್ಯರು ಹಾಗೂ ರಾಜಕಾರಣಿಗಳು, ಕನ್ನಡಿಗರು ಸಂತಾಪ ಸೂಚಿಸಿದ್ದಾರೆ. ಡಾ. ನಾ ಡಿಸೋಜ ಅವರು ನಡೆದು ಬಂದ ದಾರಿ, ಸಾಧನೆ ಹಾಗೂ ಅಂತಿಮ ಯಾತ್ರೆಯ ವಿವರ ಇಲ್ಲಿದೆ.

ಡಾ. ನಾ ಡಿಸೋಜ ಅವರು ಮಕ್ಕಳ ಕೃತಿ ಹಾಗೂ ಕತೆಗಳನ್ನು ಬರೆಯುವ ಮೂಲಕವೇ ಫೇಮಸ್ ಆಗಿದ್ದರು. ಕನ್ನಡದಲ್ಲಿ ಮಕ್ಕಳ ಅಚ್ಚುಮೆಚ್ಚಿನ ಕತೆಗಳನ್ನು ಬರೆಯುವುದರಲ್ಲಿ ಇವರ ಹೆಸರು ಮುಂಚೂಣಿಯಲ್ಲಿ ಇರುತ್ತಿತ್ತು. ನಾ.ಡಿಸೋಜ ಅವರು ಒಟ್ಟು 37 ಕಾದಂಬರಿಗಳು, ನಾಲ್ಕು ನಾಟಕಗಳು ಹಾಗೂ ಇಪ್ಪತ್ತೆಂಟು ಮಕ್ಕಳ ಕೃತಿಗಳು ರಚಿಸಿದ್ದಾರೆ. ಇವರು ಬರೆದ ಕಾಡಿನ ಬೆಂಕಿ, ದ್ವೀಪ ಕಾದಂಬರಿಯನ್ನು ಆಧರಿಸಿ ಸಿನಿಮಾ ಮಾಡಲಾಗಿತ್ತು. ಈ ಸಿನಿಮಾಗಳಿಗೆ ರಜತಕಮಲ ಮತ್ತು ಸ್ವರ್ಣಕಮಲ ಪ್ರಶಸ್ತಿಗಳು ಬಂದಿವೆ.
ವಿವಿಧ ಭಾಷೆಗೆ ಕಥೆಗಳ ಅನುವಾದ: ಡಿಸೋಜ ಅವರ ಹಲವಾರು ಸಣ್ಣ ಕಥೆಗಳು ವಿವಿಧ ಭಾಷೆಗೆ ಅನುವಾದವಾಗಿ ಪ್ರಕಟಗೊಂಡಿವೆ.
ಕೊಂಕಣಿ, ಮಲಯಾಳಂ, ತೆಲುಗು, ಸಂಸ್ಕೃತ, ಹಿಂದಿ ಹಾಗೂ ಇಂಗ್ಲಿಷ್ ಭಾಷೆಗೂ ಇವರ ಕೃತಿಗಳು ಅನುವಾದಗೊಂಡಿವೆ. ತುಂಜಾಲು ಕಾದಂಬರಿಯು ತೆಲುಗು ಭಾಷೆಗೆ, ಪ್ರೀತಿಯೊಂದೇ ಸಾಲದೆ, ಜಲಪಾತದ ಸುತ್ತ, ಇಗರ್ಜಿ ಸುತ್ತಲಿನ ಹತ್ತು ಮನೆಗಳು, ಕಾಡಿನ ಬೆಂಕಿ ಹಾಗೂ ತಿರುವು ಸೇರಿದಂತೆ ವಿವಿಧ ಕಾದಂಬರಿಗಳು ಕೊಂಕಣಿಗೆ ಅನುವಾದಗೊಂಡಿದೆ.
ಪ್ರಶಸ್ತಿ: ಡಾ. ನಾ ಡಿಸೋಜ ಪರಿಸರ ಕಾಳಜಿ ಹಾಗೂ ಮಕ್ಕಳ ಸಾಹಿತ್ಯ ಸೇರಿದಂತೆ ಎಲ್ಲಾ ಪ್ರಕಾರಗಳ ಕೃತಿಗಳನ್ನು ಸಹ ರಚಿಸಿದ್ದರು. ಇವರು ಬರೆದಿದ್ದ ಕಿರಿ ಕಾದಂಬರಿ ಮುಳುಗಡೆಯ ಊರಿಗೆ ಬಂದವರು, 2011ರ ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲ ಸಾಹಿತ್ಯ ಪುರಸ್ಕಾರಕ್ಕೆ ಪಾತ್ರವಾಗಿತ್ತು. 2014ರ ಜನವರಿಯಲ್ಲಿ ಮಡಿಕೇರಿಯಲ್ಲಿ ಆಯೋಜಿಸಿದ್ದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಮಂಗಳೂರು ಸಂದೇಶ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಗುಲ್ವಾಡಿ ವೆಂಕಟರಾವ್ ಪ್ರಶಸ್ತಿ ಹಾಗೂ ನವದೆಹಲಿ ಕಥಾ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಇವರು ಭಾಜನರಾಗಿದ್ದಾರೆ.
ಸ್ವಗೃಹದಲ್ಲಿ ಸಾರ್ವಜನಿಕ ವೀಕ್ಷಣೆಗೆ: ಡಾ. ನಾ ಡಿಸೋಜ ಅವರ ಪಾರ್ಥಿವ ಶರೀರವನ್ನು ಸೋಮವಾರ ಮಧ್ಯಾಹ್ನದ ಮೇಲೆ ಶಿವಮೊಗ್ಗದ ಸಾಗರದ ಅವರ ಸ್ವಗೃಹದಲ್ಲಿ ಸಾರ್ವಜನಿಕ ವೀಕ್ಷಣೆಗೆ ಇಡಲಾಗುವುದು ಎಂದು ಅವರ ಪುತ್ರ ನವೀನ್ ನಾ.ಡಿಸೋಜ ಹೇಳಿದ್ದಾರೆ. ಅವರ ಸಾವಿಗೆ ಹಲವು ರಾಜಕಾರಣಿಗಳು ಹಾಗೂ ಗಣ್ಯರು ಸಂತಾಪ ಸೂಚಿಸಿದ್ದಾರೆ.












Click it and Unblock the Notifications