Kannada Hanuman Jayanti 2022: ಹನುಮ ಜಯಂತಿ ಮುಹೂರ್ತ, ಪೂಜಾ ವಿಧಿ, ಮಹತ್ವ ತಿಳಿಯಿರಿ
ಬೆಂಗಳೂರು, ಡಿಸೆಂಬರ್ 5: ಇಂದು ಡಿಸೆಂಬರ್ 5ರಂದು ಕರ್ನಾಟಕದಾದ್ಯಂತ ಶ್ರೀಹನುಮ ಜಯಂತಿಯನ್ನು ಶೃದ್ಧೆ ಹಾಗೂ ಸಂಭ್ರಮದಿಂದ ಆಚರಿಸಲಾಗುತ್ತಿದೆ. ದಕ್ಷಿಣ ಭಾರತದಲ್ಲಿ ಅದರಲ್ಲೂ ಕರ್ನಾಟಕದಲ್ಲಿ ಹನುಮ ಜಯಂತಿಯನ್ನು ಮಾರ್ಗಶೀರ್ಷ ಮಾಸದ ಶುಕ್ಲ ಪಕ್ಷದ ತ್ರಯೋದಶಿಯಂದು ಆಚರಿಸಲಾಗುತ್ತದೆ.
ಈ ದಿನವನ್ನು ಹನುಮಾನ್ ವ್ರತ ಎಂದು ಸಹ ಕರೆಯಲಾಗುತ್ತದೆ. ಈ ಬಾರಿ ಇದನ್ನು ಸೋಮವಾರ, ಡಿಸೆಂಬರ್ 5 ರಂದು ಆಚರಿಸಲಾಗುತ್ತಿದೆ. ಈ ವೃತವು ಹನುಮಂತನಿಗೆ ಸಮರ್ಪಿತವಾಗಿದೆ. ಈ ವೃತವನ್ನು ಆಚರಿಸುವವರು ಬಹಳ ಶೃದ್ಧೆಯಿಂದ ಪೂಜೆಗಳನ್ನು ನೆರವೇರಿಸುತ್ತಾರೆ.
ಹನುಮ ಮಾಲಾ ವಿಸರ್ಜನೆ: ಡಿ.5ರಂದು ಅಂಜನಾದ್ರಿಗೆ ಲಕ್ಷಾಂತರ ಭಕ್ತರ ಆಗಮನ ನಿರೀಕ್ಷೆ
ಹನುಮ ಜಯಂತಿಯ ವೃತದ ವಿಧಾನಗಳು
ಹನುಮ ಜಯಂತಿಯಂದು ವೃತಾಚರಣೆ ಮಾಡುವ ಹೆಚ್ಚಿನ ಭಕ್ತರು ಈ ದಿನ ಉಪವಾಸ ಮಾಡುತ್ತಾರೆ. ಈ ವೃತವನ್ನು ಆಚರಿಸುವರು ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿ, ಶುಭ್ರವಾದ ಕೆಂಪು ಇಲ್ಲವೇ ಹಳದಿ ಬಟ್ಟೆಯನ್ನು ಧರಿಸುತ್ತಾರೆ. ವೃತದಲ್ಲಿರುವವರು ಮೊದಲು ಗಣಪತಿಯನ್ನು ಸ್ಮರಿಸಿ ಬಳಿಕ ಹನುಮಂತನನ್ನು ಆರಾಧಿಸುತ್ತಾರೆ.
ಭಕ್ತರು ಈ ದಿನ ಹನುಮಾನ್ ಚಾಲೀಸಾ ಮತ್ತು ಹನುಮಾನ್ ಅಷ್ಟಕವನ್ನು ಪಠಿಸುತ್ತಾರೆ. ಈ ದಿನ ಸಾಸಿವೆ ಎಣ್ಣೆಯಿಂದ ನಾಲ್ಕು ಮುಖದ ದೀಪವನ್ನು ಹಚ್ಚಿ 'ಓಂ ಶ್ರೀ ರಾಮದೂತ ಹನುಮತೇ ನಮಃ ದೀಪಂ ದರ್ಶಯಾಮಿ' ಮಂತ್ರವನ್ನು ಹೇಳಬೇಕು. ಮಂತ್ರ ಪಠಣದ ಜೊತೆಗೆ ವೃತ ಮಾಡುತ್ತಿರುವ ಭಕ್ತರು ಹನುಮಂತನಿಗೆ ಸಿಂಧೂರವನ್ನು ಅರ್ಪಿಸಿ, ಸಾಸಿವೆ ಎಣ್ಣೆ, ತೆಂಗಿನಕಾಯಿ ಮತ್ತು 21 ವೀಳ್ಯದೆಲೆಗಳಿರುವ ಹಾರವನ್ನು ಅರ್ಪಿಸಬೇಕು.
ದಾಸವಾಳ ಮತ್ತು ಗುಲಾಬಿ ಹೂ ಸೇರಿದಂತೆ ಕೆಂಪು, ಕೇಸರಿ, ಹಳದಿ ಬಣ್ಣದ ಹೂಗಳನ್ನು ದೇವರಿಗೆ ಇರಿಸಿ, ಹನುಮಂತನಿಗೆ ಪ್ರಿಯವಾದ ಲಡ್ಡು, ಬಾಳೆಹಣ್ಣು, ಪೇರಲೆ ಹಣ್ಣು ಇತ್ಯಾದಿಯನ್ನು ನೈವೇದ್ಯ ಮಾಡಬೇಕು. ಇದರ ಜೊತೆ ಜೊತೆಗೆ ಹನುಮಾನ್ ಚಾಲೀಸಾ ಮತ್ತು ಸುಂದರಕಾಂಡವನ್ನು ಪಠಿಸುತ್ತಾ ರಾಮಧ್ಯಾನವನ್ನು ಮಾಡಬೇಕು. ಸಾಧ್ಯವಾದರೆ ಈ ದಿನ ಭಕ್ತರು ಆಂಜನೇಯನ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಬೇಕು.
ಉತ್ತರ ಭಾರತದದಲ್ಲಿ ಹನುಮ ಜಯಂತಿಯನ್ನು ಚೈತ್ರ ಪೂರ್ಣಿಮೆಯ ದಿನದಂದು ಆಚರಿಸಲಾಗುತ್ತದೆ. ಆದರೆ, ಕರ್ನಾಟಕದಲ್ಲಿ ಮಾರ್ಗಶೀರ್ಷ ಮಾಸದ ಶುಕ್ಲ ಪಕ್ಷ ತ್ರಯೋದಶಿಯಂದು ಶ್ರೀಹನುಮ ಜಯಂತಿಯನ್ನು ಆಚರಿಸಲಾಗುತ್ತದೆ. ಶ್ರೀಹನುಮಾನ್ ಜಯಂತಿ ಕರ್ನಾಟಕದಲ್ಲಿ ಸೋಮವಾರ ಡಿಸೆಂಬರ್ 5ರಂದು, ತಮಿಳುನಾಡಿನಲ್ಲಿ ಡಿಸೆಂಬರ್ 23ರಂದು ಸೇರಿದಂತೆ ಬೇರೆ ಬೇರೆ ಪ್ರದೇಶದಲ್ಲಿ ಬೇರೆ ಬೇರೆ ದಿನ ಆಚರಿಸಲಾಗುತ್ತದೆ. ಇನ್ನು ಈ ಬಾರಿಯ ಶ್ರೀಹನುಮಾನ್ ಜಯಂತಿ ಪೂಜಾ ಮುಹೂರ್ತ ಡಿಸೆಂಬರ್ 5ರ ಬೆಳಗ್ಗೆ 5:57ರಿಂದ ಡಿಸೆಂಬರ್ 6ರ ಬೆಳಗ್ಗೆ 6:46 ಗಂಟೆರವೆರೆಗೆ ಇರಲಿದೆ.