ಕನಕಪುರದಲ್ಲಿ ‘ಬಂಡೆ’ ಗೆಲುವು ಕಷ್ಟವಾಗುತ್ತಾ?
ಕನಕಪುರ: ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸುವ ಕ್ಷೇತ್ರಗಳ ಪೈಕಿ ಕನಕಪುರ ಮುಂಚೂಣಿಯಲ್ಲಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸ್ಪರ್ಧಿಸುವ ಕಾರಣಕ್ಕೆ ಹಾಗೂ ಸಚಿವ ಆರ್. ಅಶೋಕ್ ಅಖಾಡ ಪ್ರವೇಶ ಮಾಡಿರುವ ಹಿನ್ನೆಲೆ ರಾಜ್ಯದ ಗಮನ ಕನಕಪುರದ ಮೇಲೆ ನೆಟ್ಟಿದೆ. ಹಾಗಾದ್ರೆ ಈ ಬಾರಿ ಇಲ್ಲಿ ಗೆಲ್ಲುವುದು ಯಾರು? ತಿಳಿಯೋಣ ಬನ್ನಿ.
'ಬಂಡೆ' ಎಂದೇ ಫೇಮಸ್ ಆಗಿರುವ ಡಿಕೆ ಬ್ರದರ್ಸ್ ವಿರುದ್ಧ ಬಿಜೆಪಿ ರಣತಂತ್ರ ರೂಪಿಸಿದೆ. ಅಶೋಕ್ ಮುಂದಾಳತ್ವದಲ್ಲೇ ಕನಕಪುರ ಕೋಟೆ ಗೆಲ್ಲಲು ಬಿಜೆಪಿ ಸಿದ್ಧವಾಗಿದೆ. ಆದರೆ ಕಾಂಗ್ರೆಸ್ ಭದ್ರಕೋಟೆ ಛಿದ್ರಗೊಳಿಸಲು ಕಮಲ ಪಾಳಯ ಸಕ್ಸಸ್ ಆಗುತ್ತಾ? ಡಿ.ಕೆ. ಶಿವಕುಮಾರ್ ವಿರುದ್ಧ ಬಿಜೆಪಿ ಹೆಣೆದಿರುವ ರಣತಂತ್ರ ವರ್ಕೌಟ್ ಆಗುತ್ತಾ? ಎಂಬ ಕುತೂಹಲ ಇಡೀ ರಾಜ್ಯವನ್ನು ಕಾಡುತ್ತಿದೆ. ಆ ಬಗ್ಗೆ ಸಂಪೂರ್ಣ ಮಾಹಿತಿ ಮುಂದಿದೆ ಓದಿ.

ಡಿಕೆಶಿ ಪ್ಲಸ್ ಪಾಯಿಂಟ್ ಏನು?
ಸಿಎಂ ಸ್ಥಾನದ ಆಕಾಂಕ್ಷಿಯೂ ಆಗಿರುವ ಡಿ.ಕೆ. ಶಿವಕುಮಾರ್ ಕನಕಪುರ ಕ್ಷೇತ್ರದಿಂದ ಸತತವಾಗಿ ಗೆಲ್ಲುತ್ತಾ ಬಂದಿದ್ದು, ಈ ಬಾರಿ ಗೆದ್ದು ಮುಖ್ಯಮಂತ್ರಿ ಪಟ್ಟ ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ಹೀಗೆ ನೋಡುವುದಾದರೆ ಡಿ.ಕೆ. ಶಿವಕುಮಾರ್ ಸ್ಥಳೀಯ ಮಟ್ಟದಲ್ಲಿ ಉತ್ತಮ ಒಡನಾಟ ಹೊಂದಿದ್ದಾರೆ. ಮತ್ತೊಂದು ಕಡೆ ಡಿಕೆಶಿಗೆ ಇರುವ ದೊಡ್ಡ ಬಲ ಸಹೋದರ ಡಿ.ಕೆ. ಸುರೇಶ್. ಕಾರ್ಯಕರ್ತರ ಹಂತದಲ್ಲೂ, ಮುಖಂಡರ ಮಟ್ಟದಲ್ಲೂ ಡಿ.ಕೆ. ಸುರೇಶ್ ಉತ್ತಮ ಒಡನಾಟವನ್ನು ಹೊಂದಿದ್ದಾರೆ. ಹೀಗಾಗಿ ಚುನಾವಣೆಯಲ್ಲಿ ಗೆಲುವು ಸುಲಭವಾಗಬಹುದು ಎಂಬ ಲೆಕ್ಕಾಚಾರ ರಾಜಕೀಯ ತಜ್ಞರದ್ದು.
ಪಕ್ಷದಲ್ಲಿ ವಿರೋಧಿಗಳೇ ಇಲ್ಲ!
ಡಿ.ಕೆ. ಶಿವಕುಮಾರ್ಗೆ ಇರುವ ಮತ್ತೊಂದು ಪ್ಲಸ್ ಪಾಯಿಂಟ್ ಎಂದರೆ, ಪಕ್ಷದಲ್ಲಿ ಯಾವುದೇ ಎದುರಾಳಿ ಇಲ್ಲದೇ ಇರುವುದು. ಬಹುತೇಕ ಕ್ಷೇತ್ರಗಳಲ್ಲಿ ತಮ್ಮ ಸ್ವಂತ ಪಕ್ಷದಲ್ಲೇ ಎದುರಾಳಿಗಳನ್ನ ಇಟ್ಟುಕೊಂಡು ಅಭ್ಯರ್ಥಿಗಳು ಎಲೆಕ್ಷನ್ ಎದುರಿಸುವ ಪರಿಸ್ಥಿತಿ ಬಂದಿದೆ. ಹೀಗಿದ್ದಾಗ ಚುನಾವಣೆ ಎದುರಿಸುವುದು ಕಷ್ಟಕಷ್ಟ. ಆದರೆ ಡಿಕೆಶಿಗೆ ಅಂತಹ ಪರಿಸ್ಥಿತಿ ಇಲ್ಲ. ಕನಕಪುರ ಕಾಂಗ್ರೆಸ್ನಲ್ಲಿ ಡಿ.ಕೆ. ಶಿವಕುಮಾರ್ ಮಾತೇ ಅಂತಿಮ. ಹೀಗಾಗಿ ಪಕ್ಷದಲ್ಲಿ ಒಡಕು ಮೂಡದೆ, ಒಗ್ಗಟ್ಟಿನಿಂದ ಗೆಲುವಿಗೆ ಕಾಂಗ್ರೆಸ್ ಮುಖಂಡರು ಕೈಜೋಡಿಸುತ್ತಿದ್ದಾರೆ.
ಮತದಾರರ ಅಭಿಪ್ರಾಯ ಏನು?
ಈಗಾಗಲೇ ನಡೆದಿರುವ ಹಲವು ಸರ್ವೆಗಳನ್ನು ಗಮನಿಸಿ ಹೇಳುವುದಾದರೆ, ಕನಕಪುರ ಕ್ಷೇತ್ರದಲ್ಲಿ ಸ್ಥಳೀಯ ಮತದಾರರು ಡಿ.ಕೆ. ಶಿವಕುಮಾರ್ ಪರ ಒಲವು ಹೊಂದಿರುವುದು ಮೇಲ್ನೋಟಕ್ಕೆ ಕಾಣುತ್ತದೆ. ಅದರಲ್ಲೂ ಡಿಕೆಶಿ ಕೂಡ ಕನಕಪುರ ಮೂಲದವರೇ ಆಗಿರುವುದು ಮತ್ತೊಂದು ಪ್ಲಸ್ ಪಾಯಿಂಟ್. ಇದರ ಜೊತೆಗೆ ಪಕ್ಷ ಸಂಘಟನೆಯ ವಿಚಾರದಲ್ಲಿ ಡಿಕೆ ಬ್ರದರ್ಸ್ ಈ ಭಾಗವನ್ನ ಕಾಂಗ್ರೆಸ್ ಭದ್ರಕೋಟೆ ಮಾಡಿದ್ದಾರೆ. ಕಾಂಗ್ರೆಸ್ ಹೊರತುಪಡಿಸಿ ಜೆಡಿಎಸ್ ಮಾತ್ರ ಇಲ್ಲಿ ಫೈಟ್ ಕೊಡಲು ಸಾಧ್ಯ ಎಂಬ ಮಾತುಗಳು ಸ್ಥಳೀಯ ಮಟ್ಟದಲ್ಲಿ ಹರಿದಾಡುತ್ತಿವೆ.
ಡಿಕೆಶಿ ಮೈನಸ್ ಪಾಯಿಂಟ್ ಏನು?
ಡಿ.ಕೆ. ಶಿವಕುಮಾರ್ ಗೆಲುವಿಗೆ ಎದುರಾಗಿರುವ ಮೊದಲನೇ ಮೈನಸ್ ಪಾಯಿಂಟ್ ಆರ್. ಅಶೋಕ್ ಎನ್ನಬಹುದು. ಏಕೆಂದರೆ ಕನಕಪುರ ಕ್ಷೇತ್ರದಲ್ಲಿ ಬಿಜೆಪಿ ಯಾವುದೇ ಅಭ್ಯರ್ಥಿಯನ್ನ ಹಾಕಿದ್ದರೂ 2023ರ ವಿಧಾನಸಭೆ ಚುನಾವಣೆ ಇಷ್ಟು ರಂಗಾಗಿ ಇರುತ್ತಿರಲಿಲ್ಲ. ಆದರೆ ಸಚಿವ ಆರ್. ಅಶೋಕ್ ಎಂಟ್ರಿಯ ಪರಿಣಾಮ ಕನಕಪುರ ಕ್ಷೇತ್ರದ ಸಖತ್ ಕಲರ್ಫುಲ್ ಆಗಿದೆ. ಗೆಲುವಿಗಾಗಿ ಡಿ.ಕೆ. ಶಿವಕುಮಾರ್ ವಿರುದ್ಧ ಆರ್. ಅಶೋಕ್ ಸೆಣೆಸಾಡುವುದು ಖಚಿತ. ಇದೆಲ್ಲಾ ಡಿಕೆಶಿ ಗೆಲುವಿಗೆ ಅಡ್ಡಿ ಮಾಡುವ ಸಾಧ್ಯತೆ ಇದೆ.
ಬಿಜೆಪಿ ವರಿಷ್ಠರ ರಣತಂತ್ರ ಹೇಗಿದೆ?
ಡಿ.ಕೆ. ಶಿವಕುಮಾರ್ ಗೆಲುವಿಗೆ ಅಡ್ಡಿಯಾಗುವ 2ನೇ ಮೈನಸ್ ಪಾಯಿಂಟ್ ಎಂದರೆ ಅದು ಬಿಜೆಪಿಯ ರಣತಂತ್ರ. ಈ ಹಿಂದೆ ಖುದ್ದು ಕಾಂಗ್ರೆಸ್ ಮುಖಂಡರೇ ಆರೋಪ ಮಾಡಿದಂತೆ ಬಿಜೆಪಿಯ ಕೇಂದ್ರ ನಾಯಕರ ವಿರುದ್ಧ ಡಿಕೆ ಬ್ರದರ್ಸ್ ವಾಗ್ದಾಳಿ ನಡೆಸುತ್ತಿರುವ ಕಾರಣಕ್ಕೆ ಡಿ.ಕೆ. ಶಿವಕುಮಾರ್ ಬಿಜೆಪಿ ವರಿಷ್ಠರ ಟಾರ್ಗೆಟ್ ಆಗಿದ್ದಾರಂತೆ. ಈ ಬಾರಿ ಡಿಕೆಶಿ ಸೋಲಿಗೆ ಬಿಜೆಪಿ ವರಿಷ್ಠರು ಪಣತೊಟ್ಟು ನಿಂತಿರುವ ಕಾರಣಕ್ಕೆ ಆರ್.ಅಶೋಕ್ಗೆ 2 ಕಡೆ ಚುನಾವಣೆಗೆ ಸ್ಪರ್ಧಿಸುವಂತೆ ಬಿಜೆಪಿ ಹೈಕಮಾಂಡ್ ಸೂಚನೆ ನೀಡಿತ್ತು. ಇದು ಕೂಡ ಮಾಜಿ ಸಚಿವ ಡಿ.ಕೆ. ಶಿವಕುಮಾರ್ಗೆ ಚುನಾವಣೆಯಲ್ಲಿ ಅಡ್ಡಿ ಮಾಡಬಹುದು.
ಒಕ್ಕಲಿಗ ನಾಯಕನೇ ಡಿಕೆಶಿಗೆ ಎದುರಾಳಿ!
ಡಿ.ಕೆ. ಶಿವಕುಮಾರ್ ಗೆಲುವಿಗೆ ಅಡ್ಡಿಯಾಗುವ 3ನೇ ಮೈನಸ್ ಪಾಯಿಂಟ್ ಒಕ್ಕಲಿಗರ ಮತಗಳು. ಡಿ.ಕೆ. ಶಿವಕುಮಾರ್ ಕೂಡ ಒಕ್ಕಲಿಗರು ಹಾಗೂ ಡಿಕೆಶಿ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ಅಖಾಡಕ್ಕೆ ಎಂಟ್ರಿಯಾಗಿರುವ ಆರ್. ಅಶೋಕ್ ಕೂಡ ಒಕ್ಕಲಿಗ ಸಮುದಾಯಕ್ಕೆ ಸೇರಿದವರು. ಕನಕಪುರದಲ್ಲಿ ಒಕ್ಕಲಿಗರ ಮತಗಳೇ ಸುಮಾರು 1 ಲಕ್ಷಕ್ಕೂ ಹೆಚ್ಚಾಗಿವೆ. ಇದು ಕೂಡ ಕೆಪಿಸಿಸಿ ಅಧ್ಯಕ್ಷರಿಗೆ ಎಫೆಕ್ಟ್ ಕೊಡಬಹುದು. ಆರ್. ಅಶೋಕ್ ಎಂಟ್ರಿಯಿಂದ ಒಕ್ಕಲಿಗರ ವೋಟ್ ಒಡೆದು ಚುನಾವಣೆಯಲ್ಲಿ ಎಫೆಕ್ಟ್ ಕೊಡಬಹುದು.
ಭ್ರಷ್ಟಾಚಾರದ ಆರೋಪಗಳ ಸುರಿಮಳೆ
ಕನಕಪುರ ಕ್ಷೇತ್ರದ ಶಾಸಕರ ವಿರುದ್ಧ ಭ್ರಷ್ಟಾಚಾರದ ಆರೋಪಗಳಿವೆ. ಇದರ ಜೊತೆಗೆ ಅಕ್ರಮ ಆಸ್ತಿ ಗಳಿಕೆ ಆರೋಪವು ಡಿಕೆಶಿ ಬೆನ್ನುಬಿಡುತ್ತಿಲ್ಲ. ಬಿಜೆಪಿ ನಾಯಕರು ಇದನ್ನೇ ಚುನಾವಣೆ ಅಸ್ತ್ರ ಮಾಡಿಕೊಳ್ಳು ಸಾಧ್ಯತೆಯೂ ಇದೆ. ಸ್ಥಳೀಯ ಮಟ್ಟದಲ್ಲೂ ಈ ಬಗ್ಗೆ ಪ್ರಚಾರ ಮಾಡುವ ಕಾರ್ಯಕ್ಕೆ ಕೇಸರಿ ಪಡೆ ರಣತಂತ್ರ ರೂಪಿಸಿದಂತಿದೆ. ಈ ಮೂಲಕ ಆರ್. ಅಶೋಕ್ ಗೆಲುವು ಸುಲಭ ಮಾಡುವ ಲೆಕ್ಕಾಚಾರ ಹಾಕಿಕೊಂಡಿದೆ ಬಿಜೆಪಿ.
ಕನಕಪುರದಲ್ಲಿ ಬೀಡುಬಿಟ್ಟ ಬಿಜೆಪಿ ಟೀಂ
ಸಿದ್ದರಾಮಯ್ಯ ಸ್ಪರ್ಧಿಸುತ್ತಿರುವ ವರುಣಾ, ಜಗದೀಶ್ ಶೆಟ್ಟರ್ ಅಖಾಡಕ್ಕೆ ಇಳಿದಿರುವ ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರದ ರೀತಿಯಲ್ಲೇ ಡಿಕೆಶಿ ವಿರುದ್ಧ ಬಲೆ ಎಣೆದಿದೆ ಬಿಜೆಪಿ. ಈಗಾಗಲೇ ಆರ್. ಅಶೋಕ್ ಗೆಲುವಿಗಾಗಿ ಬಿಜೆಪಿಯ ದೊಡ್ಡ ಪಡೆಯೇ ಕನಕಪುರಕ್ಕೆ ಎಂಟ್ರಿ ಕೊಟ್ಟಾಗಿದೆ. ಡಿ.ಕೆ. ಶಿವಕುಮಾರ್ ಸೋಲು ಕಾಣಬೇಕು ಎಂಬುದೇ ಈ ತಂಡದ ಅಜೆಂಡಾ. ಹೀಗಾಗಿ ಎಲ್ಲಾ ಅಂಶಗಳು ಡಿಕೆಶಿ ಗೆಲುವಿಗೆ ಅಡ್ಡಿಯಾಗಿವೆ.
ಒಟ್ನಲ್ಲಿ ಸೋಲು ಗೆಲುವಿನ ಲೆಕ್ಕಾಚಾರ ಏನೇ ಇದ್ದರೂ ಮತದಾರ ಪ್ರಭು ಯಾವ ನಿಲುವು ಕೈಗೊಳ್ಳಲಿದ್ದಾನೆ ಎಂಬ ಅಂಶದೆ ಮೇಲೆ ಎಲ್ಲವೂ ನಿರ್ಧಾರ ಆಗಲಿದೆ. ಮೇ 10ರಂದು ವಿಧಾನಸಭಾ ಚುನಾವಣೆಯ ಮತದಾನ ನಡೆಯಲಿದ್ದು, ಮೇ 13ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಅಂದೇ ಕನಕಪುರದ ಕಿಂಗ್ ಯಾರು ಅನ್ನುವುದನ್ನ ಜನರೇ ಡಿಸೈಡ್ ಮಾಡಲಿದ್ದಾರೆ.












Click it and Unblock the Notifications