ನಟ ಕಮಲ್ಹಾಸನ್ ಹೇಳಿಕೆ ಮೂರ್ಖತನದ್ದು: ಪ್ರಮೋದ್ ಮುತಾಲಿಕ್
ಬೆಂಗಳೂರು, ನವೆಂಬರ್ 05: ನಟ ಕಮಲ್ ಹಾಸನ್ ಹಾಗೂ ಪ್ರಕಾಶ್ ರೈ ಅತ್ಯಂತ ಶ್ರೇಷ್ಠ ನಟರು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಹಿಂದೂ ಭಯೋತ್ಪಾದಕರ ಬಗ್ಗೆ ನೀಡಿರುವ ಹೇಳಿಕೆ ಮಾತ್ರ ಬಹಳ ಮೂರ್ಖತನದ್ದು ಎಂದು ಶ್ರೀ ರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ನಗರದ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಶ್ರೀ ಜಂಗಮ ಕ್ಷೇತ್ರ ಪ್ರಾರ್ಥನಾ ಮಂದಿರದಲ್ಲಿ 'ಭಾರತೀಯ ಪ್ರಜೆಗಳ ಕಲ್ಯಾಣ ಪಕ್ಷ'ದ ಉದ್ಘಾಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, "ನಟ ಕಮಲ್ ಹಾಸನ್ ಹಾಗೂ ಪ್ರಕಾಶ್ ರೈ ನಾಡು ಕಂಡ ಶ್ರೇಷ್ಟ ನಟರಲ್ಲೊಬ್ಬರು. ಆದರೆ, ಹಿಂದೂ ಉಗ್ರವಾದಿಗಳ ಬಗ್ಗೆ ನೀಡಿರುವ ಹೇಳಿಕೆ ಮಾತ್ರ ಬಹಳ ಮೂರ್ಖತನದ್ದು. ಹಿಂದೂಗಳು ಭಯೋತ್ಪಾದನೆ ಮಾಡಿದಲ್ಲಿ ದೇಶದಲ್ಲಿ ಅಲ್ಪಸಂಖ್ಯಾತ ಸಮುದಾಯಗಳು ಇದುವರೆಗೂ ಜೀವನ ನಡೆಸಲು ಆಗುತ್ತಿರಲಿಲ್ಲ," ಎಂದರು.

ಹಿಂದೂ ಎಂದೂ ಭಯೋತ್ಪಾದಕ ಆಗಲ್ಲ. ಭಯೋತ್ಪಾದನೆ ಇಲ್ಲದೆ ಶಾಂತಿಯಿಂದ ಬದುಕುತ್ತಿರುವ ಜನರು ನಮ್ಮ ಧರ್ಮದವರು ಎಂದರು.
ಈ ಬಾರಿ ಚುನಾವಣೆಗೆ ಸ್ಪರ್ಧಿಸುವುದು ಶತಃಸಿದ್ದ, ಆದರೆ ಯಾವ ಪಕ್ಷ ಎಂದು ಇದುವರೆಗೂ ಅಂತಿಮವಾಗಿಲ್ಲ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.
ದೇಶದ ಜನರು ರಾಜಕೀಯ ಪಕ್ಷಗಳು ಹಾಗೂ ರಾಜಕಾರಣಿಗಳಿಂದ ಬೇಸತ್ತು ಹೋಗಿದ್ದಾರೆ. ಅವರಲ್ಲಿ ಹೊಸ ವಿಶ್ವಾಸವನ್ನು ಮೂಡಿಸುವ ನಿಟ್ಟಿನಲ್ಲಿ ಹೊಸ ರಾಷ್ಟ್ರೀಯ ಪಕ್ಷ ಸ್ಥಾಪನೆಯಾಗಿದೆ. ಹೊಸ ಪಕ್ಷದ ಪದಾಧಿಕಾರಿಗಳು ಜನರ ವಿಶ್ವಾಸವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಿ ಎಂದರು.
ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ನೇಮಕಗೊಂಡಿರುವ ರಾಮಚಂದ್ರ ಎಸ್.ಕುಲಕರ್ಣಿ ಮಾತನಾಡಿ, "ಇದುವರೆಗೆ ದೇಶ ಮತ್ತು ರಾಜ್ಯಗಳನ್ನು ಆಳುತ್ತಾ ಬಂದಿರುವ ಹಲವಾರು ರಾಜಕೀಯ ಪಕ್ಷಗಳು ಜನಸಾಮಾನ್ಯರನ್ನು ಶೋಷಣೆಗೆ ಒಳಪಡಿಸಿವೆ. ಅವರ ಆಶೋತ್ತರಗಳಿಗೆ ಸ್ಪಂದಿಸದೇ, ಸ್ಪಂದಿಸುವ ರೀತಿಯಲ್ಲಿ ನಟನೆ ಮಾಡಿವೆ. ಈ ಹಿನ್ನೆಲೆಯಲ್ಲಿ ಇಂತಹ ಶೋಷಣೆಗೆ ಒಳಗಾದ ಜನಸಾಮಾನ್ಯರ, ದೀನ ದಲಿತರ ಶ್ರೇಯೋಭಿವೃದ್ಧಿಗೆ ಪಣ ತೊಡುವುದು ಈ ಪಕ್ಷದ ಧ್ಯೇಯೋದ್ಧೇಶವಾಗಿದೆ," ಎಂದರು.
ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನಿರಂಜನ್ ಸಿ ಜೈನ್ ಅವರು ಮಾತನಾಡಿ, "ಇದೊಂದು ರಾಷ್ಟ್ರೀಯ ಪಕ್ಷವಾಗಿದ್ದು, ಚುನಾವಣೆ ಆಯೋಗದಲ್ಲಿ ನೋಂದಣಿಯಾಗಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದು 72 ವರ್ಷಗಳು ಸಂದಿದ್ದರೂ ದೇಶ ಅಭಿವೃದ್ಧಿಯಲ್ಲಿ ಹಿನ್ನಡೆ ಅನುಭವಿಸುತ್ತಿದೆ. ಇದಕ್ಕೆ ರಾಜಕೀಯ ಇಚ್ಛಾಶಕ್ತಿಯ ಕೊರತೆಯೇ ಕಾರಣ ಎಂಬುದು ಇತಿಹಾಸದ ಪುಟಗಳನ್ನು ಕೆದಕಿ ನೋಡಿದಾಗ ಗೊತ್ತಾಗುತ್ತದೆ. ಈ ಹಿನ್ನೆಲೆಯಲ್ಲಿ ದೇಶದ ಅಭಿವೃದ್ಧಿಯ ಪರಿಕಲ್ಪನೆಯೊಂದಿಗೆ ಜನಸಾಮಾನ್ಯರ ಶ್ರೇಯೋಭಿವೃದ್ಧಿಯ ಧ್ಯೇಯದೊಂದಿಗೆ ಈ ಪಕ್ಷವನ್ನು ಆರಂಭಿಸುತ್ತಿದ್ದೇವೆ," ಎಂದು ತಿಳಿಸಿದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಕೊಳದ ಮಠದ ಶಾಂತವೀರ ಮಹಾಸ್ವಾಮೀಜಿಗಳು, ಭೀಮಪ್ಪ ಗಡದ್, ಚಿತ್ರಸಾಹಿತಿ ಸಿ ವಿ ಶಿವಶಂಕರ್, ವಿಶ್ವ ಒಕ್ಕಲಿಗರ ಸಂಸ್ಥಾನದ ಚಂದ್ರಶೇಖರ ಸ್ವಾಮೀಜಿಗಳು ಸೇರಿದಂತೆ ಹಲವು ಪ್ರಮುಖರು ಭಾಗವಹಿಸಿದ್ದರು.












Click it and Unblock the Notifications