ಕಳಸಾ-ಬಂಡೂರಿ ಹೋರಾಟ: ಉತ್ತರ ಕರ್ನಾಟಕ ಸ್ತಬ್ಧ
ಹುಬ್ಬಳ್ಳಿ, ಜುಲೈ 16: ಕಳಸಾ-ಬಂಡೂರಿ ಹೋರಾಟ ಜುಲೈ 16 ಶನಿವಾರ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ರೈತರು ಕರೆ ನೀಡಿರುವ ಬಂದ್ ಗೆ ಹುಬ್ಬಳ್ಳಿ, ಗದಗ, ಹಾಹೇರಿ ಮತ್ತು ಬೆಳಗಾವಿ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಹುಬ್ಬಳ್ಳಿಯ ಹಳೇ ಬಸ್ ನಿಲ್ದಾಣ, ಹೊಸ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಹಾಗೂ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನಾಕಾರರು ಟೈರ್ ಗೆ ಬೆಂಕಿ ಹಚ್ಚಿ ರಸ್ತೆ ತಡೆ ನಡೆಸಿದರು.[ಮತ್ತೊಂದು ರೈತ ಹೋರಾಟಕ್ಕೆ ಉತ್ತರ ಕರ್ನಾಟಕ ಸಜ್ಜು]
ಸಿಟಿ ಬಸ್ ಮತ್ತು ದೂರದ ಊರಿನ ಬಸ್ ಗಳನ್ನು ರದ್ದು ಮಾಡಲಾಗಿದೆ. ಆದರೆ ಸಾರಿಗೆ ಸಂಸ್ಥೆಯ ಸಿಬ್ಬಂದಿ ಕೆಲಸಕ್ಕೆ ಹಾಜರಾಗಿದ್ದಾರೆ. ಹುಬ್ಬಳ್ಳಿಯಲ್ಲಿ ಬಂದ್ ಪರಿಣಾಮ ಹೇಗಿತ್ತು,, ಮುಂದೆ ವಿವರಿಸಲಾಗಿದೆ.
ಪ್ರತಿಭಟನೆ ಆಕ್ರೋಶ
ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಹೋರಾಟಗಾರರು ಕಳಸಾ ಬಂಡೂರಿ ಹೋರಾಟವನ್ನು ರಾಜಕೀಯ ಪಕ್ಷಗಳು ಕೇವಲ ರಾಜಕಾರಣ ಮಾಡಿಕೊಳ್ಳಲು ಬಳಕೆ ಮಾಡಿಕೊಳ್ಳುತ್ತಿವೆ ಎಂದು ಆರೋಪಿಸಿದರು
ಶಾಲಾ ಕಾಲೇಜ್ ಬಂದ್:
ಬಂದ್ ಹಿನ್ನೆಲೆಯಲ್ಲಿ ನಗರದ ಎಲ್ಲ ಶಾಲಾ -ಕಾಲೇಜುಗಳು ಬಂದ್ ಆಗಿವೆ. ಬಸ್ ಸಂಚಾರವಿಲ್ಲದಿರುವುದರಿಂದ ವಿದ್ಯಾರ್ಥಿಗಳು ಶಾಲೆವರೆಗೂ ಬಂದು ಬಸ್ ಗಾಗಿ ಕಾಯುತ್ತಿದ್ದ ದೃಶ್ಯ ಕಂಡು ಬಂತು. ಜಿಲ್ಲಾಡಳಿತ ಶಾಲಾ-ಕಾಲೇಜುಗಳಿಗೆ ರಜೆ ಕೊಟ್ಟಿಲ್ಲ ಎಂದು ಹೇಳಿರುವುದರಿಂದ ಪಾಲಕರು ತಮ್ಮ ತಮ್ಮ ಮಕ್ಕಳನ್ನು ಸಿದ್ಧಗೊಳಿಸಿ ಕಳಿಸಿದ್ದರು. ಖಾಸಗಿ ಶಾಲಾ ವಾಹನಗಳು ಕೂಡ ವಿದ್ಯಾರ್ಥಿಗಳನ್ನು ಕರೆದೊಯ್ಯಲು ಬಂದಿರಲಿಲ್ಲ.
ಖಾಸಗಿ ವಾಹನಗಳ ಸುಗ್ಗಿ
ಬಂದ್ ಹಿನ್ನೆಲೆಯಲ್ಲಿ ಬಸ್ ಗಳು ಸಂಚರಿಸದೇ ಇರುವುದರಿಂದ ಖಾಸಗಿ ವಾಹನಗಳು ಸಾಕಷ್ಟು ದುಡಿಮೆ ಮಾಡುವಂತಾಗಿದೆ. ಆಟೋಗಳಿಗೆ ಜನರು ಮುಗಿಬೀಳುವಂತಾಗಿತ್ತು. ಟೆಂಪೋ, ಟ್ರ್ಯಾಕ್ಸ್ ಗಳೂ ಕೂಡ ಜನರನ್ನು ತಲುಪಿಸಲು ರಸ್ತೆಗಿಳಿದಿದ್ದವು. ದುಪ್ಪಟ್ಟು ಹಣ ಕೊಟ್ಟಾದರೂ ಸರಿ ತಾವು ಮೊದಲು ತಮ್ಮ ತಮ್ಮ ಸ್ಥಳಗಳಿಗೆ ತೆರಳಿದರೆ ಸಾಕು ಎಂದು ಜನರು ಖಾಸಗಿ ವಾಹನಗಳ ಮೊರೆ ಹೋಗುತ್ತಿದ್ದರು.
ಅಂಗಡಿ ಮುಂಗಟ್ಟುಗಳು ಬಂದ್
ನಗರದ ಮಾರುಕಟ್ಟೆ ಪ್ರದೇಶಗಳಾದ ದುರ್ಗದಬೈಲ್, ಕೊಪ್ಪೀಕರ ರೋಡ್, ದಾಜೀಬಾನ ಪೇಟೆಯಲ್ಲಿ ಅಂಗಡಿಗಳು ಬಾಗಿಲು ಮುಚ್ಚಿದ್ದವು. ಎಂದಿನಂತೆ 9-30 ಗೆ ತೆರೆಯಬೇಕಾಗಿದ್ದ ಅಂಗಡಿಗಳು ಇನ್ನೂ ತೆರೆದಿರಲಿಲ್ಲ.
ಸಿಬಿಟಿ ಬಿಕೋ
ನಗರದಲ್ಲಿ ಸಿಟಿ ಬಸ್ ಸಂಚಾರದ ನಿಲ್ದಾಣವಾಗಿರುವ ಸಿಬಿಟಿಯಲ್ಲಿ ಯಾವುದೇ ಬಸ್ ಇಲ್ಲದೇ ಪ್ರಯಾಣಿಕರು ತೊಂದರೆಗೊಳಗಾದರು. ಬಂದ್ ಕರೆಯು ಮೊದಲೇ ಗೊತ್ತಿದ್ದರಿಂದ ಕೆಲವರು ತಮ್ಮ ಕಚೇರಿಗಳಿಗೆ ಮೊದಲೇ ತಿಳಿಸಿ ರಜೆಯ ಸವಿ ಅನುಭವಿಸಿದರೆ, ಸರಕಾರಿ ಕಚೇರಿಗಳು ತೆರೆಯುವುದರಿಂದ ಸರಕಾರಿ ನೌಕರರು ಬಸ್ ಗಳಿಲ್ಲದೇ ಪರದಾಡುವಂತಾಯಿತು.
ಪೊಲೀಸ್ ಬಂದೋಬಸ್ತ್
ಬಂದ್ ಹಿನ್ನೆಲೆಯಲ್ಲಿ ನಗರದಲ್ಲಿ ಭಾರೀ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ನಗರದ ಹಳೇ ಬಸ್ ನಿಲ್ದಾಣ, ಹೊಸ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಮತ್ತು ಈದ್ಗಾ ಮೈದಾನದ ಬಳಿ ಭಾರೀ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ರಸ್ತೆ ತಡೆ
ವಿವಿಧ ಸಂಘಟನೆ ನೇತೃತ್ವದಲ್ಲಿ ರಸ್ತೆ ತಡೆ ನಡೆಸಲಾಯಿತು. ಸಾರಿಗೆ ಸಂಸ್ಥೆಯ ಬಸ್ ಡಿಪೋಗಳ ಹತ್ತಿರ ಪೊಲೀಸ್ ವ್ಯಾನ್ ನಿಯೋಜಿಸಲಾಗಿತ್ತು. ನಗರದಲ್ಲಿ 5 ಕಡೆ ಬಸ್ ಡಿಪೋಗಳಿವೆ. ಎಲ್ಲ ಐದೂ ಡಿಪೋಗಳಿಗೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು