ಮತ್ತೊಂದು ರೈತ ಹೋರಾಟಕ್ಕೆ ಉತ್ತರ ಕರ್ನಾಟಕ ಸಜ್ಜು
ಹುಬ್ಬಳ್ಳಿ, ಗದಗ, ಜುಲೈ, 15: ಕಳಸಾ ಬಂಡೂರಿ ಹೋರಾಟಕ್ಕೆ ಒಂದು ವರ್ಷ ತುಂಬಿದ್ದರೂ ಇನ್ನು ತಾರ್ಕಿಕ ಅಂತ್ಯ ಕಂಡಿಲ್ಲ. ಸರ್ಕಾರ ಮತ್ತು ಜನಪ್ರತಿನಿಧಿಗಳ ಮೇಲೆ ಒತ್ತಡ ಹಾಕಲು ಹೋರಾಟಗಾರರು ಜುಲೈ 16, ಶನಿವಾರ ಉತ್ತರ ಕರ್ನಾಟಕ ಬಂದ್ ಗೆ ಕರೆ ಕೊಟ್ಟಿದ್ದಾರೆ.
ರೈತ ಸಮುದಾಯ ಕರೆ ನೀಡಿರುವ ಬಂದ್ ಗೆ ಸೂಕ್ತ ಭದ್ರತೆ ನೀಡಲು ಹುಬ್ಬಳ್ಳಿ ಧಾರವಾಡ ಪೊಲೀಸರು ಸಜ್ಜಾಗಿದ್ದಾರೆ ಎಂದು ಪೊಲೀಸ್ ಕಮೀಷನರ್ ಪಾಂಡುರಂಗ ರಾಣೆ ಹೇಳಿದ್ದಾರೆ.[ಹೋರಾಟಗಾರನ ಕಣ್ಣಿನಲ್ಲಿ ಮಹದಾಯಿ ಹೋರಾಟದ ಕಥನ]

ಈ ಕುರಿತು ಒನ್ ಇಂಡಿಯಾದೊಂದಿಗೆ ಮಾತನಾಡಿದ ರಾಣೆ, ಈಗಾಗಲೇ ಭದ್ರತೆ ಕುರಿತು ಪೊಲೀಸರ ಸಭೆ ನಡೆಸಲಾಗಿದೆ ಎಂದರು. ಅವಶ್ಯವಿದ್ದೆಡೆ ಸಾಕಷ್ಟು ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗುವುದು ಎಂದರು. [ಕಳಸಾ ಬಂಡೂರಿ ಪರ ಟ್ವೀಟ್ ಅಭಿಯಾನ ಯಶಸ್ಸು]
ಬಸ್ ಇರುತ್ತಾ ?
ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ವ್ಯಾಪ್ತಿಗೆ ಬರುವ ಬಾಗಲಕೋಟೆ, ಗದಗ, ಧಾರವಾಡ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಸೂಕ್ತ ಭದ್ರತೆಯಿದ್ದಲ್ಲಿ ಬಸ್ ಓಡಿಸಲಾಗುವುದು ಎಂದು ಚೀಪ್ ಟ್ರಾಫಿಕ್ ಕಂಟ್ರೋಲರ್ ಎಸ್.ವಿ.ಹುಲ್ಯಾಳಕರ ತಿಳಿಸಿದ್ದಾರೆ.
ಒನ್ ಇಂಡಿಯಾದೊಂದಿಗೆ ಮಾತನಾಡಿದ ಹುಲ್ಯಾಳಕರ ಅವರು, ನಾಲ್ಕು ಜಿಲ್ಲೆಗಳಲ್ಲಿ ಬಂದ್ ಗೆ ಕರೆ ನೀಡಿರುವುದರಿಂದ ಬಸ್ ಸಂಚಾರದಲ್ಲಿ ವ್ಯತ್ಯಯವಾಗಬಹುದು. ಆದರೂ ನಾವು ಬಸ್ ಗಳನ್ನು ಓಡಿಸುತ್ತೇವೆ. ಆದರೆ ಸಂಸ್ಥೆಯ ಬಸ್ ಗಳಿಗೆ ಹಾನಿಯಾದರೆ ಕೂಡಲೇ ಸಂಚಾರವನ್ನು ಬಂದ್ ಮಾಡಲಾಗುವುದು. ನಮಗೆ ಸಿಬ್ಬಂದಿಯ ರಕ್ಷಣೆ ಮತ್ತು ಸಂಸ್ಥೆಗಳ ಆಸ್ತಿಗಳೇ ಮುಖ್ಯ ಎಂದರು. [ಏನಿದು ಕಳಸಾ-ಬಂಡೂರಿ ಯೋಜನೆ?]
ಶಾಲೆಗಳು ಇರುತ್ತಾ ?:
ಕಳಸಾ-ಬಂಡೂರಿ ಹೋರಾಟ ಜುಲೈ 16ಕ್ಕೆ ಒಂದು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಬಂದ್ ಕರೆ ನೀಡಿರುವುದರಿಂದ ಶಾಲಾ-ಕಾಲೇಜುಗಳು ಎಂದಿನಂತೆ ನಡೆಯುವುದು ಸಂಶಯವಾಗಿದೆ.
ಈ ಕುರಿತು ಗದಗ ಜಿಲ್ಲಾಧಿಕಾರಿ ಪ್ರಸನ್ನಕುಮಾರ ಒನ್ ಇಂಡಿಯಾದೊಂದಿಗೆ ಮಾತನಾಡಿ, ನಾವು ಕೇವಲ ನರಗುಂದ ಪಟ್ಟಣದಲ್ಲಿ ಮಾತ್ರ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದ್ದೇವೆ ಎಂದು ತಿಳಿಸಿದರು.
ಯಾವುದೇ ಸರಕಾರಿ ಕಚೇರಿಗಳಿಗೆ ರಜೆ ನೀಡಿಲ್ಲ. ಖಾಸಗಿ ಶಾಲೆಗಳು ಅವರ ಜವಾಬ್ದಾರಿಯಿಂದ ನಡೆಸಬಹುದು ಎಂದು ಹೇಳಿರುವ ಡಿಸಿ ಪರಿಸ್ಥಿತಿಯನ್ನು ನೋಡಿಕೊಂಡ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.
ಹೋರಾಟಗಾರರು ಏನನ್ನುತ್ತಾರೆ :
ರೈತ ಹೋರಾಟಗಾರ ಧಾರವಾಡ ಲಕ್ಷ್ಮಣ ಬಕ್ಕಾಯಿ ಓನ್ ಇಂಡಿಯಾದೊಂದಿಗೆ ಮಾತನಾಡಿ, ನಾವು ಶನಿವಾರ ಜುಲೈ 16 ರಂದು ಧಾರವಾಡ ಜ್ಯುಬಿಲಿ ರಸ್ತೆಯಲ್ಲಿ ಬೆಳಗಿನ ಹೊತ್ತು ಸೇರುತ್ತೇವೆ. ಅಲ್ಲಿ ಪ್ರತಿಭಟನೆಯ ರೂಪುರೇಷೆಗಳನ್ನು ಮಾಡಿಕೊಂಡು ಪ್ರತಿಭಟನೆ ಯಶಸ್ವಿಯಾಗುವಂತೆ ಧಾರವಾಡ ನಗರವನ್ನು ಬಂದ್ ಮಾಡುತ್ತೇವೆ ಎಂದು ಹೇಳಿದ್ದಾರೆ.
ಇನ್ನು ಹುಬ್ಬಳ್ಳಿಯ ರೈತ ಹೋರಾಟಗಾರರಾದ ಮಲ್ಲೇಶ್ ಆಲೇಕಾರ ಮತ್ತು ಗುರು ರಾಯನಗೌಡರ ಮಾತನಾಡಿ, ಹುಬ್ಬಳ್ಳಿ ಕಿತ್ತೂರು ಚೆನ್ನಮ್ಮ ವೃತ್ತದಲ್ಲಿ ಸಭೆ ನಡೆಸಿ ನಂತರ ಪ್ರತಿಭಟನೆಯನ್ನು ಉಗ್ರಗೊಳಿಸುತ್ತೇವೆ ಎಂದಿದ್ದಾರೆ. ಬೆಳಗಿನ ಹೊತ್ತು ಬಸ್ ಗಳನ್ನು ಬಂದ್ ಮಾಡಲಾಗುವುದು ಮತ್ತು ಸರಕಾರಿ ಕಚೇರಿಗಳಲ್ಲಿ ಕಾರ್ಯ ನಿರ್ವಹಿಸಲು ಬಿಡುವುದಿಲ್ಲ ಎಂದು ಹೇಳಿದ್ದಾರೆ.
ಯುವ ಘಟಕ ಬೆಂಬಲ
ಬಂದ್ ಗೆ ತಾಲೂಕು ಯುವ ಘಟಕ ಬೆಂಬಲ ವ್ಯಕ್ತಪಡಿಸಿದೆ. ಪ್ರಕಟಣೆ ನೀಡಿರುವ ಕಾರ್ಯದರ್ಶಿ ಮೌನೇಶ ಗಂ. ಬಡಿಗೇರ, ರೈತ ಹೋರಾಟ ಒಂದು ವರ್ಷ ಕಳೆದರೂ ನಿದ್ದೆಯಲ್ಲಿ ಮುಳುಗಿರುವ ಸರಕಾರಕ್ಕೆ ಎಬ್ಬಿಸುವ ಧರಣಿ ಇದಾಗಿದೆ ಎಂದಿದ್ದಾರೆ.
ರೈತ ಹೋರಾಟಗಾರರನ್ನು ಕೀಳು ದೃಷ್ಟಿಯಿಂದ ನೋಡುತ್ತಿರುವ ಸಿದ್ಧರಾಮಯ್ಯ ಸರಕಾರವು ಈ ಹೋರಾಟಕ್ಕೆ ಸ್ಪಂದಿಸಿ ಮಹದಾಯಿ ನದಿ ಜೋಡಣೆಯನ್ನು ಮಾಡಬೇಕು ಇಲ್ಲವಾದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆಯನ್ನು ಕೊಡಬೇಕು ಎಂದು ಆಗ್ರಹಿಸಿದ್ದಾರೆ. ಹೋರಾಟಕ್ಕೆ ಬೆಂಬಲಿಸಿ ನಾಲ್ಕೂ ಜಿಲ್ಲೆಯ ಶಾಸಕರು, ಸಚಿವರು ಸಹಿತ ರಾಜೀನಾಮೆಯನ್ನು ನೀಡಬೇಕೆಂದು ತಾಲೂಕಾ ಯುವ ಘಟಕ ಆಗ್ರಹಿಸಿದ್ದಾರೆ.












Click it and Unblock the Notifications