ಕಲಬುರ್ಗಿಯ ಯೋಧನೊಂದಿಗೇ ಬೂದಿಯಾದ ಸಾವಿನ ರಹಸ್ಯ
ಕಲಬುರಗಿ, ಅಕ್ಟೋಬರ್, 24 : ಭಾರತೀಯ ಸೇನೆಯ ಇಎಂಇ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಲಬುರಗಿ ಯೋಧ ಕಳೆದ ಕೆಲವು ದಿನಗಳ ಹಿಂದೆ ಸಾವನ್ನಪ್ಪಿದ್ದು, ಈ ವಿಚಾರವನ್ನು ಆತನ ಕುಟುಂಬದವರಿಗೆ ತಿಳಿಸದೇ ಸೇನಾಧಿಕಾರಿಗಳು ಅಂತ್ಯಸಂಸ್ಕಾರ ಮಾಡಿದ್ದಾರೆ. ಇದೀಗ ಯೋಧನ ಸಾವಿನ ಸುತ್ತ ಹಲವಾರು ಸಂಶಯಗಳು ಭುಗಿಲೆದ್ದಿದೆ.
ವಿಶ್ವನಾಥ್ ಎಸ್ ಪಾಟೀಲ್ ಎಂಬಾತ ಕಲಬುರಗಿಯವನಾಗಿದ್ದು, ಭಾರತೀಯ ಸೇನೆಯ ಇಎಂಇ ಯುದ್ಧ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದನು. ಈತ ನಾಗಲ್ಯಾಂಡಿನ ದಿಮಾಪುರ ಮತ್ತು ಉತ್ತರ ಪ್ರದೇಶದ ಮೀರೂಟ್ ಗೆ ತರಬೇತಿಗೆಂದು ಹೋದ ಸಂದರ್ಭದಲ್ಲಿ ಗಿಡಗಳ ಸಂಧಿಯಲ್ಲಿ ಶವವಾಗಿ ಪತ್ತೆಯಾಗಿದ್ದನು.[18 ವರ್ಷದ ನಂತರ ಪತ್ತೆಯಾಯ್ತು ಯೋಧನ ಶವ]

ವಿಶ್ವನಾಥ್ ಕುಟುಂಬದವರು ಆತನೊಂದಿಗೆ ಅಕ್ಟೋಬರ್ 16 ರಂದು ಕೊನೆಯದಾಗಿ ಮಾತನಾಡಿದ್ದರು. ಬಳಿಕ ಮತ್ತೆ ಫೋನ್ ಮಾಡಿದಾಗ ಆತನ ಮೊಬೈಲ್ ಸ್ವಿಚ್ ಆಫ್ ಎಂದು ಬರುತ್ತಿತ್ತು. ಇದರಿಂದ ಕಂಗಾಲಾದ ಕುಟುಂಬದವರು ಇಎಂಇ ವಿಬಾಗಕ್ಕೆ ಕರೆ ಮಾಡಿದಾಗ ನವದೆಹಲಿಗೆ ಬಂದು ಫೋಟೋ ಗುರುತಿಸಬೇಕೆಂದು ಹೇಳಿದ್ದಾರೆ.
ಆತಂಕಗೊಂಡ ವಿಶ್ವನಾಥ್ ಕುಟುಂಬದವರು ದೆಹಲಿಗೆ ಹೋದಾಗ ದೆಹಲಿ ಪೊಲೀಸರು 'ವಿಶ್ವನಾಥ್ ಅವರ ಶವವು ಮಿರ್ಜಾಪುರ ರೈಲ್ವೆ ಟ್ರಾಕ್ ಬಳಿ ದೊರಕಿತು. ಅವರು ಸಾವನ್ನಪ್ಪಿದ ಕಾರಣ ಶವ ಸಂಸ್ಕಾರ ಮಾಡಿ ಮುಗಿಸಲಾಯಿತು' ಎಂದು ನಿರ್ಲಕ್ಷ್ಯದ ಉತ್ತರ ನೀಡಿದ್ದಾರೆ ಎಂದು ವಿಶ್ವನಾಥ್ ಕುಟುಂಬದವರು ದೂರಿದ್ದಾರೆ.[ಪ್ರಾಣ ಪಣಕ್ಕಿಟ್ಟು ಹೋರಾಡಿದ ಸೈನಿಕನ ಕಥೆ ವ್ಯಥೆ]
ವಿಶ್ವನಾಥ್ ಅವರ ಪತ್ನಿಯಾದ ವಿಶಾಲಾಕ್ಷಿ, 'ಇವರ ಭಾವಚಿತ್ರಗಳನ್ನು ನೋಡಿದರೆ ಕೊಲೆಯಾದಂತೆ ಕಾಣುತ್ತಿದೆ. ಆದರೆ ಸೇನಾಧಿಕಾರಿಗಳು ವಿಶ್ವನಾಥ್ ಅಪಘಾತದಿಂದ ಮೃತಪಟ್ಟಿದ್ದಾರೆ ಎಂದು ಹೇಳುತ್ತಿದ್ದಾರೆ. ಆದರೆ ನಮಗೆ ತೋರಿಸಿದ ಅವರ ಭಾವಚಿತ್ರದಲ್ಲಿ ಎರಡು ಕಾಲುಗಳು ತುಂಡಾಗಿರುವುದು ಮತ್ತು ಬಲಗೈಯಲ್ಲಿ ತೀವ್ರವಾದ ಗಾಯಗಳಾಗಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದ್ದವು.
ವಿಶ್ವನಾಥ್ ಅವರದ್ದು ಅಪಘಾತದ ಸಾವಲ್ಲ, ಇದು ಕೊಲೆ ಎಂದು ದೆಹಲಿ ಪೊಲೀಸರಿಗೆ ದೂರು ದಾಖಲಿಸಲು ಹೋದಾಗ ದೆಹಲಿ ಪೊಲೀಸರು ಮನೆಯವರ ದೂರನ್ನು ಸ್ವೀಕರಿಸಿಲ್ಲ. ಹಾಗಾಗಿ ಈ ಪ್ರಕರಣದ ಸಮಗ್ರ ತನಿಖೆಯಾಗಬೇಕೆಂದು ಒತ್ತಾಯ ಪಡಿಸುತ್ತಿದ್ದಾರೆ'.












Click it and Unblock the Notifications