ಕಲಬುರಗಿ : ನಂದಿವನದ ಎತ್ತುಗಳಿಗೆ ಜಿಲ್ಲಾಡಳಿತದ ನೆರವು
ಕಲಬುರಗಿ, ಡಿಸೆಂಬರ್ 10 : ಕಲಬುರಗಿ ನಗರದ ಹೊರವಲಯದಲ್ಲಿರುವ ಎತ್ತುಗಳ ಆಶ್ರಯ ತಾಣ 'ನಂದಿವನ'ಕ್ಕೆ ಅಗತ್ಯ ಸೌಲಭ್ಯಗಳನ್ನು ಒದಗಿಸುವುದಾಗಿ ಜಿಲ್ಲಾಡಳಿತ ಭರವಸೆ ನೀಡಿದೆ. ನಂದಿವನದಲ್ಲಿ ಎತ್ತುಗಳಿಗೆ ಒದಗಿಸಲಾಗುತ್ತಿರುವ ಮೇವು, ಕುಡಿಯುವ ನೀರು ಮುಂತಾದ ವ್ಯವಸ್ಥೆಗೆ ಜಿಲ್ಲಾಡಳಿತ ಮೆಚ್ಚುಗೆ ವ್ಯಕ್ತಪಡಿಸಿದೆ.
ಕಲಬುರಗಿ ನಗರದಿಂದ ಸುಮಾರು 20 ಕಿ.ಮೀ.ದೂರದಲ್ಲಿ ದಿ. ಶರಣಮ್ಮ ದಿಗ್ಗಾವಿ ಮೆಮೋರಿಯಲ್ ಚಾರಿಟೆಬಲ್ ಟ್ರಸ್ಟ್ನ ಮುಖ್ಯಸ್ಥ ಬಸವರಾಜ ದಿಗ್ಗಾವಿ ಅವರು ನಂದಿವನವನ್ನು ಆರಂಭಿಸಿದ್ದಾರೆ. ಬರ ಪರಿಸ್ಥಿತಿ ಸಮಯದಲ್ಲಿ ಎತ್ತುಗಳಿಗೆ ನೆರವಾಗಲು ಆರಂಭಿಸಿರುವ ನಂದಿವನಕ್ಕೆ ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. [ಬರ ಪರಿಹಾರ : ಮುಖ್ಯಮಂತ್ರಿಗಳು ನೀಡಿದ ಸೂಚನೆಗಳು]

ನಂದಿವನ ಆಶ್ರಯತಾಣದಲ್ಲಿರುವ ಎತ್ತುಗಳಿಗೆ ಒದಗಿಸಲಾಗುತ್ತಿರುವ ಮೇವು, ಕುಡಿಯುವ ನೀರು ಮುಂತಾದ ವ್ಯವಸ್ಥೆಯನ್ನು ಪರಿಶೀಲಿಸಿದ ಜಿಲ್ಲಾಧಿಕಾರಿಗಳು ಬಸವರಾಜ ದಿಗ್ಗಾವಿ ಅವರ ಕಾರ್ಯವನ್ನು ಶ್ಲಾಘಿಸಿದರು. 'ಇದು ಉತ್ತಮ ಕಾರ್ಯವಾಗಿದ್ದು, ಇಂತಹ ಕಾರ್ಯಗಳಿಗೆ ಜಿಲ್ಲಾಡಳಿತ ಸಹಕಾರ ಮತ್ತು ಪ್ರೋತ್ಸಾಹ ನೀಡಲಿದೆ. ಇಂತಹ ಪ್ರಯತ್ನ ಇತರ ಜಿಲ್ಲೆಗಳಿಗೂ ಮಾದರಿಯಾಗಬೇಕು' ಎಂದರು. [ರಾಜ್ಯದ 98 ಬರಪೀಡಿತ ತಾಲೂಕುಗಳ ಪಟ್ಟಿ]
'ಆಶ್ರಯತಾಣದಲ್ಲಿರುವ ಎತ್ತುಗಳಿಗೆ ಅನುಕೂಲವಾಗುವಂತೆ 1 ಕೆ.ಜಿ. ಮೇವನ್ನು 3 ರೂ. ಸಹಾಯಧನದ ದರದಲ್ಲಿ ನೀಡಲು ಕ್ರಮ ಕೈಗೊಳ್ಳಲಾಗುವುದು. ಎತ್ತುಗಳಿಗೆ ಯಾವುದೇ ರೋಗ ಬಾಧೆ ತಗುಲದಂತೆ ಲಸಿಕೆ ನೀಡಲು ಮತ್ತು ಎತ್ತುಗಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಇಬ್ಬರು ಪಶುವೈದ್ಯರನ್ನು ಶಾಶ್ವತವಾಗಿ ನಿಯೋಜಿಸಲಾಗುತ್ತದೆ' ಎಂದು ಜಿಲ್ಲಾಧಿಕಾರಿಗಳು ಭರವಸೆ ನೀಡಿದರು.

1050 ಎತ್ತುಗಳಿವೆ : ಸುಮಾರು 18 ಎಕರೆ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ನಂದಿವನದಲ್ಲಿ ಸದ್ಯ 1050 ಎತ್ತುಗಳು, 500 ರೈತರಿದ್ದಾರೆ. ಎತ್ತುಗಳಿಗೆ ಕಬ್ಬಿನ ಮೇವು ಹಾಗೂ ನೀರು ಪೂರೈಸಲಾಗುತ್ತಿದೆ. ಎತ್ತುಗಳೊಂದಿಗೆ ಬಂದಿರುವ ರೈತರಿಗೂ ಊಟದ ವ್ಯವಸ್ಥೆ ಮಾಡಲಾಗಿದೆ.
40 ಮೇವು ಬ್ಯಾಂಕ್ ಸ್ಥಾಪನೆ : 'ಕಲಬುರಗಿ ಜಿಲ್ಲೆಯಲ್ಲಿ ಬರಪರಿಸ್ಥಿತಿ ಇದ್ದು, ಜಾನುವಾರುಗಳಿಗೆ ಅನುಕೂಲವಾಗಲು 40 ಮೇವು ಬ್ಯಾಂಕ್ಗಳನ್ನು ಸ್ಥಾಪಿಸಲಾಗಿದೆ. ರೈತರ ಬೇಡಿಕೆ ಆಧರಿಸಿ ಗೋಶಾಲೆ ಪ್ರಾರಂಭಿಸಲು ಜಿಲ್ಲಾಡಳಿತ ನಿರ್ಧರಿಸಿದೆ' ಎಂದು ವಿಪುಲ್ ಬನ್ಸಲ್ ಹೇಳಿದ್ದಾರೆ.













Click it and Unblock the Notifications