ಬಿಟ್ ಕಾಯಿನ್ ಪ್ರಕರಣದಲ್ಲಿ ಸಿಎಂ ಮಗ ಇದ್ದಾರೆ ಅನ್ನೋದು ಸರಿಯಲ್ಲ: ಈಶ್ವರಪ್ಪ!
ಬೆಂಗಳೂರು, ನ. 08: ರಾಜ್ಯದಲ್ಲಿ ಬಿಟ್ಕಾಯಿನ್ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಬಿಟ್ಕಾಯಿನ್ ದಂಧೆಯಲ್ಲಿ ರಾಜ್ಯದ ಪ್ರಭಾವಿಗಳು ಭಾಗಿಯಾಗಿದ್ದಾರೆ ಎಂಬ ಆರೋಪಗಳನ್ನು ವಿಪಕ್ಷಗಳ ನಾಯಕರು ಮಾಡುತ್ತಿದ್ದಾರೆ. ಈ ಬಗ್ಗೆ ಆಡಳಿತ ಪಕ್ಷದವರು ಕೂಡ ತಮ್ಮ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಬಿಟ್ಕಾಯಿನ್ ವಿಚಾರ ಇದೀಗ ರಾಜ್ಯದಲ್ಲಿ ಅತ್ಯಂತ ದೊಡ್ಡ ಚರ್ಚೆಯ ವಿಷಯವಾಗಿದೆ. ಈ ಬಗ್ಗೆ ಆರೋಪ-ಪ್ರತ್ಯಾರೋಪಗಳು ಮುಂದುವರೆದಿವೆ. ಇದೇ ಸಂದರ್ಭದಲ್ಲಿ ಸಂಪುಟ ಸಭೆಯಲ್ಲಿ ಭಾಗವಹಿಸುವ ಮೊದಲು ವಿಧಾನಸೌಧದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಮಹತ್ವದ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಬಿಟ್ಕಾಯಿನ್ ಪ್ರಕರಣವನ್ನು ಇಡಿ ಹಾಗೂ ಸಿಐಡಿಗೆ ವಹಿಸಲಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆಗ್ರಹಿಸಿದ್ದರು. ಈ ಬಗ್ಗೆ ಮಾತನಾಡಿದ್ದ ಅವರು, "ಬಿಟ್ಕಾಯಿನ್ ಪ್ರಕರಣದಲ್ಲಿ ಕಾಂಗ್ರೆಸ್ನವರಿದ್ದಾರೋ, ಬಿಜೆಪಿಯವರು ಇದ್ದಾರೋ ಗೊತ್ತಿಲ್ಲ." ಎಂದು ಹೇಳುವ ಮೂಲಕ ಗಂಭೀರ ಆರೋಪ ಮಾಡಿದ್ದರು. ಬಳಿಕ ಬಿಟ್ಕಾಯಿನ್ ದಂಧೆಯಲ್ಲಿ ಪ್ರಭಾವಿಗಳು ಶಾಮೀಲಾಗಿದ್ದಾರೆ ಎಂಬ ಗಂಭೀರ ಆರೋಪವನ್ನು ಎಸ್ಡಿಪಿಐ ಮಾಡಿತ್ತು. ಹಾಗೆ ಕಾಂಗ್ರೆಸ್ ನಾಯಕರು ಕೂಡ ಬಿಟ್ಕಾಯಿನ್ ಪ್ರಕರಣದ ಬಗ್ಗೆ ಆರೋಪಗಳನ್ನು ಮಾಡಿದ್ದರು. ಇದೀಗ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಅವರೂ ಈ ಬಗ್ಗೆ ಮಾತನಾಡಿದ್ದಾರೆ.
ಬಿಟ್ಕಾಯಿನ್ ದಂಧೆಯಲ್ಲಿ ಸಿಎಂ ಮಗ ಇದ್ದಾರಾ?
ಬಿಟ್ಕಾಯಿನ್ ಪ್ರಕರಣದ ಕುರಿತು ವಿಧಾನಸೌಧದಲ್ಲಿ ಮಾತನಾಡಿರುವ ಕೆ.ಎಸ್. ಈಶ್ವರಪ್ಪ, "ಬಿಟ್ಕಾಯಿನ್ ದಂಧೆಯಲ್ಲಿ ಅವರಿದ್ದಾರೆ, ಇವರಿದ್ದಾರೆ ಅನ್ನೋದು ಸರಿಯಲ್ಲ. ಊಹೆಗಳ ಮೇಲೆ ಮಾತನಾಡುವುದು ಬೇಡ. ಸಿಎಂ ಮಗ ಇದ್ದಾರೆ, ಅವರಿದ್ದಾರೆ ಅನ್ನೋದು ಗೊತ್ತಿದ್ಯಾ?. ಸಾರ್ವಜನಿಕವಾಗಿ ಇದು ಬೇರೆ ಮೆಸೇಜ್ ರವಾನಿಸುತ್ತದೆ. ಆ ರೀತಿ ಊಹಾಪೋಹದ ಮಾತು ಸರಿಯಲ್ಲ. ತನಿಖೆ ನಡೆಯುತ್ತಿದೆ, ಸತ್ಯಾಂಶ ಹೊರಗೆ ಬರಲಿದೆ. ಕಾಂಗ್ರೆಸ್ ನಾಯಕರು ಆರೋಪ ಮಾಡಬಹುದು. ನಮ್ಮ ಗೃಹ ಸಚಿವರು ಹೇಳಿಲ್ಲವೆ? ಕಾಂಗ್ರೆಸ್ ಪಕ್ಷವದರು ಇರಬಹುದು ಅಂತಾ. ಈಗ ಅದೆಲ್ಲ ಮಾತುಕತೆಗಳು ಬೇಡ" ಎಂದು ಪ್ರತಿಕ್ರಿಯೆ ಕೊಟ್ಟಿದ್ದಾರೆ. ಜೊತೆಗೆ ಮೇಕೆದಾಟು ಯೋಜನೆಗೆ ಕಾಂಗ್ರೆಸ್ ಪಾದಯಾತ್ರೆ ವಿಚಾರಕ್ಕೂ ಈಶ್ವರಪ್ಪ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಕಾಂಗ್ರೆಸ್ ಪಾದಯಾತ್ರೆಗೆ ನಮ್ಮ ಅಭ್ಯಂತರವಿಲ್ಲ
ಮೇಕೆದಾಟು ಯೋಜನೆ ಜಾರಿಯಾಗಬೇಕು ಎಂದು ರಾಜ್ಯದ ಪ್ರತಿಯೊಬ್ಬರ ಆಪೇಕ್ಷೆಯಿದೆ. ಅದನ್ನು ಕಾನೂನು ಬದ್ಧವಾಗಿ ಮಾಡಲೇಬೇಕು. ನಾವು ಮಾಡಿಯೇ ತೀರುತ್ತೇವೆ. ಕಾಂಗ್ರೆಸ್ ನಾಯಕರಿಗೆ ಈಗ ಮೇಕೆದಾಟು ನೆನಪಾಗಿದೆ. ಮೇಕೆದಾಟು ಮಾಡಲ್ಲ ಅಂತ ಯಾರು ಹೇಳಿದ್ದರು? ಪ್ರತಿಯೊಂದರಲ್ಲೂ ರಾಜಕಾರಣ ಮಾಡಬಾರದು. ನೀರಿನ ವಿಚಾರದಲ್ಲಿ ರಾಜಕಾರಣ ಬೇಡ. ಕಾಂಗ್ರೆಸ್ ಪಾದಯಾತ್ರೆಗೆ ನಮ್ಮ ಅಭ್ಯಂತರವಿಲ್ಲ" ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿಕೆ ಕೊಟ್ಟಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ?
ಇನ್ನು ರಾಜ್ಯ ಬಿಜೆಪಿ ಅಧ್ಯಕ್ಷರ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಅವರು, "ರಾಜ್ಯ ಚುನಾವಣಾ ಆಯೋಗ ದಿನಾಂಕ ಪ್ರಕಟಿಸಿತ್ತು. ಅದಕ್ಕೆ ಉನ್ನತ ಮಟ್ಟದ ಸಮಿತಿ ಮಾಡಿದ್ದೇವೆ. ಸಮಿತಿ ಡಿಲಿಮಿಟೇಶನ್ ಕೊಡಬೇಕು, ಅವರು ಯಾವಾಗ ವರದಿ ಕೊಡ್ತಾರೊ? ಆಗ ನಾವು ಚುನಾವಣೆ ಮಾಡುತ್ತೇವೆ. ಜೊತೆಗೆ ಈಗ ಬಿಜೆಪಿ ರಾಜ್ಯಾಧ್ಯಕ್ಷರನ್ನು ಬದಲಾವಣೆ ಮಾಡುವ ಯಾವುದೇ ವಿಚಾರವಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷರಾಗಿ ನಳಿನ್ ಕುಮಾರ್ ಕಟೀಲ್ ಬಂದ ನಂತರ ನಾವು ಚುನಾವಣೆಗಳನ್ನು ಗೆದ್ದಿದ್ದೇವೆ. ಯಾರೋ ಕೆಲವರು ಬದಲಾವಣೆ ಎಂದು ಮಾತನಾಡಿಕೊಳ್ಳುತ್ತಿರಬಹುದು. ಆದರೆ ಅವರೇ ಮುಂದುವರಿಯುತ್ತಾರೆ. ಮುಂದಿನ ಚುನಾವಣೆ ಅವರ ಮಾರ್ಗದಲ್ಲೇ ಹೋಗುತ್ತೇವೆ." ಎಂದು ಈಶ್ವರಪ್ಪ ಹೇಳಿದ್ದಾರೆ.
Recommended Video
ಅರುಣ್ ಸಿಂಗ್ ಭೇಟಿಗೆ ವಿಶೇಷ ಅರ್ಥ ಕಲ್ಪಿಸುವುದ ಬೇಡ!
ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರು ರಾಜ್ಯಕ್ಕೆ ಬರುತ್ತಿರುವುದು ಇದೇ ಮೊದಲಲ್ಲ. ಹೀಗಾಗಿ ಅವರ ರಾಜ್ಯ ಭೇಟಿಗೆ ವಿಶೇಷ ಅರ್ಥ ಕಲ್ಪಿಸುವುದು ಬೇಡ. ಪಕ್ಷ ಸಂಘಟನೆ, ಮುಂದಿನ ಚುನಾವಣೆಯ ಬಗ್ಗೆ ಚರ್ಚೆ ಆಗಲಿದೆ. ಅದನ್ನು ಬಿಟ್ಟು ಬೇರೆನೂ ಚರ್ಚೆ ಆಗುವುದಿಲ್ಲ. ಜೊತೆಗೆ ವಿಧಾನಪರಿಷತ್ ಚುನಾವಣೆಗೆ ಪಕ್ಷ ಸಿದ್ಧತೆ ನಡೆಸಿದೆ. ಆ ಬಗ್ಗೆಯೂ ಚರ್ಚೆ ಆಗಲಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಅವರು ಅರುಣ್ ಸಿಂಗ್ ಭೇಟಿಯ ಬಗ್ಗೆ ಮಾತನಾಡಿದ್ದಾರೆ.