ನ್ಯಾ. ಜಸ್ವಂತ್ ಸಿಂಗ್ ಕರ್ನಾಟಕದ ಹೊಸ ಸಿಜೆ?
ಬೆಂಗಳೂರು ಮೇ 13. ಒಡಿಶಾ ಹೈಕೋರ್ಟ್ ನಲ್ಲಿ ಹಿರಿಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸುತ್ತಿರುವ ನ್ಯಾ. ಜಸ್ವಂತ್ ಸಿಂಗ್ ಕರ್ನಾಟಕ ಹೈಕೋರ್ಟ್ ಹೊಸ ಮುಖ್ಯ ನ್ಯಾಯಮೂರ್ತಿಯಾಗುವ ಸಾಧ್ಯತೆ ಇದೆ.
ಇದೇ ಜುಲೈ 2ರಂದು ಕರ್ನಾಟಕ ಹೈಕೋರ್ಟ್ ನ ಹಾಲಿ ಸಿಜೆ ರಿತುರಾಜ್ ಅವಸ್ಥಿ ಅವರು ಸೇವಾವಧಿ ಪೂರೈಸಿ ನಿವೃತ್ತರಾಗಲಿರುವ ಹಿನ್ನೆಲೆಯಲ್ಲಿ ಆ ಸ್ಥಾನದ ಉತ್ತರಾಧಿಕಾರಿಯಾಗಿ ಒಡಿಶಾ ಹೈಕೋರ್ಟ್ನಲ್ಲಿ ಸೇವೆ ಸಲ್ಲಿಸುತ್ತಿರುವ ನ್ಯಾ. ಜಸ್ವಂತ್ ಸಿಂಗ್ ನೇಮಕಗೊಳ್ಳಲಿದ್ದಾರೆ.
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ಕೊಲಿಜಿಯಂ ಈ ಬಗ್ಗೆ ಅಧಿಕೃತವಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಿದೆ. ಆನಂತರ ನಿಯಮದಂತೆ ಕಾನೂನು ಇಲಾಖೆ ಆ ಪ್ರಸ್ತಾವನೆಯನ್ನು ರಾಷ್ಟ್ರಪತಿ ಭವನಕ್ಕೆ ಕಳುಹಿಸಲಿದ್ದು, ರಾಷ್ಟ್ರಪತಿಗಳು ತಮ್ಮ ಸಂವಿಧಾನದತ್ತ ಅಧಿಕಾರ ಬಳಸಿ ಕರ್ನಾಟಕಕ್ಕೆ ಹೊಸ ಸಿಜೆಯನ್ನು ನೇಮಕ ಮಾಡಲಿದ್ದಾರೆ. ಸೇವಾ ಹಿರಿತನ ಆಧರಿಸಿ ಈ ನೇಮಕ ಮಾಡಲಾಗುವುದು.

ನ್ಯಾ.ಜಸ್ವಂತ್ ಸಿಂಗ್ ಹಿನ್ನೆಲೆ:
1961 ಫೆ.23ರಂದು ರೋಟಕ್ ನಲ್ಲಿ ಜನಿಸಿದ ಜಸ್ವಂತ್ ಸಿಂಗ್ ಝರಿಪಾನಿಯ ಓಕ್ ಗ್ರೂವ್ ಶಾಲೆ ಮತ್ತು ಮಸ್ಸೂರಿಯ ಮಾದರಿ ಶಾಲೆಗಳಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಪೂರ್ಣಗೊಳಿಸಿದರು. 1980ರಲ್ಲಿ ಕಲಾ ಪದವಿಯನ್ನು ಪಡೆದ ನಂತರ ಅವರು ರೋಟಕ್ ನ ಮಹರ್ಷಿ ದಯಾನಂದ ವಿಶ್ವವಿದ್ಯಾಲಯದಿಂದ ಕಾನೂನು ಮತ್ತು ಮಾಸ್ಟರ್ ಆಫ್ ವ್ಯವಹಾರಿಕ ಆಡಳಿತ ಪದವಿಯನ್ನು ಪಡೆದರು.

ಸಿರ್ಸಾ ಜಿಲ್ಲೆಯಲ್ಲಿ 1986ರಲ್ಲಿ ವಕೀಲಿಕೆ ಆರಂಭಿಸಿದರು. 1988ರಲ್ಲಿ ಚಂಡೀಗಢಕ್ಕೆ ಸ್ಥಳಾಂತರಗೊಂಡ ಅವರು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನಲ್ಲಿ ವಕೀಲಿಕೆ ಆರಂಭಿಸಿದರು. 1991ರಿಂದ ಹೈಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕವಾಗುವವರೆಗೆ ಅವರು ಅಸಿಸ್ಟೆಂಟ್ ಅಡ್ವೊಕೇಟ್ ಜನರಲ್, ಡೆಪ್ಯೂಟಿ ಅಡ್ವೊಕೇಟ್ ಜನರಲ್, ಸೀನಿಯರ್ ಅಡ್ವೊಕೇಟ್ ಜನರಲ್ ಮತ್ತು ಅಡ್ವೊಕೇಟ್ ಜನರಲ್ ಆಗಿ ನಾನಾ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದರು. 2007ರ ಡಿ.7ರಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದರು. 2021ರ ಅಕ್ಟೋಬರ್ 8ರಂದು ನ್ಯಾ. ಜಸ್ವಂತ್ ಸಿಂಗ್ ಅವರನ್ನು ಪಂಜಾಬ್ ಮತ್ತು ಹರಿಯಾಣನಿಂದ ಒಡಿಶಾ ಹೈಕೋರ್ಟ್ ಗೆ ವರ್ಗಾವಣೆ ಮಾಡಲಾಗಿತ್ತು. ಅಂದಿನಿಂದ ಅವರು ಅಲ್ಲಿಯೇ ಸೇವೆ ಸಲ್ಲಿಸುತ್ತಿದ್ದಾರೆ.












Click it and Unblock the Notifications