ಯಡಿಯೂರಪ್ಪ ಕಾಲದಲ್ಲೇ ಜಿಂದಾಲ್ಗೆ ಭೂಮಿ : ಕೆ.ಜೆ.ಜಾರ್ಜ್
ಬೆಂಗಳೂರು, ಜೂನ್ 14 : 'ಯಡಿಯೂರಪ್ಪ ಡಿಸಿಎಂ ಆಗಿದ್ದ ವೇಳೆ ಜಿಂದಾಲ್ಗೆ 2 ಸಾವಿರ ಎಕರೆ ಭೂಮಿಯನ್ನು ನೀಡಲು ಆದೇಶ ಮಾಡಿದ್ದರು. ಈಗ ಅವರೇ ಪ್ರತಿಭಟನೆ ನಡೆಸುತ್ತಿದ್ದಾರೆ' ಎಂದು ಕೈಗಾರಿಕಾ ಸಚಿವ ಕೆ.ಜೆ.ಜಾರ್ಜ್ ಆರೋಪ ಮಾಡಿದರು.
ಶುಕ್ರವಾರ ಬೆಂಗಳೂರಿನಲ್ಲಿ ಮಾತನಾಡಿದ ಸಚಿವರು, 'ನಾವೇನು ಹೊಸದಾಗಿ ಆದೇಶ ಮಾಡುತ್ತಿಲ್ಲ. ಈ ಹಿಂದೆ ಯಡಿಯೂರಪ್ಪ ಅಧಿಕಾರದಲ್ಲಿದ್ದಾಗ ಈ ಯೋಜನೆಗೆ ಚಾಲನೆ ಸಿಕ್ಕಿದ್ದು, ಈಗ ಅವರೇ ವಿರೋಧ ಮಾಡಿದರೆ ಹೇಗೆ?' ಎಂದು ಪ್ರಶ್ನೆ ಮಾಡಿದರು.
'ಯಡಿಯೂರಪ್ಪ ಹಿಂದೆ ಡಿಸಿಎಂ ಆಗಿದ್ದ ವೇಳೆಯೇ 2 ಸಾವಿರ ಎಕರೆ ಭೂಮಿಯನ್ನು ಜಿಂದಾಲ್ ಕಂಪನಿಗೆ ನೀಡಿ ಎಂದು ಆದೇಶ ಮಾಡಿದ್ದರು. ಈಗ ಅವರೇ ಇದರ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಯಡಿಯೂರಪ್ಪ ಕಾಲದಲ್ಲಿಯೇ ಜಿಂದಾಲ್ಗೆ ಭೂಮಿ ನೀಡುವ ವಿಚಾರಕ್ಕೆ ಚಾಲನೆ ಸಿಕ್ಕಿತ್ತು' ಎಂದು ಜಾರ್ಜ್ ಹೇಳಿದರು.

'ಜಿಂದಾಲ್ಗೆ ಭೂಮಿ ನೀಡುವ ವಿಚಾರವನ್ನು ಮರು ಪರಿಶೀಲನೆ ಮಾಡುತ್ತೇವೆ. ಸಾರ್ವಜನಿಕ ವಲಯದಲ್ಲಿ ಗೊಂದಲ ಉಂಟಾದ ಕಾರಣ ಮರು ಪರಿಶೀಲನೆ ಮಾಡುತ್ತಿದ್ದೇವೆ. ಪ್ರತಿಪಕ್ಷಗಳ ಒತ್ತಡದಿಂದಾಗಿ ಅಲ್ಲ' ಎಂದು ಕೆ.ಜೆ.ಜಾರ್ಜ್ ಸ್ಪಷ್ಟಪಡಿಸಿದರು.
ಜಿಂದಾಲ್ ಕಂಪನಿಗೆ ಕರ್ನಾಟಕ ಸರ್ಕಾರ 3,667 ಎಕರೆ ಭೂಮಿ ನೀಡಿರುವುದನ್ನು ಖಂಡಿಸಿ ಪ್ರತಿಪಕ್ಷ ಬಿಜೆಪಿ ಅಹೋರಾತ್ರಿ ಧರಣಿ ಆರಂಭಿಸಿದೆ. ಎರಡು ದಿನಗಳ ಕಾಲ ನಡೆಯುವ ಧರಣಿಯಲ್ಲಿ ಶಾಸಕರು, ಸಂಸದರು ಮತ್ತು ವಿಧಾನ ಪರಿಷತ್ ಸದಸ್ಯರು ಪಾಲ್ಗೊಂಡಿದ್ದಾರೆ.
ಬೆಂಗಳೂರಿನ ಆನಂದರಾವ್ ವೃತದಲ್ಲಿ ಅಹೋರಾತ್ರಿ ಧರಣಿ ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆಯುತ್ತಿದೆ.












Click it and Unblock the Notifications