ಜೆಡಿಎಸ್ ಏಕಾಂಗಿ ಹೋರಾಟ; ಕಣ್ಣೀರಿಟ್ಟ ದೊಡ್ಡಗೌಡ್ರು
ಬೆಂಗಳೂರು, ಅಕ್ಟೋಬರ್ 26: ಮುಂಬರುವ ಲೋಕಸಭಾ ಚುನಾವಣೆಗೆ ಜಾತ್ಯಾತೀತ ಜನತಾ ದಳ ಸಿದ್ಧತೆ ಆರಂಭಿಸಿದೆ. ರಾಜ್ಯದ ಎಲ್ಲ 28 ಲೋಕಸಭಾ ಕ್ಷೇತ್ರಗಳಲ್ಲೂ ಜೆಡಿಎಸ್ ಸ್ಪರ್ಧಿಸುತ್ತದೆ. ಆದರೆ ಯಾವುದೇ ಕಾರಣಕ್ಕೂ ಬಿಜೆಪಿ ಅಥವಾ ಕಾಂಗ್ರೆಸ್ ಜತೆಗೆ ಅದು ಮೈತ್ರಿ ಮಾಡಿಕೊಳ್ಳುವುದಿಲ್ಲ.
ಇನ್ನು, ರಾಷ್ಟ್ರೀಯ ಮಟ್ಟದ ರಾಜಕೀಯ ಲೆಕ್ಕಾಚಾರದಲ್ಲಿ ಕೇರಳದಲ್ಲಿ ಎಡಪಕ್ಷಗಳ ಜತೆಗಿನ ಮೈತ್ರಿ ಮುಂದುವರಿಯುತ್ತದೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕಕ್ಕೆ ಪ್ರಥಮ ಆದ್ಯತೆ. ನಂತರ ಕೇರಳ. ಉಳಿದ ರಾಜ್ಯಗಳಲ್ಲಿ ಸ್ಪರ್ಧೆ ಕುರಿತು ಸಮಾಲೋಚನೆ ಆಗಬೇಕಿದೆ.
ಯಾವುದೇ ನಿಂದನೆಗೆ ಕುಗ್ಗುವುದಿಲ್ಲ. ಸಾಮಾನ್ಯ ಜನರ ಶಕ್ತಿಯಾಗಿ ಪಕ್ಷ ಹೊರಹೊಮ್ಮಲಿದೆ. ಲೋಕಸಭೆ ಚುನಾವಣೆಯಲ್ಲಿ ಒಟ್ಟಾರೆಯಾಗಿ ಪಕ್ಷದ ಸಾಮರ್ಥ್ಯ ಸಾಬೀತುಪಡಿಸಲು ಪಣ ತೊಡಲಾಗಿದೆ. ಇದು ನಗರದ ಅರಮನೆ ಮೈದಾನದಲ್ಲಿ ಗುರುವಾರ ಹಾಗೂ ಶುಕ್ರವಾರ ಆಯೋಜಿಸಿದ್ದ ಜೆಡಿಎಸ್ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಕೇಳಿಬಂದ ಜೆಡಿಎಸ್ ನಾಯಕರ ಮಾತುಗಳು.

ಮತ್ತೆ ಕಣ್ಣೀರಿಟ್ಟ ದೇವೇಗೌಡರು
ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ದೇವೇಗೌಡರು ಭಾವೋದ್ವೇಗಕ್ಕೆ ಒಳಗಾದರು. ನಾನು ಅಧಿಕಾರಕ್ಕಾಗಿ ಅಥವಾ ನನ್ನ ಪಕ್ಷದ ಉದ್ಧಾರಕ್ಕಾಗಿ ರಾಜಕಾರಣ ಮಾಡುತ್ತಿಲ್ಲ. ದೇಶದ ಪರಿಸ್ಥಿತಿ ನೋಡಿದರೆ ಆತಂಕವಾಗುತ್ತದೆ. ಆದರೆ, ನಾನು ಏನೇ ಮಾತನಾಡಿದರೂ ಅದಕ್ಕೆ ಬೇರೆ ಬಣ್ಣ, ಅರ್ಥ ಕೊಡುತ್ತಾರೆ. ನಾನು ಅನುಭವಿಸಿರುವ ಮಾನಸಿಕ ಯಾತನೆ ಯಾರಿಗೂ ಬೇಡ ಎಂದು ಕಣ್ಣೀರಿಟ್ಟರು.

ನರೇಂದ್ರ ಮೋದಿ ಹೆಸರು ಪ್ರಸ್ತಾಪ
ನರೇಂದ್ರ ಮೋದಿ ಅವರನ್ನು ಬಿಜೆಪಿಯ ಪ್ರಧಾನಮಂತ್ರಿ ಅಭ್ಯರ್ಥಿಯನ್ನಾಗಿಸುವ ಮೊದಲು ಹಿಂದುತ್ವ ಸೇರಿದಂತೆ 4 ಷರತ್ತುಗಳನ್ನು ಆರ್ಎಸ್ ಎಸ್ ವಿಧಿಸಿದೆ. ಇದನ್ನು ಹೇಗೆ ನಿಭಾಯಿಸುತ್ತಾರೋ ಕಾದು ನೋಡಬೇಕು. ಕಾಂಗ್ರೆಸ್- ಬಿಜೆಪಿ ಎರಡು ರಾಷ್ಟ್ರೀಯ ಪಕ್ಷಗಳು ದೇಶಕ್ಕೆ ಕ್ಯಾನ್ಸರ್ ಆಗಿದ್ದು, ವಾಸಿ ಆಗುವುದು ಕಷ್ಟಕರವಾಗಿದೆ. ರಾಹುಲ್ ಗಾಂಧಿ ಅಥವಾ ನರೇಂದ್ರ ಮೋದಿ ಯಾರೇ ಪ್ರಧಾನ ಮಂತ್ರಿಯಾದರೂ ದೇಶದ ಆರ್ಥಿಕ ಸ್ಥಿತಿಯನ್ನು ಉತ್ತಮ ಸ್ಥಿತಿಗೆ ತರಲು ಸಾಕಷ್ಟು ಪ್ರಯಾಸ ಪಡಬೇಕು ಎನ್ನುತ್ತಾರೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ.

ತೃತೀಯ ರಂಗ ಎತ್ತ, ಏನು?
ತೃತೀಯ ರಂಗದ ಬಗ್ಗೆ ಇನ್ನೂ ಅಂತಿಮ ನಿರ್ಧಾರವಾಗಿಲ್ಲ. ಪಶ್ಚಿಮ ಬಂಗಾಳ, ಆಂಧ್ರ ಪ್ರದೇಶ, ತಮಿಳುನಾಡು ರಾಜ್ಯಗಳಲ್ಲಿ ವಿಭಿನ್ನ ಸ್ಥಿತಿ ಇದೆ. ರಾಷ್ಟ್ರದಲ್ಲಿರುವ ಎಲ್ಲ ಪ್ರಾದೇಶಿಕ ಪಕ್ಷಗಳನ್ನು ಮಾತ್ರವಲ್ಲ ಜಾತ್ಯತೀತ ಪಕ್ಷಗಳನ್ನೂ ಒಂದುಗೂಡಿಸುವ ಅಗತ್ಯ ಇದೆ. ಈ ಬಗ್ಗೆ ಯಾರಾದರೂ ನೇತೃತ್ವ ವಹಿಸಿದರೆ ನಾನು ಸಂಪೂರ್ಣ ಸಹಕಾರ ನೀಡುತ್ತೇನೆ. ನಾವು ಹಿಂದೆಯೂ ಎಡರಂಗದ ಜತೆ ಇದ್ದೆವು. ಇಂದಿಗೂ ಎಡರಂಗವನ್ನೇ ಬೆಂಬಲಿಸುತ್ತೇವೆ. ದೇಶವನ್ನು ಉಳಿಸಿಕೊಳ್ಳಲು ಎಲ್ಲರೂ ಒಂದಾಗಬೇಕು ಎಂದು ಸೂಕ್ತ ವೇದಿಕೆಯಲ್ಲಿ ಕೇಳಿಕೊಳ್ಳಲಾಗುತ್ತದೆ - ಎಚ್ ಡಿ ದೇವೇಗೌಡ.

ಅಸ್ತಿತ್ವದಲ್ಲಿದ್ದರೂ ದೇಶದ ಎಲ್ಲ ಕಡೆ ಸ್ಪರ್ಧಿಸೋಲ್ಲ
ರಾಷ್ಟ್ರದ 17 ರಾಜ್ಯಗಳಲ್ಲಿ ಜೆಡಿಎಸ್ ಅಸ್ತಿತ್ವದಲ್ಲಿದೆ. ಆದರೆ ಈ ಎಲ್ಲ ರಾಜ್ಯಗಳಲ್ಲೂ ಜೆಡಿಎಸ್ ಮುಂದಿನ ಲೋಕಸಭೆಯಲ್ಲಿ ಸ್ಪರ್ಧಿಸುತ್ತದೆ ಎಂದು ಹೇಳುವುದಿಲ್ಲ. ನಮ್ಮ ಸಂಪನ್ಮೂಲ ಹಾಗೂ ಸಾಮರ್ಥ್ಯದ ಅರಿವಿದೆ. ಕರ್ನಾಟಕ ಹಾಗೂ ಕೇರಳ ಹೊರತುಪಡಿಸಿ, ಇನ್ನೆಲ್ಲೆಲ್ಲಿ ಸ್ಪರ್ಧಿಸಬೇಕು ಎಂಬ ಬಗ್ಗೆ ಮುಂದೆ ನಿರ್ಧರಿಸಲಾಗುತ್ತದೆ.
ದೆಹಲಿಯಲ್ಲಿ ನಾನು ಯಾವುದೇ ಹುದ್ದೆ ಆಕಾಂಕ್ಷಿಯನ್ನು ಬಯಸುವುದಿಲ್ಲ. ಎಡರಂಗಕ್ಕೆ ಸಹಕಾರ ನೀಡುತ್ತೇನೆ - ಎಚ್ ಡಿ ದೇವೇಗೌಡ.

ರಾಷ್ಟ್ರಮಟ್ಟದಲ್ಲಿ ಯಾರಾದರೂ ನಾಯಕತ್ವ ವಹಿಸಲಿ
ಪ್ರಸಕ್ತ ರಾಜಕೀಯ ಸನ್ನಿವೇಶದಲ್ಲಿ ಮಹಾತ್ಮಾ ಗಾಂಧಿ, ಜಯಪ್ರಕಾಶ್ ನಾರಾಯಣ್ ಹಾಗೂ ಲೋಹಿಯಾ ಸಿದ್ಧಾಂತದಡಿ ಜಾತ್ಯತೀತ ಮತ್ತು ಸಮಾಜವಾದಿ ಶಕ್ತಿಗಳು ಒಟ್ಟುಗೂಡುವ ಅಗತ್ಯವಿದೆ. ದೇಶ ಪೂರ್ತಿ ಓಡಾಡಲು ನನಗೆ ಶಕ್ತಿಯಿಲ್ಲ. ಮುಲಾಯಂ ಸಿಂಗ್ ಯಾದವ್, ಶರದ್ ಯಾದವ್, ಲಾಲು ಪ್ರಸಾದ್ ಯಾದವ್, ಚಂದ್ರಬಾಬು ನಾಯ್ಡು ಅವರೊಂದಿಗೆ ಸಂಪರ್ಕದಲ್ಲಿದ್ದು ರಾಷ್ಟ್ರಮಟ್ಟದಲ್ಲಿ ಆ ಬಗ್ಗೆ ಯಾರಾದರೂ ನಾಯಕತ್ವ ವಹಿಸಿದರೆ ಅವರ ಜತೆಗೂಡಲು ನಾನು ಸಿದ್ಧ- ಎಚ್ ಡಿ ದೇವೇಗೌಡ.

ಜಮೀರ್, ನಾಣಯ್ಯ, ಹೊರಟ್ಟಿ ಆಬ್ಸೆಂಟ್:
ಕಾರ್ಯಕಾರಿಣಿಗೆ ಎಂಸಿ ನಾಣಯ್ಯ, ಬಸವರಾಜ ಹೊರಟ್ಟಿ, ಜಮೀರ್ ಅಹಮದ್ ಖಾನ್ ಗೈರು ಹಾಜರಾಗಿದ್ದು ಎದ್ದುಕಾಣುತ್ತಿತ್ತು. ಸಿಂಧ್ಯಾ ಸಭೆಯಲ್ಲಿ ಕೆಲಕಾಲ ಹಾಜರಿದ್ದು ನಿರ್ಗಮಿಸಿದರು. ನಂತರ ಕಾರ್ಯಕರ್ತರ ಸಮಾವೇಶದಲ್ಲೂ ಅವರು ಪಾಲ್ಗೊಳ್ಳಲಿಲ್ಲ. ಹೊರಟ್ಟಿ ಮತ್ತು ನಾಣಯ್ಯ ವಿದೇಶ ಪ್ರವಾಸದಲ್ಲಿರುವುದರಿಂದ ಗೈರಾಗಿದ್ದರು ಎಂದು ಮುಖಂಡರು ಸಮಜಾಯಿಷಿ ನೀಡಿದರು.












Click it and Unblock the Notifications