ಜೆಡಿಯುನತ್ತ ಹೊರಟ ಜೆಡಿಎಸ್ನ 8 ಶಾಸಕರು?
ಬೆಂಗಳೂರು, ಜುಲೈ 20 : ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿ ಅಮಾನತುಗೊಂಡಿರುವ ಜೆಡಿಎಸ್ನ 8 ಶಾಸಕರು ಜೆಡಿಯು ಸೇರುವ ಸಾಧ್ಯತೆ ಇದೆ. ಕರ್ನಾಟಕದಲ್ಲಿ ಪಕ್ಷವನ್ನು ಬಲಪಡಿಸುವ ಉದ್ದೇಶದಿಂದ ಶಾಸಕರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಸಾಧ್ಯತೆ ಇದೆ ಎಂಬ ಸುದ್ದಿಗಳು ಹಬ್ಬಿವೆ.
2015ರ ವರ್ಷಾಂತ್ಯದಲ್ಲಿ ನಡೆದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಮಹಾಮೈತ್ರಿ ಕೂಟ ಪ್ರಚಂಡ ಜಯಭೇರಿ ಬಾರಿಸಿದೆ. ಬಿಹಾರ ಮುಖ್ಯಮಂತ್ರಿಯಾಗಿರುವ ನಿತೀಶ್ ಕುಮಾರ್ ಬಿಜೆಪಿಗೆ ಸೆಡ್ಡು ಹೊಡೆಯಲು ಬೇರೆ ರಾಜ್ಯಗಳಲ್ಲಿ ಪಕ್ಷವನ್ನು ಬಲಪಡಿಸಲು ಮುಂದಾಗಿದ್ದಾರೆ.[ಮೋದಿ ವಿರುದ್ಧ ಒಂದಾದ ಬಿಜೆಪಿಯೇತರ ಪಕ್ಷಗಳು?]
ಕರ್ನಾಟಕದಲ್ಲಿಯೂ ಪಕ್ಷವನ್ನು ಬಲಗೊಳಿಸುವ ಉದ್ದೇಶ ಹೊಂದಿರುವ ಅವರು ಅಮಾನತುಗೊಂಡಿರುವ 8 ಜೆಡಿಎಸ್ ಶಾಸಕರನ್ನು ಸಳೆಯಲು ಮುಂದಾಗಿದ್ದಾರೆ. ಈ ಕುರಿತು ಈಗಾಗಲೇ ಪ್ರಾಥಮಿಕ ಹಂತದ ಮಾತುಕತೆಗಳು ಆರಂಭವಾಗಿದ್ದು, ಅಂತಿಮ ಚಿತ್ರಣ ಶೀಘ್ರದಲ್ಲೇ ಲಭ್ಯವಾಗುವ ಸಾಧ್ಯತೆ ಇದೆ.[ಜೆಡಿಎಸ್ 8 ಶಾಸಕರ ಅಮಾನತು, ಮುಂದೇನು?]
ಮತ್ತೊಂದು ಕಡೆ ಅಮಾನತುಗೊಂಡ ಶಾಸಕರ ಜೊತೆ ಮಾತುಕತೆ ನಡೆಸುವುದಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಸ್ಪಷ್ಟಪಡಿಸಿದ್ದಾರೆ. 'ಪಕ್ಷಕ್ಕೆ ದ್ರೋಹ ಮಾಡಿದವರನ್ನು ಒಂದು ಕ್ಷಣವೂ ಪಕ್ಷದಲ್ಲಿರಲು ಬಿಡುವುದಿಲ್ಲ' ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಹೇಳಿದ್ದಾರೆ. ಆದ್ದರಿಂದ ಶಾಸಕರು ಬೇರೆ ಪಕ್ಷದತ್ತ ಹೆಜ್ಜೆ ಹಾಕುವ ಸಾಧ್ಯತೆ ಇದೆ.......['ಪಕ್ಷಕ್ಕೆ ದ್ರೋಹ ಮಾಡಿದವರನ್ನು ಒಂದು ಕ್ಷಣವೂ ಇರಲು ಬಿಡಲ್ಲ']
ಅಮಾನತುಗೊಂಡ ಶಾಸಕರು ಯಾರು?
ಜಮೀರ್ ಅಹಮದ್ ಖಾನ್ (ಚಾಮರಾಜಪೇಟೆ), ಕೆ.ಗೋಪಾಲಯ್ಯ (ಮಹಾಲಕ್ಷ್ಮೀ ಪುರ), ಅಖಂಡ ಶ್ರೀನಿವಾಸಮೂರ್ತಿ (ಪುಲಿಕೇಶಿ ನಗರ), ಚೆಲುವರಾಯ ಸ್ವಾಮಿ (ನಾಗಮಂಗಲ), ಎಚ್.ಸಿ.ಬಾಲಕೃಷ್ಣ (ಮಾಗಡಿ) ಇಕ್ಬಾಲ್ ಅನ್ಸಾರಿ (ಗಂಗಾವತಿ), ರಮೇಶ್ ಬಂಡಿಸಿದ್ದೇಗೌಡ (ಶ್ರೀರಂಗಪಟ್ಟಣ), ಭೀಮಾ ನಾಯಕ್ (ಹಗರಿಬೊಮ್ಮನಹಳ್ಳಿ). [ಚಿತ್ರ : ಜಮೀರ್ ಅಹಮದ್ ಖಾನ್]
ಅಮಾನತುಗೊಂಡಿದ್ದು ಏಕೆ?
ಕರ್ನಾಟಕ ವಿಧಾನಸಭೆಯಿಂದ ನಾಲ್ವರು ರಾಜ್ಯಸಭಾ ಸದಸ್ಯರನ್ನು ಆಯ್ಕೆ ಮಾಡಲು ಜೂನ್ 11ರಂದು ಚುನಾವಣೆ ನಡೆದಿತ್ತು. ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಬಿ.ಎಂ.ಫಾರೂಕ್ ಅವರು ಕಣಕ್ಕಿಳಿದಿದ್ದರು. ಪಕ್ಷದ ಅಭ್ಯರ್ಥಿಗೆ ಮತ ಹಾಕುವಂತೆ ಜೆಡಿಎಸ್ ಎಲ್ಲಾ ಶಾಸಕರಿಗೂ ವಿಪ್ ಜಾರಿ ಮಾಡಿತ್ತು. ಆದರೆ, 8 ಶಾಸಕರು ವಿಪ್ ಉಲ್ಲಂಘನೆ ಮಾಡಿ, ಕಾಂಗ್ರೆಸ್ನ ಮೂರನೇ ಅಭ್ಯರ್ಥಿ ಕೆ.ಸಿ.ರಾಮಮೂರ್ತಿ ಅವರಿಗೆ ಮತ ಹಾಕಿದ್ದರು. ಇದರಿಂದಾಗಿ ಪಕ್ಷ ಎಲ್ಲಾ ಶಾಸಕರನ್ನು ಅಮಾನತು ಮಾಡಿದೆ.
ಶಾಸಕರಿಗೆ ನೋಟಿಸ್ ನೀಡಲಾಗಿದೆ
ಶಾಸಕರನ್ನು ಅಮಾನತು ಮಾಡಿದ್ದ ಜೆಡಿಎಸ್ ಪಕ್ಷದ ನಿಯಮದಂತೆ ಅಮಾನತು ಮಾಡಿರುವ ಶಾಸಕರಿಗೆ ನೋಟಿಸ್ ನೀಡಿದೆ. ಶಾಸಕರು ನೀಡುವ ಉತ್ತರವನ್ನು ಪರಿಶೀಲಿಸಲು ಶಿಸ್ತು ಸಮಿತಿಯನ್ನು ರಚನೆ ಮಾಡಲಾಗಿದೆ. ಆದರೆ, ಯಾವುದೇ ಶಾಸಕರು ಇಲ್ಲಿಯ ತನಕ ನೋಟಿಸ್ಗೆ ಉತ್ತರ ನೀಡಿಲ್ಲ.
'ಮಾತುಕತೆ ನಡೆಯುತ್ತಿದೆ'
'ಜೆಡಿಯು ಜೊತೆ ಗುರುತಿಸಿಕೊಳ್ಳುವ ಇಷ್ಟವಿದ್ದರೆ ಮಾತುಕತೆ ನಡೆಸೋಣ ಎಂದು ಆ ಪಕ್ಷದ ನಾಯಕರು ಸಂದೇಶ ಕಳುಹಿಸಿದ್ದರು. ಎರಡು ಮತ್ತು ಮೂರನೇ ಹಂತದ ನಾಯಕರ ಜೊತೆ ಚರ್ಚೆ ನಡೆಯುತ್ತಿದೆ. ಜೆಡಿಯು ಸೇರುವ ಕುರಿತು ಯಾವುದೇ ನಿರ್ಧಾರವನ್ನು ಕೈಗೊಂಡಿಲ್ಲ' ಎಂದು ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ ಅವರು ಮಾಹಿತಿ ನೀಡಿದ್ದಾರೆ.
ಕಾಂಗ್ರೆಸ್ ಸೇರುವ ಸಾಧ್ಯತೆ ಇದೆ
ಜೆಡಿಎಸ್ನಿಂದ ಅಮಾನತುಗೊಂಡಿರುವ ಜಮೀರ್ ಅಹಮದ್ ಖಾನ್, ಕೆ.ಗೋಪಾಲಯ್ಯ, ಅಖಂಡ ಶ್ರೀನಿವಾಸಮೂರ್ತಿ ಅವರು ಕಾಂಗ್ರೆಸ್ ನಾಯಕರ ಜೊತೆ ಪದೇ-ಪದೇ ಗುರುತಿಸಿಕೊಳ್ಳುತ್ತಿದ್ದಾರೆ. ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರು ಈ ಶಾಸಕರ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ. ಆದ್ದರಿಂದ ಶಾಸಕರು ಕಾಂಗ್ರೆಸ್ ಸೇರುವ ಸಾಧ್ಯತೆಯೂ ಇದೆ.