ಧಾರ್ಮಿಕ ದತ್ತಿ ಇಲಾಖೆಗಿಂತ ದೇವೇಗೌಡರ ಪಟ್ಟಿಯಲ್ಲಿ ಹೆಚ್ಚಿನ ದೇವಾಲಯದ ಲಿಸ್ಟು
Recommended Video
'ನಿಷ್ಕಳಂಕ, ಪ್ರಾಮಾಣಿಕ ಭಗವದ್ಭಕ್ತ ರಾಜಕಾರಣಿ' ಹೀಗೆ ಹೇಳಿದ್ದು ಉಡುಪಿ ಪೇಜಾವರ ಶ್ರೀಗಳು ಮಾಜಿ ಪ್ರಧಾನಿ ದೇವೇಗೌಡರ ಬಗ್ಗೆ. ಎಂತದ್ದೇ ರಾಜಕೀಯವಿರಲಿ, ಕೊನೆಗೆ ದೈವೇಚ್ಚೆಯಂತೆ ಆಗಲಿ ಎಂದು ಕೃಷ್ಣಾರ್ಪಣ ಬಿಡುವ ಗೌಡ್ರದ್ದು ಅಪ್ರತಿಮ ದೈವಭಕ್ತ ಕುಟುಂಬ.
ಯಥಾ ಪಿತಾ, ತಥಾ ಪುತ್ರ ಎನ್ನುವಂತೆ, ಅವರ ಮಕ್ಕಳೂ ಹೆಜ್ಜೆಹೆಜ್ಜೆಗೂ ದೇವರನ್ನು ನಂಬುವವರು. ಉಡುಪಿ ಹೊರವಲದ ಬೀಚ್ ರೆಸಾರ್ಟಿನಲ್ಲಿ ಪಂಚಕರ್ಮ ಚಿಕಿತ್ಸೆ ಪಡೆಯುತ್ತಿದ್ದರೂ, ಗೌಡ್ರ 'ಟೆಂಪಲ್ ರನ್' ನಿಂತಿಲ್ಲ. ಕರಾವಳಿಯ ಪ್ರಸಿದ್ದ ದೇವಾಲಯಗಳಿಗೂ ತೆರಳಿ ಗೌಡ್ರು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.
ದೇವರ ಮತ್ತು ಆಹಾರದ ವಿಚಾರದಲ್ಲಿ ಶಿಸ್ತಿನ ಜೀವನ ನಡೆಸುಕೊಂಡು ಬರುತ್ತಿರುವ ಗೌಡ್ರು, ಕೆಳೆದೊಂದು ವಾರದಲ್ಲಿ ಉಡುಪಿ ಜಿಲ್ಲೆಯ ಹಲವು ದೇವಾಲಯಗಳಿಗೆ ಭೇಟಿ ನೀಡಿದ್ದಾರೆ. ಶೃಂಗೇರಿ ಶಾರದಾಂಬೆಯ ಬಳಿ ತಿಂಗಳಿಗೆ ಎರಡು ಬಾರಿಯಾದರೂ ಹೋಗುವ ಗೌಡ್ರು, ಹಿಂದೂ ಪೀಠಾಧಿಪತಿಗಳ ಬಗ್ಗೆ ಕೇವಲವಾಗಿ ಮಾತನಾಡಿದ ಉದಾಹರಣೆಗಳು ತೀರಾ ವಿರಳ.

ಈ ಇಳಿವಯಸ್ಸಿನಲ್ಲೂ ಆಶ್ಚರ್ಯ ಪಡುವಂತೆ ಲವಲವಿಕೆಯಿಂದ ಇರುವ ಗೌಡ್ರ ಬಳಿ ನಿಮ್ಮ ಆರೋಗ್ಯದ ಗುಟ್ಟೇನು ಎಂದು ಹಿಂದೊಮ್ಮೆ ಕೇಳಿದ್ದಾಗ, ಆಹಾರ, ವ್ಯಾಯಾಮ ಮತ್ತು ದೇವತಾನುಗ್ರಹ ಎಂದು ಹೇಳಿದ್ದರು. ಇನ್ನು ಮೂರು ದಿನಗಳಲ್ಲಿ, ಮೇ 18ರಂದು 86ನೇ ಹುಟ್ಟುಹಬ್ಬವನ್ನು ಅವರು ಆಚರಿಸಿಕೊಳ್ಳಲಿದ್ದಾರೆ. ನೂರ್ ಕಾಲ ಬಾಳಿ ಗೌಡ್ರೇ..
ಕಳೆದ ವಾರ ಕುಟುಂಬದ ಮದುವೆಯ ಆಮಂತ್ರಣವನ್ನು ಮೊದಲು ದೇವರಿಗೆ ನೀಡಲು ಗೌಡ್ರು ಕುಟುಂಬ ಸಮೇತ ಉಡುಪಿ ಜಿಲ್ಲೆ ಕೋಟ ಅಮೃತೇಶ್ವರಿ ದೇವಾಲಯಕ್ಕೆ ತೆರಳಿದ್ದರು. ಈ ದೇವಾಲಯ 'ಹಲವು ಮಕ್ಕಳ ತಾಯಿ' ಎಂದೇ ಪ್ರಸಿದ್ದಿ ಪಡೆದಿದೆ. ಯಾವುದಾದರೂ ಹೊಸ ದೇವಾಲಯಕ್ಕೆ ಗೌಡ್ರು ಭೇಟಿ ನೀಡಿದರೆ, ಬರೀ ದರ್ಶನ ಮಾಡದೇ ಆ ದೇವಾಲಯದ ಪುರಾಣವನ್ನೂ ತಿಳಿದುಕೊಳ್ಳುವುದು ಇವರ ವಿಶೇಷ.
ಮಂಗಳವಾರ ಉಡುಪಿ ಕೃಷ್ಣಮಠಕ್ಕೆ ಗೌಡ್ರು ಭೇಟಿ ನೀಡಿದ ನಂತರ, ಜಿಲ್ಲೆಯ ಕಾಪುವಿನಲ್ಲಿರುವ ಐತಿಹಾಸಿಕ ಮಾರಿಗುಡಿ ಮತ್ತು ಜಲಂಚಾರು ಮಹಾಲಿಂಗೇಶ್ವರ ದೇವಾಲಯಕ್ಕೂ ದಂಪತಿ ಸಮೇತ ಹೋಗಿದ್ದರು.

ಹತ್ತು ದಿನಗಳ ಹಿಂದೆ ತುಂಗಾ ನದಿ ತಟದಲ್ಲಿ ವಿಶೇಷ ಪೂಜೆ, ಹೋಮ, ಹವನ ಗೌಡ್ರ ಕುಟುಂಬ ನಡೆಸಿದ್ದು ತಿಳಿದೇ ಇದೆ. ಇನ್ನು ತಮ್ಮ ಮತ್ತು ಮೊಮ್ಮಕ್ಕಳ ಬಿಫಾರಂ ಅನ್ನು ಶೃಂಗೇರಿ ಮತ್ತು ಕುಲದೇವರಾದ ಮಾವಿನಕೆರೆ ರಂಗನಾಥಸ್ವಾಮಿಯ ಬಳಿ ಪೂಜಿಸಿಯೇ ಆಯೋಗದ ಅಧಿಕಾರಿಗಳಿಗೆ ಸಲ್ಲಿಸಿದ್ದು ಎನ್ನುವುದು ಗೊತ್ತಿರುವ ವಿಚಾರ.
ಮಾವಿನಕೆರೆ ರಂಗನಾಥ ಸ್ವಾಮಿಯ ದೇವಾಲಯದ ಜೀರ್ಣೋದ್ದಾರ ಕೆಲಸದಲ್ಲಿ ದೇವೇಗೌಡರ ಪಾಲು ದೊಡ್ಡದು. ಇದೆಲ್ಲಾ ಗೌಡ್ರ ದೇವಾಲಯ ಭೇಟಿಯ ಒಂದು ಝಲಕ್ ಅಷ್ಟೇ.. ರಾಜ್ಯದ ಮತ್ತು ಅಕ್ಕಪಕ್ಕ ರಾಜ್ಯದ ಎಲ್ಲಾ ಪ್ರಸಿದ್ದ ದೇವಾಲಯಗಳಿಗೆ ಗೌಡ್ರು ಒಂದು ವಿಸಿಟ್ ಹಾಕೇ ಹಾಕಿರುತ್ತಾರೆ. ಈ ಎಲ್ಲಾ ಕಾರಣಕ್ಕಾಗಿಯೇ, ಒಂದು ಮಾತಿದೆ, 'ಆಡು ಮುಟ್ಟದ ಸೊಪ್ಪಿಲ್ಲ, ನಮ್ ದೇವೇಗೌಡ್ರು ಹೋಗದ ದೇವಸ್ಥಾನವಿಲ್ಲ' ಎಂದು.












Click it and Unblock the Notifications