ಜೆಡಿಎಸ್ ಶಾಸಕಾಂಗ ಸಭೆ, ಜಮೀರ್ ಅಂಡ್ ಟೀಮ್ ಗೈರು!
ಬೆಂಗಳೂರು, ಜೂನ್ 10 : ಜೆಡಿಎಸ್ ಪಕ್ಷದ ನಾಯಕತ್ವದ ಬಗ್ಗೆ ಬಹಿರಂಗವಾಗಿ ಟೀಕಿಸುವ ನಾಲ್ವರು ಶಾಸಕರು ಶಾಸಕಾಂಗ ಪಕ್ಷದ ಸಭೆಗೆ ಗೈರಾಗುವ ಮೂಲಕ ಮತ್ತೆ ಬಂಡಾಯದ ಬಾವುಟ ಹಾರಿಸಿದ್ದಾರೆ. ಇಂದು ವಿಧಾನಪರಿಷತ್ ಚುನಾವಣೆ ನಡೆಯಲಿದ್ದು, ಶಾಸಕರ ನಡೆ ಕುತೂಹಲ ಮೂಡಿಸಿದೆ.
ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ವಿಧಾನಸೌಧದಲ್ಲಿ ಗುರುವಾರ ಸಂಜೆ ಶಾಸಕಾಂಗ ಸಭೆ ನಡೆಯಿತು. ವಿಧಾನಪರಿಷತ್ ಚುನಾವಣೆ ಮತ್ತು ರಾಜ್ಯಸಭೆ ಚುನಾವಣೆ ಬಗ್ಗೆ ಚರ್ಚಿಸಲು ಸಭೆ ಕರೆಯಲಾಗಿತ್ತು. [ವಿಧಾನಪರಿಷತ್ ಸದಸ್ಯರು ಹೇಗೆ ಆಯ್ಕೆಯಾಗುತ್ತಾರೆ?]

ಭಿನ್ನಮತೀಯ ಗುಂಪಿನಲ್ಲಿ ಗುರುತಿಸಿಕೊಂಡಿರುವ ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ಅವರು ಸಭೆಗೆ ಹಾಜರಾಗಿದ್ದರು. ರಾಜ್ಯಸಭೆ ಅಭ್ಯರ್ಥಿ ಆಯ್ಕೆ ಬಗ್ಗೆ ಬಾಲಕೃಷ್ಣ ಅವರು ಕುಮಾರಸ್ವಾಮಿ ಜೊತೆ ಮಾತಿನ ಚಕಮಕಿ ನಡೆಸಿದ್ದಾರೆ. [ಕುಮಾರಸ್ವಾಮಿಗೆ ತಿರುಗೇಟು ಕೊಟ್ಟ ಚೆಲುವರಾಯಸ್ವಾಮಿ]
'ರಾಜ್ಯಸಭೆ ಚುನಾವಣೆ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಶಾಸಕರ ಸಲಹೆ ಕೇಳಿಲ್ಲ. ನಿವೇ ತೀರ್ಮಾನ ಕೈಗೊಂಡಿದ್ದೀರಿ, ಈಗ ಏಕೆ ಶಾಸಕರ ಸಭೆ ಕರೆದಿದ್ದೀರಿ. ಬಿ.ಎಂ.ಫಾರೂಕ್ ಅವರು ನಮ್ಮ ಪಕ್ಷದವರಲ್ಲ. ಅವರಿಗೆ ಟಿಕೆಟ್ ನೀಡಿದ್ದು ಏಕೆ?' ಎಂದು ಬಾಲಕೃಷ್ಣ ಅವರು ಕುಮಾರಸ್ವಾಮಿ ಅವರನ್ನು ಸಭೆಯಲ್ಲಿ ಪ್ರಶ್ನಿಸಿದ್ದಾರೆ. ['ಫಾರೂಕ್ ವಿರುದ್ಧದ ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ']
ಸಹಕಾರ ನೀಡಿ : ಸಭೆಯಲ್ಲಿ ಮಾತನಾಡಿದ ಕುಮಾರಸ್ವಾಮಿ ಅವರು, 'ಪಕ್ಷದಲ್ಲಿಯೇ ಇದ್ಪದು ಪ್ಷಕ್ಷದ ಬಗ್ಗೆ ಯಾರು ಮಾತನಾಡುತ್ತಾರೆ ಎಂಬುದು ಗೊತ್ತಿದೆ. ಈ ಬಾರಿ ಸಹಕಾರ ನೀಡಿ. ಇನ್ನು ಮುಂದೆ ಹೀಗಾಗದಂತೆ ನೋಡಿಕೊಳ್ಳುತ್ತೇವೆ' ಎಂದು ಶಾಸಕರಿಗೆ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ವಿಪ್ ಜಾರಿ : ವಿಧಾನಪರಿಷತ್ ಮತ್ತು ರಾಜ್ಯಸಭೆ ಚುನಾವಣೆಯಲ್ಲಿ ಪಕ್ಷದ ಎಲ್ಲಾ ಶಾಸಕರು ಪಕ್ಷದ ಅಭ್ಯರ್ಥಿಗೆ ಮತ ಹಾಕಬೇಕು ಎಂದು ವಿಪ್ ಜಾರಿಗೊಳಿಸಲಾಗಿದೆ. ವಿಧಾನಪರಿಷತ್ ಚುನಾವಣೆಯಲ್ಲಿ ಕೆ.ವಿ.ನಾರಾಯಣ ಸ್ವಾಮಿ ಅವರಿಗೆ ಮೊದಲ ಪ್ರಾಶಸ್ತ್ಯದ ಮತಗಳನ್ನು ನೀಡಿ ಎಂದು ಸಭೆಯಲ್ಲಿ ಸೂಚನೆ ನೀಡಲಾಗಿದೆ. ಡಾ.ವೆಂಕಟಪತಿ ಅವರಿಗೆ 2ನೇ ಪ್ರಾಶಸ್ತ್ಯದ ಮತಗಳನ್ನು ನೀಡಿ ಎಂದು ಸೂಚನೆ ಕೊಡಲಾಗಿದೆ.
ಸಭೆಗೆ ಗೈರು ಹಾಜರಾದವರು
* ಜಮೀರ್ ಅಹಮದ್ ಖಾನ್ (ಚಾಮರಾಜಪೇಟೆ)
* ಎನ್. ಚೆಲುವರಾಯಸ್ವಾಮಿ (ನಾಗಮಂಗಲ)
* ಅಖಂಡ ಶ್ರೀನಿವಾಸಮೂರ್ತಿ (ಪುಲಿಕೇಶಿ ನಗರ)
* ಇಕ್ಬಾಲ್ ಅನ್ಸಾರಿ (ಗಂಗಾವತಿ)












Click it and Unblock the Notifications