ಹೈಕಮಾಂಡ್ ಗುಲಾಮನಿಗೆ ಕುರ್ಚಿ ಕೈಗೆಟುಕದ ಹುಳಿ ದ್ರಾಕ್ಷಿ: ಡಿಕೆಶಿಗೆ ಹೀಗಂದಿದ್ದು ಯಾರು?
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಗ್ಗೆ ಜೆಡಿಎಸ್ ಪಕ್ಷ ವ್ಯಂಗ್ಯವಾಡಿದೆ. ತೆರೆ ಹಿಂದೆ ಶಿಖಂಡಿ ಆಟವಾಡುತ್ತಿರುವ ಜೈಲು ಹಕ್ಕಿಗೆ ಸಿಎಂ ಕುರ್ಚಿ ಕೈಗೆಟುಕದ ಹುಳಿ ದ್ರಾಕ್ಷಿ..! ಎಂದು ಕಾಲೆಳೆದಿದೆ. ಹೈಕಮಾಂಡ್ ಗುಲಾಮನಾಗಿ ಕಪ್ಪ ಕಳುಹಿಸುವ ಕಲೆಕ್ಷನ್ ಏಜೆಂಟ್, ಬಂಡೆ ಕಳ್ಳನ ರಾಜಕೀಯ ಭ್ರಷ್ಟಾಚಾರದ ಇತಿಹಾಸವನ್ನು ಸಂಪುಟಗಳಲ್ಲಿ ಪ್ರಕಟಿಸಬಹುದು ಎಂದು ಹೇಳಿದೆ.
ಹೊಡಿಬಡಿ ಸಂಸ್ಕೃತಿಯ ರಿಯಲ್ಎಸ್ಟೇಟ್ ದಂಧೆಕೋರ, ಹವಾಲಾ ಮಾಫಿಯಾ, ಭೂಗಳ್ಳ ಅಲಿಯಾಸ್ ಸಿಡಿ ಶಿವುನ ಆಸ್ತಿ ಸಂಪಾದನೆಯ ಗುಟ್ಟು ಇಡೀ ದೇಶಕ್ಕೆ ಚಿರಪರಿಚಿತ ಎಂದು ಕುಟುಕಿದೆ. ಬೇನಾಮಿ ಆಸ್ತಿ, ಅಕ್ರಮ ಹಣ ವರ್ಗಾವಣೆ ಪ್ರಕರಣಗಳಲ್ಲಿ ರೌಡಿ ಕೊತ್ವಾಲನ ಶಿಷ್ಯ ಒಂದು ಕೈ ಮೇಲು. ಸೋಲಾರ್ ಪಾರ್ಕ್ ಯೋಜನೆಯಲ್ಲಿ ಎತ್ತುವಳಿ ಮಾಡಿದ್ದು ಎಷ್ಟು? ಎಂದು ಪ್ರಶ್ನೆ ಮಾಡಿದೆ.

ಬ್ರ್ಯಾಂಡ್ ಬೆಂಗಳೂರು ಹೆಸರಲ್ಲಿ ದೋಚುತ್ತಿರುವ ಕಲೆಕ್ಷನ್ ಗಿರಾಕಿಯ ಘೋಷಿತ 1,413 ಕೋಟಿ ರೂ. ಆಸ್ತಿ ಗಳಿಕೆಯ ಸಿಕ್ರೇಟ್ ಇವೇ ಅಲ್ಲವೇ..? ಎಂದು ಆರೋಪ ಮಾಡಿದೆ.
ಇತ್ತೀಚೆಗೆ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದ ಡಿ.ಕೆ.ಶಿವಕುಮಾರ್, ಎಚ್.ಡಿ.ಕುಮಾರಸ್ವಾಮಿ ಈ ರಾಜಕಾರಣ, ಬೇರೆ ಮಾತುಗಳನ್ನು ಬಿಟ್ಟು ರಾಜ್ಯದಲ್ಲಿ 1 ಲಕ್ಷ ಜನರಿಗೆ ಉದ್ಯೋಗ ನೀಡುವ ಕೆಲಸ ಮಾಡಲಿ. ನಮ್ಮ ಕಾಂಗ್ರೆಸ್ ಸರ್ಕಾರ ಅವರಿಗೆ ಸಹಕಾರ ಕೊಡುತ್ತದೆ ಎಂದಿದ್ದರು.
ಮೋದಿ ಅವರು ಕುಮಾರಸ್ವಾಮಿ ಅವರಿಗೆ ಕೇಂದ್ರದಲ್ಲಿ ದೊಡ್ಡ ಖಾತೆ ನೀಡಿದ್ದಾರೆ. ಅವರಿಗೆ ಸಿಕ್ಕಿರುವಂತಹ ಈ ಒಳ್ಳೆಯ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಲಿ. ಇಲ್ಲಿ ಯೋಗಕ್ಕಿಂತ ಯೋಗಕ್ಷೇಮ ಮುಖ್ಯ. ರಾಜ್ಯದಲ್ಲಿ ಅವರು ಒಳ್ಳೆಯ ಕೆಲಸಗಳನ್ನು ಮಾಡಲಿ. ರಾಜಕೀಯ ಸದಾ ಇದ್ದಿದ್ದೇ, ಅವರು ಏಕೆ ಇಂತಹ ಅವಕಾಶ ಮಿಸ್ ಮಾಡಿಕೊಳ್ಳುತ್ತಿದ್ದಾರೆ ಎಂದು ವ್ಯಂಗ್ಯ ಮಾಡಿದ್ದರು.

ರಾಜಕೀಯ ಅಂದ್ರೆ ಅಭಿವೃದ್ಧಿ ಅಲ್ಲವೇ? ಪ್ರತಿದಿನವೂ ನಾವು ರಾಜಕೀಯ ಮಾಡುತ್ತಿದ್ದೇವೆ. ನಮ್ಮ ಸರ್ಕಾರ ಐದು ಗ್ಯಾರಂಟಿಗಳನ್ನು ಅನುಷ್ಠಾನ ಮಾಡಿದೆ. ರಾಜ್ಯದ ಜನರಿಗಾಗಿ ಎತ್ತಿನಹೊಳೆ ಕಾಮಗಾರಿ ಮುಗಿಸಬೇಕಾಗಿದೆ. ಪ್ರಣಾಳಿಕೆಗಳಲ್ಲಿ ನಾವು ನೀಡಿರುವ ಭರವಸೆಗಳನ್ನು ಕಾರ್ಯರೂಪಕ್ಕೆ ತರಬೇಕು. ಸಮಯ ಓಡುತ್ತಲೇ ಇರುತ್ತದೆ ಎಂದಿದ್ದರು.
ಜೆಡಿಎಸ್ ಟ್ವೀಟ್ ವಾರ್: 1ನೇ ಶತಮಾನದಲ್ಲಿಯೂ ಪಳಿಯುಳಿಕೆ ಪಾಲಿಟಿಕ್ಸ್ ಮಾಡುತ್ತಿರುವ ತಗುಡಾತಿ ತಗಡು ಪಾರ್ಟಿ ಕಾಂಗ್ರೆಸ್ ಹಳೆಯ ವಿಷಯ ಇಟ್ಟುಕೊಂಡು ಮುಖ ಉಳಿಸಿಕೊಳ್ಳುವ ದೈನೇಸಿ ಸ್ಥಿತಿಗೆ ಬಂದು ಮುಟ್ಟಿದೆ! ವರ್ಗಾವಣೆ ದಂಧೆಕೋರ, ಮೂಡಾಸುರನನ್ನು ತಲೆ ಮೇಲೆ ಕೂರಿಸಿಕೊಂಡು ಮೆರೆಯುತ್ತಿರುವ ನಿಮ್ಮ ಗತಿಕೆಟ್ಟ ಸ್ಥಿತಿ ನೋಡಿದರೆ ಅಯ್ಯೋ ಎನಿಸುತ್ತದೆ ಎಂದು ಜೆಡಿಎಸ್ ಟ್ವೀಟ್ ಮಾಡಿತ್ತು.
ಕ್ಯಾಶ್ ಫಾರ್ ಪೋಸ್ಟಿಂಗ್, ಮೂಡಾ ಹಗರಣ, ಅರ್ಕಾವತಿ ರೀಡು, ಕದ್ದಮಾಲು ಹ್ಯೂಬ್ಲೆಟ್ ವಾಚು.. ಹೀಗೆ ಸರಣಿ ಹಗರಣಗಳ ಸರದಾರ ಸಿದ್ದರಾಮಯ್ಯ ಅವರ ಮೇಲೆ ಎಷ್ಟು FIR ಹಾಕಬೇಕು? ಸೂಟುಕೇಸು ಸಂಸ್ಕೃತಿಯ ಪಿತಾಮಹನೇ ನಿಮ್ಮ ಡೂಪ್ಲಿಕೇಟ್ ಸಿಎಂ ಡಿ.ಕೆ.ಶಿವಕುಮಾರ್ ಹೈಕಮಾಂಡ್ಗೆ ನೀವು ಒಪ್ಪಿಸುತ್ತಿರುವ ಕಪ್ಪದ ಬಗ್ಗೆ ಸರಣಿ ಕಥೆಗಳೇ ಇವೆ. ಪರಿಶಿಷ್ಟರ ಹಣವನ್ನು ಗಂಟಲಿಗಂಟ ನುಂಗಿ ತೆಲಂಗಾಣಕ್ಕೆ ಸಪ್ಲೇ ಮಾಡಿದ ನಿಮ್ಮ ಸಪ್ಲೇಶಿ ಮೇಲೆ ಎಷ್ಟು FIR ಮಾಡಬೇಕು? ಎಂದು ವ್ಯಂಗ್ಯ ಮಾಡಿತ್ತು.












Click it and Unblock the Notifications