Suraj Revanna: ಒಂದು ತಿಂಗಳ ಬಳಿಕ ಜೈಲಿನಿಂದ ಬಿಡುಗಡೆಯಾದ ಸೂರಜ್ ರೇವಣ್ಣ ಏನಂದ್ರು?
ಬೆಂಗಳೂರು, ಜುಲೈ 23: ಜೆಡಿಎಸ್ ಎಂಎಲ್ಸಿ ಸೂರಜ್ ರೇವಣ್ಣ ಅವರಿಗೆ ಸೋಮವಾರ ಜನಪ್ರತಿನಿಧಿಗಳ ನ್ಯಾಯಾಲಯವು ಜಾಮೀನು ನೀಡಿತ್ತು. ಇಂದು (ಮಂಗಳವಾರ) ಮಧ್ಯಾಹ್ನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಬಿಡುಗಡೆಯಾಗಿದ್ದಾರೆ.
ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಅವರು ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ನಿನ್ನೆ(ಸೋಮವಾರ) ಈ ಅರ್ಜಿಯ ವಿಚಾರಣೆ ನಡೆಸಿದ್ದಂತ ಕೋರ್ಟ್, ಕೆಲವು ಷರತ್ತುಗಳನ್ನು ವಿಧಿಸಿ ಜಾಮೀನು ಮಂಜೂರು ಮಾಡಿತ್ತು. ಈ ಹಿನ್ನಲೆಯಲ್ಲಿ ಇಂದು ಪರಪ್ಪನ ಅಗ್ರಹಾರ ಜೈಲಿನಿಂದ ಸೂರಜ್ ರೇವಣ್ಣ ಅವರು ಬಿಡುಗಡೆಯಾಗಿದ್ದಾರೆ.

ಜೈಲಿನಿಂದ ಹೊರ ಬಂದ ಸೂರಜ್ ರೇವಣ್ಣ ಮಾಧ್ಯಮಗಳ ಜೊತೆಗೆ ಮಾತನಾಡಿದ್ದು, ಕುಟುಂಬದ ವಿರುದ್ಧ ಷಡ್ಯಂತ್ರ ಮಾಡಿ ತೇಜೋವಧೆ ಮಾಡಿದ್ದಾರೆ. ತೇಜೋವಧೆ ಮಾಡುವ ದುರುದ್ದೇಶದಿಂದ ಕೇಸ್ ದಾಖಲಿಸಿದ್ದಾರೆ. ನಾವು ಯಾವುದಕ್ಕೂ ಹೆದರಿಕೊಂಡು ಎಲ್ಲಿಗೂ ಓಡಿ ಹೋಗಲ್ಲ.ಎರಡು ಮೂರು ದಿನದಲ್ಲಿ ಎಲ್ಲದಕ್ಕೂ ಸ್ಪಷ್ಟನೆ ಕೊಡುತ್ತೇನೆ. ತನಿಖಾಧಿಕಾರಿಗಳಿಗೆ ಸಹಕಾರ ನೀಡಿದ್ದೇನೆ. ಕಾನೂನು ನ್ಯಾಯಾಂಗದ ಮೇಲೆ ಸಂಪೂರ್ಣ ವಿಶ್ವಾಸವಿದೆ ಎಂದರು.
ನಮ್ಮ ಕುಟುಂಬ ಮತ್ತು ಹಾಸನ ಜಿಲ್ಲೆಯ ರಾಜಕಾರಣವನ್ನ ಕುಸಿತಗೊಳಿಸಬೇಕು ಅಂದುಕೊಂಡಿದ್ದಾರೆ. ಯಾರು ಎಂಬುವ ಬಗ್ಗೆ ಎಲ್ಲದಕ್ಕೂ ಸದ್ಯದಲ್ಲೇ ಉತ್ತರವನ್ನ ಕೊಡ್ತೀನಿ. ಮೊದಲನೇ ದಿನದಿಂದಲೂ ತನಿಖೆಗೆ ಸಹಕರಿಸುತ್ತೇದ್ದೇನೆ. ನಾನು ಯಾವುದೇ ತಪ್ಪು ಮಾಡಿಲ್ಲ, ನಾನು ಓಡೋಗೋದಿಲ್ಲ. ನನಗೆ ನ್ಯಾಯಾಂಗ ಮತ್ತು ಕಾನೂನಿನ ಮೇಲೆ ಸಂಪೂರ್ಣ ನಂಬಿಕೆ ಇದೆ ಎಂದು ಸೂರಜ್ ರೇವಣ್ಣ ತಿಳಿಸಿದ್ದಾರೆ.
ಇದು ಕೇಸ್ ಅಲ್ಲ ಷಡ್ಯಂತರ ಹಾಗೂ ಕುತಂತ್ರ. ಶಿವಕುಮಾರ್ ಆಪ್ತ ಸಹಾಯಕನಲ್ಲ ಕಾರು ಚಾಲಕನು ಅಲ್ಲ. ನಮಗೆ ಲೋಕೇಶ್ ಅಂತ ಒಬ್ಬನೇ ಕಾರು ಚಾಲಕ ಇದ್ದಾನೆ. ಹಾಸನದಲ್ಲಿ ರೇವಣ್ಣರಿಗಾಗಲಿ ನಮಗಾಗಲಿ ಕಪ್ಪು ಚುಕ್ಕೆ ಇಲ್ಲ. ರಾಜಕೀಯವಾಗಿ ನಮ್ಮನ್ನು ಕುಗ್ಗಿಸುವ ಷಡ್ಯಂತರ ಎಂದು ಪರಪ್ಪನ ಅಗ್ರಹಾರ ಜೈಲಿನ ಬಳಿ ಸೂರಜ್ ರೇವಣ್ಣ ಹೇಳಿಕೆ ನೀಡಿದರು.












Click it and Unblock the Notifications