ಸಚಿವ ಸ್ಥಾನ ತಪ್ಪಿದ್ದಕ್ಕೆ ಬೇಸರವಿದೆ, ಸ್ಪೀಕರ್ ಆಗಲಾರೆ : ಹೊರಟ್ಟಿ
ಬೆಳಗಾವಿ, ಜೂನ್ 11: 'ಸಚಿವ ಸ್ಥಾನ ತಪ್ಪಿದ್ದಕ್ಕೆ ಬೇಸರವಿದ್ದು, ನಾಯಕರ ನಿರ್ಧಾರಕ್ಕೆ ಬದ್ಧನಾಗಿದ್ದೇನೆ. ಆದರೆ ಕೈ ಕಟ್ಟಿ ಕುಳಿತುಕೊಳ್ಳುವ ಸಭಾಪತಿ ಸ್ಥಾನ ನನಗೆ ಬೇಕಿಲ್ಲ' ಎಂದು ಬಸವರಾಜ ಹೊರಟ್ಟಿ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
'ದೇವೇಗೌಡರು ನನಗೆ ಸಭಾಪತಿ ಹುದ್ದೆ ನೀಡುವ ಬಗ್ಗೆ ಕಾರ್ಯಕರ್ತರ ಎದುರು ಹೇಳಿಕೊಂಡಿದ್ದಾರೆ. ಈ ಸಂಗತಿಯನ್ನು ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಆದರೆ, ನಮ್ಮ ನಾಯಕರು ನನಗೇನು ಈ ವಿಷಯ ಹೇಳಿಲ್ಲ. 38 ವರ್ಷಗಳಿಂದ ಜೆಡಿಎಸ್ನಲ್ಲಿದ್ದೇನೆ. ಈ ಹಿಂದೆ ಸಚಿವನಾಗಿಯೂ ಕೆಲಸ ಮಾಡಿದ್ದೇನೆ. ನನ್ನ ರಾಜಕೀಯ ಜೀವನದಲ್ಲಿ ಒಂದೂ ಕಪ್ಪು ಚುಕ್ಕೆಯಿಲ್ಲ ಎಂದರು.

ರಾಜ್ಯದಲ್ಲಿ ಶಿಕ್ಷಕರ ಸಮಸ್ಯೆ ಬಹಳಷ್ಟಿವೆ. ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಶಿಕ್ಷಣ ಸಚಿವನಾಗಬೇಕು ಎಂಬ ಬಯಕೆ ಹೊಂದಿದ್ದೆ. ಹಲವು ವರ್ಷಗಳಿಂದ ಶಿಕ್ಷಕರು ನನ್ನನ್ನು ಆಯ್ಕೆ ಮಾಡುತ್ತಿದ್ದು, ಸಚಿವನಾಗಿದ್ದರೆ ಅವರ ಸೇವೆ ಮಾಡಬಹುದಿತ್ತು.
ಸಮ್ಮಿಶ್ರ ಸರ್ಕಾರದಲ್ಲಿ ಉತ್ತರ ಕರ್ನಾಟಕ ಭಾಗಕ್ಕೆ ಅನ್ಯಾಯವಾಗಿದೆ.
ಇದು ನನ್ನ ಅಭಿಪ್ರಾಯ ಅಲ್ಲ. ಈ ಭಾಗದ ಜನತೆ ಸರ್ಕಾರದ ಬಗ್ಗೆ ಇಂಥ ಅಭಿಪ್ರಾಯ ಹೊಂದಿದ್ದಾರೆ. ಉತ್ತರ ಕರ್ನಾಟಕ ಭಾಗಕ್ಕೆ ಇನ್ನಷ್ಟು ಆದ್ಯತೆ ದೊರೆಯಬೇಕಿತ್ತು ಎಂದು ಹೇಳಿದರು.ಲಿಂಗಾಯತ ಸ್ವತಂತ್ರ್ಯ ಧರ್ಮ ಮಾನ್ಯತೆಗೆ ಆಗ್ರಹಿಸಿ ನಡೆದ ಹೋರಾಟ ನಡೆಸಿದ್ದು ತಪ್ಪು ಎಂದು ಕೆಲವರು ನಮ್ಮ ವಿರುದ್ಧ ನಿಂತರು.
ರಾಜ್ಯ ಸರ್ಕಾರ ಕಳುಹಿಸಿಕೊಟ್ಟಿದ್ದ ಶಿಫಾರಸನ್ನು ಕೇಂದ್ರ ಸರ್ಕಾರ ಮರಳಿ ಕಳಿಸಿದೆ ಎಂಬ ಸುದ್ದಿ ತಿಳಿದು ಬಂದಿದೆ. ಈ ಬಗ್ಗೆ ಮುಖಂಡರ ಜತೆಗೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ. ನಮ್ಮ ಸಮುದಾಯಕ್ಕೆ ಸಹಾಯವಾಗಲಿ ಎಂಬ ಕಾರಣಕ್ಕೆ ನಾವು ಹೋರಾಟ ಮಾಡುತ್ತಿದ್ದೇವೆ ಎಂದು ಹೇಳಿದರು.












Click it and Unblock the Notifications