ಜೆಡಿಎಸ್ ಶಾಸಕರ ಮಹತ್ವದ ಸಭೆ, ರಾಜ್ಯಾಧ್ಯಕ್ಷರ ಬದಲಾವಣೆ ಸಾಧ್ಯತೆ
ಬೆಂಗಳೂರು, ಮೇ 03: ಎಲ್ಲಾ ಜೆಡಿಎಸ್ ಶಾಸಕರ ಜೊತೆ ಸಿಎಂ ಕುಮಾರಸ್ವಾಮಿ ಅವರು ನಾಳೆ ತಮ್ಮ ಜೆಪಿ ನಗರದ ನಿವಾಸದಲ್ಲಿ ಮಹತ್ವದ ಸಭೆ ನಡೆಸಲಿದ್ದಾರೆ.
ರಾಜ್ಯ ರಾಜಕಾರಣ ಮತ್ತು ಜೆಡಿಎಸ್ ಪಕ್ಷದ ದೃಷ್ಟಿಯಿಂದ ಈ ಸಭೆ ಮಹತ್ವದ್ದಾಗಿದ್ದು, ಜೆಡಿಎಸ್ ಪಕ್ಷದ ಪ್ರಸ್ತುತ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಅವರನ್ನು ಬದಲಾಯಿಸುವ ಸಾಧ್ಯತೆ ಇದೆ.
ಕಳೆದ ಲೋಕಸಭೆ ಚುನಾವಣೆ ಫಲಿತಾಂಶದ ಬಗ್ಗೆ ಅವಲೋಕನ, ಸೋಲಿಗೆ ಕಾರಣಗಳ ವಿಶ್ಲೇಷಣೆ, ಮೈತ್ರಿ ಬಗ್ಗೆ ಚರ್ಚೆ ಮುಂತಾದ ವಿಷಯಗಳ ಬಗ್ಗೆ ಕುಮಾರಸ್ವಾಮಿ ಅವರು ಶಾಸಕರ ಅಭಿಪ್ರಾಯ ಪಡೆಯಲಿದ್ದಾರೆ.
ಇತ್ತೀಚೆಗಷ್ಟೆ ಪಕ್ಷದ ವಿರುದ್ಧ ತೀಕ್ಷ್ಣ ಹೇಳಿಕೆಗಳನ್ನು ನೀಡಿದ್ದ ರಾಜ್ಯಾಧ್ಯಕ್ಷ ವಿಶ್ವನಾಥ್ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಬದಲಾವಣೆ ಮಾಡುವ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ. ವಿಶ್ವನಾಥ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಬಗ್ಗೆ ಹೇಳಿದ್ದಾರೆ ಎನ್ನಲಾಗಿದೆ.

ಸರ್ಕಾರದ ಮುಂದಿನ ಕಾರ್ಯಯೋಜನೆ ಚರ್ಚೆ
ಲೋಕಸಭೆ ಚುನಾವಣೆ ಬಳಿಕ ಸರ್ಕಾರವು ಬೇರೆ ರೀತಿಯಲ್ಲಿ ಕೆಲಸ ನಿರ್ವಹಿಸಲಿದ್ದು, ಅದರ ಕಾರ್ಯಯೋಜನೆಯನ್ನು ಈಗಾಗಲೇ ತಯಾರಿಸಲಾಗಿದೆ. ಆಡಳಿತಕ್ಕೆ ಹೆಚ್ಚು ಗಮನಕೊಡುವ ಬಗ್ಗೆ ಕುಮಾರಸ್ವಾಮಿ ನಿಶ್ಚಯಿಸಿದ್ದಾರೆ ಎನ್ನಲಾಗಿದ್ದು, ಸರ್ಕಾರದ ಮುಂದಿನ ಕಾರ್ಯಸೂಚಿಯ ಬಗ್ಗೆ ಶಾಸಕರಿಗೆ ತಿಳಿಹೇಳಲಾಗುತ್ತದೆ.

ಸ್ಥಳೀಯ ಸಂಸ್ಥೆ ಚುನಾವಣೆ ಬಗ್ಗೆ ಚರ್ಚೆ
ಸ್ಥಳೀಯ ಸಂಸ್ಥೆಗಳ ಚುನಾವಣೆ ಬಗ್ಗೆಯೂ ಚರ್ಚೆ ನಡೆಯಲಿದ್ದು, ಅತಂತ್ರ ಫಲಿತಾಂಶ ಬಂದಿರುವ ಕಡೆ ಕಾಂಗ್ರೆಸ್ನೊಂದಿಗೆ ಮೈತ್ರಿ ಮಾಡಿಕೊಂಡು ಅಧಿಕಾರ ಹಿಡಿಯುವಂತೆ ಸಲಹೆ ನೀಡಲಾಗುತ್ತದೆ. ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶದ ವರದಿಯನ್ನೂ ಪಡೆಯಲಾಗುತ್ತದೆ.

ಮೈತ್ರಿ ಧರ್ಮ ಪಾಲಿಸದವರಿಗೆ ಶಿಕ್ಷೆ
ಲೋಕಸಭೆ ಚುನಾವಣೆಯಲ್ಲಿ ಕಂಡಿರುವ ಹೀನಾಯ ಸೋಲಿನ ಕುರಿತು ಮಾತುಕತೆ ನಡೆಯಲಿದ್ದು, ಸರಿಯಾಗಿ ಕಾರ್ಯ ನಿರ್ವಹಿಸದ ಮತ್ತು ಮೈತ್ರಿ ಧರ್ಮ ಬಿಟ್ಟು ವಿರೋಧಿಗಳಿಗೆ ಸಹಾಯವಾಗುವಂತೆ ನಡೆದುಕೊಂಡ ಶಾಸಕರಿಗೆ ಶಿಕ್ಷೆ ಕಾದಿದೆ ಎನ್ನಲಾಗುತ್ತಿದೆ.

ಜೆಡಿಎಸ್ ಶಾಸಕರಿಗೆ ಖಡಕ್ ಸೂಚನೆ
ಅಲ್ಲದೆ, ಕಾಂಗ್ರೆಸ್ನ ಕೆಲವು ಅತೃಪ್ತ ಶಾಸಕರು ಜೆಡಿಎಸ್ನ ಶಾಸಕರನ್ನು ತಮ್ಮತ್ತ ಸೆಳೆದು ಸರ್ಕಾರವನ್ನು ಅಲುಗಾಡಿಸುವ ಕಾರ್ಯಕ್ಕೆ ಕೈಹಾಕಿದ್ದಾರೆಂಬ ಸುದ್ದಿ ಇದ್ದು, ಜೆಡಿಎಸ್ನ ಯಾವ ಶಾಸಕರೂ ಸಹ ಪ್ರಲೋಭನೆಗೆ ಒಳಗಾಗಬಾರದೆಂಬ ಶಿಸ್ತು ಸಂದೇಶವನ್ನು ಕುಮಾರಸ್ವಾಮಿ ನಾಳೆ ಶಾಸಕರಿಗೆ ನೀಡಲಿದ್ದಾರೆ.












Click it and Unblock the Notifications