ಮಂಡ್ಯದಲ್ಲಿ ಜೆಡಿಎಸ್ ಗಟ್ಟಿಗೊಳಿಸಲು ಸಮಾವೇಶ
ಮಂಡ್ಯ, ಜೂನ್ 19:' ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್ ಮತ್ತೆ ತನ್ನ ಪ್ರಾಬಲ್ಯ ಸಾಧಿಸಲು ಮುಂದಾಗಿದೆ. ಚೆಲುವರಾಯ ಸ್ವಾಮಿ ಜೆಡಿಎಎಸ್ ಗೆ ಸೆಡ್ಡು ಹೊಡೆದಿರುವುದಕ್ಕೆ ತಕ್ಕ ಉತ್ತರ ನೀಡಲು ದೇವೇಗೌಡರು ಸಿದ್ಧರಾಗಿದ್ದಾರೆ. ಜೂನ್ 30ರಂದು ಮಂಡ್ಯ ನಗರದಲ್ಲಿ ಜೆಡಿಎಸ್ ಸಮಾವೇಶ ನಡೆಸಲು ತೀರ್ಮಾನಿಸಲಾಗಿದೆ ಎಂದು ದೇವೇಗೌಡರು ಪ್ರಕಟಿಸಿದ್ದಾರೆ.
ಮಂಡ್ಯದಲ್ಲಿ ಪ್ರಭಾವಿ ಜೆಡಿಎಸ್ ನಾಯಕರಲ್ಲಿ ಒಬ್ಬರಾಗಿದ್ದ ಚೆಲುವರಾಯಸ್ವಾಮಿ ಅವರು ದೇವೇಗೌಡರ ವಿರುದ್ದವೇ ತಿರುಗಿ ಬಿದ್ದು, ಕಾಂಗ್ರೆಸ್ ಸಖ್ಯ ಬೆಳೆಸಲು ಮುಂದಾಗಿರುವುದು ಜೆಡಿಎಎಸ್ ನಲ್ಲಿ ಒಂದಷ್ಟು ತಳಮಳ ಸೃಷ್ಟಿಸಿದೆ. ಚೆಲುವರಾಯಸ್ವಾಮಿ ಅವರೊಂದಿಗೆ ಒಂದಷ್ಟು ಮುಖಂಡರು ಇರುವುದರಿಂದ ಮುಂದಿನ ದಿನಗಳಲ್ಲಿ ಜೆಡಿಎಸ್ ಹಿನ್ನಡೆಗೆ ಕಾರಣವಾದರೂ ಅಚ್ಚರಿ ಪಡುವಂತಿಲ್ಲ.

ಜೆಡಿಎಸ್ ಪಕ್ಷದಿಂದ ಚೆಲುವರಾಯಸ್ವಾಮಿ ಸೇರಿದಂತೆ ಎಂಟು ಜನ ಶಾಸಕರನ್ನು ಅಮಾನತು ಮಾಡಿರುವುದರಿಂದ ಅವರು ಸಮಾವೇಶದಲ್ಲಿ ಪಾಲ್ಗೊಳ್ಳುವುದು ಸಂಶಯವಾಗಿದೆ. ಈ ಕುರಿತಂತೆ ನನಗೇನು ಗೊತ್ತಿಲ್ಲ ಎಂದಿರುವ ಚಲುವರಾಯಸ್ವಾಮಿ ಆದರೆ ಅಂದಿನ ಸಮಾವೇಶದಲ್ಲಿ ಏನು ತೀರ್ಮಾನವಾಗುತ್ತದೆ ಎಂಬುದು ತಿಳಿದ ಬಳಿಕ ತನ್ನ ನಿರ್ಧಾರ ಪ್ರಕಟಿಸುವುದಾಗಿ ಹೇಳಿದ್ದಾರೆ.
ಚೆಲುವರಾಯಸ್ವಾಮಿರಿಂದ ಹೊಸ ಬಾಂಬ್ : ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡುವುದಿಲ್ಲ ಎಂದು ತಿಳಿಸಿದ್ದೆ, ಹಾಗೆಯೇ ನಡೆದುಕೊಂಡಿದ್ದೇನೆ.
ವರಿಷ್ಠರಾದ ದೇವೇಗೌಡರು ನನ್ನ ಬಳಿ ಕೇವಲ 8 ಜನ ಶಾಸಕರು ಮಾತ್ರ ಇದ್ದಾರೆ ಎಂದು ತಿಳಿದುಕೊಂಡಿದ್ದಾರೆ. ಆದರೆ, ಜಿಲ್ಲೆ ಸೇರಿದಂತೆ ಇಡೀ ರಾಜ್ಯದಲ್ಲಿ ಮಾಜಿ ಶಾಸಕರು, ಹಾಲಿ ಶಾಸಕರು ಹಾಗೂ ಮುಖಂಡರು ನನ್ನ ಜೊತೆ ಇರುವುದಾಗಿ ಹೇಳುವ ಮೂಲಕ ಹೊಸ ಬಾಂಬ್ ಸಿಡಿಸಿದ್ದಾರೆ.
ಮತ್ತೊಂದೆಡೆ ಅಂಬರೀಶ್ ಅವರ ಬಗ್ಗೆ ಮಾತನಾಡಿರುವ ಅವರು ಸಚಿವ ಸಂಪುಟದಿಂದ ಕೈ ಬಿಟ್ಟರೆ ಕಾಂಗ್ರೆಸ್ ಗೆ ನಷ್ಟವಾಗಲಿರುವುದು ಖಚಿತ ಎಂದಿದ್ದಾರೆ. ಸದ್ಯ ತಮ್ಮ ನಡೆಯನ್ನು ಗೌಪ್ಯವಾಗಿಟ್ಟಿರುವ ಚೆಲುವರಾಯಸ್ವಾಮಿ ಅವರು ಮುಂದೇನು ಮಾಡುತ್ತಾರೆ ಎಂಬುದು ಕುತೂಹಲಕಾರಿಯಾಗಿದೆ.(ಒನ್ಇಂಡಿಯಾ ಸುದ್ದಿ)












Click it and Unblock the Notifications