ಸದನದಲ್ಲಿ ಎಚ್ಡಿಕೆ ಡೆಡ್ಲಿ ಸ್ಪೀಚ್: ಡಿಸಿಗೆ ರಕ್ಷಣೆ ಕೊಡಲಾಗದ ನೀವೂ ಒಬ್ಬ ಸಿಎಂ!
ಬೆಂಗಳೂರು, ಜುಲೈ 12: ವಿದೇಶ ಪ್ರವಾಸದ ನಂತರ ಸೋಮವಾರದಿಂದ ಸದನದಲ್ಲಿ ಹಾಜರಾಗಿರುವ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್ ಡಿ ಕುಮಾರಸ್ವಾಮಿ, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಮಂಗಳವಾರ (ಜುಲೈ 12) ಅಕ್ಷರಸ: ಹರಿಹಾಯ್ದಿದ್ದಾರೆ.
ಸದನದಲ್ಲಿ ಮಾತನಾಡುತ್ತಿದ್ದ ಎಚ್ಡಿಕೆ, ಒಬ್ಬ ಜಿಲ್ಲಾಧಿಕಾರಿಗೆ ರಕ್ಷಣೆ ಕೊಡಲಾಗದ ನೀವೂ ಒಬ್ಬ ಮುಖ್ಯಮಂತ್ರಿನಾ? ಬೆಳಗಾವಿಯಲ್ಲಿ ಏನು ನಡೆಯಿತು ಎನ್ನುವುದು ನಿಮಗೆ ಗೊತ್ತಿಲ್ಲವೇ, ಇನ್ನಾದರೂ ಆತ್ಮಾವಲೋಕನ ಮಾಡಿಕೊಳ್ಳಿ ಎಂದು ಕಿಡಿಕಾರಿದ್ದಾರೆ. (ಗಣಪತಿ ಆತ್ಮಹತ್ಯೆ, ಮೌನ ಮುರಿದ ಜಾರ್ಜ್)
ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣವನ್ನು ಎಳೆಎಳೆಯಾಗಿ ಶಾಂತವಾಗಿ ಬಿಚ್ಚಿಟ್ಟ ಕುಮಾರಸ್ವಾಮಿ, ಗಣಪತಿ ಆತ್ಮಹತ್ಯೆಗೆ ಮುನ್ನ ಖಾಸಗಿ ವಾಹಿನಿಗೆ ನೀಡಿದ ಸಂದರ್ಶನವನ್ನು ಆಧರಿಸಿ ಪ್ರಕರಣ ದಾಖಲಿಸಲು ನಿಮಗೇನು ತೊಂದರೆ ಎಂದು ಮುಖ್ಯಮಂತ್ರಿಗಳನ್ನು ಪ್ರಶ್ನಿಸಿದ್ದಾರೆ.
ಅಂದು ಕೆಲಸದಿಂದ ನಿವೃತ್ತಿ ನೀಡಿ ಎಂದು VRS ಬಯಸಿದ್ದ ಕೆಂಪಯ್ಯ ಅವರನ್ನು ಗೃಹ ಖಾತೆಯ ಸಲಹೆಗಾರರನ್ನಾಗಿ ನೇಮಿಸಿದ್ದೀರಾ? ಇವರಿಂದ ಯಾವ ರೀತಿಯ ಕೆಲಸವನ್ನು ನಿಮ್ಮಿಂದ ತೆಗೆದುಕೊಳ್ಳಲು ಸಾಧ್ಯ?
ಸರಕಾರದ ಲೋಪದೋಷವನ್ನು ತನ್ನದೇ ರೀತಿಯಲ್ಲಿ ಮಂಡಿಸುತ್ತಿದ್ದ ಕುಮಾರಸ್ವಾಮಿ, ಮುಖ್ಯಮಂತ್ರಿಗಳೇ.. ನಿಮ್ಮ ಸರಕಾರದಿಂದಾಗುತ್ತಿರುವ ತಪ್ಪನ್ನು ತಿದ್ದಿಕೊಳ್ಳಿ. ಇನ್ನು ಎರಡು ವರ್ಷದ ಅಧಿಕಾರದಲ್ಲಾದರೂ ಉತ್ತಮ ಸರಕಾರ ನೀಡಿ ಎಂದು ಸಿದ್ದರಾಮಯ್ಯಗೆ, ಕುಮಾರಸ್ವಾಮಿ ಸಲಹೆ ನೀಡಿದ್ದಾರೆ.
ಗಣಪತಿಯವರ ತಂದೆಯಿಂದ ಮತ್ತು ಅವರ ತಮ್ಮನಿಂದ ಆತುರಾತುರವಾಗಿ ಸುಳ್ಳು ಹೇಳಿಕೆ ಪಡೆದುಕೊಂಡು ಅದನ್ನೇ ಜನರ ಮುಂದಿಡುತ್ತಿದ್ದೀರಾ, ಅದನ್ನೇ ಪ್ರಭಲ ಸಾಕ್ಷಿಯೆಂದು ರುಜುವಾತು ಮಾಡಲು ಹೊರಟಿದ್ದೀರಾ, ಇದು ಒಳ್ಳೆದಕ್ಕಲ್ಲಾ.
ಗಣಪತಿಯವರ ಪತ್ನಿಗೆ ಸಾಂತ್ವನ ಹೇಳಲು ನಾನು ಹೋಗಿದ್ದಾಗ, ನನ್ನ ಮತ್ತು ಪತಿಯ ನಡುವೆ ಮನಸ್ತಾಪವಿತ್ತು ಎಂದು ಅಪಪ್ರಚಾರ ಮಾಡಲಾಗುತ್ತಿದೆ, ಈ ರೀತಿಯ ಅಪಪ್ರಚಾರ ಮಾಡಿ ನನ್ನನ್ನೂ ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಬೇಡಿ ಎಂದು ಅವರು ನನ್ನಲ್ಲಿ ಮನವಿ ಮಾಡಿದ್ದಾರೆಂದು ಎಚ್ಡಿಕೆ ಬೇಸರ ವ್ಯಕ್ತ ಪಡಿಸಿದ್ದಾರೆ. (ಜಾರ್ಜ್ ವಿರುದ್ದ ಎಫ್ಐಆರ್: ಓದುಗರ ಅಭಿಪ್ರಾಯ)
ಗಣಪತಿ ಆತ್ಮಹತ್ಯೆಗೆ ಮುನ್ನ ಅವರು ಹೆಸರಿಸಿದ ಜಾರ್ಜ್ ಸೇರಿ ಮೂವರ ರಾಜೀನಾಮೆ ಪಡೆಯಿರಿ. ಜಾರ್ಜ್ ಅವರು ನಿರ್ದೋಷಿಯಾದರೆ ಅವರನ್ನೇ ಡಿಸಿಎಂ ಮಾಡಿ, ಅವರ ರಾಜೀನಾಮೆಯಿಂದ ನಾವೇನು ಸಂಭ್ರಮಿಸುವುದಿಲ್ಲ.
ಕಾನೂನು ಮತ್ತು ಸುವ್ಯವಸ್ಥೆಯನ್ನು ಸರಿದಾರಿಗೆ ತರುವ ಮೂಲಕ ನಿಮ್ಮ ಸರಕಾರ ಅಧಿಕಾರದಲ್ಲಿದೆ ಎನ್ನುವುದನ್ನು ಜನರಿಗೆ ರುಜುವಾತು ಪಡಿಸಿ ಎಂದು ಕುಮಾರಸ್ವಾಮಿ, ಸಿಎಂ ವಿರುದ್ದ ವ್ಯಂಗ್ಯವಾಡಿದ್ದಾರೆ.