ನಮ್ಮ ನಡುವೆ ತಂದಿಡಬೇಡಿ ಎಂದು ಎಚ್ಡಿಕೆ ಹೇಳಿದ್ದು ಯಾವ ವಾಹಿನಿಗೆ?
ಬೆಂಗಳೂರು, ಡಿ 2: ಜೆಡಿಎಸ್ ಪಕ್ಷದಲ್ಲಿನ ಭಿನ್ನಮತ ಊರಿಗೆಲ್ಲಾ ಗೊತ್ತಿರುವ ವಿಚಾರ. ಮೊದಲು ಆ ವಿಚಾರದಲ್ಲಿ ಕಾರ್ಯೋನ್ಮುಖವಾಗುವ ಬದಲು ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಮಾಧ್ಯಮದವರ ಮೇಲೆ ಹರಿಹಾಯ್ಡಿದ್ದಾರೆ.
ಪಕ್ಷದಲ್ಲಿನ ಆಂತರಿಕ ಭಿನ್ನಮತ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆಯುತ್ತಿರುವ ಬೆನ್ನಲ್ಲೇ ನನ್ನ ಮತ್ತು ಬಾಲಕೃಷ್ಣ ನಡುವೆ ತಂದಿಟ್ಟು ನಿಮ್ಮ ಟಿಆರ್ಪಿ ಹೆಚ್ಚಿಸಿಕೊಳ್ಳಬೇಡಿ ಎಂದು ಮಾಧ್ಯಮದವರ ಮೇಲೆ ಕುಮಾರಸ್ವಾಮಿ ಕಿಡಿಕಾರಿದ್ದಾರೆ. (ಮಾಗಡಿಯಲ್ಲಿ ಭಿನ್ನಮತ ಮರೆತ ಜೆಡಿಎಸ್ ನಾಯಕರು)
ಬೆಂಗಳೂರಿನಲ್ಲಿ ಮಂಗಳವಾರ (ಡಿ 1) ಮಾತನಾಡುತ್ತಿದ್ದ ಕುಮಾರಸ್ವಾಮಿ, ನನ್ನ ಮತ್ತು ಬಾಲಕೃಷ್ಣ ನಡುವಿನ ಸಂಬಂಧಕ್ಕೆ ದಯವಿಟ್ಟು ಹುಳಿ ಹಿಂಡುವ ಕೆಲಸ ಮಾಡಬೇಡಿ. ನಮ್ಮ ಪಕ್ಷ ಒಡೆದರೆ ರಾಜ್ಯ ಇಬ್ಬಾಗವಾದಂತೆ ಎಂದು ಹೇಳಿದ್ದಾರೆ.
ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಸಂಬಂಧ ಎದ್ದಿರುವ ಭಿನ್ನಮತದ ವಿಚಾರದಲ್ಲಿ ಜೆಡಿಎಸ್ ವರಿಷ್ಠ ದೇವೇಗೌಡ, ಕುಮಾರಸ್ವಾಮಿಯವರ ಜೊತೆ ಮಾತುಕತೆ ನಡೆಸಿ ಬುದ್ದಿವಾದದ ಜೊತೆ ಮುಂದಿನ ರಣತಂತ್ರದ ಬಗ್ಗೆ ಚರ್ಚಿಸಿದ್ದರು.
ಈ ವಾರ ಬೆಂಗಳೂರಿನಲ್ಲಿ ನಡೆಯಲಿರುವ ಪಕ್ಷದ ಕಾರ್ಯಕಾರಿಣಿಯ ವೇದಿಕೆಯಲ್ಲಿ ಎಲ್ಲರಿಗೂ ಮುಕ್ತ ಮನಸ್ಸಿನಿಂದ ಸಲಹೆ, ದುಗುಡು ದುಮ್ಮಾನ ಹೇಳುವ ಅವಕಾಶವನ್ನು ಕಲ್ಪಿಸುವುದಾಗಿ ದೇವೇಗೌಡ್ರು ಈಗಾಗಲೇ ಹೇಳಿಕೆ ನೀಡಿದ್ದಾರೆ.
ಮಾಗಡಿಯಲ್ಲಿ ಮಂಗಳವಾರ (ಡಿ1) ಸ್ಥಳೀಯ ಶಾಸಕ ಬಾಲಕೃಷ್ಣ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ, ಭಿನ್ನಮತೀಯ ಶಾಸಕರೆಲ್ಲಾ ಒಂದೇ ವೇದಿಕೆಯಲ್ಲಿ ಹಾಜರಾಗಿ ನಾವೆಲ್ಲಾ ಒಂದೇ ಎನ್ನುವ ಸಂದೇಶಕ್ಕೆ ಮುಂದಾಗಿದ್ದರೂ, ಕಾರ್ಯಕರ್ತರಲ್ಲಿ ಗೊಂದಲವಿದ್ದದ್ದು ಸ್ಥಳೀಯ ಚಿತ್ರಣ.
ಕುಮಾರಸ್ವಾಮಿಯವರ ಟಾರ್ಗೆಟ್ ಯಾವ ವಾಹಿನಿಯ ಮೇಲೆ?

ಕುಮಾರಸ್ವಾಮಿ ಹೇಳಿದ್ದು
ನಮ್ಮ ನಡುವೆ ಇನ್ನಷ್ಟು ಕಂದಕ ಸೃಷ್ಟಿಸಿ ಪಕ್ಷದಲ್ಲಿ ಬಿರುಕು ಮೂಡಿಸುವ ಕೆಲಸವನ್ನು ಮಾಡಬೇಡಿ. ಜೆಡಿಎಸ್ ಏನಾದರೂ ಒಡೆದರೆ ಕರ್ನಾಟಕ ಇಬ್ಭಾಗವಾದಂತೆ ಎಂದು ಕುಮಾರಸ್ವಾಮಿ ಮಾಧ್ಯಮದವರ ಮೇಲೆ 'ಮಾಧ್ಯಮದವರ' ಮುಂದೆಯೇ ಕಿಡಿಕಾರಿದ್ದಾರೆ.

ನೀವು ಯಾವ ಪಕ್ಷದ ಏಜೆಂಟ್?
ತೋರಿಸಿದ್ದನ್ನೇ ತೋರಿಸಿ ನಿಮ್ಮ ಟಿಆರ್ಪಿ ಹೆಚ್ಚಿಸಿಕೊಳ್ಳುತ್ತಿದ್ದೀರಾ, ಇದರಿಂದ ಜೆಡಿಎಸ್ ಪಕ್ಷಕ್ಕೆ ಏನೂ ಹಾನಿಯಿಲ್ಲ. ಯಾವ ರಾಷ್ಟ್ರೀಯ ಪಕ್ಷವನ್ನು ಓಲೈಸಲು ನನ್ನ ಹೇಳಿಕೆಯನ್ನು ತಿರುಚುತ್ತಿದ್ದೀರಾ - ಕುಮಾರಸ್ವಾಮಿ.

ಕುಮಾರಸ್ವಾಮಿ ಕೋಪಕ್ಕೆ ಕಾರಣವೇನು
ಮೈಸೂರಿನಲ್ಲಿ ಕಳೆದ ವಾರ ಮಾತನಾಡುತ್ತಿದ್ದ ಕುಮಾರಸ್ವಾಮಿ, ನಮ್ಮ ಪಕ್ಷದಲ್ಲಿ ಕೆಲವೊಬ್ಬರು ಕಾಂಗ್ರೆಸ್ ಏಜೆಂಟ್ ಗಳಿದ್ದಾರೆ. ಪಕ್ಷದಲ್ಲಿ ಭಿನ್ನಮತ ಹುಟ್ಟಿಸುತ್ತಿದ್ದಾರೆಂದು ಹೇಳಿಕೆ ನೀಡಿದ್ದರು. ಅವರು ಯಾರು ಎನ್ನುವ ಪ್ರಶ್ನೆಗೆ, ನೀವೇ ಅರ್ಥೈಸಿಕೊಳ್ಳಿ ಎಂದು ಕುಮಾರಸ್ವಾಮಿ ಮಾಧ್ಯಮದವರಿಗೆ ಹೇಳಿದ್ದರು.

ಬಾಲಕೃಷ್ಣ ಬೇಸರ
ಕಾಂಗ್ರೆಸ್ ಏಜೆಂಟ್ ಎನ್ನುವ ಪದಕ್ಕೆ ತೀವ್ರ ಬೇಸರ ವ್ಯಕ್ತ ಪಡಿಸಿದ್ದ ಮಾಗಡಿಯ ಜನಪ್ರಿಯ ಶಾಸಕ ಬಾಲಕೃಷ್ಣ, ನನ್ನನ್ನು ಬೇಕಾದರೆ ಪಕ್ಷದಿಂದ ಉಚ್ಚಾಟನೆ ಮಾಡಲಿ, ಆದರೆ ಜೆಡಿಎಸ್ ನಲ್ಲಿ ಇದ್ದು ದ್ರೋಹದ ಕೆಲಸ ಮಾಡುವುದಿಲ್ಲ. ಕುಮಾರಸ್ವಾಮಿಯವರು ತಮ್ಮ ಮಾತನ್ನು ಹಿಂದಕ್ಕೆ ಪಡೆದುಕೊಳ್ಳಲಿ ಎಂದು ಹೇಳಿದ್ದರು.

ಎಚ್ಡಿಕೆ ಬೇಸರ
ಈ ವಿಚಾರವೇ ಕುಮಾರಸ್ವಾಮಿ ಮಾಧ್ಯಮದವರ ಮೇಲೆ ಹರಿಹಾಯಲು ಕಾರಣ. ನನ್ನ ಮಾತನ್ನು ಸರಿಯಾಗಿ ಮಾಧ್ಯಮವದವರು ಅರ್ಥ ಮಾಡಿಕೊಳ್ಳಲಿಲ್ಲ. ಟಿಆರ್ಪಿಗಾಗಿ ಏನು ಬೇಕಾದರೂ ಮಾಡುತ್ತಾರೆ ಎನ್ನುವುದು ಕುಮಾರಸ್ವಾಮಿ ಆರೋಪ.












Click it and Unblock the Notifications