ಜೆಡಿಎಸ್ ಭಿನ್ನಮತ ಸ್ಫೋಟ, 8 ಶಾಸಕರಿಂದ ಕಾಂಗ್ರೆಸ್ಗೆ ಮತ
ಬೆಂಗಳೂರು, ಜೂನ್ 11 : ಜೆಡಿಎಸ್ ಪಕ್ಷದ ಭಿನ್ನಮತ ಸ್ಫೋಟಗೊಂಡಿದ್ದು, ಭಿನ್ನಮತೀಯರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ. ಪಕ್ಷದ ವಿಪ್ ಉಲ್ಲಂಘನೆ ಮಾಡಿ ರಾಜ್ಯಸಭೆ ಚುನಾವಣೆಯಲ್ಲಿ 8 ಶಾಸಕರು ಕಾಂಗ್ರೆಸ್ಗೆ ಮತ ಹಾಕಿದ್ದಾರೆ.
ಶನಿವಾರ ವಿಧಾನಸೌಧದಲ್ಲಿ ರಾಜ್ಯಸಭೆ ಚುನಾವಣೆ ನಡೆಯಿತು. ಚುನಾವಣೆಗೆ ಬಿ.ಎಂ.ಫಾರೂಕ್ ಅವರು ಪಕ್ಷದ ಅಭ್ಯರ್ಥಿ. ಪಕ್ಷದ ಅಭ್ಯರ್ಥಿಗೆ ಮತ ಹಾಕುವಂತೆ ಜೆಡಿಎಸ್ ಎಲ್ಲಾ ಶಾಸಕರಿಗೂ ವಿಪ್ ಜಾರಿ ಮಾಡಿತ್ತು. ಆದರೆ, 8 ಶಾಸಕರು ವಿಪ್ ಉಲ್ಲಂಘನೆ ಮಾಡಿ, ಕಾಂಗ್ರೆಸ್ನ ಮೂರನೇ ಅಭ್ಯರ್ಥಿ ಕೆ.ಸಿ.ರಾಮಮೂರ್ತಿ ಅವರಿಗೆ ಮತ ಹಾಕಿದರು. [ಭಿನ್ನಮತೀಯರ ಜೊತೆ ಮಾತುಕತೆ, ಬಾಗಿಲು ಮುಚ್ಚಿದ ಎಚ್ಡಿಕೆ]

ಮತದಾನದ ಬಳಿಕ ಮಾತನಾಡಿದ ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್ ಅವರು, 'ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕುವುದಾಗಿ ಶುಕ್ರವಾರವೇ ಹೇಳಿದ್ದೆವು. ಯೇ ಪೈಸಾ ಕಾ ಕೇಲ್ ಕುಚ್ ನಹೀ ಹೇ' ಎಂದು ಹೇಳಿದರು. ['ಜಮೀರ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ದಿನ ಹತ್ತಿರ ಬಂದಿದೆ']
ವರಿಷ್ಠರ ನಿರ್ಧಾರದಿಂದ ಬೇಸತ್ತು ಮತ : 'ಎಲ್ಲಾ 8 ಶಾಸಕರು ಚರ್ಚೆ ನಡೆಸಿಯೇ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿದ್ದೇವೆ. ನಾವೆಲ್ಲರೂ ಒಟ್ಟಾಗಿ ಪಕ್ಷ ಕಟ್ಟುವ ಕೆಲಸಕ್ಕೆ ಬೆಂಬಲ ನೀಡಲು ನಿರ್ಧರಿಸಿದ್ದೆವು. ಆದರೆ, ವರಿಷ್ಠರು ಮಾತ್ರ ನಮ್ಮನ್ನು ಪರಿಗಣೀಸಲೇ ಇಲ್ಲ. ಆದ್ದರಿಂದ, ವರಿಷ್ಠರ ನಿರ್ಧಾರದಿಂದ ಬೇಸತ್ತು ಕಾಂಗ್ರೆಸ್ಸಿಗೆ ಮತ ಹಾಕಿದ್ದೇವೆ' ಎಂದು ನಾಗಮಂಗಲ ಶಾಸಕ ಚೆಲುವರಾಯ ಸ್ವಾಮಿ ಹೇಳಿದರು.
ಮತ ಅಸಿಂಧುಗೊಳಿಸುವಂತೆ ಮನವಿ : '8 ಜೆಡಿಎಸ್ ಶಾಸಕರು ಪಕ್ಷದ ವಿಪ್ ಉಲ್ಲಂಘನೆ ಮಾಡಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿರುವುದರಿಂದ ಅವರ ಮತವನ್ನು ಅಸಿಂಧುಗೊಳಿಸಬೇಕು' ಎಂದು ಎಚ್.ಡಿ.ರೇವಣ್ಣ ಅವರು ಚುನಾವಣಾಧಿಕಾರಿಗಳಿಗೆ ಮನವಿ ಮಾಡಿದರು. [ಶಾಸಕಾಂಗ ಸಭೆಗೆ ಭಿನ್ನಮತೀಯರು ಗೈರು]
ಭಿನ್ನಮತೀಯರ ಅಮಾನತು : 'ಮೂರು ವರ್ಷಗಳಿಂದ ಇವರನ್ನು ಸಹಿಸಿಕೊಂಡಿದ್ದಾಗಿದೆ. ನಮ್ಮ ಪಕ್ಷದ ಅಭ್ಯರ್ಥಿಗಳು ಸೋಲು ಅನುಭವಿಸಿದರೆ ಅದಕ್ಕೆ ಪಕ್ಷೇತರರು ಮತ್ತು ಬಂಡಾಯ ಶಾಸಕರೇ ಕಾರಣ' ಎಂದು ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಪಕ್ಷದ ವಿಪ್ ಉಲ್ಲಂಘನೆ ಮಾಡಿರುವ 8 ಶಾಸಕರನ್ನು ಪಕ್ಷದಿಂದ ಅಮಾನತುಗೊಳಿಸುವ ಸಾಧ್ಯತೆ ಇದೆ. ಭಾನುವಾರ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಶಾಸಕರನ್ನು ಅಮಾನತು ಮಾಡುವ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
ಕಾಂಗ್ರೆಸ್ಗೆ ಮತ ಹಾಕಿದವರು
* ಜಮೀರ್ ಅಹಮದ್ ಖಾನ್ (ಚಾಮರಾಜಪೇಟೆ)
* ಚೆಲುವರಾಯ ಸ್ವಾಮಿ (ನಾಗಮಂಗಲ)
* ಎಚ್.ಸಿ.ಬಾಲಕೃಷ್ಣ (ಮಾಗಡಿ)
* ಕೆ.ಗೋಪಾಲಯ್ಯ (ಮಹಾಲಕ್ಷ್ಮೀ ಪುರ)
* ಇಕ್ಬಾಲ್ ಅನ್ಸಾರಿ (ಗಂಗಾವತಿ)
* ರಮೇಶ್ ಬಂಡಿಸಿದ್ದೇಗೌಡ (ಶ್ರೀರಂಗಪಟ್ಟಣ)
* ಭೀಮಾ ನಾಯಕ್ (ಹಗರಿಬೊಮ್ಮನಹಳ್ಳಿ)
* ಅಖಂಡ ಶ್ರೀನಿವಾಸಮೂರ್ತಿ (ಪುಲಿಕೇಶಿ ನಗರ)












Click it and Unblock the Notifications