ಚೆನ್ನಿಗಪ್ಪ ರಾಜಕೀಯ ನಿವೃತ್ತಿ, ಗೌಡರು ಹಾಸನದಿಂದಲೇ

ಪೊಲೀಸ್ ಪೇದೆಯಾಗಿದ್ದ ಚೆನ್ನಿಗಪ್ಪ ಅವರು ರಾಜಕೀಯಕ್ಕೆ ಬಂದು ಜೆಡಿಎಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದರು. ಇದೀಗ ನಿವೃತ್ತಿಯ ನಂತರ ತಮ್ಮ ಪುತ್ರ, ಮಾಜಿ ಶಾಸಕ ಗೌರಿಶಂಕರ್ ಸ್ಪರ್ಧೆಗೆ ಪಕ್ಷ ಅವಕಾಶ ನೀಡಿದರೆ ಅವರ ಗೆಲುವಿಗೆ ಶ್ರಮಿಸುವುದಾಗಿ ಚೆನ್ನಿಗಪ್ಪ ಇದೇ ಸಂದರ್ಭದಲ್ಲಿ ಹೇಳಿದ್ದಾರೆ.
ಮಗನ ಪರವಾಗಿ ಇನ್ನು ರಾಜಕೀಯ ರಂಗದಲ್ಲಿ ಕಾಣಿಸಿಕೊಳ್ಳುವೆನೇ ಹೊರತು ಸ್ವತಃ ಜೆಡಿಎಸ್ ವರಿಷ್ಠರೇ ಹೇಳಿದರೂ ಮುಂಬರುವ ಯಾವುದೇ ಚುನಾವಣೆಗೂ ನಿಲ್ಲುವುದಿಲ್ಲ ಎಂದೂ ಚೆನ್ನಿಗಪ್ಪ ಸ್ಪಷ್ಟಪಡಿಸಿದ್ದಾರೆ.
ತಾವರೆಕೆರೆ ಸಮೀಪ ಚನ್ನೇನಹಳ್ಳಿಯಲ್ಲಿ ತಮ್ಮ ಅತಿಥಿ ಗೃಹದಲ್ಲಿ ಆಪ್ತರೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡ ಚೆನ್ನಿಗಪ್ಪ ಅವರು ಮುಂದಿನ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ವರಿಷ್ಠರೇ ಆದೇಶಿಸಿದರೂ ಸ್ಪರ್ಧಿಸುವುದಿಲ್ಲ ಎಂದು ಸುದ್ದಿಗಾರರಿಗೆ ತಿಳಿಸಿದರು.
ಗೌಡರು ಹಾಸನದಿಂದಲೇ ಸ್ಪರ್ಧೆ:
ಈ ಮಧ್ಯೆ, ಸಕಲೇಶಪುರದಲ್ಲಿ ಮಾತನಾಡಿರುವ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನೇತಾರ ಎಚ್ ಡಿ ಕುಮಾರಸ್ವಾಮಿ ಅವರು ತಮ್ಮ ತಂದೆ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಮುಂದಿನ ಲೋಕಸಭೆ ಚುನಾವಣೆಗೆ ಹಾಸನದಿಂದಲೇ ಸ್ಪರ್ಧಿಸಲಿದ್ದಾರೆ. ಹಾಸನದ ಜನತೆಯ ಜತೆ ಬೇರ್ಪಡಿಸಲಾರದ ಬಾಂಧವ್ಯವನ್ನು ಅವರು ಹೊಂದಿದ್ದಾರೆ. ಹಾಗಾಗಿ ಅವರು ಕ್ಷೇತ್ರ ಬದಲಾಯಿಸುವ ಪ್ರಮೇಯವೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮುಂದಿನ ಚುನಾವಣೆಯಲ್ಲಿ ಪಕ್ಷದ ವತಿಯಿಂದ 14 ಸಂಸದರನ್ನು ಲೋಕಸಭೆಗೆ ಕಳುಹಿಸಿಕೊಟ್ಟರೆ ರಾಜ್ಯದ ಸಮಸ್ಯೆಗಳನ್ನು ಪರಿಹರಿಸಲು ಸುಲಭ ಸಾಧ್ಯವಾಗಲಿದೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.












Click it and Unblock the Notifications